ಒಂದಲ್ಲ ಎರಡಲ್ಲ ಒಟಿಟಿಗೆ ಬಂದಿವೆ ಕನ್ನಡದ ಮೂರು ಸಿನಿಮಾಗಳು; ಮೂರೂ ವಿಭಿನ್ನ ಪ್ರಕಾರದ ಕಥೆಗಳು
ಕನ್ನಡದಲ್ಲಿ ಈ ವಾರ ಒಂದಲ್ಲ ಎರಡಲ್ಲ ಒಟ್ಟು ಮೂರು ಸಿನಿಮಾಗಳು ಒಟಿಟಿಗೆ ಆಗಮಿಸಿವೆ. ಆ ಮೂರರಲ್ಲಿ ಕಾಮಿಡಿ ಕಥಾಹಂದರ ಒಂದು ಸಿನಿಮಾವಾದರೆ, ಹಳ್ಳಿ ಸೊಗಡಿನ ಕಥೆಯೂ ಒಟಿಟಿಗೆ ಆಗಮಿಸಿದೆ. ಇಲ್ಲಿವೆ ಆ ಮೂರು ಚಿತ್ರಗಳ ಕುರಿತ ಮಾಹಿತಿ.

ಸ್ಯಾಂಡಲ್ವುಡ್ನಲ್ಲಿ ಪ್ರತಿ ವಾರ ಸಾಕಷ್ಟು ಕನ್ನಡದ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತವೆ. ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮೆಚ್ಚುಗೆ ಪಡೆದು, ಒಂದಷ್ಟು ದಿನ ನಿಂತರೆ, ಇನ್ನು ಕೆಲವು ಬಂದಷ್ಟೇ ಬೇಗ ಮಾಯವಾಗುತ್ತವೆ. ಅದರಲ್ಲೂ ಒಟಿಟಿಗೂ ಆ ಸಿನಿಮಾಗಳ ಆಗಮನ ತೀರಾ ಕಡಿಮೆ. ಅಲ್ಲೊಂದು ಇಲ್ಲೊಂದು ಕನ್ನಡದ ಸಿನಿಮಾಗಳಷ್ಟೇ ಸ್ಟ್ರೀಮಿಂಗ್ ಆಗುತ್ತವೆ. ಇದೀಗ ಈ ವಾರ ಒಂದಲ್ಲ ಎರಡಲ್ಲ ಒಟ್ಟು ಮೂರು ಸಿನಿಮಾಗಳು ಒಟಿಟಿಗೆ ಆಗಮಿಸಿವೆ.
ವಿದ್ಯಾಪತಿ
ನಾಗಭೂಷಣ್ ಮತ್ತು ಮಲೈಕಾ ವಸುಪಾಲ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ವಿದ್ಯಾಪತಿ. ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಇಶಾಂ ಹಾಗೂ ಹಸೀಂ ಖಾನ್ ನಿರ್ದೇಶನ ಮಾಡಿದ್ದಾರೆ. ಕಥೆ ಬರೆಯುವುದರ ಜತೆಗೆ ಸಂಕಲನದ ಜವಾಬ್ದಾರಿಯೂ ಅವರದ್ದೆ. ಲವಿತ್ ಛಾಯಾಗ್ರಹಣ, ಡಾಸ್ಮೋಡ್ ಸಂಗೀತ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಡಾಲಿ ಪಿಕ್ಚರ್ಸ್ ಬ್ಯಾನರ್ನಲ್ಲಿ ಡಾಲಿ ಧನಂಜಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಏಪ್ರಿಲ್ 10ರಂದು ತೆರೆಗೆ ಬಂದ ಈ ಸಿನಿಮಾ, ಇದೀಗ ಒಟಿಟಿಗೆ ಆಗಮಿಸಿದೆ. ಚಿತ್ರಮಂದಿರಗಳಲ್ಲಿ ತೆರೆಕಂಡ ಕೇವಲ ವಾರಗಳ ಬಳಿಕ ಅಮೆಜಾನ್ ಪ್ರೈಂ ಒಟಿಟಿಗೆ ಆಗಮಿಸಿದೆ. ಕನ್ನಡದ ಜತೆಗೆ ತೆಲುಗಿನಲ್ಲಿಯೂ ಈ ಸಿನಿಮಾ ವೀಕ್ಷಣೆ ಮಾಡಬಹುದು.
ಕೆರೆಬೇಟೆ
ಕಳೆದ ವರ್ಷದ ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದ್ದ ಸಿನಿಮಾ ಕೆರೆಬೇಟೆ. ಗೌರಿಶಂಕರ್ ನಾಯಕನಾಗಿ ನಟಿಸುವುದರ ಜತೆಗೆ ತಮ್ಮದೇ ಜನಮನ ಸಿನಿಮಾ ಸಂಸ್ಥೆಯಡಿ ನಿರ್ಮಾಣವನ್ನೂ ಮಾಡಿದ್ದರು. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಒಂದು ವರ್ಷದ ಬಳಿಕ ಒಟಿಟಿಗೆ ಆಗಮಿಸಿದೆ. ರಾಜ್ಗುರು ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ನಾಯಕನಾಗಿ ಗೌರಿಶಂಕರ್ ನಟಿಸಿದರೆ, ಬಿಂದು ಗೌಡ ನಾಯಕಿಯಾಗಿದ್ದರು. ಇನ್ನುಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಕುಮಾರ್, ಹರಿಣಿ ಸೇರಿ ಹಲವರು ನಟಿಸಿದ್ದರು. ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂ ವಿಡಿಯೋ ಒಟಿಟಿಯಲ್ಲಿ ಸ್ಟ್ರಿಮೀಂಗ್ ಆರಂಭಿಸಿದೆ.
ಕಾಲಾಪತ್ಥರ್
ದುನಿಯಾ ಸೂರಿ ನಿರ್ದೇಶನದ ʻಕೆಂಡ ಸಂಪಿಗೆʼ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟವರು ನಟ ವಿಕ್ಕಿ ವರುಣ್. 2017ರಲ್ಲಿ ʻಕಾಲೇಜ್ ಕುಮಾರʼ ಸಿನಿಮಾದಲ್ಲಿಯೂ ನಟಿಸಿದ್ದ ವಿಕ್ಕಿ ಅದಾದ ಮೇಲೆ ಬೇರೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಕಳೆದ ವರ್ಷದ ಸೆಪ್ಟೆಂಬರ್ 12ರಂದು ತಾವೇ ನಿರ್ದೇಶನ ಮಾಡುವುದರ ಜತೆಗೆ ನಾಯಕನಾಗಿಯೂ ನಟಿಸಿದ್ದ ʼಕಾಲಾಪತ್ಥರ್ʼ ಬಿಡುಗಡೆ ಆಗಿತ್ತು. ಇದೀಗ ಇದೇ ಚಿತ್ರ ಒಟಿಟಿಗೆ ಆಗಮಿಸಿದೆ. ಡಾ. ರಾಜ್ಕುಮಾರ್ ಮೊಮ್ಮಗಳು ಧನ್ಯಾ ರಾಮಕುಮಾರ್ ನಾಯಕಿಯಾಗಿ ನಟಿಸಿದರೆ, ಟಿ ಎಸ್ ನಾಗಾಭರಣ, ಅಚ್ಯುತ್ ಕುಮಾರ್, ಸಂಪತ್ ಮೈತ್ರೇಯ, ರಾಜೇಶ್ ನಟರಂಗ ಸೇರಿ ಹಲವರು ಪಾತ್ರವರ್ಗದಲ್ಲಿದ್ದರು. ಅನೂಪ್ ಸೀಳಿನ್ ಸಂಗೀತ ನೀಡಿದ್ದ ಈ ಚಿತ್ರಕ್ಕೆ ಸಂದೀಪ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ದೀಪು ಎಸ್ ಕುಮಾರ್ ಸಂಕಲನವಿದೆ. ಈ ಸಿನಿಮಾ ಮೇ 2ರಿಂದಲೇ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
ವಿಭಾಗ