ಅಜ್ಜಿ ಟ್ರಂಕ್ ಓಪನ್ ಮಾಡಿದ ಹರೀಶ ಮತ್ತು ಸಂತೋಷ್; ಅಜ್ಜಿಯ ನೋಡುವ ಜಯಂತ್‌ ಪ್ಲ್ಯಾನ್‌ಗೆ ಜಾಹ್ನವಿ ಅಡ್ಡಿ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅಜ್ಜಿ ಟ್ರಂಕ್ ಓಪನ್ ಮಾಡಿದ ಹರೀಶ ಮತ್ತು ಸಂತೋಷ್; ಅಜ್ಜಿಯ ನೋಡುವ ಜಯಂತ್‌ ಪ್ಲ್ಯಾನ್‌ಗೆ ಜಾಹ್ನವಿ ಅಡ್ಡಿ: ಲಕ್ಷ್ಮೀ ನಿವಾಸ ಧಾರಾವಾಹಿ

ಅಜ್ಜಿ ಟ್ರಂಕ್ ಓಪನ್ ಮಾಡಿದ ಹರೀಶ ಮತ್ತು ಸಂತೋಷ್; ಅಜ್ಜಿಯ ನೋಡುವ ಜಯಂತ್‌ ಪ್ಲ್ಯಾನ್‌ಗೆ ಜಾಹ್ನವಿ ಅಡ್ಡಿ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಮಾರ್ಚ್ 19ರ ಸಂಚಿಕೆಯಲ್ಲಿ ಅಜ್ಜಿಯನ್ನು ನೋಡುವ ಜಯಂತ್ ಪ್ಲ್ಯಾನ್‌ಗೆ ಜಾಹ್ನವಿ ಅಡ್ಡಿ ಪಡಿಸಿದ್ದಾಳೆ. ಭಾವನಾ ಮತ್ತು ಸಿದ್ದೇಗೌಡ್ರನ್ನು ಇನ್ನೂ ಒಂದು ದಿವಸ ಇದ್ದು ಹೋಗುವಂತೆ ಜಾಹ್ನವಿ ಕೇಳಿಕೊಳ್ಳುತ್ತಾಳೆ. ಆದರೆ ಅವರು ಹೊರಟುಹೋಗುತ್ತಾರೆ.

 ಲಕ್ಷ್ಮೀ ನಿವಾಸ ಧಾರಾವಾಹಿ ಬುಧವಾರ ಮಾರ್ಚ್ 19ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿ ಬುಧವಾರ ಮಾರ್ಚ್ 19ರ ಸಂಚಿಕೆ (ZEE KANNADA FACEBOOK)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರ ಮಾರ್ಚ್ 19ರ ಸಂಚಿಕೆಯಲ್ಲಿ ಭಾವನಾ ಮತ್ತು ಸಿದ್ದೇಗೌಡ್ರು, ಜಾಹ್ನವಿ ಮನೆಯಲ್ಲಿ ಇದ್ದಾರೆ. ಭಾವನಾ, ಜಾಹ್ನವಿ ಜೊತೆಯೇ ಮಲಗಿದ್ದಾಳೆ. ಬೆಳಗೆದ್ದು ಜಾಹ್ನವಿ ಪಕ್ಕದಲ್ಲಿ ಭಾವನಾ ಇರುವುದನ್ನು ಕಂಡು, ಅವಳು ತುಂಬಾ ಖುಷಿಪಡುತ್ತಾಳೆ. ಭಾವನಾ ಜೊತೆ ಜಾಹ್ನವಿ ಮನಸ್ಸು ಬಿಚ್ಚಿ ಮಾತನಾಡಿ ಹಗುರಾಗುತ್ತಾಳೆ. ಹೊರಗಡೆ ಜಯಂತ್ ಮತ್ತು ಸಿದ್ದೇಗೌಡ್ರು ಮಾತನಾಡುತ್ತಾ ಕುಳಿತಿದ್ದಾರೆ. ಅವರಿಬ್ಬರೂ ಮಾತನಾಡುತ್ತಿರುವಾಗ, ಇವರ ನೆಪದಲ್ಲಿ ಅಜ್ಜಿಯನ್ನು ನೋಡಲು ಜಯಂತ್ ಪ್ಲ್ಯಾನ್ ಮಾಡುತ್ತಾನೆ. ಜಾಹ್ನವಿ ಮತ್ತು ಭಾವನಾ ಮಾತನಾಡುತ್ತಾ ಇರುತ್ತಾರೆ, ನಾವು ಇಬ್ಬರೇ ಮೆಲ್ಲನೇ ಹೋಗಿ ಅಜ್ಜಿಯನ್ನು ನೋಡಿಕೊಂಡು ಬರಬಹುದು ಎಂದು ಯೋಚಿಸುತ್ತಾನೆ. ಅದನ್ನು ಸಿದ್ದೇಗೌಡ್ರ ಬಳಿ ಜಯಂತ್ ಹೇಳುತ್ತಾನೆ.

ಜಯಂತ್ ಮಾತನ್ನು ಕೇಳಿದ ಸಿದ್ದೇಗೌಡ್ರು, ಅಯ್ಯೋ, ಅಜ್ಜಿಯನ್ನು ನೋಡಲು ಹೋಗುವುದು ಎಂದರೆ ನನಗೂ ಇಷ್ಟವೇ. ಆದರೆ ನಾವಿಬ್ಬರೇ ಹೋಗುವುದು ತಪ್ಪಾಗುತ್ತದೆ. ನಮ್ಮ ಜತೆ ಜಾಹ್ನವಿ ಮತ್ತು ಭಾವನಾ ಕೂಡ ಬರಲಿ ಎಂದು ಸಿದ್ದೇಗೌಡ್ರು ಹೇಳುತ್ತಾರೆ. ಅವರ ಮಾತು ಕೇಳಿ ಜಯಂತ್‌ಗೆ ಕಸಿವಿಸಿಯಾಗುತ್ತದೆ. ನಾವಿಬ್ಬರೇ ಹೋಗಿ ಅಜ್ಜಿಯನ್ನು ನೋಡುವುದು ಎಂದುಕೊಂಡಿದ್ದ ಜಯಂತ್ ಪ್ಲ್ಯಾನ್‌ಗೆ ಒಂದೆಡೆ ಸಿದ್ದೇಗೌಡ್ರು ಬದಲಾವಣೆ ಮಾಡುತ್ತಾರೆ. ನಮ್ಮ ಜತೆ ಅವರಿಬ್ಬರನ್ನೂ ಕರೆದುಕೊಂಡು ಹೋಗುವ ಎಂದು ಹೇಳುತ್ತಾರೆ.

ತಿಂಡಿ ಮಾಡುವ ಸಮಯದಲ್ಲಿ ಸಿದ್ದೇಗೌಡ್ರು, ಜಾಹ್ನವಿ ಮತ್ತು ಭಾವನಾ ಜೊತೆ, ನಾವು ಹೋಗಿ ಅಜ್ಜಿಯನ್ನು ನೋಡಿಕೊಂಡು ಬರೋಣವೇ ಎಂದು ಕೇಳುತ್ತಾರೆ. ಆಗ ಜಾಹ್ನವಿಗೆ ಇದು ಜಯಂತ್‌ನ ಪ್ಲ್ಯಾನ್ ಎಂದು ಅರಿವಾಗುತ್ತದೆ. ಅದಕ್ಕೆ ಅವಳು, ಅಯ್ಯೋ ಈಗ ಬೇಡ, ಅಷ್ಟೊಂದು ದೂರ ಪ್ರಯಾಣ ಮಾಡಲು ನನಗೆ ಸಾಧ್ಯವಿಲ್ಲ. ನಾನು ಅಷ್ಟು ದೂರ ಬರುವುದಿಲ್ಲ, ಡಾಕ್ಟರ್ ಕೂಡ ಈಗ ದೂರ ಪ್ರಯಾಣ ಬೇಡ ಎಂದಿದ್ದಾರೆ. ಇನ್ನೊಮ್ಮೆ ಹೋಗೋಣ ಎಂದು ಹೇಳುತ್ತಾಳೆ. ಅದಕ್ಕೆ ಭಾವನಾ ಮತ್ತು ಸಿದ್ದೇಗೌಡ್ರು ಕೂಡ ಸರಿ ಎಂದು ತಲೆಯಾಡಿಸುತ್ತಾರೆ. ಅಷ್ಟರಲ್ಲಿ ಜಯಂತ್‌ ತನ್ನ ಪ್ಲ್ಯಾನ್ ಜಾಹ್ನವಿಗೆ ತಿಳಿದಿದೆ, ಅದಕ್ಕೇ ಅವರು ಬೇಡ ಎಂದಿದ್ದು ಎಂದು ಅರ್ಥಮಾಡಿಕೊಳ್ಳುತ್ತಾನೆ, ಅಜ್ಜಿಯನ್ನು ನೋಡಲಾಗದೇ ಇರುವುದಕ್ಕೆ ಕೋಪಗೊಳ್ಳುತ್ತಾನೆ, ಆದರೆ ಅದನ್ನು ಅವರಲ್ಲಿ ತೋರಿಸಿಕೊಳ್ಳುವುದಿಲ್ಲ. ಅವನು ಪೆಚ್ಚಾಗುತ್ತಾನೆ.

ಇತ್ತ ಮನೆಯಲ್ಲಿ ಹರೀಶ ಮತ್ತು ಜಯಂತ, ಅಜ್ಜಿಯ ಟ್ರಂಕ್‌ಗೆ ನಕಲಿ ಕೀ ಮಾಡಿಸಿ, ಅದನ್ನು ಓಪನ್ ಮಾಡಿದ್ದಾರೆ. ಟ್ರಂಕ್‌ನಲ್ಲಿ ಹಣ, ಕಾಗದ ಪತ್ರಗಳು ಇರಬಹುದು ಎಂದುಕೊಂಡಿದ್ದ ಅವರಿಗೆ ಶಾಕ್ ಆಗುತ್ತದೆ, ಅಜ್ಜಿಯ ಟ್ರಂಕ್‌ನಲ್ಲಿ ಒಂದಷ್ಟು ಬಟ್ಟೆ, ಸೀರೆ, ಫೋಟೊ ಬಿಟ್ಟರೆ ಬೇರೇನೂ ಅವರಿಗೆ ಸಿಗುವುದಿಲ್ಲ. ಹೀಗಾಗಿ ಅವರು ಸಪ್ಪೆಮೋರೆ ಹಾಕುತ್ತಾರೆ.

ಮತ್ತೊಂದೆಡೆ ಶ್ರೀನಿವಾಸ್‌ಗೆ ವೀಣಾಳ ಅಮ್ಮ ದಾರಿಯಲ್ಲಿ ಎದುರಾಗುತ್ತಾರೆ. ಅವರಿಗೆ ಸಂತೋಷ್ ಮನೆ ಕಟ್ಟಿಸುತ್ತಿರುವ ವಿಚಾರ ತಿಳಿದಿಲ್ಲ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಬುಧವಾರ ಮಾರ್ಚ್ 19ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner