Doctor become Producer: ನರರೋಗ ತಜ್ಞರ ಸಿನಿಮಾ ಸಾಹಸ!; ‘ಪ್ರಜಾರಾಜ್ಯ’ಕ್ಕೆ ಸ್ಪೂರ್ತಿಯಾಯ್ತು ‘ಪ್ರಜಾಕೀಯ’ ಸ್ಥಾಪಕನ ಈ ಸಿನಿಮಾ
ಉತ್ಸಾಹಿ ತಂಡವೊಂದು ಸ್ಯಾಂಡಲ್ವುಡ್ಗೆ ಬಂದಿದೆ. ‘ಪ್ರಜಾರಾಜ್ಯ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು.
ಸ್ಯಾಂಡಲ್ವುಡ್ನಲ್ಲಿ ಹೊಸಬರ ಆಗಮನ ಹರಿವ ನೀರಿದ್ದಂತೆ. ಅಲ್ಲಿ ಹೊಸ ಕಲಾವಿದರ, ಹೊಸ ತಂತ್ರಜ್ಞರ ಆಗಮನ ಆಗುತ್ತಲೇ ಇರುತ್ತದೆ. ಇದೀಗ ಅಂಥದ್ದೊಂದು ಉತ್ಸಾಹಿ ತಂಡ ಸ್ಯಾಂಡಲ್ವುಡ್ಗೆ ಬಂದಿದೆ. ‘ಪ್ರಜಾರಾಜ್ಯ’ ಹೆಸರಿನ ಸಿನಿಮಾ ನಿರ್ಮಾಣ ಮಾಡಿದೆ. ಇತ್ತೀಚೆಗಷ್ಟೇ ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು.
ವೀರೇನ್ ಕ್ರಿಯೇಷನ್ಸ್ ಲಾಂಛನದಲ್ಲಿ ಡಾ. ವರದರಾಜು ಡಿ. ಎನ್ ನಿರ್ಮಿಸಿರುವ, ವಿಜಯ್ ಭಾರ್ಗವ್ ನಿರ್ದೇಶಿಸಿರುವ ಚಿತ್ರ ‘ಪ್ರಜಾರಾಜ್ಯ’. ಈ ಸಿನಿಮಾ ಬಗ್ಗೆ ಮಾತನಾಡಿದ ನಿರ್ಮಾಪಕ ಡಾ. ವರದರಾಜ್, "ನಾನು ವೈದ್ಯ. ನರರೋಗ ತಜ್ಞನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಮಾಜದ ಕೆಲವು ವಿಷಯಗಳು ನನ್ನನ್ನು ಚಿತ್ರ ಮಾಡಲು ಪ್ರೇರೇಪಿಸಿತು. ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಉತ್ತಮವಾದ ಶಿಕ್ಷಣ ಹಾಗೂ ಆರೋಗ್ಯ ಉಚಿತವಾಗಿ ಸಿಗಬೇಕು" ಈ ವಿಚಾರವನ್ನು ಸಿನಿಮಾದಲ್ಲಿ ಹೇಳಿದ್ದೇವೆ ಎಂದರು.
ಮಾತು ಮುಂದುವರಿಸಿದ ಅವರು, ಎಲ್ಲರಿಗೂ ಶಿಕ್ಷಣ ಹಾಗೂ ಆರೋಗ್ಯ ಉಚಿತವಾಗಿ ಸಿಗಬೇಕು. ಅದನ್ನು ಕೇಳುವ ಹಕ್ಕು ನಮಗಿದೆ. ಏಕೆಂದರೆ ನಾವು ಸರ್ಕಾರಕ್ಕೆ ತೆರಿಗೆ ಕಟ್ಟಿರುತ್ತೇವೆ. ಶಿಕ್ಷಣ ವ್ಯವಸ್ಥೆ, ಆರೋಗ್ಯ ಸಮಸ್ಯೆ ಹಾಗೂ ರೈತರ ಕಷ್ಟಕಾರ್ಪಣ್ಯಗಳ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉಪೇಂದ್ರ ಅವರ ‘ಉಪೇಂದ್ರ’ ಚಿತ್ರ ನನಗೆ ಸ್ಪೂರ್ತಿ. ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ ಎಂಬ ಅಡಿಬರಹ ಈ ಚಿತ್ರಕ್ಕಿದೆ" ಎಂದರು.
ನಿರ್ಮಾಪಕರೇ ಬರೆದ ಕಥೆ
"ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ಮಾಣ ಮಾಡಿದ್ದೇನೆ. ವಿಜಯ್ ಭಾರ್ಗವ್ ನಿರ್ದೇಶನ ಮಾಡಿದ್ದಾರೆ. ಹಿರಿಯ ನಟರಾದ ದೇವರಾಜ್, ನಾಗಾಭರಣ, ಸುಧಾರಾಣಿ, ಅಚ್ಯುತಕುಮಾರ್ ತಬಲಾನಾಣಿ, ಸುಧಾ ಬೆಳವಾಡಿ, ಸಂಪತ್ ಮೈತ್ರೇಯ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾನು ಕೂಡ ನಟಿಸಿದ್ದೇನೆ. ಇದು ನಾಯಕ ಪ್ರಧಾನ ಚಿತ್ರವಲ್ಲ. ಚಿತ್ರ ನೋಡಿದ ಪ್ರೇಕ್ಷಕನಿಗೆ ಈ ಚಿತ್ರ ಇಷ್ಟವಾಗಿ, ಆತನಿಗೆ ಹೌದು, ನಾವು ಈ ರೀತಿ ಬದಲಾಗಬೇಕು ಎನಿಸಿದರೆ ಆತನೇ ನಮ್ಮ ಚಿತ್ರದ ನಾಯಕ" ಎಂದು ನಿರ್ಮಾಪಕ ವರದರಾಜ್ ‘ಪ್ರಜಾರಾಜ್ಯ’ ಚಿತ್ರದ ಬಗ್ಗೆ ವಿವರ ನೀಡಿದರು.
ಅತಿಥಿಯಾಗಿ ಆಗಮಿಸಿದ ನಾಗಾಭರಣ ಸಹ ತಂಡದ ಬೆನ್ನು ತಟ್ಟಿದರು. "ಸರಿಸುಮಾರು 400 ಕ್ಕೂ ಅಧಿಕ ಚಿತ್ರಗಳು ವರ್ಷಕ್ಕೆ ಬಿಡುಗಡೆಯಾಗುತ್ತಿವೆ. ನೋಡುಗರಿಗೆ ಬೇಕಾದ ರೀತಿಯಲ್ಲಿ ಸಿನಿಮಾ ಮಾಡುವವರು ಹೆಚ್ಚಾಗಿದ್ದಾರೆ. ಆದರೆ ಸಾಮಾಜಿಕ ಕಳಕಳಿಯಿಟ್ಟುಕೊಂಡು ತಮಗೆ ಅನಿಸಿದ್ದನ್ನು ಸಿನಿಮಾ ಮಾಡಿರುವ ಡಾಕ್ಟರ್ ವರದರಾಜ್ ಅವರ ಧೈರ್ಯ ನಿಜಕ್ಕೂ ಮೆಚ್ಚುವಂತದು. ಅವರಿಗೆ ಹಾಗೂ ತಂಡಕ್ಕೆ ಶುಭವಾಗಲಿ" ಎಂದರು ನಾಗಾಭರಣ.
ಈ ಚಿತ್ರದಲ್ಲಿ ನನ್ನದು ಆಟೋ ಡ್ರೈವರ್ ಪಾತ್ರ. ನನಗೆ ತಪ್ಪು ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿ ಕೂಡ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ ಎಂದರು ನಟ ತಬಲನಾಣಿ.
"ನನ್ನ ಮೇಲೆ ಭರವಸೆಯಟ್ಟು ಇಂತಹ ಉತ್ತಮ ಕಥೆಯುಳ್ಳ ಚಿತ್ರ ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ನೋಡಿ ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ದೇಶಕ ವಿಜಯ್ ಭಾರ್ಗವ್. ಚಿತ್ರದಲ್ಲಿ ನಟಿಸಿರುವ ಕೆ.ಜಿ.ಎಫ್ ತಾತ ಎಂದೆ ಖ್ಯಾತರಾಗಿರುವ ಕೃಷ್ಣೋಜಿರಾವ್ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಗೂ ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಹಾಗೂ ನಿರ್ಮಾಣ ನಿರ್ವಾಹಕ ರವಿಶಂಕರ್ ಚಿತ್ರದ ಕುರಿತು ಮಾತನಾಡಿದರು. ಯೋಗರಾಜ್ ಭಟ್ ಹಾಗೂ ಡಾ.ವಿ. ನಾಗೇಂದ್ರ ಪ್ರಸಾದ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. "ಕೆ.ಜಿ.ಎಫ್" ಖ್ಯಾತಿಯ ಶ್ರೀಕಾಂತ್ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.