Jaggesh: ಡಿಕೆಡಿ ಶೋದಲ್ಲಿ ದೊಡ್ಡ ಸುಳಿವು ನೀಡಿದ ಜಗ್ಗೇಶ್; ಮಹತ್ಕಾರ್ಯಕ್ಕೆ ಮುನ್ನುಡಿ ಬರೆದಾಗಿದೆ.. ಕೆಲಸ ಶುರುವಾಗಿದೆ..
ಜಗ್ಗೇಶ್ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು. ಶಿವಣ್ಣನಿಂದ ಸಿನಿಮಾ ಅವಕಾಶ ಪಡೆದಿದ್ದು, ರವಿಚಂದ್ರನ್ ಅವರಿಂದ ಹಣಕಾಸಿನ ನೆರವು, ಅಣ್ಣಾವ್ರ ಭೇಟಿ.. ಹೀಗೆ ಹತ್ತು ಹಲವು ವಿಚಾರಗಳನ್ನು ಹಂಚಿಕೊಂಡರು. ಇದೆಲ್ಲದರ ನಡುವೆಯೇ ಈ ಸಮಾಗಮವನ್ನು ಕಂಡು ಜಗ್ಗೇಶ್ ಎಲ್ಲಿಯೂ ಹೇಳಿಕೊಳ್ಳದ ಅಚ್ಚರಿ ವಿಚಾರವೊಂದನ್ನು ಹೇಳಿಕೊಂಡರು.
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಈ ವಾರದ ಡಾನ್ಸ್ ಕರ್ನಾಟಕ ಡಾನ್ಸ್ ಶೋ ಹಿಂದೆಂದಿಗಿಂತ ವಿಶೇಷವಾಗಿತ್ತು. ಅದಕ್ಕೆ ಕಾರಣ; ಮೂವರು ಸ್ಟಾರ್ ನಟರುಗಳು ಒಂದೇ ವೇದಿಕೆಯಲ್ಲಿದ್ದದ್ದು. ಶಿವರಾಜ್ಕುಮಾರ್ ಡಾನ್ಸ್ ಕರ್ನಾಟಕ ಡಾನ್ಸ್ ಶೋ ಮಹಾಗುರುವಾದರೆ, ರವಿಚಂದ್ರನ್ ಡ್ರಾಮಾ ಜ್ಯೂನಿಯರ್ಸ್ನ ತೀರ್ಪುಗಾರರು. ಅದೇ ರೀತಿ ಕಾಮಿಡಿ ಕಿಲಾಡಿಗಳು ಶೋಕ್ಕೆ ನವರಸ ನಾಯಕ ಜಗ್ಗೇಶ್ ಮುಖ್ಯ ಅತಿಥಿ. ಈ ಮೂವರು ಶನಿವಾರ ನಡೆದ ಡಿಕೆಡಿ ಶೋದಲ್ಲಿ ಕಾಣಿಸಿಕೊಂಡು ನೋಡುಗರಿಗೂ ಅಚ್ಚರಿ ಮೂಡಿಸಿದರು.
ಈ ಮೂವರು ಹೀಗೆ ಸಂಧಿಸಲು ಕಾರಣವಿದೆ. ಮೊದಲನೆಯದು ಡಿಕೆಡಿ ಶೋ ಆಗಿರುವುದರಿಂದ ಅಲ್ಲಿ ಶಿವರಾಜ್ಕುಮಾರ್ ಇರಲೇಬೇಕು. ಅವರನ್ನು ಹೊರತುಪಡಿಸಿದರೆ, ಶುಕ್ರವಾರವಷ್ಟೇ ರವಿಚಂದ್ರನ್ ಅಭಿನಯದ "ರವಿ ಬೋಪಣ್ಣ" ಸಿನಿಮಾ ಬಿಡುಗಡೆ ಆಗಿದೆ. ಆ ನಿಮಿತ್ತ ಕ್ರೇಜಿಸ್ಟಾರ್ ಅವರ ಎಂಟ್ರಿಯಾಗಿತ್ತು. ಇತ್ತ ಇನ್ನೇನು ಶೀಘ್ರದಲ್ಲಿ ಕಾಮಿಡಿ ಕಿಲಾಡಿಗಳು ಶೋ ಸಹ ಶುರುವಾಗಲಿರುವುದರಿಂದ ಜಗ್ಗೇಶ್ ಸಹ ಹಾಜರಿ ಹಾಕಿದ್ದರು. ಈ ತ್ರಿವಳಿ ಕಲಾವಿದರ ಮಿಲನ ನೋಡುಗರಿಗೆ ಹಬ್ಬದಂತೆ ಕಂಡಿದ್ದು ಮಾತ್ರ ಸುಳ್ಳಲ್ಲ.
ಹೀಗೆ ಈ ಮೂವರು ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ. ಜಗ್ಗೇಶ್ ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು. ಶಿವಣ್ಣನಿಂದ ಸಿನಿಮಾ ಅವಕಾಶ ಪಡೆದಿದ್ದು, ರವಿಚಂದ್ರನ್ ಅವರಿಂದ ಹಣಕಾಸಿನ ನೆರವು, ಅಣ್ಣಾವ್ರ ಭೇಟಿ.. ಹೀಗೆ ಹತ್ತು ಹಲವು ವಿಚಾರಗಳನ್ನು ಹಂಚಿಕೊಂಡರು. ಇದೆಲ್ಲದರ ನಡುವೆಯೇ ಈ ಸಮಾಗಮವನ್ನು ಕಂಡು ಜಗ್ಗೇಶ್ ಎಲ್ಲಿಯೂ ಹೇಳಿಕೊಳ್ಳದ ಅಚ್ಚರಿ ವಿಚಾರವೊಂದನ್ನು ಹೇಳಿಕೊಂಡರು.
ತೆರೆಹಿಂದೆ ದೊಡ್ಡ ಕೆಲಸವೊಂದು ನಡೆಯುತ್ತಿದೆ....
ಏನು ನಡೆಯುತ್ತಿದೆ ಎಂಬುದನ್ನು ವಿಸ್ತಾರವಾಗಿ ಹೇಳದ ಜಗ್ಗೇಶ್, ಕನಸಿನ ಪ್ರಾಜೆಕ್ಟ್ವೊಂದರ ಬಗ್ಗೆ ಸಣ್ಣ ಸುಳಿವೊಂದನ್ನು ನೀಡಿದರು. ಹೌದು, ಕನ್ನಡ ಸಿನಿಮಾರಂಗದ ಬಹುತೇಕ ಎಲ್ಲ ನಟರನ್ನು ಸೇರಿಸಿ ಸಿನಿಮಾ ಮಾಡುವ ಬಗ್ಗೆ ಜಗ್ಗೇಶ್ ತೀರ್ಮಾನಿಸಿದ್ದಾರೆ. ಹಾಗಂತ ಅದನ್ನು ನೇರವಾಗಿ ಹೇಳದ ಅವರು, "ಎಲ್ಲರನ್ನೂ ಒಟ್ಟಾಗಿ ಸೇರಿಸುವ ದೊಡ್ಡ ಕೆಲಸ ನಡೆಯುತ್ತಿದೆ. ಮಹತ್ಕಾರ್ಯಕ್ಕೆ ಮುನ್ನುಡಿ ಬರೆದಾಗಿದೆ.. ಆದಷ್ಟು ಬೇಗ ಅದು ನೆರವೇರಲಿದೆ. ಕನ್ನಡದಲ್ಲಿ ಇದೊಂದು ಹೊಸ ಪ್ರಯತ್ನವಾಗಿರಲಿದೆ" ಎಂದಷ್ಟೇ ಹೇಳಿ ಮಾತು ಮುಗಿಸಿದ್ದಾರೆ. ಇದು ಸಿನಿಮಾನೇ ಆಗಿರಲಿದೆಯೇ? ಅಥವಾ ಬೇರೆ ಏನಾದರೂ ಇರಲಿದೆಯೇ? ಇದೆಲ್ಲದಕ್ಕೂ ಸಮಯ ಕೂಡಿ ಬರಬೇಕಿದೆ.
ದೊಡ್ಮನೆಯ ಔದಾರ್ಯ, ಕ್ರೇಜಿ಼ ಸ್ಟಾರ್ ಸಹಾಯ ಕೊಂಡಾಡಿದ ನವರಸ ನಾಯಕ
''ನನ್ನ ವೈಯಕ್ತಿಕ ಬದುಕಿನಲ್ಲಿ ಶಿವರಾಜ್ಕುಮಾರ್ ಹಾಗೂ ರವಿಚಂದ್ರನ್ ಅವರು ಮಾಡಿರುವ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ನನಗೆ ಬಹಳ ಕಷ್ಟವಿತ್ತು. ಆಗ ನಾನು ಗಣಪತಿ ವ್ರತವನ್ನು ತಪ್ಪದೆ ಮಾಡುತ್ತಿದ್ದೆ. ಮಣ್ಣಿನ ಗಣಪತಿಯನ್ನಾದರೂ ಪೂಜಿಸುವಂತೆ ನನ್ನ ತಾಯಿ ನನಗೆ ಹೇಳಿಕೊಟ್ಟಿದ್ದರು. ನನಗೆ ಆಗ 200 ರೂಪಾಯಿ ಅವಶ್ಯಕತೆ ಇತ್ತು. ರವಿಚಂದ್ರನ್ ಅವರ ಬಳಿ ಹೋಗಿ ಕೇಳಿದೆ. ಅವರು ಮರು ಮಾತನಾಡದೆ 500 ರೂಪಾಯಿ ಕೊಟ್ಟರು.''
ಇನ್ನು ಶಿವಣ್ಣ ಬಗ್ಗೆ ಹೇಳುವುದಾದರೆ ಅವರೂ ನನಗೆ ಬಹಳ ಸಹಾಯ ಮಾಡಿದ್ದಾರೆ. 'ರಣಧೀರ' ಚಿತ್ರದಲ್ಲಿ ನನ್ನೊಂದಿಗೆ ನಟಿಸಿದ್ದ ಮೂವರು ನಟರನ್ನು 'ರಣರಂಗ' ಚಿತ್ರದಲ್ಲಿ ನಟಿಸಲು ಕರೆದಿದ್ದರು. ಆದರೆ ಅದರಲ್ಲಿ ನಾನು ಮಾತ್ರ ಮಿಸ್ ಆಗಿದ್ದೆ. ಇದು ನನಗೆ ಬಹಳ ಬೇಸರವಾಗಿತ್ತು. ಹೊನ್ನವಳ್ಳಿ ಕೃಷ್ಣ ಅವರ ಬಳಿ ಎಲ್ಲವನ್ನೂ ಹೇಳಿಕೊಂಡೆ. ಅವರು ಬೈಕಿನಲ್ಲಿ ಶಿವರಾಜ್ಕುಮಾರ್ ಮನೆಗೆ ಕರೆದೊಯ್ದರು. ಶಿವಣ್ಣ ನನ್ನನ್ನು ಆತ್ಮೀಯವಾಗಿ ಮಾತನಾಡಿಸಿದರು. ಗೀತಾ ಅವರು ಟೀ ಕೊಟ್ಟು ಉಪಚರಿಸಿದರು. ವಿಚಾರ ತಿಳಿಸಿದಾಗ ಕೂಡಲೇ ಶಿವರಾಜ್ಕುಮಾರ್ ಕರೆ ಮಾಡಿ, ರಣರಂಗ ಚಿತ್ರದಲ್ಲಿ ನನಗೆ ಅವಕಾಶ ದೊರೆವಂತೆ ಮಾಡಿದರು. ಅದೇ ಸಿನಿಮಾದಲ್ಲಿ ನಾನು ಡಾ. ರಾಜ್ಕುಮಾರ್ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದೆ. ನಾನು ಅಣ್ಣಾವ್ರ ಬಹಳ ದೊಡ್ಡ ಅಭಿಮಾನಿ. ಅವರನ್ನು ನೋಡಿದೊಡನೆ, ಅಣ್ಣಾ ನಾನು ನಿಮ್ಮ ಪರಮ ಅಭಿಮಾನಿ, ನಿಮ್ಮನ್ನು ನೋಡಲು ನಾನು 16 ವರ್ಷಗಳು ಕಷ್ಟ ಪಟ್ಟೆ ಎಂದು ಹೇಳಿದೆ. ಹೌದಾ, ಆ ದೇವರು ನಮ್ಮಿಬ್ಬರನ್ನೂ ಸೇರಿಸಲು 16 ವರ್ಷಗಳು ಕಾಯಿಸಿದ್ರಾ ಎಂದ ಅವರ ಮಾತುಗಳನ್ನು ನೆನೆದರೆ ಈಗಲೂ ಮೈ ಜುಂ ಎನ್ನುತ್ತದೆ'' ಎಂದು ಆ ದಿನವನ್ನು ಜಗ್ಗೇಶ್ ನೆನೆದಿದ್ದಾರೆ