80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ನೈಜ ಘಟನೆಯನ್ನೇ ʻಜಾವಾʼ ಸಿನಿಮಾ ಮೂಲಕ ಹೇಳೋಕೆ ಬರ್ತಿದ್ದಾರೆ ರಾಜವರ್ಧನ್‍
ಕನ್ನಡ ಸುದ್ದಿ  /  ಮನರಂಜನೆ  /  80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ನೈಜ ಘಟನೆಯನ್ನೇ ʻಜಾವಾʼ ಸಿನಿಮಾ ಮೂಲಕ ಹೇಳೋಕೆ ಬರ್ತಿದ್ದಾರೆ ರಾಜವರ್ಧನ್‍

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ನೈಜ ಘಟನೆಯನ್ನೇ ʻಜಾವಾʼ ಸಿನಿಮಾ ಮೂಲಕ ಹೇಳೋಕೆ ಬರ್ತಿದ್ದಾರೆ ರಾಜವರ್ಧನ್‍

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ಒಂದು ಘಟನೆ ಆಧರಿಸಿ ಜಾವಾ ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ. ಈ ಚಿತ್ರದಲ್ಲಿ ರಾಜವರ್ಧನ್‌ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದಾರೆ.

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ನೈಜ ಘಟನೆಯನ್ನೇ ʻಜಾವಾʼ ಸಿನಿಮಾ ಮೂಲಕ ಹೇಳೋಕೆ ಬರ್ತಿದ್ದಾರೆ ರಾಜವರ್ಧನ್‍
80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ನೈಜ ಘಟನೆಯನ್ನೇ ʻಜಾವಾʼ ಸಿನಿಮಾ ಮೂಲಕ ಹೇಳೋಕೆ ಬರ್ತಿದ್ದಾರೆ ರಾಜವರ್ಧನ್‍

ಚಕ್ರವರ್ತಿ ಚಂದ್ರಚೂಡ್‍ ನಿರ್ದೇಶನದ ಚಿತ್ರವೊಂದರಲ್ಲಿ ರಾಜವರ್ಧನ್‍ ನಟಿಸುತ್ತಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆಯೇ ಕೇಳಿಬಂದಿತ್ತು. ಸೋಮವಾರ ಮಧ್ಯಾಹ್ನ, ನಿರ್ಮಾಣ ಸಂಸ್ಥೆ ಮತ್ತು ಚಿತ್ರದ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಚಿತ್ರಕ್ಕೆ ‘ಜಾವ’ ಎಂಬ ಹೆಸರನ್ನು ಇಡಲಾಗಿದ್ದು, ಈ ಚಿತ್ರವನ್ನು ಬಾರ್ನ್ ಸ್ವಾಲೋ ಕಂಪನಿ ನಿರ್ಮಿಸುತ್ತಿದೆ.

ವಿಶೇಷವೆಂದರೆ, ಈ ಚಿತ್ರದ ಮೂಲಕ ರಾಜವರ್ಧನ್‍ ನಿರ್ಮಾಪಕರಾಗಿದ್ದಾರೆ. ಬಾರ್ನ್ ಸ್ವಾಲೋ ಕಂಪನಿ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ, ಅದರಡಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಕುರಿತು ಮಾತನಾಡುವ ಅವರು, ‘ನಟನೆ ಜೊತೆಗೆ ಬೇರೆ ಏನಾದರೂ ಮಾಡಬೇಕು ಎಂಬ ಆಸೆಯಿಂದ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದೇನೆ. ಸಮಾನಮನಸ್ಕ ಸ್ನೇಹಿತರೊಂದಿಗೆ ಸೇರಿ ಒಂದಿಷ್ಟು ಚಿತ್ರಗಳನ್ನು ನಿರ್ಮಿಸುವ ಆಸೆ ಇದೆ" ಎಂದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಡೆದ ನೈಜ ಕಥೆ

ಮುಂದುವರಿದು ಮಾತನಾಡುವ ಅವರು, "ಈಗಾಗಲೇ ನಮ್ಮ ಬಳಿ ನಾಲ್ಕು ಕಥೆಗಳಿವೆ. ಅದರಲ್ಲಿ ಇದೂ ಒಂದು. ಚಕ್ರವರ್ತಿ ಅವರ ಜೊತೆಗೆ ಐದಾರು ವರ್ಷಗಳ ಗೆಳೆತನ. ಎರಡು ವರ್ಷಗಳ ಹಿಂದೆ ಒಂದು ಕಾಡುವ ಕಥೆ ಹೇಳಿದ್ದರು. 80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆದ ಒಂದು ಘಟನೆ ಆಧರಿಸಿ ಈ ಚಿತ್ರ ಮಾಡುತ್ತಿದ್ದೇವೆ. ಈ ಘಟನೆ ಬಗ್ಗೆ ಚಿತ್ರರಂಗದಲ್ಲೇ ಎಷ್ಟೋ ಜನರಿಗೆ ಗೊತ್ತಿಲ್ಲ. ಹೊರಗಿನವರಿಗಂತೂ ತೀರಾ ಹೊಸದು’ ಎಂದರು.

80ರ ಕಾಲಘಟ್ಟದ ಕಥೆ

ಚಕ್ರವರ್ತಿ ಚಂದ್ರಚೂಡ್‍ ಈ ಚಿತ್ರದ ಮೂಲಕ ದೇವ ಚಕ್ರವರ್ತಿ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. ‘ರಾಜ್‍ಗೆ ಎರಡು ಕಥೆಯನ್ನು ಹೇಳಿದ್ದೆ. ಎರಡೂ ಕಥೆಗಳು ತಮಗೇ ಬೇಕು ಎಂದು ಹೇಳಿದರು. ಆ ಪೈಕಿ ಇದು ಮೊದಲು ಚಿತ್ರ ಮಾಡಬೇಕು ಎಂದು ತೀರ್ಮಾನವಾಯಿತು. ಈ ಚಿತ್ರದಲ್ಲಿ ನಾಯಕಿ ಪಾತ್ರ ವಿಭಿನ್ನವಾಗಿದೆ. ಆಕೆ ನಾಯಕಿಯೋ, ವಿಲನ್ನೋ ಎಂದು ತೀರ್ಮಾನಕ್ಕೆ ಬರುವುದು ಕಷ್ಟ. ಇಂಥ ಪಾತ್ರವನ್ನು ಯಾರು ಮಾಡುತ್ತಾರೆ ಎಂದು ಯೋಚಿಸಿದಾಗ ರಾಗಿಣಿ ನೆನಪಿಗೆ ಬಂದರು. ಅವರಿಗೆ ಕಥೆ ಹೇಳಿದಾಗ, ‘ನನ್ನಿಂದ ಸ್ಫೂರ್ತಿ ಪಡೆದು ಕಥೆ ಬರೆದಿದ್ದೀರಾ’ ಎಂದರು. Male Chauvanism ಕುರಿತಾದ ಕಥೆ ಇದೆ. ಇದು ಚಿತ್ರರಂಗದಲ್ಲಿ ನಡೆಯುವ ಹಳವಂಡದ ಕಥೆ. ಒಬ್ಬ ಸಾಮಾನ್ಯ ಯುವಕನ ದೃಷ್ಟಿಯಲ್ಲಿ ಹೇಳಲಾಗುತ್ತದೆ’ ಎಂದರು.

ಹೆಸರು ಬದಲಿಸಿಕೊಂಡ ಚಕ್ರವರ್ತಿ ಚಂದ್ರಚೂಡ

ಇನ್ನು, ಚಕ್ರವರ್ತಿ ಚಂದ್ರಚೂಡ್‍ ಆಗಿದ್ದವರು, ದೇವ ಚಕ್ರವರ್ತಿ ಎಂದು ಹೆಸರು ಬದಲಿಸಿಕೊಂಡಿದ್ದೇಕೆ ಎಂದು ವಿವರಿಸಿದ ಅವರು, ‘ಚಕ್ರವರ್ತಿ ಎನ್ನುವುದು ನನ್ನ ಉಪನಾಮ. ಚಂದ್ರಚೂಡ್‍ ಎನ್ನುವುದು ನನ್ನ ಪೆನ್‍ ನೇಮ್‍ ಆಗಿತ್ತು. ಅದರ ಮೇಲೆ 73 ಕೇಸ್‍ಗಳಿವೆ. 140 ದಿನಗಳ ಕಾಲ ಜೈಲಿನಲ್ಲಿದ್ದು ಬಂದಿದ್ದೇನೆ. ಪೊಲೀಸ್‍ ಸ್ಟೇಶನ್‍, ಕೋರ್ಟ್ ಎಂದು ಸಾಕಷ್ಟು ಸುತ್ತಾಡಿದ್ದೇನೆ. ಅದರಿಂದ ಹೊರಬೇಕು, ಹೆಸರು ಬದಲಾಯಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಆಗ ನನ್ನ ಜಾತಕ ನೋಡಿದೆ. ಅಲ್ಲಿ ಮೂಲ ಹೆಸರು ದೇವ ಎಂದು ಗೊತ್ತಾಯಿತು. ಮೂಲ ಹೆಸರಿಗೆ ಬರೋಣ ಎಂದು ದೇವ ಚಕ್ರವರ್ತಿ ಎಂದಿಟ್ಟುಕೊಂಡಿದ್ದೇನೆ. ಇನ್ನು ಮುಂದೆ ಇದೇ ಹೆಸರಿರುತ್ತದೆ ಮತ್ತು ಯಾವುದೇ ಕಾರಣಕ್ಕೂ ಹೆಸರು ಬದಲಾಯಿಸಿಕೊಳ್ಳೂವುದಿಲ್ಲ’ ಎಂದು ಆಣೆ ಮಾಡಿದರು.

ರಾಗಿಣಿ ದ್ವಿವೇದಿ ಇದೇ ಮೇ 24ಕ್ಕೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಅಂದು ಚಿತ್ರತಂಡದಿಂದ ಏನೋ ವಿಶೇಷವಾದದ್ದು ಬಿಡುಗಡೆಯಾಗಲಿದೆಯಂತೆ. ಕರೆಂಟ್‍ ಹೊಡೆಯುತ್ತೆ ಎನ್ನುತ್ತಾರೆ ಚಕ್ರವರ್ತಿ. ಈ ಚಿತ್ರದ ಚಿತ್ರೀಕರಣ ಜುಲೈನಲ್ಲಿ ಪ್ರಾರಂಭವಾಗಲಿದೆ. ಉಳಿದ ಕಲಾವಿದರು ಮತ್ತು ತಂತ್ರಜ್ಞರ ಕುರಿತು ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.