Anant Nag: ಚಂದನವನದ ಹಿರಿಯ ನಟ ಅನಂತ್ ನಾಗ್ಗೆ ಪದ್ಮಭೂಷಣ ಘೋಷಣೆ
ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದು ಅವರ ಅಭಿಮಾನಿಗಳಿಗೆ ಇದು ಸಂತಸ ತಂದಿದೆ.

ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಒಟ್ಟೂ 19 ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು 113 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಾರೆ. ಕಲಾ ವಿಭಾಗದಲ್ಲಿ ಹಿರಿಯ ನಟ ಅನಂತ್ ನಾಗ್ ಗೌರವಕ್ಕೆ ಪಾತ್ರರಾಗಿದ್ದಾರೆ.
ನೂರಾರು ಸಿನಿಮಾ, ಬಗೆಬಗೆ ಪಾತ್ರಗಳು
1973ರಲ್ಲಿ ಸಂಕಲ್ಪ ಸಿನಿಮಾದಿಂದ ಶುರುವಾದ ಅನಂತ್ನಾಗ್ ಅವರ ಜರ್ನಿ, ಅಲ್ಲಿಂದ ಹಂಸಗೀತೆ, ಬಯಲುದಾರಿ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಮಿಂಚಿನ ಓಟ, ನಾರದ ವಿಜಯ, ಅನುಪಮಾ, ಮುಳ್ಳಿನ ಗುಲಾಬಿ, ಬೆಂಕಿಯ ಬಲೆ, ಒಲವು ಮೂಡಿದಾಗ, ಅರುಣ ರಾಗ, ಹೆಂಡ್ತಿಗೆ ಹೇಳ್ಬೇಡಿ, ಗಗನ, ಗೌರಿ ಗಣೇಶ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅನಂತ್ನಾಗ್ ನಾಯಕನ ಪಾತ್ರದಲ್ಲಿ ನಟಿಸಿದರೆ, ಮುಂಗಾರು ಮಳೆ, ಈ ಬಂಧನ, ಅರಮನೆ, ಗಣೇಶ ಮತ್ತೆ ಬಂದ, ಮೈನಾ, ಗೂಗ್ಲಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಜಿಎಫ್, ಗಾಳಿಪಟ 2 ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರ ನೀಡಿದರೂ ಅದಕ್ಕೆ ನ್ಯಾಯ ಒದಗಿಸಿದ್ದಾರೆ.
ಪ್ರತಿ ವರ್ಷ ನಡೆಯುತ್ತಿತ್ತು ಅಭಿಯಾನ
ಹಿರಿಯ ನಟ ಅನಂತ್ ನಾಗ್ಗೆ ಕೇಂದ್ರ ಸರ್ಕಾರದಿಂದ ಪದ್ಮ ಪ್ರಶಸ್ತಿ ಸಿಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಕಳೆದ ಕೆಲ ವರ್ಷಗಳಿಂದ ಅಭಿಯಾನ ಆರಂಭಿಸುತ್ತಲೇ ಬರಲಾಗುತ್ತಿತ್ತು. ಸ್ಯಾಂಡಲ್ವುಡ್ನ ಸ್ಟಾರ್ ಕಲಾವಿದರೂ ಈ ಅಭಿಯಾನದ ಭಾಗವಾಗುತ್ತಿದ್ದರು. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಸಹ ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ಈಗ ಕೊನೆಗೂ ಅದಕ್ಕೆ ಫಲ ಸಿಕ್ಕಿದೆ. ಅನಂತ್ ನಾಗ್ ಅವರ ಸಿನಿಮಾರಂಗದಲ್ಲಿನ ಸಾಧನೆ ಗುರುತಿಸಿದ ಕೇಂದ್ರ ಸರ್ಕಾರ ಈಗ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಮಾಡಿದೆ.
ತಮಿಳು ನಟ ಅಜಿತ್ ಕುಮಾರ್, ತೆಲುಗು ನಟ ನಂದಮೂರಿ ಬಾಲಕೃಷ್ಣ ಮತ್ತು ಕನ್ನಡ ನಟ ಅನಂತ್ ನಾಗ್ ಈ ಮೂರು ನಟರಿಗೂ ಪ್ರಶಸ್ತಿ ಪ್ರಕಟವಾಗಿದೆ. ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜನವರಿ 25ರಂದು ಗಣರಾಜ್ಯೋತ್ಸವದ ಮೊದಲು ಪ್ರಶಸ್ತಿ ಘೋಷಣೆಯಾಗಿದೆ.
