ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ; ಆರೋಪಪಟ್ಟಿಯಲ್ಲಿ ಇನ್ನೂ ನಾಲ್ವರ ಸೇರ್ಪಡೆ
2022ರಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇನ್ನೂ ನಾಲ್ವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ.

ಮಂಗಳೂರು: 2022ರಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇನ್ನೂ ನಾಲ್ವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಈ ಪಟ್ಟಿಯಲ್ಲಿರುವ ಮೂವರು ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳ ಪಟ್ಟಿ
ಎರಡನೇ ಪೂರಕ ಆರೋಪಪಟ್ಟಿಯಲ್ಲಿ, ಎನ್ಐಎ ಅಬ್ದುಲ್ ನಾಸಿರ್, ನೌಶಾದ್, ಅಬ್ದುಲ್ ರೆಹಮಾನ್ ಮತ್ತು ಅತೀಕ್ ಅಹ್ಮದ್ ವಿರುದ್ಧ ಐಪಿಸಿ ಮತ್ತು ಯುಎ (ಪಿ) ಕಾಯ್ದೆ, 1967 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಿದ್ದು, ಪ್ರಕರಣದಲ್ಲಿ ಒಟ್ಟು ಆರೋಪಪಟ್ಟಿ ಸಲ್ಲಿಸಲಾದ ಆರೋಪಿಗಳ ಸಂಖ್ಯೆ 27 ಕ್ಕೆ ತಲುಪಿದೆ. ಇದರಲ್ಲಿ ಆರು ಮಂದಿ ತಲೆಮರೆಸಿಕೊಂಡಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಆರೋಪಿಗಳ ಪಟ್ಟಿ ಸಲ್ಲಿಸಲಾದ ನಾಲ್ವರಲ್ಲಿ ಮೂವರು ಪರಾರಿಯಾಗಿದ್ದಾರೆ. ಅವರನ್ನು ಅಬ್ದುಲ್ ನಾಸಿರ್, ನೌಶಾದ್ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದೆ.
ಎನ್ಐಎ ತನಿಖೆಯ ಪ್ರಕಾರ ಈ ಮೂವರು ಪ್ರಮುಖ ಹಲ್ಲೆಕೋರರಿಗೆ ಕರ್ನಾಟಕದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಆಶ್ರಯ ನೀಡಿದ್ದರು ಎನ್ನಲಾಗಿದೆ. ಅಬ್ದುಲ್ ನಾಸಿರ್ ಮತ್ತು ಅಬ್ದುಲ್ ರೆಹಮಾನ್ ಆರೋಪಿ ತುಫೈಲ್ಗೆ ಬೆಂಗಳೂರಿನಲ್ಲಿ ಆಶ್ರಯ ನೀಡುವಲ್ಲಿ ಭಾಗಿಯಾಗಿದ್ದರು ಎಂದಿದ್ದಾರೆ.
ಪ್ರವೀಣ್ ನೆಟ್ಟಾರು ಮೇಲೆ ಮಾರಕ ದಾಳಿ ನಡೆದ ನಂತರ ಆರೋಪಿ ಅತೀಖ್ ಮತ್ತು ಮೃತ ಕಲಂದರ್ 2022-23ರಲ್ಲಿ ಚೆನ್ನೈನಲ್ಲಿ ಮುಸ್ತಫಾ ಪೈಚಾರ್ಗೆ ಸಂಚು ರೂಪಿಸಿ ಆಶ್ರಯ ನೀಡಿದ್ದರು. ಆರೋಪಿ ಅಬ್ದುಲ್ ರೆಹಮಾನ್ ವಿದೇಶಕ್ಕೆ ಪರಾರಿಯಾಗಿದ್ದ ಮತ್ತು ನಂತರ 2024ರಲ್ಲಿ ಮುಸ್ತಫಾ ಪೈಚಾರ್ಗೆ ಆಶ್ರಯ ನೀಡುವಲ್ಲಿ ಆರೋಪಿ ರಿಯಾಜ್ಗೆ ಮಾರ್ಗದರ್ಶನ ನೀಡಿದ್ದ ಎನ್ನಲಾಗಿದೆ.
2022ರ ಜುಲೈ 26ರಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನೆಟ್ಟಾರು ಅವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು.ರಾಜ್ಯ ಪೊಲೀಸರಿಂದ ತನಿಖೆಯನ್ನು ವಹಿಸಿಕೊಂಡಿದ್ದ ಎನ್ಐಎ, ಪ್ರಕರಣದ ತನಿಖೆಯ ಭಾಗವಾಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ.

ವಿಭಾಗ