ಜಾಹ್ನವಿ ಬಗ್ಗೆ ಮಹತ್ವದ ಸುಳಿವು ಪಡೆದುಕೊಂಡ ಜಯಂತ; ಮನೆ ಮತ್ತೆ ಭಾಗವಾಗಲಿ ಎಂದ ಸಿಂಚನಾ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಜಾಹ್ನವಿ ಬಗ್ಗೆ ಮಹತ್ವದ ಸುಳಿವು ಪಡೆದುಕೊಂಡ ಜಯಂತ; ಮನೆ ಮತ್ತೆ ಭಾಗವಾಗಲಿ ಎಂದ ಸಿಂಚನಾ: ಲಕ್ಷ್ಮೀ ನಿವಾಸ ಧಾರಾವಾಹಿ

ಜಾಹ್ನವಿ ಬಗ್ಗೆ ಮಹತ್ವದ ಸುಳಿವು ಪಡೆದುಕೊಂಡ ಜಯಂತ; ಮನೆ ಮತ್ತೆ ಭಾಗವಾಗಲಿ ಎಂದ ಸಿಂಚನಾ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 25ರ ಸಂಚಿಕೆಯಲ್ಲಿ ಮನೆಯಲ್ಲಿ ಜಾಹ್ನವಿಯ 11ನೇ ದಿನದ ಕಾರ್ಯಗಳು ನಡೆಯುತ್ತಿದ್ದು, ಮನೆಮಂದಿಯೆಲ್ಲಾ ಒಟ್ಟಾಗಿ ಭಾಗವಹಿಸಿದ್ದಾರೆ. ಅವರ ಜೊತೆ ಜಾನು ಗಂಡ ಜಯಂತನೂ ಪಾಲ್ಗೊಂಡಿದ್ದಾನೆ.

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 25ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 25ರ ಸಂಚಿಕೆ (Pixabay)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಏಪ್ರಿಲ್ 25ರ ಸಂಚಿಕೆಯಲ್ಲಿ ಮನೆಯಲ್ಲಿ ಜಾಹ್ನವಿಯ 11ನೇ ದಿನದ ಕಾರ್ಯಗಳು ನಡೆಯುತ್ತಿವೆ, ಮನೆಮಂದಿಯೆಲ್ಲಾ ಒಟ್ಟಾಗಿ ಮನೆಮಗಳು ಜಾನುವಿನ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಅಗಲಿದ ಅವಳ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಪುರೋಹಿತರು ಬಂದು ಜಾಹ್ನವಿಯ ಶ್ರಾದ್ಧ ಕಾರ್ಯ ಎಲ್ಲ ಕೆಲಸ ನಿರ್ವಹಿಸುತ್ತಿದ್ದಾರೆ. ಅಷ್ಟರಲ್ಲಿ ಜಯಂತನೂ ಬಂದಿದ್ದಾನೆ. ಅವನ ಬೇಸರದ ಮುಖ ನೋಡುತ್ತಲೇ ಲಕ್ಷ್ಮೀಗೆ ತಡೆಯಲಾಗದೇ ಅವಳು ಜಾಹ್ನವಿಯನ್ನು ನೆನೆದು ಅತ್ತಿದ್ದಾಳೆ. ಶ್ರೀನಿವಾಸ್, ಜಾಹ್ನವಿಗೆ ಸಮಾಧಾನ ಮಾಡಿದ್ದಾರೆ.

ಬಳಿಕ ಪುರೋಹಿತರು, ಕಾಗೆಗೆ ಇಡಲು ಪಿಂಡ ಮತ್ತು ಆಹಾರವನ್ನು ಮನೆಯ ಹೊರಗೆ ಇಟ್ಟುಬಿಡಿ, ಅವರು ಯಾವ ರೂಪದಲ್ಲಾದರೂ ಬಂದು ಅದನ್ನು ಸೇವಿಸುತ್ತಾರೆ ಎನ್ನುತ್ತಾರೆ. ಅದಕ್ಕೆ ಜಯಂತ ಒಲ್ಲದ ಮನಸ್ಸಿನಿಂದ ಸರಿ ಎನ್ನುತ್ತಾನೆ. ಶ್ರೀನಿವಾಸ್ ಮತ್ತು ಜಯಂತ ಮನೆಯ ಹೊರಗೆ, ಮರದ ಕೆಳಗೆ ಅದನ್ನು ಇಟ್ಟು ಬರುತ್ತಾರೆ. ಆದರೂ ಜಯಂತನಿಗೆ ಜಾಹ್ನವಿ ಇನ್ನಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಸಿದ್ಧನಿಲ್ಲ. ಹೊರಗೆ ಇಟ್ಟ ಆಹಾರವನ್ನು ತಿನ್ನಲು ಜಾಹ್ನವಿ ಬರಬಹುದು ಎಂದು ಅವನು ಕಾಯುತ್ತಾ ಕುಳಿತಿದ್ದಾನೆ. ಅದಕ್ಕೆ ಶ್ರೀನಿವಾಸ್, ಅಳಿಯಂದಿರೇ, ಬನ್ನಿ ನಾವು ಇಲ್ಲಿರುವುದು ಸೂಕ್ತವಲ್ಲ, ಒಳಗಡೆ ಹೋಗೋಣ ಎಂದು ಕರೆಯುತ್ತಾರೆ. ಸರಿ, ನೀವು ಹೋಗಿ ಮಾವ, ನಾನು ಬರುತ್ತೇನೆ ಎಂದು ಜಯಂತ ಹೇಳುತ್ತಾನೆ.

ಅಷ್ಟರಲ್ಲಿ ಜಯಂತನಿಗೆ ಡಿಟೆಕ್ಟಿವ್ ಏಜೆನ್ಸಿಯಿಂದ ಕರೆ ಬರುತ್ತದೆ. ಎಲ್ಲ ಕಡೆ ಹುಡುಕಾಡಿ ಆಗಿದೆ, ಆದರೆ ಚೆನ್ನೈನ ಕಡಲ ತೀರದಲ್ಲಿ ನೀವು ಹೇಳಿರುವ ಮಾದರಿಯಲ್ಲೇ, ಅದೇ ರೀತಿಯ ಮಹಿಳೆಯೊಬ್ಬರು ಕಡಲ ತೀರದಲ್ಲಿ ಸಿಕ್ಕಿದ್ದರು. ಅವರ ಚಹರೆ ಗಮನಿಸಿದರೆ, ಅದು ನೀವು ಹೇಳಿರುವಂತೆ, ನಿಮ್ಮ ಹೆಂಡತಿಯೇ ಆಗಿರಬಹುದು ಎಂದು ಆಗುತ್ತಿದೆ. ಅದಕ್ಕಾಗಿ, ನಾವು ಇನ್ನೊಮ್ಮೆ ಪರಿಶೀಲಿಸಬೇಕಿದೆ ಎಂದು ಹೇಳುತ್ತಾರೆ. ಅದನ್ನು ಕೇಳಿ ಜಯಂತನಿಗೆ ಇನ್ನಷ್ಟು ಖುಷಿಯಾಗುತ್ತದೆ. ಜತೆಗೆ ಅವನು, ನೀವು ಎಲ್ಲ ವಿವರ ಪರಿಶೀಲಿಸಿ, ಅಲ್ಲದೆ ಕಾರ್ಯಾಚರಣೆಯನ್ನು ಇನ್ನಷ್ಟು ವಿಸ್ತರಿಸಿ ಎಂದು ನಿರ್ದೇಶನ ನೀಡುತ್ತಾನೆ. ಅವನಿಗೆ ಜಾನು ಸಿಕ್ಕಷ್ಟೇ ಖುಷಿಯಾಗುತ್ತದೆ. ಮನೆಯೊಳಗೆ ಬಂದು, ಅವಳ ಫೋಟೊಗೆ ಹಾಕಿದ್ದ ಹೂವಿನ ಮಾಲೆಯನ್ನು ತೆಗೆದು ಹಾಕುತ್ತಾನೆ. ಮನೆಯವರು ಬೇಡ ಎಂದರೂ ಅವನು ಕೇಳುವುದಿಲ್ಲ.

ಇತ್ತ ಮನೆಯಲ್ಲಿ ಸಿಂಚನಾ, ಹರೀಶನ ಜೊತೆ ಮಾತನಾಡುತ್ತಾ, ಜಾಹ್ನವಿಯ ಕಾರ್ಯ ಮುಗಿದಿದೆ, ಇನ್ನು ಮನೆ ಹಿಂದಿನಂತೆಯೇ ಭಾಗ ಆಗಬೇಕು. ನಾನು ಇಲ್ಲಿ ಖುಷಿಯಾಗಿ ಇರಲು ಆಗುವುದಿಲ್ಲ. ನೀವು ಕೂಡಲೇ ಈ ಬಗ್ಗೆ ಮನೆಯಲ್ಲಿ ಮಾತನಾಡಿ ಎಂದು ಒತ್ತಾಯಿಸುತ್ತಿದ್ದಾಳೆ. ಹರೀಶ ಏನೇನೋ ಸಬೂಬು ಹೇಳಿ, ಅವಳ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾನೆ. ಆದರೆ ಸಿಂಚನಾ ಮಾತ್ರ ಅವನ ಮಾತು ಕೇಳಲು ತಯಾರಿಲ್ಲ.

ಇತ್ತ ಜಯಂತನ ಮನೆಯಲ್ಲಿ ಕೆಲಸ ಮಾಡುವ ಶಾರದಮ್ಮನ ಗಂಡ, ಮಗಳ ಮದುವೆಗೆ ಹಣ ಕೇಳಲು ಅವನ ಮನೆಗೆ ಬಂದಿದ್ದಾರೆ. ಅಲ್ಲಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಶುಕ್ರವಾರ ಏಪ್ರಿಲ್ 25ರ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in