ಸಂತೋಷ್ ತಂದೆಯೇ ಶ್ರೀನಿವಾಸ್ ಎಂದು ಅರಿತ ಮೇಸ್ತ್ರಿ; ಸಿದ್ದೇಗೌಡ್ರನ್ನ ಮಾತಲ್ಲೇ ಮಣಿಸಿದ ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಸಂತೋಷ್ ತಂದೆಯೇ ಶ್ರೀನಿವಾಸ್ ಎಂದು ಅರಿತ ಮೇಸ್ತ್ರಿ; ಸಿದ್ದೇಗೌಡ್ರನ್ನ ಮಾತಲ್ಲೇ ಮಣಿಸಿದ ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ

ಸಂತೋಷ್ ತಂದೆಯೇ ಶ್ರೀನಿವಾಸ್ ಎಂದು ಅರಿತ ಮೇಸ್ತ್ರಿ; ಸಿದ್ದೇಗೌಡ್ರನ್ನ ಮಾತಲ್ಲೇ ಮಣಿಸಿದ ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ಧೇಗೌಡನನ್ನು ಜವರೇಗೌಡ್ರು ಮಾತಿನಲ್ಲೇ ಮಣಿಸಿದ್ದಾರೆ. ಹೀಗಾಗಿ ಮನಸ್ಸಿನಲ್ಲಿದ್ದರೂ, ಸತ್ಯ ಹೇಳಲಾಗದೇ ಸಿದ್ದೇಗೌಡ ಮತ್ತೆ ಪರಿತಪಿಸುವಂತಾಗಿದೆ. ಮತ್ತೊಂದೆಡೆ ಸಿಂಚನಾಗೆ ನಕಲಿ ಒಡವೆಯ ಸಂಗತಿ ತಿಳಿಯುವುದರಿಂದ ಹರೀಶ್ ಸ್ವಲ್ಪದರಲ್ಲೇ ಪಾರಾಗಿದ್ದಾನೆ.

ನಕಲಿ ಒಡವೆಯ ವಿಚಾರ ಸಿಂಚನಾಗೆ ತಿಳಿಯುವುದೇ?
ನಕಲಿ ಒಡವೆಯ ವಿಚಾರ ಸಿಂಚನಾಗೆ ತಿಳಿಯುವುದೇ? (ZEE Kannada Facebook)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯ ಗುರುವಾರ (ಜನವರಿ 30)ದ ಸಂಚಿಕೆಯಲ್ಲಿ ಸಿದ್ದೇಗೌಡ ಮತ್ತು ಜವರೇಗೌಡರ ನಡುವೆ ಮತ್ತೆ ಮಾತು ಮುಂದುವರಿದಿದೆ. ಭಾವನಾ ಬಳಿ ಸತ್ಯ ಹೇಳಿಕೊಳ್ಳುತ್ತೇನೆ ಎಂದ ಸಿದ್ದೇಗೌಡನನ್ನು ಜವರೇಗೌಡ್ರು ಮಾತಿನಲ್ಲೇ ಮಣಿಸಿದ್ದಾರೆ. ನೀನು ಈಗ ಹೋಗಿ ಎಲ್ಲ ಸತ್ಯವನ್ನು ಹೇಳಿದರೆ ಆಕೆ ನಿನ್ನನ್ನು ಕ್ಷಮಿಸುವಳೇ? ಅದು ಹೇಗೆ ಸಾಧ್ಯ? ನಿನ್ನ ಮೇಲಿನ ನಂಬಿಕೆ, ಪ್ರೀತಿ ಆಕೆಗೆ ಕಡಿಮೆಯಾಗಬಹುದು. ಹೀಗಾಗಿ ನಿನ್ನನ್ನು ಆಕೆ ಬಿಟ್ಟು ಹೋಗಬಹುದು ಎಂದು ಜವರೇಗೌಡ್ರು ಸಿದ್ದೇಗೌಡನ ಕಿವಿಹಿಂಡುತ್ತಾರೆ. ಅಲ್ಲದೇ, ನನ್ನ ರಾಜಕೀಯ ಭವಿಷ್ಯ ನಿನ್ನ ಮಾತಿನ ಮೇಲೆ ನಿಂತಿದೆ ಎಂದು ಮನವೊಲಿಸುತ್ತಾರೆ. ಆಗ ಸಿದ್ದೇಗೌಡ ಹೌದು, ನಾನು ಈಗ ಸತ್ಯ ಹೇಳಿದರೆ, ಮೇಡಂ ನನ್ನನ್ನು ಬಿಟ್ಟು ಹೋಗಬಹುದು, ನನ್ನ ಮೇಲಿನ ಪ್ರೀತಿ ನಂಬಿಕೆ ಕಡಿಮೆಯಾಗಬಹುದು ಎಂದು ಸುಮ್ಮನಾಗುತ್ತಾನೆ. ಹೀಗಾಗಿ ಜವರೇಗೌಡ್ರು ನಿಟ್ಟುಸಿರು ಬಿಡುತ್ತಾರೆ.

ಸಿಸಿಟಿವಿ ಪತ್ತೆಹಚ್ಚಿದ ಜಾಹ್ನವಿ

ಮನೆಯಲ್ಲಿರುವ ರೂಮ್ ಫ್ರೆಶ್ನರ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ವಿಚಾರ ಜಾಹ್ನವಿಗೆ ಅಕಸ್ಮಾತ್ ಆಗಿ ತಿಳಿಯುತ್ತದೆ. ಕೂಡಲೇ ಜಯಂತ್‌ಗೆ ಈ ವಿಚಾರ ತಿಳಿಸಬೇಕು ಅಂದುಕೊಂಡವಳು, ಸುಮ್ಮನಾಗುತ್ತಾಳೆ. ಮೊದಲು ಅದನ್ನು ಯಾರು ಇರಿಸಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು, ಅದರ ಬಳಿಕವೇ ಜಯಂತ್‌ನಲ್ಲಿ ಈ ವಿಚಾರ ಕೇಳಬೇಕು ಎಂದು ಜಾಹ್ನವಿ ಅಂದುಕೊಳ್ಳುತ್ತಾಳೆ. ಆಕೆ ಸಿಸಿಟಿವಿ ಕಂಡುಹುಡುಕಿರುವ ಸಂಗತಿ ಜಯಂತ್‌ಗೆ ಗೊತ್ತಾಗಿರುವುದಿಲ್ಲ. ಆತ ಮನೆಗೆ ಬರುವಾಗ ಮುದ್ದಾದ ಗೊಂಬೆಯೊಂದನ್ನು ಜಾಹ್ನವಿಗೆ ಉಡುಗೊರೆಯಾಗಿ ತರುತ್ತಾನೆ. ಅದು ಮುಟ್ಟಿಆಗ ಮಗುವಿನಿಂತೆ ಅಳುತ್ತದೆ, ಹೀಗಾಗಿ ಅದನ್ನು ಅಜ್ಜಿಯ ರೂಮ್‌ನಲ್ಲಿ ಇರಿಸೋಣ ಎಂದು ಜಾಹ್ನವಿಗೆ ಹೇಳುತ್ತಾನೆ. ಅದಕ್ಕೆ ಜಾಹ್ನವಿ ತಲೆಯಾಡಿಸುತ್ತಾಳೆ. ಆಕೆಗೆ ಜಯಂತ್‌ನ ಸಿಸಿಟಿವಿ ಕುತಂತ್ರದ ಅರಿವಾಗಿರುವುದಿಲ್ಲ.

ನಕಲಿ ಒಡವೆಯ ವಿಚಾರ ಸಿಂಚನಾಗೆ ತಿಳಿಯುವುದೇ?

ಮನೆಯಲ್ಲಿ ಇರುವಾಗ ಹರೀಶ್ ಮತ್ತು ಸಿಂಚನಾ ಮಾತನಾಡುತ್ತಿರುತ್ತಾರೆ. ಚೀಟಿ ಫಂಡಿಗೆ ಸಾಕಷ್ಟು ಮೊತ್ತ ಈಗಾಗಲೇ ಬಂದಿರುತ್ತದೆ. ಅಂದು ಸಂಜೆ ಗೆಳೆತಿಯ ಮನೆಯಲ್ಲಿ ಬರ್ತ್‌ಡೇ ಪಾರ್ಟಿ ಇದೆ, ಹೋಗೋಣ ಎಂದಾಗ ನಾನು ಬರಲ್ಲ ಎಂದು ಹರೀಶ್ ಹೇಳುತ್ತಾನೆ. ತಾನು ಒಬ್ಬಳೇ ಹೋಗುವುದಾಗಿ ತಿಳಿಸಿದ ಸಿಂಚನಾ, ಒಡವೆ ಯಾವುದು ಇರಲಿ ಎಂದು ತನ್ನಲ್ಲಿರುವ ಒಡವೆಗಳನ್ನು ತೋರಿಸುತ್ತಾಳೆ. ಆಗ ಹರೀಶ್‌ಗೆ ಒಮ್ಮೆಲೆ ಹೆದರಿಕೆಯಾಗುತ್ತದೆ. ನಕಲಿ ಒಡವೆಯ ಸಂಗತಿ ಬಯಲಾಗುವುದೋ ಎಂಬ ಆತಂಕ ಹರೀಶ್‌ಗೆ ಎದುರಾಗುತ್ತದೆ. ಆಗ ಆತ ಅದು ಚೆನ್ನಾಗಿಲ್ಲ, ಬೇರೆ ಒಡವೆ ಧರಿಸಿ ಎಂದು ಸಲಹೆ ನೀಡುತ್ತಾನೆ.

ಶ್ರೀನಿವಾಸ್ ಅವರೇ ನನ್ನ ತಂದೆ ಎಂದ ಸಂತೋಷ್

ಕೆಲಸ ಕಳೆದುಕೊಂಡ ಶ್ರೀನಿವಾಸ್, ಮೇಸ್ತ್ರಿ ಜತೆ ಮನೆ ಓನರ್‌ರನ್ನು ಭೇಟಿಯಾಗಲು ಹೋಗುತ್ತಿರುತ್ತಾರೆ. ಓನರ್ ಮನೆ ನಮ್ಮ ಮನೆ ಏರಿಯಾದಲ್ಲೇ ಇದೆ ಎಂದು ಅರಿತ ಶ್ರೀನಿವಾಸ್‌ಗೆ ಅಚ್ಚರಿಯಾಗುತ್ತದೆ. ಹೀಗಾಗಿ ಮೇಸ್ತ್ರಿ ಒಬ್ಬರೇ ಮುಂದೆ ಹೋಗಿ ಸಂತೋಷ್‌ನ ಭೇಟಿಯಾಗುತ್ತಾರೆ. ವಿಷಯ ತಿಳಿಸಿದಾಗ ಕೊನೆಗೆ ವಿಧಿಯಿಲ್ಲದೇ ಸಂತೋಷ್, ಶ್ರೀನಿವಾಸ್ ಅವರೇ ನನ್ನ ತಂದೆ ಎಂದು ಮೇಸ್ತ್ರಿಗೆ ತಿಳಿಸುತ್ತಾನೆ. ಈ ವಿಚಾರ ತಿಳಿದ ಮೇಸ್ತ್ರಿ ಸಂಕಟಪಡುತ್ತಾನೆ. ಎಂಥಾ ತಂದೆಗೆ ಎಂಥಾ ಮಗ ಎಂದು ಬೇಸರಪಟ್ಟು, ಶ್ರೀನಿವಾಸ್ ಅವರಿಗೆ ಇನ್ನೊಮ್ಮೆ ಸಿಗೋಣ ಎಂದು ಹೇಳಿ ಹೊರಟುಹೋಗುತ್ತಾನೆ.

ಮತ್ತೊಂದೆಡೆ ಭಾವನಾ, ಸಿದ್ದೇಗೌಡನಲ್ಲಿ ಆಕ್ಸಿಡೆಂಟ್ ವಿಚಾರ ಪ್ರಸ್ತಾಪಿಸುತ್ತಾಳೆ. ಈ ಸಂಗತಿಯಲ್ಲಿ ಮುಂದೇನಾಗುವುದೋ ಎನ್ನುವುದನ್ನು ಗುರುವಾರದ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner