Kannada OTT Movies: ವಿಮರ್ಶೆ ದೃಷ್ಟಿಯಿಂದ ಪ್ರೇಕ್ಷಕರಿಂದ ಬಹುಪರಾಕ್ ಪಡೆದ ಕನ್ನಡದ ಚಿತ್ರವೀಗ ಒಟಿಟಿಗೆ; ಯಾವಾಗ, ಎಲ್ಲಿ ವೀಕ್ಷಣೆ?
Nodidavaru Enantare OTT release date: ಜನವರಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ನೋಡಿದವರು ಏನಂತಾರೆ ಸಿನಿಮಾ ಇನ್ನೇನು ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ. ಗುಲ್ಟೂ ಸಿನಿಮಾ ಖ್ಯಾತಿನ ನವೀನ್ ಶಂಕರ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.

Nodidavaru Enantare OTT: ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಈ ವರ್ಷದ ಸಿನಿಮಾಗಳಲ್ಲಿ ʻನೋಡಿದವರು ಏನಂತಾರೆʼ ಸಹ ಒಂದು. ಗುಲ್ಟೂ ಸಿನಿಮಾ ಖ್ಯಾತಿಯ ನವೀನ್ ಶಂಕರ್ ನಾಯಕನಾಗಿ ನಟಿಸಿದ ಈ ಸಿನಿಮಾ, ಇದೇ ವರ್ಷದ ಜನವರಿ 31ರಂದು ತೆರೆಗೆ ಬಂದಿತ್ತು. ಇಂತಿಪ್ಪ ಸಿನಿಮಾ ಇತ್ತೀಚೆಗಷ್ಟೇ 50ನೇ ದಿನದ ಸಂಭ್ರಮ ಆಚರಿಸಿಕೊಂಡಿತ್ತು. ನವೀನ್ ಶಂಕರ್ ನಟನೆಗೆ, ನಿರ್ದೇಶಕರ ಕಥೆಗೆ ಪ್ರೇಕ್ಷಕ ಫಿದಾ ಆಗಿದ್ದ. ಇನ್ನು ಕೆಲವರು ಈ ಸಿನಿಮಾ ಅದ್ಯಾವಾಗ ಒಟಿಟಿಗೆ ಆಗಮಿಸಲಿದೆ ಎಂದೂ ಕಾದಿದ್ದುಂಟು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀಶ್ ಶಂಕರ್ ಕಥೆಗಳ ಆಯ್ಕೆಗಳಲ್ಲಿ ತುಂಬ ಜಾಗೃತೆ ಮತ್ತು ಜಾಣತನ ಪ್ರದರ್ಶಿಸುತ್ತಿದ್ದಾರೆ. ಅದಕ್ಕೆ ಈ ವರೆಗೆ ಅವರು ನಟಿಸಿದ ಸಿನಿಮಾಗಳೇ ಸಾಕ್ಷಿ. ಆ ಸಾಲಿನಲ್ಲಿ ಸೇರುವ ಮತ್ತೊಂದು ಚಿತ್ರವೇ ʻನೋಡಿದವರು ಏನಂತಾರೆʼ. ಕಾಡುವ ಕಥೆಯೊಂದನ್ನು ಹೊತ್ತು ನಿರ್ದೇಶಕ ಕುಲದೀಪ್ ಕಾರಿಯಪ್ಪ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಈಗ ಇದೇ ಸಿನಿಮಾ ಇನ್ನಷ್ಟು ಕನ್ನಡಿಗರನ್ನು ತಲುಪಲು ಸಜ್ಜಾಗಿದೆ. ಅಂದರೆ ಒಟಿಟಿ ಅಪ್ಡೇಟ್ ಸಿಕ್ಕಿದೆ.
ಹೀಗಿದೆ ಪಾತ್ರವರ್ಗ, ತಾಂತ್ರಿಕ ಬಳಗ
ಭಾವನಾತ್ಮಕ ಚೌಕಟ್ಟಿನಲ್ಲಿ ಸಾಗುವ ನೋಡಿದವರು ಏನಂತಾರೆ ಸಿನಿಮಾದಲ್ಲಿ ನವೀಶ್ ಶಂಕರ್ ಸಿದ್ದಾರ್ಥ್ ದೇವಯ್ಯನಾಗಿ ನಟಿಸಿದರೆ, ಅಪೂರ್ವ ಭಾರದ್ವಾಜ್ ನಾಯಕಿಯಾಗಿದ್ದಾರೆ. ನಾಗೇಶ್ ಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಮಯೂರೇಶ್ ಸಂಗೀತ ನೀಡಿದರೆ, ಅಶ್ವಿನ್ ಕ್ಯಾಮರಾ ಹಿಡಿದ್ದಾರೆ. ಕುಲದೀಪ್ ಕಾರಿಯಪ್ಪ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಕುಲದೀಪ್ ಕಾರಿಯಪ್ಪ ಅವರ ಜೊತೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್ ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.
ಸಾಹಿತಿ ಜಯಂತ್ ಕಾಯ್ಕಿಣಿ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಒಂದು ಹಾಡಿಗೆ ಲೈಲಾ ಪದ ಪೊಣಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಪ್ರೀತಿ, ಸ್ನೇಹ, ತ್ಯಾಗ, ಸೆಂಟಿಮೆಂಟ್, ಎಮೋಷನ್ ಈ ಎಲ್ಲದರ ಮಿಶ್ರಣ ಎಂಬಂತೆ ಮೂಡಿಬಂದಿತ್ತು.
ನೋಡಿದವರು ಏನಂತಾರೆ ಯಾವ ಒಟಿಟಿಯಲ್ಲಿ?
ಕೆಲ ವರದಿಗಳ ಪ್ರಕಾರ, ನೋಡಿದವರು ಏನಂತಾರೆ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ ಎನ್ನಲಾಗುತ್ತಿದೆ. ಮಾರ್ಚ್ 20ರಂದು ಈ ಸಿನಿಮಾ ಒಟಿಟಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಇತ್ತ ಒಟಿಟಿಯಲ್ಲಿ ಮಲಯಾಳಂನ ಆಫೀಸರ್ ಆನ್ ಡ್ಯೂಟಿ ಮತ್ತು ತಮಿಳಿನ ಡ್ರ್ಯಾಗನ್ ಸಿನಿಮಾ ಕ್ರಮವಾಗಿ 20 ಮತ್ತು 21ರಂದು ಬಿಡುಗಡೆ ಆಗುತ್ತಿವೆ. ಇವುಗಳ ಸ್ಪರ್ಧೆ ನಡುವೆ ʻನೋಡಿದವರು ಏನಂತಾರೆʼ ಸಿನಿಮಾ ಸಹ ಮಾ. 21ಕ್ಕೆ ಒಟಿಟಿಗೆ ಆಗಮಿಸುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಆಗಬೇಕಿದೆ.
ಏನಿದು ಕಥೆ?
ಇಡೀ ಸಿನಿಮಾ ಸಾಗುವುದೇ ಕಥಾನಾಯಕ ಸಿದ್ದಾರ್ಥ್ ದೇವಯ್ಯ ಮೇಲೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ವೆಬ್ ಡಿಸೈನರ್ ಆಗಿ ಕೆಲಸ ಮಾಡುವ ಆತನ ಜೀವನದ ಮೇಲೆ ಪ್ರೇಮ ವೈಫಲ್ಯ ವೃತ್ತಿಜೀವನದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ತನ್ನ ಜೀವನಕ್ಕೆ ಆಧಾರವನ್ನು ಹುಡುಕುತ್ತಾ, ಮನಸ್ಸಲ್ಲಿ ಕಾಡುತ್ತಿರುವ ಅಸ್ತಿತ್ವವಾದದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುವ ಪ್ರಯಾಣ ಆರಂಭಿಸುತ್ತಾನೆ. ಹೀಗೆ ಸಾಗಲಿದೆ ಈ ಸಿನಿಮಾ.
ಇತ್ತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ಸಲಾರ್ ಸಿನಿಮಾದ ಎರಡನೇ ಭಾಗದಲ್ಲಿಯೂ ನವೀನ್ ಶಂಕರ್ ಕಾಣಿಸಿಕೊಂಡಿದ್ದಾರೆ. ಆ ಚಿತ್ರ ಇನ್ನೂ ಶೂಟಿಂಗ್ ಆರಂಭಿಸಿಲ್ಲ.
