ಕನ್ನಡ ಸುದ್ದಿ  /  Entertainment  /  Ntr Warning To Fans:

ʼಪದೇ ಪದೇ ಹೀಗೆ ಮಾಡಿದ್ರೆ ಸಿನಿಮಾ ಮಾಡುವುದನ್ನೇ ನಿಲ್ಲಿಸುತ್ತೇನೆʼ ಅಭಿಮಾನಿಗಳಿಗೆ ಖಡಕ್‌ ವಾರ್ನಿಂಗ್‌ ನೀಡಿದ್ದೇಕೆ ಎನ್‌ಟಿಆರ್‌

NTR warning to fans: ʼನೀವು ಇನ್ನೊಮ್ಮೆ ಎಲ್ಲಾದರು ಚಿತ್ರದ ಅಪ್‌ಡೇಟ್‌ ಬಗ್ಗೆ ಕೇಳಿದರೆ, ಖಂಡಿತ ಹೇಳುತ್ತಿದ್ದೇನೆ, ನಾನು ಆ ಸಿನಿಮಾ ಮಾಡುವುದಿಲ್ಲ. ಪುನಃ ಪುನಃ ನೀವು ಅದನ್ನೇ ಕೇಳುತ್ತಿದ್ದರೆ ಖಂಡಿತ, ನಾನು ಸಿನಿಮಾಗಳಲ್ಲಿ ನಟಿಸುವುದನ್ನೇ ನಿಲ್ಲಿಸುತ್ತೇನೆʼ ಎಂದು ಅಭಿಮಾನಿಗಳ ಮೇಲೆ ಕೋಪಗೊಂಡಿದ್ದಾರೆ ನಟ ಎನ್‌ಟಿಆರ್‌

ಜ್ಯೂ ಎನ್‌ಟಿಆರ್‌
ಜ್ಯೂ ಎನ್‌ಟಿಆರ್‌ (PC: Jr NTR Facebook)

ʼನೀವು ಇದನ್ನೇ ಪದೇ ಪದೇ ಕೇಳುತ್ತಿದ್ದರೆ, ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದನ್ನೇ ನಿಲ್ಲಿಸುತ್ತೇನೆʼ ಎಂದು ಅಭಿಮಾನಿಗಳ ಮೇಲೆ ಕೋಪ ತೋರಿಸಿದ್ದಾರೆ ಟಾಲಿವುಡ್‌ನ ಯಂಗ್‌ ಟೈಗರ್‌, ಗ್ಲೋಬಲ್‌ ಸ್ಟಾರ್‌ ಖ್ಯಾತಿಯ ಜೂನಿಯರ್‌ ಎನ್‌ಟಿಆರ್‌.

ಹಾಗಾದರೆ ಅಭಿಮಾನಿಗಳು ಕೇಳಿದ್ದಾದರೂ ಏನು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ.

ಸದ್ಯ ಎನ್‌ಟಿಆರ್‌ ಕೊರಟಾಲ ಶಿವ ನಿರ್ದೇಶನ, ಇನ್ನೂ ಹೆಸರಿಡ #ಎನ್‌ಟಿಆರ್‌ 30 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಆದರೆ ಎನ್‌ಟಿಆರ್‌ ಎಲ್ಲಿಗೇ ಹೋದರೂ ಅಭಿಮಾನಿಗಳು ಚಿತ್ರದ ಕುರಿತಾದ ಅಪ್‌ಡೇಟ್‌ ಬಗ್ಗೆ ಪ್ರಶ್ನಿಸುತ್ತಾರೆ. ಈಗಾಗಲೇ ಸಾಕಷ್ಟು ಬಾರಿ ಈ ಪ್ರಶ್ನೆಯಿಂದ ಕೋಪಗೊಂಡು ಇನ್ನು ಮುಂದೆ ಈ ಪ್ರಶ್ನೆ ಕೇಳಬೇಡಿ ಎಂದಿದ್ದರು ಮರಿ ಟೈಗರ್‌.

ಏನಿದು ಘಟನೆ?

ಆದರೆ ನಿನ್ನೆ (ಮಾರ್ಚ್‌ 17) ರಾತ್ರಿ ಈ ನಟ ವಿಶ್ವಕ್‌ಸೇನ್‌ ನಟನೆಯ ಮುಂದಿನ ಚಿತ್ರ ʼಧಮ್ಕಿʼಯ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಈ ನಟ ಭಾಗವಹಿಸಿದ್ದರು. ಈ ವೇಳೆ ಪುನಃ ಅವರ ಬಳಿ ಚಿತ್ರದ ಬಗ್ಗೆ ಅಪ್‌ಡೇಟ್‌ ಕೇಳಲಾಗಿತ್ತು.

ಇದರಿಂದ ಕೋಪಗೊಂಡ ನಟ ಅಭಿಮಾನಿಗಳಿಗೆ ಖಡಕ್‌ ಆಗಿ ವಾರ್ನ್‌ ಮಾಡಿದ್ದಾರೆ. ʼನೀವು ಇನ್ನೊಮ್ಮೆ ಎಲ್ಲಾದರು ಚಿತ್ರದ ಅಪ್‌ಡೇಟ್‌ ಬಗ್ಗೆ ಕೇಳಿದರೆ, ಖಂಡಿತ ಹೇಳುತ್ತಿದ್ದೇನೆ, ನಾನು ಆ ಸಿನಿಮಾ ಮಾಡುವುದಿಲ್ಲ. ಪುನಃ ಪುನಃ ನೀವು ಅದನ್ನೇ ಕೇಳುತ್ತಿದ್ದರೆ ಖಂಡಿತ, ನಾನು ಸಿನಿಮಾಗಳಲ್ಲಿ ನಟಿಸುವುದನ್ನೇ ನಿಲ್ಲಿಸುತ್ತೇನೆʼ ಎಂದಿದ್ದಾರೆ.

ʼನಾನು ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಲು ಆಗುವುದಿಲ್ಲ ಎಂಬುದು ನಿಮಗೂ ಗೊತ್ತು, ಆದರೆ ನಾನು ನಟಿಸುವುದನ್ನು ನಿಲ್ಲಿಸುವುದಕ್ಕೆ ನೀವು ಕಾರಣರಾಗಬೇಡಿ. ಪದೇ ಪದೇ ಸಿನಿಮಾದ ಕುರಿತಾಗಿ ಅಪ್‌ಡೇಟ್‌ ಕೇಳಬೇಡಿ. ನಾನು ಸದ್ಯದಲ್ಲೇ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದೇನೆʼ ಎಂದಿದ್ದಾರೆ.

ಹಿಂದೆಯೂ ಮನವಿ ಮಾಡಿದ್ದ ಎನ್‌ಟಿಆರ್‌

ತಮ್ಮ ಸಹೋದರ ಕಲ್ಯಾಣ್ ರಾಮ್ ಅವರ ಅಮಿಗೋಸ್‌ನ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿದ ಎನ್‌ಟಿಆರ್, ʼಯಾವಾಗಲೂ ಈ ಸಿನಿಮಾದ ಅಪ್‌ಡೇಟ್‌ ಬಗ್ಗೆಯೇ ಕೇಳುತ್ತಿರಬೇಡಿ, ಇದರಿಂದ ಹಲವು ಜನರು ಒತ್ತಡ ಅನುಭವಿಸುತ್ತಾರೆʼ ಎಂದು ಅಭಿಮಾನಿಗಳಲ್ಲಿ ಬೇಡಿಕೆ ಇಟ್ಟಿದ್ದರು.

ʼಕೆಲವೊಮ್ಮೆ ನಾವು ಸಿನಿಮಾಕ್ಕೆ ಕೆಲಸ ಮಾಡುತ್ತಿರುತ್ತೇವೆ. ಆದರೆ ಸಿನಿಮಾದ ಕುರಿತಾಗಿ ಹಂಚಿಕೊಳ್ಳುವಷ್ಟು ವಿಷಯ ಇರುವುದಿಲ್ಲ. ಗಂಟೆಗಳಿಗೊಮ್ಮೆ, ದಿನಕ್ಕೊಮ್ಮೆ ಸಿನಿಮಾ ಕುರಿತು ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ನನಗೆ ನಿಮ್ಮ ಉತ್ಸುಕತೆ, ಕುತೂಹಲದ ಬಗ್ಗೆ ಅರಿವಾಗುತ್ತದೆ. ಆದರೆ ನಿಮ್ಮ ಈ ಕುತೂಹಲ ಕೆಲವೊಮ್ಮೆ ನಿರ್ಮಾಪಕರು ಹಾಗೂ ಸಿನಿಮಾ ತಂಡ ಮೇಲೆ ಸಾಕಷ್ಟು ಒತ್ತಡ ಬೀರಲು ಕಾರಣವಾಗಬಹುದು. ಅತಿ ಒತ್ತಡದ ಕಾರಣದಿಂದ ನಾವು ಕೆಲವೊಮ್ಮೆ ಅಪ್‌ಡೇಟ್‌ ಹಂಚಿಕೊಳ್ಳುವುದನ್ನು ನಿಲ್ಲಿಸಬೇಕಾಗಬಹುದು, ಇದರಿಂದ ಅಭಿಮಾನಿಗಳಿಗೆ ಇನ್ನಷ್ಟು ನಿರಾಸೆ ಉಂಟಾಗಬಹುದುʼ ಎಂದು ತಿಳಿ ಹೇಳಿದ್ದರು.

ʼನಿರ್ಮಾಪಕರು ಹಾಗೂ ನಿರ್ದೇಶಕರು ಸಿನಿಮಾ ಕುರಿತ ಆಸಕ್ತಿದಾಯಕ ಅಪ್‌ಡೇಟ್‌ ನೀಡಲು ಶ್ರಮಿಸುತ್ತಿದ್ದಾರೆ, ಆದರೆ ಅಭಿಮಾನಿಗಳು ತಾಳ್ಮೆಯಿಂದ ಕಾಯಬೇಕುʼ ಎಂದಿದ್ದರು.

ಇತ್ತೀಚೆಗಷ್ಟೇ ಎನ್‌ಟಿಆರ್‌ ನಟನೆಯ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡು ಆಸ್ಕರ್‌ನ ಬೆಸ್ಟ್‌ ಒರಿಜಿನಲ್‌ ಸಾಂಗ್‌ ವಿಭಾಗದಲ್ಲಿ ಪ್ರಶಸ್ತಿ ಗಳಿಸಿತ್ತು. ಆ ಮೂಲಕ ಭಾರತೀಯ ಚಿತ್ರರಂಗಕ್ಕೆ ಹೆಮ್ಮೆಯ ಗರಿಯನ್ನು ಮುಡಿಸಿತ್ತು ಆರ್‌ಆರ್‌ಆರ್‌ ತಂಡ.

ಎನ್‌ಟಿಆರ್‌ 30 ಸಿನಿಮಾಕ್ಕೆ ಬಾಲಿವುಡ್‌ ಬೆಡಗಿ ಜಾಹ್ನವಿ ಕಪೂರ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಜಾಹ್ನವಿ ಕಪೂರ್‌ ತಮ್ಮ 26ನೇ(ಮಾರ್ಚ್‌ 6) ವರ್ಷದ ಹುಟ್ಟುಹಬ್ಬದಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಟಾಲಿವುಡ್‌ ಚೊಚ್ಚಲ ಚಿತ್ರದ ಪೋಸ್ಟರ್‌ ಅನ್ನು ಹಂಚಿಕೊಂಡಿದ್ದರು.

IPL_Entry_Point

ವಿಭಾಗ