ಮೊಬೈಲ್ ನೋಡುತ್ತಾ ಕುಳಿತ ಜಯಂತ್‌ನ ಪ್ರಶ್ನಿಸಿದ ಜಾಹ್ನವಿ; ಮನೆಯಲ್ಲಿರುವ ಸಿಸಿಟಿವಿ ವಿಚಾರ ಬಯಲಾಗುತ್ತಾ?: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮೊಬೈಲ್ ನೋಡುತ್ತಾ ಕುಳಿತ ಜಯಂತ್‌ನ ಪ್ರಶ್ನಿಸಿದ ಜಾಹ್ನವಿ; ಮನೆಯಲ್ಲಿರುವ ಸಿಸಿಟಿವಿ ವಿಚಾರ ಬಯಲಾಗುತ್ತಾ?: ಲಕ್ಷ್ಮೀ ನಿವಾಸ ಧಾರಾವಾಹಿ

ಮೊಬೈಲ್ ನೋಡುತ್ತಾ ಕುಳಿತ ಜಯಂತ್‌ನ ಪ್ರಶ್ನಿಸಿದ ಜಾಹ್ನವಿ; ಮನೆಯಲ್ಲಿರುವ ಸಿಸಿಟಿವಿ ವಿಚಾರ ಬಯಲಾಗುತ್ತಾ?: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬುಧವಾರದ ಸಂಚಿಕೆಯಲ್ಲಿ ಹರೀಶ್ ಕುರಿತಾಗಿ ಸಿಂಚನಾ ಮತ್ತು ವೀಣಾ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಮತ್ತೊಂದೆಡೆ ಜಯಂತ್‌ ಮೊಬೈಲ್‌ನಲ್ಲಿ ಕದ್ದು ಮುಚ್ಚಿ ಅದೇನೋ ನೋಡುತ್ತಿರುವುದು ಜಾಹ್ನವಿ ಗಮನಕ್ಕೆ ಬಂದಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ
ಲಕ್ಷ್ಮೀ ನಿವಾಸ ಧಾರಾವಾಹಿ (Zee Kannada Facebook)

Lakshmi Nivasa Serial: ಮನೆಗೆ ಬಂದ ಹರೀಶ್ ಮತ್ತು ಸಿಂಚನಾ ಶ್ರೀನಿವಾಸ್ ಜತೆ ಸರಿಯಾಗಿ ಮಾತು ಆಡುವುದಿಲ್ಲ. ಇದನ್ನು ವೀಣಾ ಪ್ರಶ್ನಿಸುತ್ತಾಳೆ. ಹೊಸ ಬ್ಯುಸಿನೆಸ್ ಶುರುಮಾಡುವಾಗ ಅಪ್ಪನನ್ನು ಯಾಕೆ ಕರೆದಿಲ್ಲ ಎಂದು ವೀಣಾ ಸಿಂಚನಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಆಗ ಶ್ರೀನಿವಾಸ್ ಮಧ್ಯಪ್ರವೇಶಿಸಿ ಅವಳನ್ನು ಸಮಾಧಾನಿಸುತ್ತಾಳೆ. ಇತ್ಯ ಇದ್ಯಾವುದರ ಪರಿವೆಯೇ ಇಲ್ಲದಂತೆ ಹರೀಶ ಮೊಬೈಲ್‌ನಲ್ಲಿಯೇ ತಲ್ಲೀನನಾಗಿರುತ್ತಾನೆ. ಫೈನಾನ್ಸ್ ಕಂಪನಿಗೆ ಹೂಡಿಕೆಯಾಗಿರುವ ಹಣವನ್ನು ಆತ ಹಣ ದ್ವಿಗುಣಗೊಳಿಸುವ ಗೇಮ್‌ನಲ್ಲಿ ತೊಡಗಿಸಿಕೊಂಡಿರುತ್ತಾನೆ. ಹೀಗಾಗಿ ಮನೆಯ ಕಲಹದ ಕಡೆ ಆತ ಗಮನ ಕೊಡುವುದಿಲ್ಲ. ಆ ಸಂದರ್ಭದಲ್ಲಿ ಬೇಸರಿಸಿಕೊಂಡ ಶ್ರೀನಿವಾಸ್, ಮತ್ತೆ ಮನೆ ಕಟ್ಟುವ ಮೇಸ್ತ್ರಿಗೆ ಕರೆ ಮಾಡಿ, ಕೆಲಸ ಏನಾದರೂ ಸಿಗಬಹುದೇ ಎಂದು ಕೇಳುತ್ತಾರೆ.

ಚೇತರಿಸಿಕೊಳ್ಳದ ಸಿದ್ದೇಗೌಡ್ರು

ಇತ್ತ ಆಕ್ಸಿಡೆಂಟ್ ವಿಚಾರವನ್ನೇ ತಲೆಯಲ್ಲಿಟ್ಟುಕೊಂಡ ಸಿದ್ದೇಗೌಡ್ರು, ಭಾವನಾ ಜತೆ ಸರಿಯಾಗಿ ಮಾತೂ ಆಡಲಾರದೆ ಸಂಕಟ ಪಟ್ಟುಕೊಂಡಿರುತ್ತಾರೆ. ಈ ಮಧ್ಯೆ ಭಾವನಾ, ಕೇಸ್ ವಿಚಾರದಲ್ಲಿ ಜವರೇಗೌಡ್ರು ಸಹಾಯ ಮಾಡುವಂತೆ ಸಿದ್ದೇಗೌಡನಲ್ಲಿ ಕೇಳಿಕೊಳ್ಳುತ್ತಾರೆ. ಕೇಸ್ ಕುರಿತು ಪೊಲೀಸ್ ಠಾಣೆಯಲ್ಲಿ ವಿಚಾರಿಸಿದರೂ, ಯಾವುದೇ ಪ್ರಗತಿಯಾಗಿಲ್ಲ ಎಂದು ಭಾವನಾ ಹೇಳುತ್ತಾಳೆ. ಅದನ್ನು ಕೇಳಿ ಸಿದ್ದೇಗೌಡನಿಗೆ ಅತ್ತ ಸತ್ಯವನ್ನೂ ಹೇಳಲಾಗದೇ, ಇತ್ತ ಸರಿಯಾಗಿ ಮಾತನಾಡಲೂ ಆಗದೇ ಸಮಸ್ಯೆಯಲ್ಲಿ ಸಿಕ್ಕಿಬಿದ್ದಂತೆ ಆಗುತ್ತದೆ.

ಇದನ್ನೂ ಓದಿ: ಭಾಗ್ಯಾ ಹೊಸ ಕಾರಿಗೆ ಭರ್ಜರಿ ಪೂಜೆ; ಶ್ರೇಷ್ಠಾಗೆ ಗಿಫ್ಟ್ ಕಳುಹಿಸಿದ ಬೆಸ್ಟ್‌ಫ್ರೆಂಡ್

ತಾನೇ ಮನೆ ಕಾಯಲು ಹೊರಟ ಸಂತೋಷ್

ಸಂತೋಷ್ ಮನೆ ರಾತ್ರಿ ಕಾಯುವ ಕೆಲಸದಿಂದ ಸೆಕ್ಯುರಿಟಿ ಗಾರ್ಡ್ ಅನ್ನು ತೆಗೆದುಹಾಕಲಾಗಿದೆ. ಹೀಗಾಗಿ ಆತ್ತ ಕಡೆಯಿಂದ ಮೇಸ್ತ್ರಿ ಕರೆ ಮಾಡಿ, ಮನೆಯಲ್ಲಿ ಬಹಳಷ್ಟು ಸಾಮಾಗ್ರಿಗಳಿವೆ, ಅದನ್ನು ನೀವೇ ನೋಡಿಕೊಳ್ಳಬೇಕು. ಸೆಕ್ಯುರಿಟಿ ಗಾರ್ಡ್ ಕೂಡ ಇಲ್ಲ ಎಂದು ಹೇಳಿ ಬಂದು ನೋಡಿಕೊಳ್ಳಲು ಒತ್ತಾಯಿಸುತ್ತಾನೆ. ಅದರಿಂದ ಸಂತೋಷ್‌ಗೆ ಕಿರಿಕಿರಿ ಶುರುವಾಗಿ, ತಾನೇ ಬರುವುದಾಗಿ ಹೇಳಿ ಹೊರಡುತ್ತಾನೆ.

ಜಯಂತ್‌ಗೆ ಜಾಹ್ನವಿಯ ಪ್ರಶ್ನೆ

ಮತ್ತೊಂದೆಡೆ ಜಾಹ್ನವಿ ತಾನು ಮನೆಗೆ ಹೋಗಿ ನಾಲ್ಕು ದಿನ ಇದ್ದು ಬರುತ್ತೇನೆ ಎಂದು ಜಯಂತ್‌ನಲ್ಲಿ ಕೇಳಿಕೊಂಡಿದ್ದರೂ, ಅದಕ್ಕೆ ಆತ ಸಮ್ಮತಿಸಿರುವುದಿಲ್ಲ. ಅತ್ತ ಅಜ್ಜಿಯ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿರುವುದಿಲ್ಲ. ಈ ಮಧ್ಯೆ ಜಯಂತ್ ಮೊಬೈಲ್‌ನಲ್ಲಿ ರಹಸ್ಯವಾಗಿ ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿ ಫೂಟೇಜ್ ಅನ್ನು ನೋಡುತ್ತಿರುತ್ತಾನೆ. ಆ ಕ್ಷಣದಲ್ಲೇ ಜಾಹ್ನವಿ ಬಂದಿದ್ದರಿಂದ ಆತ ಗಲಿಬಿಲಿಗೊಂಡು ಪಕ್ಕನೆ ಮೊಬೈಲ್ ಅನ್ನು ಬದಿಗಿರಿಸುತ್ತಾನೆ. ಆಗ ಜಾಹ್ನವಿ, ಮೊಬೈಲ್ ಕೊಡಿ, ಅದೇನು ನೋಡುತ್ತಿದ್ದೀರಿ ಎಂದು ಕೇಳುತ್ತಾಳೆ. ಅದಕ್ಕೆ ಜಯಂತ್, ಅದೇನೂ ಇಲ್ಲ ಎಂದು ತಡಬಡಾಯಿಸುತ್ತಾನೆ, ಆದರೆ ಅಷ್ಟಕ್ಕೇ ಜಾಹ್ನವಿ ಸುಮ್ಮನಾಗುವುದಿಲ್ಲ. ಆಗ ಜಾಹ್ನವಿಯನ್ನು ಮಾತಿನಲ್ಲೇ ಪುಸಲಾಯಿಸಿದ ಜಯಂತ್, ಅದು ಆಫೀಸ್‌ಗೆ ಸಂಬಂಧಿಸಿದ ಕೆಲವೊಂದು ಇ ಮೇಲ್ ನೋಡುತ್ತಿದ್ದೆ, ಅದು ಮುಗಿಸಿ ಬರುತ್ತೇನೆ, ನೀವು ಹೋಗಿ ಮಲಗಿ ಎಂದು ಅವಳನ್ನು ಕಳುಹಿಸುತ್ತಾನೆ. ಮತ್ತೆ ಬಂದು ಜಾಹ್ನವಿ ಕರೆದಾಗ, ಜಯಂತ್ ಹೊರಡುತ್ತಾನೆ.

ಮತ್ತೆ ಮುಂದಿನ ಸಂಚಿಕೆಯಲ್ಲಿ ಜಾಹ್ನವಿಗೆ ಜಯಂತ್ ಮನೆಯಲ್ಲಿ ಸಿಸಿಟಿವಿ ಅಳವಡಿಸಿರುವ ಕುರಿತು ತಿಳಿಯುತ್ತದೆ. ಅದನ್ನು ನೋಡಿ ಶಾಕ್ ಆದ ಜಾಹ್ನವಿ ಹೇಗೆ ಪ್ರತಿಕ್ರಿಯಿಸುತ್ತಾಳೆ ಎನ್ನುವುದನ್ನು ಗುರುವಾರದ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner