ಚಿನ್ನ, ಹಣ ಕದ್ದಿರುವುದನ್ನು ಒಪ್ಪಿಕೊಂಡ ಹರೀಶ; ವಿಶ್ವನ ಕಣ್ಣಿಂದ ತಪ್ಪಿಸಿಕೊಂಡಳು ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಚಿನ್ನ, ಹಣ ಕದ್ದಿರುವುದನ್ನು ಒಪ್ಪಿಕೊಂಡ ಹರೀಶ; ವಿಶ್ವನ ಕಣ್ಣಿಂದ ತಪ್ಪಿಸಿಕೊಂಡಳು ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

ಚಿನ್ನ, ಹಣ ಕದ್ದಿರುವುದನ್ನು ಒಪ್ಪಿಕೊಂಡ ಹರೀಶ; ವಿಶ್ವನ ಕಣ್ಣಿಂದ ತಪ್ಪಿಸಿಕೊಂಡಳು ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 18ರ ಸಂಚಿಕೆಯಲ್ಲಿ ಹರೀಶ ಮತ್ತು ಸಂತೋಷನ ನಡುವೆ ಮಾತಿನ ಜಟಾಪಟಿ ನಡೆದಿದೆ. ಹರೀಶ ತಾನು ಚಿನ್ನ ಕದ್ದಿರುವುದು ಹೌದು, ಹಣ ಕದ್ದಿರುವುದು ಕೂಡ ಹೌದು ಎಂದು ಸಂತೋಷನ ಬಳಿ ಒಪ್ಪಿಕೊಂಡಿದ್ದಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಏಪ್ರಿಲ್ 18ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಏಪ್ರಿಲ್ 18ರ ಸಂಚಿಕೆ (ZEE Kannada Facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 18ರ ಸಂಚಿಕೆಯಲ್ಲಿ ಸಂತೋಷ್ ಮತ್ತು ಹರೀಶ ಮನೆಯ ಹಿಂದುಗಡೆ ಮಾತುಕತೆಯಲ್ಲಿ ತೊಡಗಿದ್ದಾರೆ. ಸಂತೋಷ, ಬಲವಾಗಿ ಹರೀಶನ ಕೊರಳಪಟ್ಟಿ ಹಿಡಿದು ಹಣ ಮತ್ತು ಚಿನ್ನದ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಆಗ ಹರೀಶ, ಒಂದೊಂದಾಗಿ ಎಲ್ಲವನ್ನು ಬಾಯಿಬಿಟ್ಟಿದ್ದಾನೆ. ಫೈನಾನ್ಸ್‌ನವರ ಕಿರುಕುಳ, ಹಣಕಾಸಿನ ಸಮಸ್ಯೆಯಿಂದಾಗಿ ನಾನು ಈ ಕೆಲಸ ಮಾಡಬೇಕಾಯಿತು, ಹಣ ಕದ್ದಿರುವುದು ಹೌದು, ಸಿಂಚನಾಳ ಚಿನ್ನವನ್ನು ಬದಲಾಯಿಸಿರುವುದು ಕೂಡ ಹೌದು ಎಂದು ಹೇಳುತ್ತಾನೆ. ಹೀಗಾಗಿ ಸಂತೋಷ್‌ಗೆ ಎಲ್ಲವೂ ಸ್ಪಷ್ಟವಾಗಿದೆ. ಜತೆಗೆ ತಮ್ಮ ಹರೀಶನ ಮೇಲೆ ವಿಪರೀತ ಕೋಪವೂ ಬಂದಿದೆ.

ಹರೀಶನ ಬಳಿ ಸಂತೋಷ ನನ್ನ ಹಣವನ್ನು ಮರಳಿ ಕೊಡಬೇಕು, ನೀನು ಅದೇನು ಮಾಡುವೆ ಎಂದು ನನಗೆ ಗೊತ್ತಿಲ್ಲ, ನಿನ್ನನ್ನು ತಮ್ಮ ಎನ್ನಲು ನನಗೆ ಕಿರಿಕಿರಿಯಾಗುತ್ತಿದೆ. ತಮ್ಮ ಎನ್ನುವ ಒಂದೇ ಕಾರಣಕ್ಕೆ ನಾನು ನಿನ್ನನ್ನು ಸುಮ್ಮನೆ ಬಿಡುತ್ತಿದ್ದೇನೆ ಎಂದು ಹೇಳುತ್ತಾನೆ. ಜತೆಗೆ ಇನ್ನು ಮುಂದೆ ನನ್ನ ಬಳಿ ನೀನು ಮಾತನಾಡುವುದು ಬೇಡ, ಅಣ್ಣ- ತಮ್ಮ ಎನ್ನುವ ಋಣ ಇವತ್ತಿಗೆ ಮುಗಿಯಿತು, ನಿನ್ನ ಬಳಿ ಮಾತನಾಡಲು ನನಗೆ ಇಷ್ಟವಿಲ್ಲ, ನೀನೂ ಅಷ್ಟೇ, ನನ್ನನ್ನು ಮಾತನಾಡಿಸಬೇಡ, ನಿನ್ನ ಜೊತೆ ಇನ್ನು ಮುಂದೆ ಯಾವುದೇ ಮಾತುಕತೆಯಿಲ್ಲ ಎಂದು ಹೇಳುತ್ತಾನೆ. ಅದನ್ನು ಕೇಳಿ ಹರೀಶನಿಗೆ ಗರಬಡಿದಂತಾಗುತ್ತದೆ.

ಅಣ್ಣ ಸಂತೋಷನ ಕಾಲು ಹಿಡಿದು ಹರೀಶ ಬೇಡಿಕೊಂಡರೂ, ಕೇಳಿಕೊಂಡರೂ ಅವನ ಮನಸ್ಸು ಕರಗುವುದಿಲ್ಲ, ಅಲ್ಲದೆ, ಮಾತನಾಡಿಸು, ಪ್ಲೀಸ್, ನನ್ನನ್ನು ದಯವಿಟ್ಟು ಕ್ಷಮಿಸು ಎಂದು ಹರೀಶ ಕೇಳಿಕೊಂಡರೂ, ಸಂತೋಷನ ಮನಸ್ಸು ಕರಗಿಲ್ಲ. ಅವನು ಹರೀಶನನ್ನು ಅಲ್ಲಿಯೇ ಬಿಟ್ಟು ಕೋಪದಿಂದ ಮನೆಯ ಒಳಗೆ ಹೋಗುತ್ತಾನೆ. ಇತ್ತ ಹರೀಶ, ಮೊದಲೇ ಮನೆಯಲ್ಲಿ ನನಗೆ ಮರ್ಯಾದೆ ಇಲ್ಲ, ಹೀಗಾಗಿ ಇನ್ನು ಮುಂದೆ ಹೇಗಿರುತ್ತದೆ ಎಂದು ಚಿಂತೆಯಲ್ಲಿ ತೊಡಗಿದ್ದಾನೆ.

ಇತ್ತ ಮನೆಯಲ್ಲಿ ಜಾಹ್ನವಿ, ತನ್ನನ್ನು ಚಂದನಾ ಎಂದೇ ಪರಿಚಯಿಸಿಕೊಂಡಿರುವುದರಿಂದ ಮನೆಯಲ್ಲಿ ಅವಳನ್ನು ಚಂದನಾ ಎಂದೇ ಕರೆಯುತ್ತಿದ್ದಾರೆ. ನರಸಿಂಹ ಅವಳ ಬಳಿ ಕಾಫಿ ಕೇಳಿದ್ದಾರೆ. ಚಂದನಾ ಅಂದರೆ, ಜಾಹ್ನವಿ ಅಡುಗೆ ಮನೆಯಿಂದ ರುಚಿಯಾದ ಕಾಫಿ ಮಾಡಿಕೊಂಡು ಬಂದು ಕೊಟ್ಟಿದ್ದಾಳೆ. ನರಸಿಂಹ ಕಾಫಿ ಕುಡಿದು ಅವಳನ್ನು ಹೊಗಳಿದ್ದಾರೆ.

ಅಷ್ಟರಲ್ಲಿ ವಿಶ್ವ ಮನೆಗೆ ಬಂದಿದ್ದಾನೆ, ಅವನಿಗೂ ಕಾಫಿ ಕುಡಿಯುವಂತೆ ನರಸಿಂಹ ಒತ್ತಾಯಿಸಿದ್ದಾನೆ. ಚಂದನಾ ಮಾಡಿರುವ ಕಾಫಿ ತುಂಬಾ ರುಚಿಯಾಗಿದೆ, ನೀನು ಕೂಡ ಕುಡಿ ಎಂದು ಒತ್ತಾಯಿಸುತ್ತಾರೆ. ಜತೆಗೆ ಚಂದನಾಳನ್ನು ಕರೆದು ವಿಶ್ವನಿಗೆ ಪರಿಚಯ ಮಾಡಿಸುತ್ತಾರೆ. ಚಂದನಾ ಮಾತ್ರ ಮರೆಯಲ್ಲಿ ನಿಂತು, ಮುಖ ತೋರಿಸದೇ, ನಮಸ್ಕಾರ ಮಾಡಿ ಒಳಹೋಗುತ್ತಾಳೆ. ಹೀಗಾಗಿ ಅವಳ ಇರುವಿಕೆ ವಿಶ್ವನಿಗೆ ಗೊತ್ತಾಗಿಲ್ಲ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಏಪ್ರಿಲ್ 18ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in