Weekend with Ramesh: ಕ್ಯಾನ್ಸರ್ನಿಂದ ಮಗನ ಕಳೆದುಕೊಂಡಿದ್ದ ಪ್ರಭುದೇವ; ವೀಕೆಂಡ್ ಟೆಂಟ್ನಲ್ಲಿ 2008ರ ಘಟನೆ ನೆನಪಿಸಿದ ಪ್ರಕಾಶ್ ರಾಜ್..
ನಟ ಶಿವರಾಜ್ಕುಮಾರ್, ಸುದೀಪ್, ಪ್ರಕಾಶ್ ರಾಜ್ ಸೇರಿ ಇನ್ನೂ ಹತ್ತು ಹಲವು ಸಿನಿಮಾ ಸ್ನೇಹಿತರು ಪ್ರಭುದೇವ ಬಗ್ಗೆ ಮಾತನಾಡಿದ್ದಾರೆ. ಹೀಗಿರುವಾಗಲೇ ಪ್ರಕಾಶ್ ರಾಜ್ ಆಡಿದ ಮಾತುಗಳು ಪ್ರಭುದೇವ ಕಣ್ಣಲ್ಲೂ ನೀರು ತರಿಸಿದೆ.
Weekend with Ramesh: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ವೀಕೆಂಡ್ ವಿಥ್ ರಮೇಶ್ ಸೀಸನ್ ಐದರ ಎರಡನೇ ಅತಿಥಿಯಾಗಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ತಮ್ಮ ಡಾನ್ಸ್ ಮೂವ್ ಮೂಲಕವೇ ಇಡೀ ದೇಶವೇ ಹುಚ್ಚೆದ್ದು ಕುಣಿಯುವಂತೆ ಮಾಡಿದ ಈ ನಟ, ನಿರ್ದೇಶಕ, ಕೋರಿಯೋಗ್ರಾಫರ್ನ ಜೀವನ ವೀಕೆಂಡ್ ಟೆಂಟ್ನಲ್ಲಿ ಅನಾವರಣವಾಗುತ್ತಿದೆ. ಬಾಲ್ಯ, ಊರು, ಸಿನಿಮಾ ಎಲ್ಲದರ ಪುಟವನ್ನು ತಿರುವಿ ನೋಡುತ್ತಿದ್ದಾರವರು.
ಈಗಾಗಲೇ ಶನಿವಾರ ಮೊದಲ ಏಪಿಸೋಡ್ ಪ್ರಸಾರವಾಗಿದೆ. ಆ ಮೊದಲ ಏಪಿಸೋಡ್ನಲ್ಲಿ ಅವರ ಬಾಲ್ಯದ ದಿನಗಳಿಂದ ಹಿಡಿದು ಸಿನಿಮಾಕ್ಕೆ ಎಂಟ್ರಿಯಾದ ದಿನಗಳನ್ನು ಪೋಣಿಸಲಾಗಿತ್ತು. ಮೈಸೂರು ಬಳಿಯ ದೂರ ಅನ್ನೋ ಊರ ಜತೆಗಿನ ನಂಟು, ಮೂವರು ಸಹೋದರರ ಕಿಟಲೆಗಳು, ಶಾಲಾ ದಿನಗಳು, ಹಳ್ಳಿಯ ಸ್ನೇಹಿತರು ಬಗ್ಗೆ ಪ್ರಭುದೇವ ಮೆಲುಕು ಹಾಕಿದ್ದರು. ಇದೀಗ ಇಂದಿನ ಸಂಚಿಕೆಯಲ್ಲಿ ಏನಿರಲಿದೆ ಎಂಬ ಬಗ್ಗೆ ಜೀ ಕನ್ನಡ ಹೊಸ ಪ್ರೋಮೋ ಬಿಡುಗಡೆ ಮಾಡಿದೆ.
2004ರ ಘಟನೆ ನೆನೆದ ಪ್ರಕಾಶ್ ರಾಜ್
ನಟ ಶಿವರಾಜ್ಕುಮಾರ್, ಸುದೀಪ್, ಪ್ರಕಾಶ್ ರಾಜ್ ಸೇರಿ ಇನ್ನೂ ಹತ್ತು ಹಲವು ಸಿನಿಮಾ ಸ್ನೇಹಿತರು ಪ್ರಭುದೇವ ಬಗ್ಗೆ ಮಾತನಾಡಿದ್ದಾರೆ. ಹೀಗಿರುವಾಗಲೇ ಪ್ರಕಾಶ್ ರಾಜ್ ಆಡಿದ ಮಾತುಗಳು ಪ್ರಭುದೇವ ಕಣ್ಣಲ್ಲೂ ನೀರು ತರಿಸಿದೆ. ಕೊಂಚ ಗದ್ಗದಿತರಾದ ಪ್ರಭುದೇವ, ಮಗನ ಕಳೆದುಕೊಂಡ ದಿನದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.
ಕ್ಯಾನ್ಸರ್ನಿಂದ 12 ವರ್ಷದ ಮಗ ವಿಶಾಲ್ ಸಾವು..
ಪ್ರಕಾಶ್ ರಾಜ್ ವೀಕೆಂಡ್ ವಿಥ್ ರಮೇಶ್ನಲ್ಲಿ ಪ್ರಭುದೇವ ಜತೆಗಿನ ಬಾಂಡಿಂಗ್ ಬಗ್ಗೆ ಮಾತನಾಡಿದ್ದಾರೆ. ಮುಂದುವರಿದು ಪ್ರಭುದೇವ ಅವರ ಬದುಕಿನಲ್ಲಿ ಘಟಿಸಿದ ಕಹಿ ಘಟನೆಯೊಂದನ್ನೂ ಹೇಳಿದ್ದಾರೆ. ಹೌದು, ಪ್ರಭುದೇವ ಅವರ ಮೂರು ಮಕ್ಕಳ ಪೈಕಿ ಹಿರಿ ಮಗ 12 ವರ್ಷದ ವಿಶಾಲ್ ಬ್ರೇನ್ ಟ್ಯೂಮರ್ನಿಂದ 2008ರಲ್ಲಿ ನಿಧನರಾಗಿದ್ದಾರೆ. ಆ ಘಟನೆ ನಡೆದ ವೇಳೆ ಪ್ರಕಾಶ್ ರಾಜ್ ಸಹ ಇವರ ಜತೆಗಿದ್ದರು. ಶೋನಲ್ಲಿ ಈ ಬಗ್ಗೆ ಏನಾದರೂ ಹೇಳುವುದು ಇದೆಯೇ ಎಂದು ರಮೇಶ್ ಅರವಿಂದ್ ಪ್ರಭುದೇವ್ ಅವರನ್ನು ಕೇಳುತ್ತಿದ್ದಂತೆ, ಮೂಕವಿಸ್ಮಿತರಾಗಿಯೇ, ಬೇಡ ಎಂದಿದ್ದಾರೆ.
ತಿಂಡಿ ವಿಚಾರದಲ್ಲಿ ಪ್ರಭುದೇವ ಮಾತು..
"ಚಿಕ್ಕವರಿದ್ದಾಗ.. ಚೆನ್ನಾಗಿ ತಿಂತಿದ್ವಿ.. ನಾವು 3 ಜನ, ಒಬ್ಬೊಬ್ಬರಿಗೂ 20 ಇಡ್ಲಿ, 15 ದೋಸೆ, 30 ಪೂರಿ ಬೇಕಿತ್ತು.. ಎಲ್ಲರೂ ಹಾಗೇ ತಿಂತಿದ್ವಿ. ನಾನು, ಪ್ರಸಾದ್, ರಾಜು, ನಾಗರಾಜು ಎಲ್ಲರಿಗೂ ಅಷ್ಟಷ್ಟು ಬೇಕೇ ಬೇಕು. ಇಡ್ಲಿ ಮಾಡುತ್ತಿದ್ದರೆ ಆ ಇಡೀ ಸೆಟ್ ನಂದೇ ಎಂದು ಬುಕ್ ಮಾಡುತ್ತಿದ್ದೆವು. ಅದಾದ ಮೇಲೆ ದೋಸೆ ಮಾಡ್ತಿದ್ರೆ, ಮೊದಲು ಕೂತವರಿಗೇ ದೋಸೆ.. ನಾನು 15 ದೋಸೆ ತಿಂದರೆ, ನಂದಾದ ಮೇಲೆ ಉಳಿದ ರಾಜು 16, ಪ್ರಸಾದ್ 17 ಹೀಗೆ ಎಲ್ಲರೂ ತಿಂತಾಯಿದ್ವಿ. ಚಿಕ್ಕಂದಿನಲ್ಲಿ ನಾವೆಲ್ಲ ತಿಂಡಿಪೋತರೆ" ಎಂದು ಪ್ರಭುದೇವ್ ಹೇಳಿಕೊಂಡಿದ್ದಾರೆ.
ಈಗ ಎರಡೇ ಚಮಚ ತಿಂತಿನಿ..
ಈಗಿನ ಆಹಾರ ಕ್ರಮ ಹೇಗಿರುತ್ತದೆ ಎಂದು ರಮೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಭುದೇವ, "ಈಗ ನಾನು ಪ್ರತಿ ದಿನ ಡಯಟ್ನಲ್ಲಿರುತ್ತೇನೆ. ಏನೂ ತಿನ್ನಬೇಕು ಏನು ತಿನ್ನಬಾರದು ಎಂದು ಲೆಕ್ಕ ಹಾಕಿರ್ತಿನಿ. ಸಂಜೆ 6.30ರ ನಂತರ ನಾನು ಏನನ್ನೂ ಮುಟ್ಟಲ್ಲ. ಅನ್ನ ಊಟ ಮಾಡುತ್ತೇನೆ. ಬಿಳಿ ಅನ್ನದ ಬದಲು ಬ್ರೌನ್ ರೈಸ್ ತಿಂತೀನಿ. ಅದೂ ಕೇವಲ ಎರಡೇ ಚಮಚ ಅಷ್ಟೇ" ಎಂದಿದ್ದಾರೆ. ನಿತ್ಯ ಒಂದು ಗಂಟೆ ವ್ಯಾಯಾಮ ತಪ್ಪಿಸುವುದಿಲ್ಲವಂತೆ ಪ್ರಭುದೇವ.