ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಚಿತ್ರಕ್ಕೆ ಎದುರಾಯ್ತು ಸಂಕಷ್ಟ! ಲೀಗಲ್ ನೋಟಿಸ್ ರವಾನಿಸಿದ ಇಳಯರಾಜಾ
ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ತಂಡ ಗೆದ್ದ ಖುಷಿಯಲ್ಲಿದೆ. ಈ ನಡುವೆ ಇದೇ ಬಳಗಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರಿಂದ ನೋಟಿಸ್ ರವಾನೆಯಾಗಿದೆ. ಈ ಚಿತ್ರದಲ್ಲಿ ಕಣ್ಮಣಿ ಅನ್ಬೋದು ಹಾಡನ್ನು ಅನುಮತಿ ಇಲ್ಲದೆ ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ನೋಟಿಸ್ ರವಾನಿಸಲಾಗಿದೆ.

Manjummel Boys: ಮಲಯಾಳಂನ ಬ್ಲಾಕ್ ಬಸ್ಟರ್ ಮಂಜುಮ್ಮಲ್ ಬಾಯ್ಸ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸೂಪರ್ಹಿಟ್ ಪಟ್ಟ ಪಡೆದುಕೊಂಡಿದೆ. ನೈಜ ಘಟನೆಯಿಂದ ಪ್ರೇರನೆ ಪಡೆದು ಮೂಡಿಬಂದ ಈ ಸಿನಿಮಾ ಬರೋಬ್ಬರಿ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಬರೀ ಕೇರಳ ಮಾತ್ರವಲ್ಲದೆ, ಸೌತ್ನ ಉಳಿದ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸದ್ದು ಮಾಡಿತ್ತು. ಚಿತ್ರಮಂದಿರದ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗಿ ಅಲ್ಲಿಯೂ ಹೆಚ್ಚೆಚ್ಚು ನೋಡುಗರನ್ನು ಸೆಳೆಯುತ್ತಿದೆ. ಹೀಗೆ ಎಲ್ಲ ಕಡೆಯಿಂದ ಮೆಚ್ಚುಗೆ ಪಡೆದುಕೊಂಡಿರುವ ಈ ಸಿನಿಮಾಕ್ಕೀಗ ಸಂಕಷ್ಟ ಎದುರಾಗಿದೆ.
ಟ್ರೆಂಡ್ ಸೃಷ್ಟಿಸಿದ್ದ ಕಣ್ಮಣಿ ಅನ್ಬೋದು ಹಾಡು..
2006ರಲ್ಲಿ ಕೇರಳದ ಮಂಜುಮ್ಮೆಲ್ ಊರಿನ ಯುವಕರು ಕೊಡೈಕೆನಾಲ್ಗೆ ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ನಡೆದ ಘಟನೆಯನ್ನೇ ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಿದಂಬರಂ. ಆ ಗುಣ ಗುಹೆಗೆ ಬಿದ್ದವನನ್ನು ಹೇಗೆ ಮೇಲೆತ್ತಲಾಯ್ತು? ಎದುರಾದ ಕಷ್ಟಗಳೇನು? ಈ ಎಲ್ಲ ಅಂಶಗಳನ್ನು ಕಣ್ಣಿಗೆ ಕಟ್ಟಿದಂತೆ ತೆರೆಗೆ ತಂದಿದ್ದರು ನಿರ್ದೇಶಕರು. ಕೊನೆಗೆ ಇದೇ ಸಿನಿಮಾದಲ್ಲಿ ಗುಣ ಚಿತ್ರದ "ಕಣ್ಮಣಿ ಅನ್ಬೋದು" ಹಾಡನ್ನು ಚಿತ್ರತಂಡ ಬಳಸಿಕೊಂಡಿತ್ತು. ಆ ಒಂದು ಹಾಡಿನಿಂದಲೇ ಸೋಷಿಯಲ್ ಮೀಡಿಯಾದಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ, ಮತ್ತೆ ಗುನುಗುವಂತೆ ಮಾಡಿತ್ತು. ಇದೀಗ ಈ ಹಾಡಿನ ಬಳಕೆ ಬಗ್ಗೆ ಇಳಯರಾಜ ಆಕ್ಷೇಪವೆತ್ತಿದ್ದಾರೆ.
ಮಂಜುಮ್ಮೆಲ್ ಬಾಯ್ಸ್ ತಂಡಕ್ಕೆ ನೋಟಿಸ್
1991 ರಲ್ಲಿ ಕಮಲ್ ಹಾಸನ್ ಅಭಿನಯದ ಗುಣ ಚಿತ್ರದ "ಕಣ್ಮಣಿ ಅನ್ಬೋದು" ಹಾಡನ್ನು ಮಂಜುಮ್ಮೆಲ್ ಬಾಯ್ಸ್ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಬಳಸಲಾಗಿದೆ. ಆ ಹಾಡಿಗೆ ಇಳಯರಾಜಾ ಸಂಗೀತ ಸಂಯೋಜನೆ ಮಾಡಿದ್ದರು. ಮಂಜುಮ್ಮೆಲ್ ಬಾಯ್ಸ್ ಸಿನಿಮಾ ಬಿಡುಗಡೆ ಬಳಿಕ ಈ ಹಾಡು ಎಲ್ಲರೂ ಗುನುಗುವಂತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ. ಆದರೆ, ಅಚ್ಚರಿಯ ವಿಚಾರ ಏನೆಂದರೆ, ತಮ್ಮ ಅನುಮತಿ ಪಡೆದುಕೊಳ್ಳದೆ, ಈ ಚಿತ್ರದಲ್ಲಿ ಹಾಡನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇಳಯರಾಜ ಪರ ವಕೀಲ ಸರವಣನ್ ಚಿತ್ರ ನಿರ್ಮಾಣ ಸಂಸ್ಥೆಗೆ ನೋಟಿಸ್ ಕಳುಹಿಸಿದ್ದಾರೆ.
2006ರಲ್ಲಿ ನಡೆದ ನೈಜ ಘಟನೆ
ಇದು ನಮ್ಮ ಆಪ್ತ ವಲಯದಲ್ಲಿಯೇ ನಡೆದ ಕಥೆ ಎಂಬಂತೆ ಎಲ್ಲರ ಮನಸ್ಸನ್ನು ಮುಟ್ಟುವ ಕೆಲಸ ನಿರ್ದೇಶಕರಿಂದಾಗಿದೆ. ಕೇವಲ ಎರಡು ಗಂಟೆಯ ಅವಧಿಯ ಮಂಜುಮ್ಮೆಲ್ ಬಾಯ್ಸ್ ಚಿತ್ರ, ಮಾಲಿವುಡ್ ಅಂಗಳದಲ್ಲಿ ಸೃಷ್ಟಿಸಿದ ದಾಖಲೆ, ಮಾಡಿದ ಮೋಡಿ ಸಣ್ಣದೇನಲ್ಲ. 200 ಕೋಟಿ ಗಳಿಕೆ ಕಂಡ ಮೊದಲ ಸಿನಿಮಾ ಎಂಬ ಹಣೆಪಟ್ಟಿಯೂ ಈ ಮಂಜುಮ್ಮೆಲ್ ಬಾಯ್ಸ್ಗೆ ಅಂಟಿಕೊಂಡಿದೆ! 2006ರಲ್ಲಿ ನಡೆದ ನೈಜ ಘಟನೆಯನ್ನೇ ಹೆಕ್ಕಿ ತೆಗೆದ ನಿರ್ದೇಶಕ ಚಿದಂಬರಂ, ತಮ್ಮ ಎರಡನೇ ಸಿನಿಮಾ ಪ್ರಯತ್ನದಲ್ಲಿಯೇ ದೊಡ್ಡ ಯಶಸ್ಸು ದಾಖಲಿಸಿಕೊಂಡಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)