ನೋಡುಗರನ್ನು ಮಂಗ ಮಾಡಲು ಒಟಿಟಿಯ ʻಡಾಕ್ಯುಡ್ರಾಮಾʼ ಟ್ರಿಕ್! ʻಬ್ಲ್ಯಾಕ್ ವೈಟ್ ಅಂಡ್ ಗ್ರೇ-ಲವ್ ಕಿಲ್ಸ್ʼ ಬಗ್ಗೆ ರಾಜೀವ್ ಹೆಗಡೆ ಬರಹ
ಸೋನಿ ಲಿವ್ನಲ್ಲಿ ʻಬ್ಲ್ಯಾಕ್ ವೈಟ್ & ಗ್ರೇ-ಲವ್ ಕಿಲ್ಸ್ʼ ಮೂಲಕ ಅಂತದ್ದೇ ಅದ್ಭುತ ಕಥೆಗಾರಿಕೆ ಮೂಲಕ ಜನರಿಗೆ ಟೋಪಿ ಹಾಕುವ ಕೆಲಸ ಮಾಡಲಾಗಿದೆ. ಈ ಬಗ್ಗೆ ರಾಜೀವ್ ಹೆಗಡೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಜನರನ್ನು ದಿಕ್ಕು ತಪ್ಪಿಸಲು ಈಗ ಎರಡು ಮಾರ್ಗವಿದೆ. ಒಂದು ಸಾಮಾಜಿಕ ಜಾಲತಾಣ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್. ಎರಡನೇಯದ್ದು ಅದೇ ಹಳೆಯ ಎಂಟರ್ಟೇನ್ಮೆಂಟ್.... ಎಂಟರ್ಟೇನ್ಮೆಂಟ್.... ಎಂಟರ್ಟೇನ್ಮೆಂಟ್....
ಆದರೆ ಈಗಿರುವ ಹಾಲಿ ಸ್ಕ್ರಿಪ್ಟ್ಗಳ ಮೂಲಕ ಜನರನ್ನು ಪದೇಪದೆ ಮಂಗಗಳನ್ನಾಗಿಸಲು ಸಾಧ್ಯವಿಲ್ಲ, ಹೊಸ ಕಥೆ ಬೇಕಾಗುತ್ತದೆ. ಪಹಲ್ಗಾಮ್ ದಾಳಿಯಲ್ಲಿ ಅಗಲಿದ ಭಾರತೀಯರಿಗಿಂತ, ಭಯೋತ್ಪಾದಕರಿಗೆ ನೆರವು ನೀಡಿ ಮೌನವಾಗಿದ್ದ ಸ್ಥಳೀಯರನ್ನು ಹೀರೋ ಮಾಡಿದ ಕಥೆಗೆ ಮುಂದಿನ ಬಾರಿ ಮೌಲ್ಯ ಇರುವುದಿಲ್ಲ. ಅಂದು ಹೊಸ ʼಮಾನವೀಯʼ ಕಥೆಯನ್ನು ಹೆಣೆಯಬೇಕಾಗುತ್ತದೆ. ಈಗ ಅದೇ ರೀತಿಯಲ್ಲಿ ಸೋನಿ ಲಿವ್ನಲ್ಲಿ ʻಬ್ಲ್ಯಾಕ್ ವೈಟ್ & ಗ್ರೇ-ಲವ್ ಕಿಲ್ಸ್ʼ ಮೂಲಕ ಅಂತದ್ದೇ ಅದ್ಭುತ ಕಥೆಗಾರಿಕೆ ಮೂಲಕ ಜನರಿಗೆ ಟೋಪಿ ಹಾಕುವ ಕೆಲಸ ಮಾಡಲಾಗಿದೆ.
ಪುಷ್ಕರ್ ಸುನೀಲ್ ಮಹಾಬಲ್ ನಿರ್ದೇಶಿಸಿರುವ ʼಬ್ಲ್ಯಾಕ್ ವೈಟ್ & ಗ್ರೇ-ಲವ್ ಕಿಲ್ಸ್ʼ ಸಿರೀಸ್ನ್ನು ನೋಡಲು ಆರಂಭಿಸಿ, ಮೊದಲೆರಡು ಎಪಿಸೋಡ್ ದಾಟುವರೆಗೆ ತನಿಖಾ ಪತ್ರಿಕೋದ್ಯಮದ ಮಜಲುಗಳನ್ನು ನೋಡಿ ರೋಮಾಂಚನವಾಗುತ್ತದೆ. ನಮ್ಮ ದೇಶದಲ್ಲೇ ನಡೆದ ಇಂತಹದೊಂದು ಕ್ರೈಮ್ ಸ್ಟೋರಿಯನ್ನು ನಾವು ಹೇಗೆ ಮಿಸ್ ಮಾಡಿಕೊಂಡೆವು ಎನಿಸಲು ಶುರುವಾಗುತ್ತದೆ. ಮಹಾರಾಷ್ಟ್ರ ಪೊಲೀಸರು ತನಿಖೆಯಲ್ಲಿ ಮುಟ್ಟಲಾಗದ ವಿಷಯಗಳನ್ನೆಲ್ಲ ಒಬ್ಬ ವಿದೇಶಿ ಪತ್ರಕರ್ತ ತೆರೆ ಮೇಲೆ ತಂದಾಗ ನಮ್ಮ ಸಂಸ್ಥೆಗಳ ಕುದಿಕೋಪ ಶುರುವಾಗುತ್ತದೆ. ಪೊಲೀಸರು ಹಿಡಿಯಲಾಗದ ʼದೇಸಿ ಸೀರಿಯಲ್ ಕಿಲ್ಲರ್ʼನನ್ನು ವಿದೇಶಿ ಪತ್ರಕರ್ತ ಸಂದರ್ಶನ ಮಾಡುತ್ತಾನೆ. ಈ ಪ್ರಕರಣದ ಪ್ರಮುಖ ರೂವಾರಿಯನ್ನು ಕೂಡ ಸಂದರ್ಶಿಸಿ ತನಿಖಾ ಸಂಸ್ಥೆ ಹಾಗೂ ಸ್ಥಳೀಯ ಪ್ರಭಾವಿ ರಾಜಕಾರಣಿಯ ಮುಖವಾಡ ಬಿಚ್ಚಿಡುತ್ತಾನೆ. ತನಿಖಾಧಿಕಾರಿಗಳು ಈ ವಿಚಾರಗಳನ್ನು ನೋಡಿ ಸುಸ್ತಾಗಿ ಹೋಗುತ್ತಾರೆ. ಸಾರ್ವಜನಿಕರಿಂದ ಪೊಲೀಸರು ಹಾಗೂ ಪ್ರಭಾವಿ ರಾಜಕಾರಣಿ ಮುಚ್ಚಿಟ್ಟಿದ್ದ ಕಹಿಸತ್ಯಗಳು ಈ ಡಾಕ್ಯುಮೆಂಟರಿ ಮೂಲಕ ಬಹಿರಂಗವಾಗುತ್ತದೆ. ಡಾಕ್ಯುಮೆಂಟರಿಗೆ ಸ್ವಲ್ಪ ಕಥಾ ರೂಪ ನೀಡುವ ಉದ್ದೇಶದಿಂದ ಸಾಕ್ಷಿಗಳ ಹೇಳಿಕೆ, ಸಾಕ್ಷ್ಯ ಆಧರಿಸಿ ಕೆಲವು ಸನ್ನಿವೇಶಗಳನ್ನು ಮರುಸೃಷ್ಟಿಸಲಾಗಿದೆ. ಇದಕ್ಕೆ ಪೂರಕವೆಂಬಂತೆ ಘಟನಾ ಸ್ಥಳದ ಸಿಸಿಟಿವಿ ವಿಡಿಯೋ, ಆರೋಪಿಗಳು ಹಾಗೂ ತನಿಖಾಧಿಕಾರಿಗಳ ಹೇಳಿಕೆಯನ್ನು ಕೂಡ ಉಲ್ಲೇಖಿಸಲಾಗುತ್ತದೆ. ಹಾಗೆಯೇ ಸಂತ್ರಸ್ತೆಯ ಸ್ನೇಹಿತೆಯ ಹೇಳಿಕೆ ಕೂಡ ಪ್ರಕರಣಕ್ಕೆ ಪ್ರಮುಖ ತಿರುವು ನೀಡುವುದಲ್ಲದೇ, ಹೊಸ ಸಾಮಾಜಿಕ, ರಾಜಕೀಯ ಆಯಾಮವನ್ನು ನೀಡುತ್ತದೆ.
ಓರ್ವ ವಿದೇಶಿ ಪತ್ರಕರ್ತನು ಈ ಪ್ರಕರಣದ ಹಿಂದೆ ಬಿದ್ದಿರುವುದು ಸಂತ್ರಸ್ತೆಯ ತಂದೆ-ತಾಯಿಗೂ ಗೊತ್ತಾಗುತ್ತದೆ. ಪ್ರಕರಣದ ಬಗ್ಗೆ ಸಂದರ್ಶನಕ್ಕೆ ವಿದೇಶಿ ಪತ್ರಕರ್ತ ಮುಂದಾದಾಗ ನಿರಾಕರಿಸುತ್ತಾರೆ. ಜತೆಗೆ ಕಾನೂನು ಕ್ರಮದ ಬೆದರಿಕೆ ಕೂಡ ಹಾಕುತ್ತಾರೆ. ಈ ಅಂಶವನ್ನು ಖುದ್ದು ವಿದೇಶಿ ಪತ್ರಕರ್ತನೇ ಉಲ್ಲೇಖಿಸುತ್ತಾನೆ.
ಏತನ್ಮಧ್ಯೆ ಭಾರತದ ಮಾಧ್ಯಮಗಳ ಬಗ್ಗೊ ಚರ್ಚೆಯಾಗುತ್ತದೆ. ಇಂತಹ ಪ್ರಕರಣಗಳು ಬಂದಾಗ ಮಾಧ್ಯಮಗಳ ಹೇಗೆ ವರ್ತಿಸುತ್ತವೆ ಎನ್ನುವುದನ್ನು ಉಲ್ಲೇಖಿಸಲಾಗಿದೆ. ಜತೆಗೆ ರ.... ಕುಮಾರ್ ರೀತಿಯ ಕೆಲವೇ ಜನರು ಮಾತ್ರ ಆರೋಪಿಯ ವಾದವನ್ನು ಕೂಡ ಆಲಿಸಲು ಬಯಸುತ್ತಾರೆ. ಈ ಮೂಲಕ ಸಾಮಾಜಿಕ ನ್ಯಾಯಕ್ಕೆ ಬೆಲೆ ಕೊಡುತ್ತಾರೆ ಎನ್ನುವ ʼಮಾನವೀಯʼ ವಿಚಾರವನ್ನು ತಿಳಿಸಲಾಗಿದೆ. ಆದರೆ ಇದೇ ರ.... ಕುಮಾರ್ ಮೇಲೆ ತನಿಖಾ ಸಂಸ್ಥೆಗಳು ಮುಗಿಬಿದ್ದಾಗ, ಸರ್ಕಾರದ ಅಣತಿಯಂತೆ ಆರೋಪಿ ವಿರುದ್ಧವೇ ಕೆಲಸ ಮಾಡುತ್ತಾರೆ ಎನ್ನುವುದನ್ನು ಕೂಡ ಹೇಳಲಾಗಿದೆ.
ಒಟ್ಟಾರೆಯಾಗಿ ಎಲ್ಲ ಎಪಿಸೋಡ್ ಮುಗಿಯುವರೆಗೆ ʼದೇಸಿ ಸೀರಿಯಲ್ ಕಿಲ್ಲರ್ʼ ನೇಪಾಳದ ಅಡಗುತಾಣದಿಂದ ಕಣ್ಣೀರು ಹಾಕುತ್ತಾ, ಭಾರತದ ಕಾನೂನು ಸುವ್ಯವಸ್ಥೆ ಬಗ್ಗೆ ಅಸಹಾಯಕತೆವ್ಯಕ್ತಪಡಿಸುತ್ತಾನೆ. ತನ್ನ ʼಪವಿತ್ರʼ ಪ್ರೀತಿಗೆ ಭಾರತದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆ ಹೇಗೆ ಅಡ್ಡಿಯಾಯಿತು ಎನ್ನುವುದನ್ನು ವಿವರಿಸುತ್ತಾನೆ. ಹಾಗೆಯೇ ತಾನು ಮಾಡಿದ ಕೊಲೆಗಳಿಗೆ ವ್ಯವಸ್ಥೆ ಹೇಗೆ ಕಾರಣ ಎನ್ನುವುದನ್ನು ಕೂಡ ಚರ್ಚಿಸುತ್ತಾನೆ.
**ಡಿಸ್ಕ್ಲೇಮರ್: ಈ ಲೇಖನದ ಆರಂಭದಲ್ಲಿ ನಾನು ಎರಡು ಸ್ಟಾರ್ ಹಾಕಿದ್ದೆ. ನೀವದನ್ನು ಗಮನಿಸದೇ ಇಲ್ಲಿಯವರೆಗೆ ಓದಿದ್ದರೆ, ವ್ಯವಸ್ಥೆ ಬಗ್ಗೆ ಒಂದಿಷ್ಟು ಬೇಸರದಿಂದ ʼಬ್ಲ್ಯಾಕ್ ವೈಟ್ & ಗ್ರೇ-ಲವ್ ಕಿಲ್ಸ್ʼ ನೋಡಲು ಆರಂಭಿಸುವ ಆಲೋಚನೆಯಲ್ಲಿ ಇರುತ್ತೀರಿ. ಅದೆಷ್ಟೋ ಜನರು ಈ ಲೇಖನದ ಕೊನೆಯ ಈ ಭಾಗವನ್ನು ಓದದೇ, ಬರಹದ ಬಗ್ಗೆ ತಮ್ಮ ಅಭಿಪ್ರಾಯ ರೂಪಿಸಿಕೊಂಡಿರುತ್ತಾರೆ. ʼಬ್ಲ್ಯಾಕ್ ವೈಟ್ & ಗ್ರೇ-ಲವ್ ಕಿಲ್ಸ್ʼ ಸಿರೀಸ್ ಕೂಡ ಅದೇ ರೀತಿಯದ್ದಾಗಿದೆ.
ʼಬ್ಲ್ಯಾಕ್ ವೈಟ್ & ಗ್ರೇ-ಲವ್ ಕಿಲ್ಸ್ʼ ಸಿರೀಸ್ನ ಆರಂಭದಲ್ಲಿ ಒಂದು ಡಿಸ್ಕ್ಲೇಮರ್ ನೀಡಲಾಗಿದೆ. ಇದೊಂದು ಕಾಲ್ಪನಿಕ ಘಟನೆಯಾಗಿದ್ದು, ಯಾವುದೇ ನೈಜ ಘಟನೆಯನ್ನಾಧರಿಸಿ ಮಾಡಿದ್ದಲ್ಲ ಎಂದು ಸಣ್ಣದಾಗಿ ಬರೆದು ಹೇಳಲಾಗಿದೆ. ಆದರೆ ಬಹುತೇಕ ವೀಕ್ಷಕರು ಇದನ್ನು ಗಮನಿಸಿಯೇ ಇರುವುದಿಲ್ಲ. ನಾನು ಕೂಡ ಬಹುತೇಕ ಸಿರೀಸ್ ಕೊನೆಯಾಗುವ ವೇಳೆಗೆ ಗೂಗಲ್ನಲ್ಲಿ ಸರ್ಚ್ ಮಾಡಿದಾಗ ತಿಳಿದುಕೊಂಡೆ. ಅದಾದ ಬಳಿಕ ಡಿಸ್ಕ್ಲೇಮರ್ ಓದಿದೆ. ಅಲ್ಲಿಯವರೆಗೆ ಡಿಸ್ಕ್ಲೇಮರ್ ಓದಿಯೇ ಇರಲಿಲ್ಲ. ಏಕೆಂದರೆ ಬಿಂಜ್ ವಾಚಿಂಗ್ನಲ್ಲಿ ಡಿಸ್ಕ್ಲೇಮರ್ಗಳು ಬಂದಾಗ ಒಂದು ರೀತಿಯ ವಿಶ್ರಾಂತಿ ಸಮಯವಾಗಿರುತ್ತದೆ.
ಇದಕ್ಕೆ ಪೂರಕವೆನ್ನುವಂತೆ ಇಡಿ ಸಿರೀಸ್ನ್ನು ಎಷ್ಟು ವಿಭಿನ್ನವಾಗಿ ಹೆಣೆದಿದ್ದಾರೆಯೆಂದರೆ, ನಿಮಗೆ ಯಾವ ಕ್ಷಣದಲ್ಲೂ ʼಬ್ಲ್ಯಾಕ್ ವೈಟ್ & ಗ್ರೇ-ಲವ್ ಕಿಲ್ಸ್ʼ ಎನ್ನುವುದು ಭಾರತದಲ್ಲಿ ನಡೆದ ಕ್ರೈಮ್ಗೆ ಸಂಬಂಧಿಸಿದ ಡಾಕ್ಯುಮೆಂಟರಿ ಎನಿಸುವ ಹಾಗಿದೆ. ಈ ಸಿರೀಸ್ನಲ್ಲಿ ತೋರಿಸುವ ಸಿಸಿಟಿವಿ ವಿಡಿಯೋ, ಆರೋಪಿಗಳ ಹೇಳಿಕೆ, ತನಿಖಾಧಿಕಾರಿಗಳ ಮಾತುಗಳ ಸಂದರ್ಭದಲ್ಲಿ ಎಲ್ಲಿಯೂ ಕಾಲ್ಪನಿಕ ಎನಿಸುವುದ ಇಲ್ಲ. ನೈಜ ಘಟನೆಯ ವಿವರ ಹಾಗೂ ಅಸಲಿ ವ್ಯಕ್ತಿಗಳು ಅನ್ನುವ ರೀತಿಯಲ್ಲಿ ತೋರಿಸಲಾಗಿದೆ. ಹಾಗೆಯೇ ಆ ಸಂದರ್ಭದಲ್ಲಿ ಬ್ಯಾಕ್ಗ್ರೌಂಡ್ ಕೂಡ ಬದಲಾಯಿಸಲಾಗಿದೆ. ಸಾಮಾನ್ಯ ನೋಡುಗರಿಗೆ ಅಸಲಿ ಆರೋಪಿಗಳು ನೀಡಿದ ಹೇಳಿಕೆ ಎನಿಸುವ ಹಾಗಿದೆ. ಡಿಸ್ಕ್ಲೇಮರ್ನ್ನು ಓದದೇ ಸಿರೀಸ್ನ್ನು ಸಿರೀಯಸ್ ಆಗಿ ನೋಡಿದರೆ, ಅದೊಂದು ಡಾಕ್ಯುಮೆಂಟರಿ ಎಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಡಾಕ್ಯುಮೆಂಟರಿ ಎಂದು ಸಾಮಾನ್ಯ ಜನರು ನಂಬಲು ಇಂತಹ ಹತ್ತಾರು ವಿಚಾರಗಳು ಸಿರೀಸ್ನಲ್ಲಿವೆ.
ಅಪಾಯಕಾರಿ ವಿಚಾರವೇನು?
ಎಲ್ಲ ವೀಕ್ಷಕರು ಡಿಸ್ಕ್ಲೇಮರ್ ಓದಿರುವ ಸಾಧ್ಯತೆ ಕಡಿಮೆ ಇರುತ್ತದೆ. ವಾಸ್ತವವೆಂದು ನೋಡಿದಗ, ನಮೆ ತಿಳಿಯದೇ ಈ ಸಿರೀಸ್ನಲ್ಲಿ ಭಾರತ ಹಾಗೂ ಭಾರತೀಯರ ಬಗ್ಗೆ ಒಂದಿಷ್ಟು ಪ್ರೊಪಗಂಡಾ ಮಾಡುವ ಪ್ರಯತ್ನ ನಡೆದಿದೆ. ಭಾರತದಲ್ಲಿ ಬೇರೆ ಬೇರೆ ಧರ್ಮಗಳ ಜನರ ನಡುವೆ ಪ್ರೀತಿಯಾದಾಗ ʼಬಹುಸಂಖ್ಯಾತ ಪ್ರಬಲರುʼ ಹೇಗೆ ವರ್ತಿಸುತ್ತಾರೆ ಹಾಗೂ ಭಾರತೀಯ ಮಾಧ್ಯಮಗಳು ಹೇಗೆ ವರ್ತಿಸುತ್ತವೆ ಎಂದು ಓರ್ವ ಬ್ರಿಟಿಷ್ ಪತ್ರಕರ್ತನಿಂದ ಬುದ್ಧಿ ಹೇಳಿಸುವ ಕೆಲಸ ಮಾಡಲಾಗಿದೆ. ಈ ಸಂದರ್ಭದಲ್ಲಿ ನಾನು ಕೆಲವು ವಿಚಾರ ಹೇಳಿದರೆ ದೊಡ್ಡ ವಿವಾದವಾಗುತ್ತದೆ ಎಂದು ಹೇಳಿ ನಿಲ್ಲಿಸಿಯೇ, ಸಾಕಷ್ಟು ದೊಡ್ಡ ದೊಡ್ಡ ಪ್ರೊಪಗಂಡಾದ ಸಂದೇಶ ಕಳುಹಿಸುವ ಕೆಲಸವನ್ನು ನಿರ್ದೇಶಕರು ಮಾಡಿದ್ದಾರೆ. ಸಿರೀಸ್ನ ಆರಂಭದಲ್ಲಿಯೇ ಭಾರತದ ಸಂಸ್ಕೃತಿ, ಕಲೆ ಉತ್ಸವದ ಬಗ್ಗೆ ಉಲ್ಲೇಖಿಸಿ, ಭಾರತವೆಂದರೆ ಇದಲ್ಲ. ನಾನೊಬ್ಬ ವಿದೇಶಿ ಪತ್ರಕರ್ತನವಾಗಿ ಡಾರ್ಕ್ ಸೈಡ್ನ್ನು ನಿಮ್ಮ ಮಂದಿಡುತ್ತೇನೆ ಎಂದು ಆರಂಭಿಸುತ್ತಾನೆ. ಕೊನೆಯ ಎಪಿಸೋಡ್ ಡ್ರಾಮಾ, ಡಿಸ್ಕ್ಲೇಮರ್ ನೋಡಿದ ಬಳಿಕ ಹಳೆಯ ಎಪಿಸೋಡ್ಗಳನ್ನು ಕನೆಕ್ಟ್ ಮಾಡುತ್ತಾ ಹೋದಾಗ, ಎಷ್ಟೊಂದು ಚೆಂದದ ರೂಪದಲ್ಲಿ ತಮ್ಮ ವಿಚಾರಧಾರೆಯನ್ನು ತುರುಕುವ ಕೆಲಸವನ್ನು ಮಾಡುತ್ತಿದ್ದಾರೆ ಎನ್ನುವುದು ಖಾತ್ರಿಯಾಗುತ್ತದೆ. ಬಾಲಿವುಡ್ನ ಹಳೆಯ ಖಯಾಲಿಯಿದು. ಆರೋಪಿ ಅಥವಾ ಅಪರಾಧಿಗಳ ಬಗ್ಗೆ ಸಹಾನುಭೂತಿ ಬರುವ ಹಾಗೆ ಕಥೆ ಹೆಣೆಯಲಾಗುತ್ತದೆ.
ಈ ನಿರ್ದೇಶಕರು ಇತಹ ಹಳೆಯ ಕಥೆಗೆ ಹೊಸ ನಿರೂಪಣಾ ಶೈಲಿಯನ್ನು ನೀಡಿದ್ದಾರೆ. ಕೇವಲ ನಿರೂಪಣೆ ಹಾಗೂ ಸೃಜನಶೀಲತೆ ಆಯಾಮದಲ್ಲಿ ನೋಡಿದಾಗ ʼವಾವ್ʼ ಎನಿಸುತ್ತದೆ. ಏಕೆಂದರೆ ಇಂತಹದೊಂದು ಹೊಸ ಆಯಾಮವನ್ನು ಹುಡುಕಿಕೊಂಡಿರುವುದಕ್ಕೆ ವಿಭಿನ್ನವಾಗಿ ಕಾಣಿಸುತ್ತಾರೆ. ಈ ಹಿಂದೆ ಬೇರೆ ಕಡೆ ಇಂತಹ ನಿರೂಪಣೆ ಬಂದಿದ್ದರೆ ನನಗೆ ಮಾಹಿತಿಯಿಲ್ಲ. ನಾನು ನೋಡಿರುವುದು ಇದೇ ಮೊದಲು. ಆದರೆ ಇದರ ಅಪಾಯವೇನೆಂದರೆ ಸಣ್ಣ ಡಿಸ್ಕ್ಲೇಮರ್ ಹಾಕಿಕೊಂಡು ಯಾವುದೇ ಘಟನೆ ಬಗ್ಗೆ, ಇಂತಹದೊದು ಕಥೆ ಹೆಣೆಯಬಹುದು. ಯಾವುದೇ ಕಾನೂನು ಸಮಸ್ಯೆಗೂ ಒಳಗಾಗದೇ ತಮಗೇ ಬೇಕಾದ ಪ್ರೊಪಗಂಡಾ ನಿರ್ಮಾಣ ಮಾಡಬಹುದು.
ಕೊನೆಯದಾಗಿ: ಅಂದ್ಹಾಗೆ ʼಸೋನಿ ಲಿವ್ʼನಲ್ಲಿ ಡಿಸ್ಕ್ಲೇಮರ್ ಹಾಕಿಕೊಂಡು ಈ ರೀತಿ ಕಥೆ ಹೇಳುತ್ತಿರುವುದು ಇದೇ ಮೊದಲಲ್ಲ. ಇಸ್ರೇಲ್-ಗಾಜಾಪಟ್ಟಿಗೆ ಸಂಬಂಧಿಸಿದ ʼಫೌದಾʼ ಸಿರೀಸ್ನ್ನು ʼತನಾವ್ʼ ಎಂದು ಹಿಂದಿಯಲ್ಲಿ ರಿಮೇಕ್ ಮಾಡಲಾಗಿತ್ತು. ಜಮ್ಮು-ಕಾಶ್ಮೀರ ಹಾಗೂ ಗಾಜಾಪಟ್ಟಿಗೆ ಯಾವುದೇ ಸಾಮ್ಯತೆಯಿಲ್ಲ. ಆದರೆ ʼಫೌದಾʼ ಕಥೆಯನ್ನು ಯಥಾವತ್ತಾಗಿ ಇಲ್ಲಿಗೆ ತಂದು ಕಾಶ್ಮೀರದ ಕಥೆಯೆಂದು ಭಾರತೀಯರಿಗೆ ತೋರಿಸಲಾಗಿತ್ತು. ಸಾಮಾನ್ಯ ಜನರು ಈ ಸರಣಿಯನ್ನು ನೋಡಿದಾಗ, ಅಲ್ಲಿಯ ಭಯೋತ್ಪಾದಕರನ್ನು ʼಮುಜಾಹಿದ್ʼಗಳೆಂದು ಕರೆಯುವುದರಲ್ಲಿ ತಪ್ಪೆನಿಸದು ಎನ್ನುವ ಮಟ್ಟಿಗೆ ʼತನಾವ್ʼನಲ್ಲಿ ಕಥೆಗಳನ್ನು ತೋರಿಸಲಾಗಿದೆ. ಇಂತಹ ದಾರಿ ತಪ್ಪಿಸುವ ಸಿರೀಸ್ಗಳ ಬಗ್ಗೆ ಅತಿಯಾದ ಎಚ್ಚರವಹಿಸಬೇಕಿದೆ.