ಪಿತೂರಿ ಮಾಡಿ ಕೊನೆಗೂ ಖುಷಿಯನ್ನು ಹೊರ ಹಾಕಿದ ಸಂತೋಷ್, ಬೇಸರದಲ್ಲಿ ಮನೆ ಮಂದಿ; ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 26ರ ಎಪಿಸೋಡ್ನಲ್ಲಿ ಪಿತೂರಿ ಮಾಡಿ ಸೌಪರ್ಣಿಕಾ, ರವಿಗೆ ಕಿವಿ ಊದಿದ ಸಂತೋಷ್ ಕೊನೆಗೂ ಖುಷಿಯನ್ನು ಮನೆಯಿಂದ ಹೊರ ಹಾಕುವಲ್ಲಿ ಯಶಸ್ವಿಯಾಗುತ್ತಾನೆ. ವಿಚಾರ ತಿಳಿದು ಶ್ರೀನಿವಾಸ್ ಹಾಗೂ ಲಕ್ಷ್ಮೀ ಬೇಸರ ವ್ಯಕ್ತಪಡಿಸುತ್ತಾರೆ.
Lakshmi Nivasa Serial: ಸಂತೋಷ್ ಬಳಿ ಖುಷಿ ಸ್ಕೂಲ್ಗೆ ಫೀಜ್ ಕಟ್ಟಲು 3 ಸಾವಿರ ರೂ. ಇದ್ದರೆ ಕೊಡುವಂತೆ ಲಕ್ಷ್ಮೀ ಮನವಿ ಮಾಡುತ್ತಾಳೆ. ಒಂದು ಪೈಸೆ ಖರ್ಚು ಮಾಡಲೂ ಯೋಚಿಸುವ ಸಂತೋಷ್ ನನ್ನ ಬಳಿ ಹಣವಿಲ್ಲ, ನನ್ನ ಮಗನ ಸ್ಕೂಲ್ ಫೀಸ್ ಕಟ್ಟಲು ನಾನು ಯಾರ ಬಳಿಯಾದರೂ ಮನವಿ ಮಾಡಿದ್ದೀನಾ? ಬೇರೆ ಯಾರದ್ದೋ ಸ್ಕೂಲ್ ಫೀಸ್ ಕಟ್ಟಲು ನಾನು ಏಕೆ ದುಡ್ಡು ಕೊಡಬೇಕು ಎಂದು ಕೊಂಕು ಮಾತನಾಡುತ್ತಾನೆ. ಹೇಗಾದರೂ ಮಾಡಿ ಖುಷಿಯನ್ನು ಈ ಮನೆಯಿಂದ ಕಳಿಸಿದರೆ ದುಡ್ಡು ಉಳಿಯುತ್ತದೆ ಎಂದುಕೊಳ್ಳುತ್ತಾನೆ.
ಸಕ್ಸಸ್ ಆಯ್ತು ಸಂತೋಷ್ ಪಿತೂರಿ
ಸೌಪರ್ಣಿಕಾ ಹಾಗೂ ರವಿ ಬಳಿ ಹೋಗುವ ಸಂತೋಷ್, ಖುಷಿಯನ್ನು ನಮ್ಮ ಮನೆಯಿಂದ ಕರೆದೊಯ್ಯುವಂತೆ ಹೇಳುತ್ತಾನೆ. ಅದರಂತೆ ಸೌಪರ್ಣಿಕಾ ಹಾಗೂ ರವಿ ಇಬ್ಬರೂ ಶೀನಿವಾಸ್ ಮನೆ ಬಳಿ ಬರುತ್ತಾರೆ, ಸೌಪರ್ಣಿಕಾ ಹೊರಗೆ ನಿಂತುಕೊಂಡು ರವಿಯನ್ನು ಒಳಗೆ ಕಳಿಸುತ್ತಾಳೆ. ನಾವು ಯಾವುದೇ ಕಾರಣಕ್ಕೂ ಮಗು ಕಳಿಸಿಕೊಡುವುದಿಲ್ಲ ಎಂದು ಲಕ್ಷ್ಮೀ ಹೇಳುತ್ತಾಳೆ. ವಿಧಿ ಇಲ್ಲದೆ ಇಬ್ಬರೂ ಅಲ್ಲಿಂದ ವಾಪಸ್ ಹೋಗುತ್ತಾರೆ. ವಿಚಾರ ತಿಳಿದ ಸಂತೋಷ್ ಮತ್ತೆ ಅವರಿಬ್ಬರ ಬಳಿ ಬಂದು, ಕಾನೂನಿನ ಮೂಲಕ ಕರೆದೊಯ್ಯುವಂತೆ ಸಲಹೆ ನೀಡುತ್ತಾನೆ. ಆ ಮಾತು ಸರಿ ಎನಿಸಿ ಸೌಪರ್ಣಿಕಾ ಪೊಲೀಸರೊಂದಿಗೆ ಬಂದು ಖುಷಿಯನ್ನು ಸೌಪರ್ಣಿಕಾಗೆ ಒಪ್ಪಿಸುತ್ತಾರೆ.
ಖುಷಿ ಮನೆಯಿಂದ ಹೋಗಿದ್ದಕ್ಕೆ ಲಕ್ಷ್ಮೀ ಕಣ್ಣೀರಿಡುತ್ತಾಳೆ. ವಿಚಾರ ತಿಳಿದು ಶ್ರೀನಿವಾಸ್ ಕೂಡಾ ಬೇಸರಗೊಳ್ಳುತ್ತಾನೆ. ನಮ್ಮ ಮನೆಯಲ್ಲಿ ಏನು ನಡೆಯುತ್ತಿದೆ? ಮೊದಲೆಲ್ಲಾ ನಾವು ಎಷ್ಟೊಂದು ಖುಷಿಯಾಗಿದ್ದೆವು, ಆದರೆ ಈಗ ಒಂದೊಂದಾಗೇ ಬೇಸರ ಎನಿಸುವಂಥ ಘಟನೆಗಳು ನಡೆಯುತ್ತಿವೆ ಎಂದು ಬೇಸರಗೊಳ್ಳುತ್ತಾರೆ. ಇತ್ತ ಖುಷಿಯನ್ನು ತಮಗೆ ವಾಪಸ್ ತಂದುಕೊಟ್ಟಿದ್ದಕ್ಕೆ ಸೌಪರ್ಣಿಕಾ ಹಾಗೂ ರವಿ ಇಬ್ಬರೂ ಸಂತೋಷ್ಗೆ ಗಿಫ್ಟ್ ನೀಡುತ್ತಾರೆ. ಖುಷಿಯನ್ನು ಮನೆಯಿಂದ ಹೊರ ಹಾಕಿದ ಸಮಾಧಾನ ಒಂದೆಡೆ ಆದರೆ, ಅದರಿಂದ ಏನೋ ಗಿಫ್ಟ್ ಸಿಕ್ಕಿತು ಎಂದು ಸಂತೋಷ್ ಭಾರೀ ಖುಷಿಯಾಗುತ್ತಾನೆ.
ಜಯಂತ್ ಮನೆಗೆ ಬಂದ ಸ್ನೇಹಿತ
ಮತ್ತೊಂದೆಡೆ ಜಯಂತ್ ಇಲ್ಲದಿರುವಾಗ ಆತನ ಸ್ನೇಹಿತ ಎಂದು ಹೇಳಿಕೊಂಡು ಒಬ್ಬಾತ ಮನೆಗೆ ಬರುತ್ತಾನೆ. ಅಪರಿಚಿತ ವ್ಯಕ್ತಿ ಕಾಲಿಂಗ್ ಬೆಲ್ ಮಾಡುವುದನ್ನು ಕಂಡು ಅಜ್ಜಿ ಹಾಗೂ ಜಾನು ಗಾಬರಿ ಆಗುತ್ತಾರೆ. ನಾನು ಇಲ್ಲದಿರುವಾಗ ಯಾರೇ ಬಂದರೂ ಬಾಗಿಲು ತೆಗೆಯಬಾರದು ಎಂದು ಇವರು ಕಂಡಿಷನ್ ಮಾಡಿದ್ದಾರೆ ಎಂದು ಜಾನು ಹೇಳುತ್ತಾಳೆ. ಮೊಮ್ಮಗಳ ಮಾತು ಕೇಳಿ ಅಜ್ಜಿ ಕೂಡಾ ಸುಮ್ಮನಾಗುತ್ತಾಳೆ. ಅಷ್ಟರಲ್ಲಿ ಜಯಂತ್ ಮನೆಗೆ ಬರುತ್ತಾನೆ. ಸ್ನೇಹಿತನನ್ನು ನೋಡಿ ಶಾಕ್ ಆಗುತ್ತಾನೆ. ಆತನನ್ನು ಅಜ್ಜಿ ಹಾಗೂ ಜಾಹ್ನವಿಗೆ ಪರಿಚಯ ಮಾಡಿಸುತ್ತಾನೆ. ಶೂ ತೆಗೆಯದೆ ಆತ ಮನೆಯಲ್ಲಾ ಓಡಾಡುವುದನ್ನು ಕಂಡು ಕೋಪಗೊಳ್ಳುತ್ತಾನೆ.
ಖುಷಿಯನ್ನು ಮನೆಯಿಂದ ಕಳಿಸಿದ್ದು ಸಂತೋಷ್ ಎಂಬ ಸತ್ಯ ಶ್ರೀನಿವಾಸ್ ಹಾಗೂ ಲಕ್ಷ್ಮೀಗೆ ತಿಳಿಯುವುದಾ? ಸ್ನೇಹಿತನನ್ನು ಜಯಂತ್ ಮನೆಯಲ್ಲೇ ಇರಿಸಿಕೊಳ್ಳುತ್ತಾನಾ? ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ