ಸಣ್ಣ ಜನ ಎಂದಿಗೂ ಸಣ್ಣ ಜನಾನೇ. ನಾಯಿ ಬಾಲ ಡೊಂಕು; ಸೋಷಿಯಲ್ ಮೀಡಿಯಾದಲ್ಲಿ ಜನರ ವರ್ತನೆ ಬಗ್ಗೆ ಮಧು ವೈಎನ್ ಬರಹ
ಸೋಷಿಯಲ್ ಮೀಡಿಯಾ ಮತ್ತು ನಿಜ ಜೀವನದಲ್ಲಿ ಜನರು ಹೇಗಿರುತ್ತಾರೆ, ಅವರ ನಿಜವಾದ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಮಧು ವೈಎನ್ ಆಸಕ್ತಿದಾಯಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಧು ವೈಎನ್ ಬರಹ: ಮಾಯಾ ಏಂಜೆಲೋ ಅವರದ್ದು ಒಂದು ಫೇಮಸ್ ಕೋಟ್ ಇದೆ. ಜನ ತಮ್ಮ ಮೊದಲ ಪರಿಚಯದಲ್ಲೇ ಅವರು ಏನು ಎಂದು ತೋರಿಸಿರುತ್ತಾರೆ. ನಾವು ನಂಬಕ್ಕೆ ರೆಡಿಯಿರಲ್ಲ ಅಷ್ಟೇ ಅಂತ. ತುಂಬಾ ಜನ ಸೋಶಿಯಲ್ ಮೀಡಿಯಾದಲ್ಲಿ ತುಂಬ ದೊಡ್ಡ ದೊಡ್ಡದಾಗಿ ಬರ್ಕೊಂಡು ಕೇರ್ಫುಲಿ ಕ್ರಾಫ್ಟೆಡ್ಡಾದ ಇಮೇಜು ಕಟ್ಟಿಕೊಂಡಿರ್ತಾರೆ. ಒಂದೊಂದೇ ಇಟ್ಟಿಗೆ ಜೋಡಿಸ್ಕೊಂಡು. ನಮಗೆ ಅದೇ ನಿಜ ವ್ಯಕ್ತಿತ್ವ ಅನಿಸಿಬಿಟ್ಟಿರುತ್ತೆ. ಆದರೆ ಅಂಥವರು ನಿಜವಾದ ವ್ಯಕ್ತಿಯಾಗಿ ಸಿಗುವುದು ಸೋಶಿಯಲ್ ಮೀಡಿಯಾ ಹೊರಗೆ. ತಮ್ಮ ತಮ್ಮ ಸ್ನೇಹಿತರ ನಡುವೆ ನಡಯುವ ಹರಟೆಯಲ್ಲಿ . ಆಪ್ತರಿಗೆ ಕಳಿಸುವ ವಾಟ್ಸಾಪಿನಲ್ಲಿ. ಸಿಟ್ಟಿನಲ್ಲಿ, ದುಃಖದಲ್ಲಿ. ಹ್ಞಾ.. ಮುಖವಿಲ್ಲದ ಪ್ರೊಫೈಲುಗಳಲ್ಲಿ. ಅದೂ ಅಷ್ಟೇ. ಆರಾಮಾಗಿ ಸಿದ್ಧರಾಮಯ್ಯನವರ ಅಥವಾ ಮೋದಿಯವರ ಅಕೌಂಟಿಗೆ ಹೋಗಿ ಲೌಡಾ ಅಂದು ಬರಬಹುದು. ರಶ್ಮಿಕಾ ಮಂದಣ್ಣಂಗೆ ಡ...ರ್ ಅನ್ನಬಹುದು. (ಸೊಲ್ಪ ದಿವಸಗಳ ಹಿಂದೆ ನನ್ನ ಒಂದು ಪೋಸ್ಟಿಗೆ ವಯಸಾದ ವ್ಯಕ್ತಿ ಬಂದು ಅಬ್ಬೆಪಾರಿ ಲೇಖನ ಅಂದಿದ್ದು ನೆನಪಾಗ್ತಿದೆ).
ಇದು ತಪ್ಪೋ ಸರಿಯೋ ಗೊತ್ತಿಲ್ಲ ಆದರೆ ಖಂಡಿತ ನೈಸರ್ಗಿಕ. ತೆನಾಲಿ ರಾಮನ ಒಂದು ಕತೆ ಎಲ್ಲರಿಗೂ ನೆನಪಿರುತ್ತೆ ಅನ್ಸುತ್ತೆ. ಒಂದ್ಸಲ ಒಬ್ಬ ಪ್ರವಾಸಿಗ ಕೃಷ್ಣದೇವರಾಯನ ಆಸ್ಥಾನಕ್ಕೆ ಬರ್ತಾನಂತೆ. ಅವನು ಅದೆಷ್ಟೋ ಭಾಷೆಗಳನ್ನು ಸರಾಗವಾಗಿ ಮಾತಾಡ್ತಿರ್ತಾನಂತೆ. ರಾಜನಿಗೆ ಚಾಲೆಂಜ್ ಹಾಕ್ತಾನಂತೆ. ನನ್ನ ಮಾತೃಭಾಷೆ ಕಂಡುಹಿಡಿ ನೋಡೋಣ ಅಂತ. ರಾಜ ತುಂಬಾ ತಲೆ ಕೆಡಿಸಿಕೊಂಡು ಚಾಲೆಂಜನ್ನ ತೆನಾಲಿ ರಾಮನಿಗೆ ವರ್ಗಾಯಿಸ್ತಾನಂತೆ. ತೆನಾಲಿರಾಮ ನಸುನಕ್ಕು ಚಾಲೆಂಜ್ ಒಪ್ಗೊಂಡು ಅದೇ ರಾತ್ರಿ ಪ್ರವಾಸಿಗನ ಮಲಗಿದ್ದಲ್ಲಿಗೆ ಹೋಗಿ ಒಂದು ಬಿಂದಿಗೆ ತಣ್ಣೀರು ಸುರಿತಾನಂತೆ. ಪ್ರವಾಸಿಗ ಧಡಗ್ಗನೆ ಎದ್ದು ʼಎವುಡ್ರಾ ಅದಿ ನಾ ಕೊಡಕʼ ಅಂತಾನಂತೆ. ಅಂದ್ರೆ ಅವನ ಮಾತೃಭಾಷೆ ತೆಲುಗು. ಹಂಗೇ ಜನ. ಅದು ನಿಸರ್ಗದ ನಿಯಮ. ಎಷ್ಟು ಅಡಗಿಸಿಟ್ಟರೂ ಮೂಲಗುಣ ಹೊರಗೆ ಬಂದುಬಿಡುತ್ತೆ. ಮಾಯಾ ಏಂಜೆಲೋ ಹೇಳಿದಂಗೆ ನಾವು ನಂಬಕ್ಕೆ ರೆಡಿಯಿರಲ್ಲ ಅಷ್ಟೇ. ಸುಮ್ನೆ ಒಂದಾದ ಮೇಲೊಂದು ಅವಕಾಶ ಕೊಡ್ತಾ ಹೋಗ್ತೇವೆ. ಇಲ್ಲ ನನ್ನದೇ ಜಡ್ಜ್ಮೆಂಟ್ ತಪ್ಪಿರಬಹುದು. ಸ್ವಲ್ಪ ವಿಶಾಲ ಮನಸಿಂದ ನೋಡ್ಬೇಕು ಅಂತೆಲ್ಲ. ಸಣ್ಣ ಜನ ಎಂದಿಗೂ ಸಣ್ಣ ಜನಾನೇ. ನಾಯಿ ಬಾಲ ಡೊಂಕು ಇದ್ದಂಗೆ. ಪುರಂದರ ದಾಸರ ಹಾಡು ನೆನಪಾಗ್ತಿದೆ.. ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರ ಅಂತ.
ಮಧು ವೈಎನ್ ಬರೆದ ಈ ಬರಹಕ್ಕೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಸಾಕಷ್ಟು ಜನರು ಇವರ ಅಭಿಪ್ರಾಯವನ್ನು ಒಪ್ಪಿದ್ದಾರೆ. "ಬರೀ ಮಾತೃಭಾಷೆ ಅಷ್ಟೇ ಅಲ್ಲ; ಅದರ 'dialect' ಕೂಡ ಗೊತ್ತಾಗುತ್ತದೆ ಕೋಪದಲ್ಲಿದ್ದಾಗ. ಉತ್ತರ ಕರ್ನಾಟಕದವನೊ, ಮೈಸೂರು ಕನ್ನಡದವನೊ ಅಥವಾ ದಕ್ಷಿಣ ಕನ್ನಡದವನೊ ಕೂಡ ಗೊತ್ತಾಗಿಬಿಡುತ್ತದೆ!! ಮನುಷ್ಯನ 'instinct' ಜಾಗೃತವಾದಾಗ ಬಾಲ್ಯದಲ್ಲಿ ಕಲಿತ ಬಾಷೆಯೆ ಹೊರಬರುವುದು" ಎಂದು ಚಂದ್ರಮೋಹನ್ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ. "ನನ್ನದು ಮುಖವಿಲ್ಲದ ಅಕೌಂಟ್, ಹಾಗಂತ ಯಾರಿಗೂ ಕೆಟ್ಟದಾಗಿ ಬೈದಿಲ್ಲ, ಮುಖವಿದ್ದರೂ ಬೈದವನಲ್ಲ. ಮುಖವಿಲ್ಲದಿದ್ದಾಗ ಕಾಮೆಂಟುಗಳಲ್ಲಿ ನಮ್ಮ ಅಭಿಪ್ರಾಯಗಳನ್ನು ಧೈರ್ಯವಾಗಿ ಮತ್ತು ಗಟ್ಟಿಯಾಗಿ ಹೇಳಬಹುದು. ಚರ್ಚೆಗಳ ಜೊತೆಯಲ್ಲಿ ಜ್ಞಾನಾರ್ಜನೆಯೂ ಸಾಧ್ಯವಿದೆ. ಮುಖವಿದ್ದರೆ ಯಾರ ಅಭಿಪ್ರಾಯಗಳನ್ನೂ ಖಂಡಿಸುವುದು ಅಥವಾ ವಿರೋಧಿಸುವುದು ಕಷ್ಟವೆ" ಎಂದು ಅನ್ವೇಷಕ ಕನ್ನಡಿಗ ಎಂಬ ಖಾತೆಯಿಂದ ಪ್ರತಿಕ್ರಿಯೆ ನೀಡಲಾಗಿದೆ.

ವಿಭಾಗ