ʻಅಹಂಕಾರ ಬಿಡಿ ಅಂಬೆಗಾಲು ಇಡುತ್ತಿರುವ ಕೂಸುಗಳೇ!ʼ ಮಡೆನೂರು ಮನುಗೆ ಪರೋಕ್ಷ ಟಾಂಗ್ ಕೊಟ್ಟ ನಟ ಜಗ್ಗೇಶ್
ಸೋಷಿಯಲ್ ಮೀಡಿಯಾದಲ್ಲಿ ಎರಡು ಪೋಸ್ಟ್ ಹಂಚಿಕೊಂಡಿರುವ ನಟ ಜಗ್ಗೇಶ್, ಎಲ್ಲಿಯೂ ಮಡೆನೂರು ಮನು ಅವರ ಹೆಸರನ್ನು ಪ್ರಸ್ತಾಪ ಮಾಡದೆ ಚಾಟಿ ಬೀಸಿದ್ದಾರೆ. ಅಷ್ಟಕ್ಕೂ ನಟ ಜಗ್ಗೇಶ್ ಹೇಳಿದ ಮಾತೇನು?

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಸದ್ಯ ಮಹಿಳೆ ಮೇಲಿನ ಅತ್ಯಾಚಾರ ಆರೋಪದ ಅಡಿಯಲ್ಲಿ ಜೈಲು ಪಾಲಾಗಿರುವ ಮಡೆನೂರು ಮನು, ಸೋಷಿಯಲ್ ಮೀಡಿಯಾದಲ್ಲಿಯೂ ಕಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟರ ಬಗ್ಗೆ ಹಗುರವಾಗಿ ಮಾತನಾಡಿದ ಆಡಿಯೋ ಕ್ಲಿಪ್ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ವಿವಾದಕ್ಕೆ ತುಪ್ಪ ಸುರಿದಂತಾಗಿದೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಪರೋಕ್ಷವಾಗಿ ಟಾಂಗ್ ಕೊಟ್ಟ ಜಗ್ಗೇಶ್..
ಸೋಷಿಯಲ್ ಮೀಡಿಯಾದಲ್ಲಿ ಎರಡು ಪೋಸ್ಟ್ ಹಂಚಿಕೊಂಡಿರುವ ನಟ ಜಗ್ಗೇಶ್, ಎಲ್ಲಿಯೂ ಮಡೆನೂರು ಮನು ಅವರ ಹೆಸರನ್ನು ಪ್ರಸ್ತಾಪ ಮಾಡದೆ ಚಾಟಿ ಬೀಸಿದ್ದಾರೆ. ಅಷ್ಟಕ್ಕೂ ನಟ ಜಗ್ಗೇಶ್ ಹೇಳಿದ ಮಾತೇನು? ಇಲ್ಲಿದೆ ಓದಿ. "ಒಂದು ಗಾದೆ ಮಾತು ನೆನಪಾಯಿತು! ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ. ಗುರುಹಿರಿಯರ ಮೇಲೆ ಗೌರವ ತೋರದವನು ಗೆದ್ದ ಇತಿಹಾಸ ಇಲ್ಲಾ! ಇಂದು ಇದ್ದದ್ದು ನಾಳೆ ಇರದು. ಅಹಂಕಾರ ಬಿಡಿ ಅಂಬೆಗಾಲು ಇಡುತ್ತಿರುವ ಕೂಸುಗಳೆ! ಆಯುಷ್ಯ ಬರೆಯೋದು ಬ್ರಹ್ಮ. ಚಿಲ್ಲರೆ ಮನುಷ್ಯರಲ್ಲಾ! ಇಂದಿನ ಚಿತ್ರರಂಗದ ಅಸಹ್ಯ ಕಂಡು ದುಃಖವಾಯಿತು!!" ಎಂದಿದ್ದಾರೆ.
ಇನ್ನೊಂದು ಟ್ವಿಟ್..
ಈ ಮೇಲಿನ ಟ್ವಿಟ್ಗೆ ಇನ್ನೊಂದು ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. "ಶಿವರಾಜಕುಮಾರ ಚಿತ್ರರಂಗದ ಕಿರೀಟ ಇದ್ದಂತೆ.. ಎಲ್ಲರನ್ನು ಪ್ರೀತಿಸುವ ಜೀವ. ಅಂಥವರ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ. ನೊಂದುಕೊಳ್ಳದಿರಿ ಶಿವಣ್ಣ ನೀವು ಹಿಮಾಲಯ. ನಿಮಗೆ ದೀರ್ಘಾಯುಷ್ಯ ಪ್ರಾಪ್ತಿ ಇದೆ. ನಿಮ್ಮ ಹೆತ್ತವರು ಕನ್ನಡಿಗರ ಆಶೀರ್ವಾದ ಇದೆ! We love you" ಎಂದಿದ್ದಾರೆ.
ಮಡೆನೂರು ಮನು ಅಡಿಯೋದಲ್ಲಿ ಏನಿದೆ?
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಮಡೆನೂರು ಮನು ಅವರದ್ದೇ ಎನ್ನಲಾದ ಆಡಿಯೋದಲ್ಲಿ ಶಿವರಾಜ್ಕುಮಾರ್, ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ಮಾತನಾಡಿದ್ದಾರೆ. "ಶಿವರಾಜ್ಕುಮಾರ್ ಇನ್ನೊಂದು ಆರು ವರ್ಷದಲ್ಲಿ ಸತ್ತೋಗ್ತಾನೆರೀ ನನಗೆ ಗೊತ್ತು. ಧ್ರುವ ಸರ್ಜಾ ಇನ್ನೊಂದು ಎಂಟು ವರ್ಷ. ದರ್ಶನ್ ಸತ್ತೋದ. ದರ್ಶನ್ಗೆ ಇನ್ನೊಂದು ಆರು ವರ್ಷ ಕ್ರೇಜ್ ಇರುತ್ತೆ. ಆದರೆ ಸಿನಿಮಾ ಮಾಡಲ್ಲ. ಆ ಮೂರು ಜನರ ಮಧ್ಯೆ ಕಾಂಪಿಟೇಷನ್ ಕೊಡೋಕೆ ಬಂದಿರೋ ಗಂಡುಗಲಿ ರೀ ನಾನು" ಎಂದಿದ್ದಾರೆ ಮನು.
ಚಿತ್ರಮಂದಿರದಲ್ಲಿ ʻಕುಲದಲ್ಲಿ ಕೀಳ್ಯಾವುದೋʼ
ಇನ್ನು ಕಳೆದ ಎರಡು ದಿನಗಳ ಹಿಂದಷ್ಟೇ ʻಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ತೆರೆಗೆ ಬಂದಿದೆ. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾವನ್ನು ಕೆ ರಾಮ್ ನಾರಾಯಣ್ ನಿರ್ದೇಶನ ಮಾಡಿದ್ದಾರೆ. ಮಡೆನೂರು ಮನು ನಾಯಕನಾಗಿ ನಟಿಸಿದರೆ, ʻರಾಮಾಚಾರಿʼ ಸೀರಿಯಲ್ ಮೂಲಕ ಮನೆ ಮಾತಾದ ಮೌನಾ ಗುಡ್ಡೆಮನೆ ಈ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಚಿತ್ರಕ್ಕೆ ಕಥೆ ಬರೆದಿದ್ದು, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಗೂ ರಾಮ್ ನಾರಾಯಣ್ ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡಿದ್ದಾರೆ. ಮನು ಛಾಯಾಗ್ರಹಣ, ದೀಪಕ್ ಸಂಕಲನ, ವಿನೋದ್, ಮಾಸ್ ಮಾದ, ನರಸಿಂಹ ಸಾಹಸ ನಿರ್ದೇಶನ ಹಾಗೂ ಅನಿಲ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ವಿಭಾಗ