Moorane Krishnappa OTT: ಸದ್ದಿಲ್ಲದೆ ಒಟಿಟಿಗೆ ಆಗಮಿಸಿದ ಮೂರನೇ ಕೃಷ್ಣಪ್ಪ; ರಂಗಾಯಣ ರಘು ಹಾಸ್ಯ ಸಿನಿಮಾವನ್ನು ಆನ್ಲೈನ್ನಲ್ಲಿ ನೋಡಿ
Moorane Krishnappa OTT Release: ನವೀನ್ ನಾರಾಯಣಘಟ್ಟ ನಿರ್ದೇಶನದ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೊಸ ಕನ್ನಡ ಸಿನಿಮಾ ಮೂರನೇ ಕೃಷ್ಣಪ್ಪ ಸದ್ದಿಲ್ಲದೆ ಒಟಿಟಿಗೆ ಆಗಮಿಸಿದೆ. ಈ ಸಿನಿಮಾ "ಹಾಸ್ಯದೊಂದಿಗೆ ಭಾವನಾತ್ಮಕ ಅಂಶಗಳಿಂದ" ಸಿನಿಮಾ ವೀಕ್ಷಕರ ಮೆಚ್ಚುಗೆ ಗಳಿಸಿದೆ. ಈ ಸಿನಿಮಾವನ್ನು ಇದೀಗ ಒಟಿಟಿ ಮೂಲಕ ಆನ್ಲೈನ್ನಲ್ಲಿ ವೀಕ್ಷಿಸಬಹುದು.

Moorane Krishnappa OTT Release: ಕನ್ನಡದ ಪ್ರತಿಭಾನ್ವಿತ ನಟ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮೂರನೇ ಕೃಷ್ಣಪ್ಪ ಸಿನಿಮಾ ಈ ವರ್ಷ ಮೇ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆನೇಕಲ್ ಕನ್ನಡದ ಸೊಗಡಿನ ಈ ಚಿತ್ರವು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ದೇವಸ್ಥಾನ ಕಟ್ಟಿಸಿ ರಾಜಕಾರಣ ಮಾಡುವ ಕಥೆಯನ್ನು ಹೊಂದಿರುವ ಈ ಸಿನಿಮಾ "ಹಾಸ್ಯದೊಂದಿಗೆ ಭಾವನಾತ್ಮಕ ಅಂಶಗಳಿಂದ" ಸಿನಿಮಾ ವೀಕ್ಷಕರ ಮೆಚ್ಚುಗೆ ಗಳಿಸಿದೆ.ರಂಗಾಯಣ ರಘು, ಸಂಪತ್ ಮೈತ್ರೇಯ, ಶ್ರೀಪ್ರಿಯ, ಉಗ್ರಂ ಮಂಜು, ತುಕಾಲಿ ಸಂತೋಷ್ ಮುಂತಾದವರು ನಟಿಸಿರುವ ಈ ಸಿನಿಮಾ ಇದೀಗ ಒಟಿಟಿಗೆ ಆಗಮಿಸಿದೆ. ಚಿತ್ರಮಂದಿರಗಳಲ್ಲಿ ನೋಡದೆ ಇರುವವರು ಈ ಸಿನಿಮಾವನ್ನು ಈಗ ಮನೆಯಲ್ಲಿ ಅಥವಾ ಎಲ್ಲಿ ಬೇಕೆಂದರಲ್ಲಿ ಆನ್ಲೈನ್ನಲ್ಲಿ ನೋಡಬಹುದಾಗಿದೆ. ಈ ಸಿನಿಮಾವನ್ನು ನವೀನ್ ನಾರಾಯಣ ಘಟ್ಟ ನಿರ್ಮಿಸಿದ್ದಾರೆ. ಈ ಚಿತ್ರದ ಕಥೆ ಬರೆದವರು ಕೂಡ ಇವರೇ.
ಮೂರನೇ ಕೃಷ್ಣಪ್ಪ ಒಟಿಟಿಯಲ್ಲಿ ಬಿಡುಗಡೆ
ಎಲ್ಲಾ ಸರಿ, ಯಾವ ಒಟಿಟಿಯಲ್ಲಿ ಮೂರನೇ ಕೃಷ್ಣಪ್ಪ ಸಿನಿಮಾ ಬಿಡುಗಡೆಯಾಗಿದೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಈಗ ಬಹುತೇಕರು ಹಲವು ಒಟಿಟಿಗಳಿಗೆ ಚಂದಾದಾರರಾಗಿರಬಹುದು. ಇವುಗಳಲ್ಲಿ ಹೆಚ್ಚಿನ ಜನರು ಅಮೆಜಾನ್ ಪ್ರೈಮ್ ವಿಡಿಯೋದ ಚಂದಾದಾರರಾಗಿರಬಹುದು. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇದೀಗ ಮೂರನೇ ಕೃಷ್ಣಪ್ಪ ಸಿನಿಮಾ ಬಿಡುಗಡೆಯಾಗಿದೆ. ಎಲ್ಲಾದರೂ ಟಾಪ್ನಲ್ಲಿ ಈ ಸಿನಿಮಾ ಕಾಣಿಸದೆ ಇದ್ದರೆ ಸರ್ಚ್ ಬಾಕ್ಸ್ಗೆ ಹೋಗಿ Moorane Krishnappa ಎಂದು ಹುಡುಕಿ ಹುಡುಕಾಟ ನಡೆಸಬಹುದು.
ಮೂರನೇ ಕೃಷ್ಣಪ್ಪನಾದ ರಂಗಾಯಣ ರಘು
ರಂಗಾಯಣ ರಘು ನಾಯಕಪಾತ್ರದಲ್ಲಿ ನಟಿಸಿರುವ ಸಿನಿಮಾವಿದು. ರಂಗಾಯಣ ರಘು ಇತ್ತೀಚೆಗೆ ಶಾಖಾಹಾರಿ ಸಿನಿಮಾದಲ್ಲೂ ನಾಯಕ ಪಾತ್ರದಲ್ಲಿ ನಟಿಸಿದ್ದರು. ಕನ್ನಡದಲ್ಲಿ ಇವರು ಇಲ್ಲದ ಸಿನಿಮಾ ಯಾವುದು ಎಂದು ಹುಡುಕಾಟ ನಡೆಸಬೇಕು, ಅಷ್ಟೊಂದು ಜನಪ್ರಿಯ ಮತ್ತು ಪ್ರತಿಭಾನ್ವಿತ ನಟ ಇವರು. ದಿ ಜಡ್ಜ್ಮೆಂಟ್, ಕೋಟೇ, ನೈಟ್ ಕರ್ಫ್ಯೂ, ದಿಲ್ಖುಷ್, ಕರಟಕ ಧಮನಕ, ಶಾಖಾಹಾರಿ, ಜಸ್ಟ್ ಪಾಸ್, ಕೇಸ್ ಆಫ್ ಕೊಂಡಾಣ, ರಂಗಸಮುದ್ರ ಇವಿಷ್ಟು ರಂಗಾಯಣ ರಘು ಈ ವರ್ಷ ನಟಿಸಿರುವ ಸಿನಿಮಾಗಳು.
ಮೂರನೇ ಕೃಷ್ಣಪ್ಪ ಪಾತ್ರವರ್ಗ
ಮೂರನೇ ಕೃಷ್ಣಪ್ಪ ಸಿನಿಮಾದಲ್ಲಿ ವೀರಣ್ಣ ಎಂಬ ಪಂಚಾಯತ್ ಅಧ್ಯಕ್ಷನಾಗಿ ರಂಗಾಯಣ ರಘು ನಟಿಸಿದ್ದಾರೆ. ಕೃಷ್ಣಪ್ಪನ ಪಾತ್ರದಲ್ಲಿ ಸಂಪತ್ ಮೈತ್ರೇಯ ನಟಿಸಿದ್ದಾರೆ. ವೀರಣ್ಣನ ಮಗಳು ಶಶಿಯಾಗಿ ಶ್ರೀಪ್ರಿಯಾ ನಟಿಸಿದ್ದಾರೆ. ಲೋಕಿಯಾಗಿ ಉಗ್ರಂ ಮಂಜು, ರಘು ಪಾತ್ರದಲ್ಲಿ ತುಕಾಲಿ ಸಂತೋಷ್ ನಟಿಸಿದ್ದಾರೆ. ಅತಿಥಿ ಪಾತ್ರವೊಂದರಲ್ಲಿ ಆರೋಹಿ ನಾರಾಯಣ್ ನಟಿಸಿದ್ದಾರೆ.
ಮೂರನೇ ಕೃಷ್ಣಪ್ಪ ಸಿನಿಮಾದ ವಿಮರ್ಶೆ
ಮೂರನೇ ಕೃಷ್ಣಪ್ಪ ಸಿನಿಮಾದಲ್ಲಿ ನಿರ್ದೇಶಕರು ಗಟ್ಟಿಯಾದ ಕಥೆಯನ್ನು ಅವಲಂಬಿಸಿಲ್ಲ. ಈ ಸಿನಿಮಾ ಆ ಕ್ಷಣದ ಖುಷಿಗಳನ್ನು, ಸಂಭ್ರಮಗಳನ್ನು ವೀಕ್ಷಕರಿಗೆ ದಾಟಿಸುವ ಪ್ರಯತ್ನದಂತೆ ಕಾಣಿಸುತ್ತದೆ. ಸಿನಿಮಾ ಮುಂದೇನಾಗಬಹುದು ಎಂದು ವೀಕ್ಷಕರು ಊಹಿಸಬಹುದಾಗಿದ್ದರೂ ಆ ಪಾತ್ರಗಳು ಕೊನೆಯವರೆಗೂ ಖುಷಿಯಿಂದ ನೋಡುವಂತೆ ಮಾಡುತ್ತವೆ. ಚಿತ್ರದ ಪೂರ್ತಿ ಆನೇಕಲ್ನ ಕನ್ನಡ ಭಾಷೆಯ ಸೊಗಡಿದೆ. ಹಳ್ಳಿ ಬದುಕು, ಜೀವನಶೈಲಿಯಲ್ಲಿ ವೀಕ್ಷಕರು ಬೆರತುಬಿಡುತ್ತಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಈಗಾಗಲೇ ಸಿನಿಮಾ ನೋಡಿ ವಿಮರ್ಶೆ ಬರೆದಿದೆ. ಸಂಪೂರ್ಣ ವಿಮರ್ಶೆ ಓದಲು ಇಲ್ಲಿ ಕ್ಲಿಕ್ ಮಾಡಿ.