ಕನ್ನಡ ಸುದ್ದಿ  /  Entertainment  /  Mollywood News The Kerala Story Day 1 Box Office Collection Actress Adah Sharma Malayalam Movie Indian Box Office Mnk

The Kerala Story Collection: ವಿವಾದಕ್ಕೆ ತುಪ್ಪ ಸುರಿದಿದ್ದ ದಿ ಕೇರಳ ಸ್ಟೋರಿ ಮೊದಲ ದಿನದ ಗಳಿಕೆ ಹೀಗಿದೆ

ವಿವಾದಗಳಿಂದಲೇ ಸುದ್ದಿಯಾಗಿದ್ದ ದಿ ಕೇರಳ ಸ್ಟೋರಿ ಸಿನಿಮಾ ಇದೀಗ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಡೀಸೆಂಟ್‌ ಕಲೆಕ್ಷನ್‌ ಮಾಡಿದೆ. ಚಿತ್ರಕ್ಕೆ ಮೆಚ್ಚುಗೆ ಜತೆಗೆ ಮುಂದಿನ ದಿನಗಳಲ್ಲಿಯೂ ಗಳಿಕೆಯಲ್ಲಿ ಏರಿಕೆ ಕಾಣುವ ಸೂಚನೆ ಸಿಕ್ಕಿದೆ.

ವಿವಾದಕ್ಕೆ ತುಪ್ಪ ಸುರಿದಿದ್ದ ದಿ ಕೇರಳ ಸ್ಟೋರಿ ಮೊದಲ ದಿನದ ಗಳಿಕೆ ಹೀಗಿದೆ
ವಿವಾದಕ್ಕೆ ತುಪ್ಪ ಸುರಿದಿದ್ದ ದಿ ಕೇರಳ ಸ್ಟೋರಿ ಮೊದಲ ದಿನದ ಗಳಿಕೆ ಹೀಗಿದೆ

The Kerala Story Day 1 Box office Collection: ವಿವಾದಗಳ ಮೂಲಕವೇ ಸುದ್ದಿಯಲ್ಲಿರುವ ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಚಿತ್ರಮಂದಿರದಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇ 5ರಂದು ಬಿಡುಗಡೆ ಆದ ಈ ಸಿನಿಮಾ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿದೆ. ಈ ಮೂಲಕ ವಿವಾದದ ಬೆಂಕಿಯನ್ನು ಮಗ್ಗುಲಲ್ಲಿ ಇಟ್ಟುಕೊಂಡೇ ಗೆದ್ದು ಬೀಗಿದೆ ದಿ ಕೇರಳ ಸ್ಟೋರಿ ಸಿನಿಮಾ. ಹಾಗಾದರೆ ಈ ಚಿತ್ರದ ಮೊದಲ ದಿನ ಕಲೆಕ್ಷನ್‌ ಎಷ್ಟು?

'ದಿ ಕೇರಳ ಸ್ಟೋರಿ' ಮೊದಲ ದಿನ ಗಳಿಸಿದ್ದೆಷ್ಟು?

ಸುದೀಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಮೊದಲ ದಿನವೇ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಜನರು ಚಿತ್ರವನ್ನು ಶ್ಲಾಘಿಸುತ್ತಿದ್ದಾರೆ ಮತ್ತು ನೈಜ ಕಥೆಯನ್ನು ಪ್ರಸೆಂಟ್‌ ಮಾಡಿರುವ ರೀತಿಗೆ ಫಿದಾ ಆಗಿದ್ದಾರೆ. ಇದೆಲ್ಲದರ ನಡುವೆ ಈ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು ಎಂಬ ವಿಚಾರವನ್ನು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಮೊದಲ ದಿನ ಭಾರತದಲ್ಲಿ ಈ ಸಿನಿಮಾ 8.3 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನಕ್ಕೆ ಗಳಿಕೆಯಲ್ಲಿ ಏರಿಕೆ ಕಾಣಲಿದೆ ಎಂಬ ಸೂಚನೆಯೂ ಸಿಕ್ಕಿದೆ.

ವಿವಾದಕ್ಕೆ ಕಾರಣವಾಗಿತ್ತು 'ದಿ ಕೇರಳ ಸ್ಟೋರಿ' ಟ್ರೇಲರ್‌

ಶಾಲಿನಿ ಎಂಬ ಯುವತಿಯನ್ನು ಹೆತ್ತವರು ಹಾಸ್ಟೆಲ್‌ ಸೇರಿಸುತ್ತಾರೆ. ಅಲ್ಲಿ ಆ ಯುವತಿಗೆ ಮುಸ್ಲಿಂ ಯುವತಿಯ ಪರಿಚಯವಾಗುತ್ತದೆ. ನಿಮ್ಮ ಮೆಚ್ಚಿನ ದೇವರು ಯಾರು ಎಂದು ಮುಸ್ಲಿಂ ಯವತಿ ಕೇಳಿದಾಗ ಶಿವಭಕ್ತೆಯಾದ ಶಾಲಿನಿ, ಶಿವನ ಹೆಸರು ಹೇಳುತ್ತಾಳೆ. ''ಸಾವನ್ನಪ್ಪಿದ ಪತ್ನಿಗಾಗಿ ಸಾಮಾನ್ಯ ಮನುಷ್ಯನಂತೆ ಅಳುವ ಶಿವ ಹೇಗೆ ದೇವರಾಗುತ್ತಾನೆ?'' ಎಂದು ಮುಸ್ಲಿಂ ಯುವತಿ ಕೇಳುತ್ತಾಳೆ. ಹಾಗೇ ಶಾಲಿನಿಗೆ ಮಾಲ್‌ವೊಂದರಲ್ಲಿ ಅವಮಾನವಾದಾಗ ಅದೇ ಮುಸ್ಲಿಂ ಯುವತಿ, ''ಹಿಜಾಬ್‌ ಧರಿಸಿದ ಯಾವುದೇ ಮಹಿಳೆಯನ್ನು ಯಾರೂ ಅತ್ಯಾಚಾರ ಮಾಡಲಾಗುವುದಿಲ್ಲ, ಯಾರೂ ರೇಗಿಸುವುದೂ ಇಲ್ಲ, ಏಕೆಂದರೆ ಅಲ್ಲಾಹ್‌ ಅವರನ್ನು ಯಾವಾಗಲೂ ರಕ್ಷಿಸುತ್ತಾರೆ'' ಎಂಬ ಮಾತುಗಳನ್ನು ಆಡಿ, ಶಾಲಿನಿ ಮುಸ್ಲಿಂ ಧರ್ಮಕ್ಕೆ ಸೇರುವಂತೆ ಪ್ರೇರೇಪಿಸುತ್ತಾಳೆ. ಮುಸ್ಲಿಂ ಯುವತಿಯ ಪಾತ್ರದ ಈ ಡೈಲಾಗ್‌ಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಇದು ಕಪೋಲಕಲ್ಪಿತ ಎಂದ ರಾಜಕಾರಣಿಗಳು

“ದಿ ಕೇರಳ ಸ್ಟೋರಿ ಚಿತ್ರವು ಸುಳ್ಳಿನ ಕಂತೆಯಾಗಿದೆ. ಸಂಪೂರ್ಣವಾಗಿ ಕಪೋಲಕಲ್ಪಿತವಾಗಿದೆ. 32,000 ಮಹಿಳೆಯರನ್ನು ಮತಾಂತರಗೊಳಿಸಿ ಇಸ್ಲಾಮಿಕ್ ಸ್ಟೇಟ್ ಹಿಡಿತದಲ್ಲಿರುವ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಈ ಸಿನಿಮಾ ಹೇಳುತ್ತದೆ. ಇದರ ಕುರಿತು ಟ್ರೇಲರ್‌ನಲ್ಲಿ ಸಾಕಷ್ಟು ಸುಳಿವು ನೀಡಲಾಗಿದೆ. ಇದು ರಾಜ್ಯ ಮತ್ತು ಮುಸ್ಲಿಂ ಸಮುದಾಯದ ಮಾನಹಾನಿ ಮಾಡುವ ಉದ್ದೇಶ ಹೊಂದಿದೆ. ಇದರ ಹಿಂದೆ ಸಂಘಪರಿವಾರದ ಕೈವಾಡವಿದೆ" ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಹೇಳಿದ್ದರು.

'ದಿ ಕೇರಳ ಸ್ಟೋರಿ' ಚಿತ್ರವನ್ನು ಸನ್‌ಶೈನ್‌ ಪಿಕ್ಚರ್ಸ್‌ ಪ್ರೈವೇಟ್‌ ಲಿಮಿಟೆಡ್‌, ವಿಪುಲ್‌ ಅಮೃತ್‌ಲಾಲ್‌ ಶಾ ಪ್ರೊಡಕ್ಷನ್ಸ್‌ ಬ್ಯಾನರ್‌ ಜೊತೆ ಸೇರಿ ನಿರ್ಮಿಸಿದ್ದು ಸುದಿಪ್ತೋ ಸೇನ್‌ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾಲಿನಿ ಪಾತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಜೊತೆಗೆ ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ದಿ ಇದ್ನಾನಿ, ವಿಜಯ್‌ ಕೃಷ್ಣ, ಪ್ರಣಯ್‌ ಪಚೊರಿ, ಪ್ರಣವ್‌ ಮಿಶ್ರಾ ಹಾಗೂ ಇನ್ನಿತರರು ನಟಿಸಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ