ಬೆಲ್ಜಿಯಂ ಕಾರ್ ರೇಸಿಂಗ್ನಲ್ಲಿ 2ನೇ ಸ್ಥಾನ ಗಳಿಸಿದ ನಟ ಅಜಿತ್ ಕುಮಾರ್ ತಂಡ; ತ್ರಿವರ್ಣ ಧ್ವಜ ಹಿಡಿದು ಸಂಭ್ರಮ; ವಿಡಿಯೊ ವೈರಲ್
ತಮಿಳಿನ ಅಜಿತ್ ಕುಮಾರ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ‘ ಸಿನಿಮಾ 250 ಕೋಟಿ ಕ್ಲಬ್ ಸೇರಿದೆ. ಇದರ ಜೊತೆ ಅಜಿತ್ ಖುಷಿಗೆ ಇನ್ನೊಂದು ಗರಿ ಮೂಡಿದೆ. ಬೆಲ್ಜಿಯಂನಲ್ಲಿ ನಡೆದ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಅಜಿತ್ ಕುಮಾರ್ ತಂಡ ಎರಡನೇ ಸ್ಥಾನ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ.

ಟಾಲಿವುಡ್ ನಟ ಅಜಿತ್ ಕುಮಾರ್ ಆ್ಯಕ್ಟಿಂಗ್ನಲ್ಲಿ ಮಾತ್ರವಲ್ಲ, ಕಾರ್ ರೇಸಿಂಗ್ನಲ್ಲೂ ಸಖತ್ ಕ್ರೇಜ್ ಹೊಂದಿದ್ದಾರೆ. ಆಗಾಗ ಕಾರ್ ರೇಸಿಂಗ್ನಲ್ಲಿ ಸ್ಪರ್ಧೆಗಳಲ್ಲಿ ಇವರು ಭಾಗವಹಿಸುತ್ತಾರೆ. ಕಳೆದ ಜನವರಿಯಲ್ಲಿ ದುಬೈನಲ್ಲಿ ನಡೆದ ಕಾರ್ ರೇಸಿಂಗ್ ಸ್ಪರ್ಧೆ 24H ದುಬೈ ರೇಸಿಂಗ್ನಲ್ಲಿ 3ನೇ ಸ್ಥಾನ ಪಡೆದ ಅಜಿತ್ ತಂಡ ಈಗ ಬೆಲ್ಜಿಯಂನಲ್ಲಿ 2ನೇ ಸ್ಥಾನ ಗಳಿಸಿದೆ. ಈ ಹಿಂದೆ ಕಾರ್ ರೇಸಿಂಗ್ನಲ್ಲಿ ಭಾಗವಹಿಸಿದ್ದಾಗ ಅವರ ಕಾರು ಅಪಘಾತಕ್ಕೆ ಒಳಗಾಗಿದ್ದನ್ನೂ ಈ ಹೊತ್ತಿನಲ್ಲಿ ನೆನಪಿಸಿಕೊಳ್ಳಬಹುದು. ಆದರೆ ಇದೀಗ ಅವರ ಸಾಧನೆಗೆ ಫಲ ಸಿಕ್ಕಿದೆ.
ಬೆಲ್ಜಿಯಂನಲ್ಲಿ ನಡೆದ ಸ್ಪಾ-ಫ್ರಾಂಕೋರ್ಚಾಂಪ್ಸ್ ಸರ್ಕ್ಯೂಟ್ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಅಜಿತ್ ರೇಸಿಂಗ್ ತಂಡ ಎರಡನೇ ಸ್ಥಾನ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಅಜಿತ್ ಕುಮಾರ್ ರೇಸಿಂಗ್ನ ಅಧಿಕೃತ ವೆಬ್ಸೈಟ್ನಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಲಾಗಿದೆ. ‘ಇದು ಭಾರತೀಯ ಮೋಟಾರ್ ಸ್ಪೋರ್ಟ್ಗೆ ಹೆಮ್ಮೆಯ ಕ್ಷಣ‘ ಎಂದು ಬರೆದುಕೊಳ್ಳಲಾಗಿದೆ.
ಬೆಲ್ಜಿಯಂನ ಸ್ಪಾ-ಫ್ರಾಂಕೋರ್ಚಾಂಪ್ಸ್ ಸರ್ಕ್ಯೂಟ್ನಲ್ಲಿ ನಡೆದ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಅಜಿತ್ ಮತ್ತು ಅವರ ತಂಡವು ಗಮನಾರ್ಹವಾದ ಪಿ 2 ಪೋಡಿಯಂ ಅನ್ನು ಪೂರ್ಣಗೊಳಿಸಿತು. ಇದು ಜಾಗತಿಕ ಮೋಟಾರ್ ರೇಸಿಂಗ್ ರಂಗದಲ್ಲಿರುವ ಉತ್ಸಾಹ ಮತ್ತು ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ರೇಸಿಂಗ್ ಲವ್
ಅಜಿತ್ ಅವರ ವೃತ್ತಿಜೀವನ ಸಿನಿಮಾವಾಗಿದ್ದರೆ, ಅವರ ಪ್ರೀತಿ ಕಾರು ರೇಸಿಂಗ್. ಅಜಿತ್ ಚಿಕ್ಕವನಿದ್ದಾಗ ಕಾರು ರೇಸ್ನಲ್ಲಿ ಭಾಗವಹಿಸುವಾಗ ಅಪಘಾತಕ್ಕೀಡಾದರು ಮತ್ತು ಅಂದಿನಿಂದ ಅವರು ಕಾರು ರೇಸಿಂಗ್ನಲ್ಲಿ ತೊಡಗಿಸಿಕೊಂಡಿಲ್ಲ. ಈ ಪರಿಸ್ಥಿತಿಯಲ್ಲಿ, ಕಳೆದ ವರ್ಷ ಕಾರು ರೇಸಿಂಗ್ಗೆ ಮರಳಿದ್ದ ಅಜಿತ್, ಈ ಬಾರಿ ತಮ್ಮದೇ ಹೆಸರಿನಲ್ಲಿ ರೇಸಿಂಗ್ ತಂಡವನ್ನು ಪ್ರಾರಂಭಿಸಿದರು. ಅದಾದ ನಂತರ ತಂಡವು ದುಬೈ, ಫ್ರಾನ್ಸ್ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದ ಕಾರು ರೇಸಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿತು.
ವಿಡಿಯೊ ವೈರಲ್
ಅಜಿತ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ಈ ವಿಚಾರ ಬಹಿರಂಗ ಪಡಿಸಿದ್ದಾರೆ. ಈ ವಿಡಿಯೊದಲ್ಲಿ ಅಜಿತ್ ಹಾಗೂ ತಂಡ ತ್ರಿವರ್ಣ ಧ್ವಜ ಹಿಡಿದು ಸಂಭ್ರಮಿಸುವುದನ್ನು ಕಾಣಬಹುದಾಗಿದೆ. ಅಲ್ಲದೇ ಸುತ್ತಲೂ ನೆರೆದಿರುವ ಜನರು ಗಟ್ಟಿಯಾಗಿ ಕೂಗುತ್ತಾ ಚಪ್ಪಾಳೆ ತಟ್ಟುವುದು ಕೂಡ ಕೇಳಿಸುತ್ತದೆ. ಜೊತೆಗೆ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದವರನ್ನು ಅಜಿತ್ ಅಭಿನಂದಿಸುತ್ತಿರುವುದನ್ನೂ ಕೂಡ ವಿಡಿಯೊದಲ್ಲಿ ನೋಡಬಹುದಾಗಿದೆ.
ಗುಡ್ ಬ್ಯಾಡ್ ಅಗ್ಲಿ ಚಿತ್ರದ ನಿರ್ದೇಶಕ ರವಿಚಂದ್ರನ್ ಕೂಡ ಅಜಿತ್ ಅವರ ಸಾಧನೆಯನ್ನು ಸಂಭ್ರಮಿಸಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಜಿತ್ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸುತ್ತಿರುವ ವಿಡಿಯೊ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.