ಕನ್ನಡ ಸುದ್ದಿ  /  Entertainment  /  Ramya And Jaggesh Spotted Together At Kcc 3 Event

Ramya and Jaggesh: ಕೆಸಿಸಿ-3 ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಮ್ಯಾ-ಜಗ್ಗೇಶ್‌...'ನೀರ್‌ ದೋಸೆ' ಸಮಯದಲ್ಲಿ ಉಂಟಾಗಿದ್ದ ಮನಸ್ತಾಪ

ಜಗ್ಗೇಶ್‌ ಹಾಗೂ ರಮ್ಯಾ ಮಧ್ಯೆ ಜಗಳ ಆಗಿರುವ ವಿಚಾರ ಎಲ್ಲರಿಗೂ ಗೊತ್ತಾಗಿತ್ತು. ಇದೇ ವೇಳೆ ಜಗ್ಗೇಶ್‌ ಬಿಜೆಪಿಯಲ್ಲಿದ್ದರೆ ರಮ್ಯಾ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರೂ ಕಿತ್ತಾಡಿದ್ದರು. ಒಬ್ಬರಿಗೊಬ್ಬರು ಟಾಂಗ್‌ ಕೊಟ್ಟಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಕೂಡಾ ಪ್ರಸಾರವಾಗಿತ್ತು.

ಜಗ್ಗೇಶ್‌, ರಮ್ಯಾ
ಜಗ್ಗೇಶ್‌, ರಮ್ಯಾ

ಬಾಲಿವುಡ್‌ ಚಿತ್ರರಂಗದಲ್ಲಿ ನೆಪೋಟಿಸಂ ಸಮಸ್ಯೆ ಆದರೆ ದಕ್ಷಿಣದಲ್ಲಿ ಸ್ಟಾರ್‌ ವಾರ್‌ ಹೆಚ್ಚು, ಈಗಂತೂ ಸಿನಿಮಾ ಸ್ಟಾರ್‌ಗಳಿಗಿಂತ ಅವರ ಅಭಿಮಾನಿಗಳೇ ಕಣಕ್ಕೆ ಇಳಿದವರಂತೆ ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯುತ್ತಿದ್ದಾರೆ. ಕೆಲವೊಮ್ಮೆ ಸ್ಟಾರ್‌ ನಟ-ನಟಿಯರು ಸಣ್ಣ ಪುಟ್ಟ ವಿಚಾರಗಳಿಗೆ ಕಿತ್ತಾಡುತ್ತಾರೆ. ಇದ್ದಕ್ಕಿದ್ದಂತೆ ಒಂದಾಗುತ್ತಾರೆ. ಇದೀಗ ರಮ್ಯಾ ಹಾಗೂ ಜಗ್ಗೇಶ್‌ ವಿಚಾರದಲ್ಲಿ ಕೂಡಾ ಆಗಿರುವುದು ಕೂಡಾ ಇದೇ.

ಸ್ಯಾಂಡಲ್‌ವುಡ್‌ ಮೋಹಕತಾರೆ ಹಾಗೂ ನವರಸ ನಾಯಕ ಜಗ್ಗೇಶ್ ಮೊದಲು ಬಹಳ ಆತ್ಮೀಯರಾಗಿದ್ದರು. ಒಮ್ಮೆ ಪುನೀತ್‌ ರಾಜ್‌ಕುಮಾರ್‌ ಅವರು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಜಗ್ಗೇಶ್‌ ಕರೆ ಮಾಡಿ, ರಮ್ಯಾ ಅವರ ಕಾಲೆಳೆದ ವಿಡಿಯೋ ಈಗಲೂ ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತದೆ. ಆದರೆ 'ನೀರ್‌ ದೋಸೆ' ಸಿನಿಮಾ ಸಮಯದಲ್ಲಿ ಜಗ್ಗೇಶ್‌ ಹಾಗೂ ರಮ್ಯಾ ನಡುವೆ ಮನಸ್ತಾಪ ಉಂಟಾಗಿತ್ತು. ವಿಜಯ್‌ ಪ್ರಸಾದ್‌ ನಿರ್ದೇಶನದ ಈ ಚಿತ್ರ 2016ರಲ್ಲಿ ತೆರೆ ಕಂಡಿತ್ತು. ಈ ಚಿತ್ರಕ್ಕೆ ಮೊದಲು ರಮ್ಯಾ ಆಯ್ಕೆಯಾಗಿದ್ದರು. ಸ್ವಲ್ಪ ಭಾಗ ಚಿತ್ರೀಕರಣ ಕೂಡಾ ಜರುಗಿತ್ತು. ಆದರೆ ನಂತರ ರಮ್ಯಾ ಕಾರಣಾಂತರಗಳಿಂದ ಆ ಚಿತ್ರದಿಂದ ಹೊರ ಹೋಗಿದ್ದರು. ರಮ್ಯಾ ಜಾಗಕ್ಕೆ ಹರಿಪ್ರಿಯಾ ಬಂದಿದ್ದರು.

ಈ ಸಿನಿಮಾ ನಂತರ ಜಗ್ಗೇಶ್‌ ಹಾಗೂ ರಮ್ಯಾ ಮಧ್ಯೆ ಜಗಳ ಆಗಿರುವ ವಿಚಾರ ಎಲ್ಲರಿಗೂ ಗೊತ್ತಾಗಿತ್ತು. ಇದೇ ವೇಳೆ ಜಗ್ಗೇಶ್‌ ಬಿಜೆಪಿಯಲ್ಲಿದ್ದರೆ ರಮ್ಯಾ ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯರಾಗಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರೂ ಕಿತ್ತಾಡಿದ್ದರು. ಒಬ್ಬರಿಗೊಬ್ಬರು ಟಾಂಗ್‌ ಕೊಟ್ಟಿದ್ದರು. ಈ ಸುದ್ದಿ ಮಾಧ್ಯಮಗಳಲ್ಲಿ ಕೂಡಾ ಪ್ರಸಾರವಾಗಿತ್ತು. 'ನೀರ್‌ ದೋಸೆ' ಚಿತ್ರದಲ್ಲಿ ಕೂಡಾ ರಮ್ಯಾ ಬಗ್ಗೆ ಒಂದು ಡೈಲಾಗ್‌ ಕೂಡಾ ಇತ್ತು. ಇದೆಲ್ಲವನ್ನೂ ನೋಡಿ, ಜಗ್ಗೇಶ್‌ ಹಾಗೂ ರಮ್ಯಾ ಮತ್ತೆ ಒಂದಾಗುವುದೇ ಇಲ್ಲ ಎಂದುಕೊಂಡಿದ್ದವರಿಗೆ ಆಶ್ಚರ್ಯ ಉಂಟಾಗಿದೆ. ಗುರುವಾರ (ಜ.26) ನಡೆದ ಕೆಸಿಸಿ ಕಾರ್ಯಕ್ರಮದಲ್ಲಿ ರಮ್ಯಾ ಹಾಗೂ ಜಗ್ಗೇಶ್‌ ಒಟ್ಟಿಗೆ ಕಾಣಿಸಿಕೊಂಡು ಎಲ್ಲರಿಗೂ ಶಾಕ್‌ ನೀಡಿದ್ದಾರೆ.

ಕರ್ನಾಟಕ ಚಲನಚಿತ್ರ ಕಪ್‌ನ ಮೂರನೇ ಸೀಸನ್‌ ಫೆಬ್ರವರಿ 11 ಮತ್ತು 12 ರಂದು ಮೈಸೂರಿನಲ್ಲಿ ನಡೆಯುತ್ತಿದೆ. ಇದರ ಪೂರ್ವಭಾವಿಯಾಗಿ ಗುರುವಾರ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ನಟ ಸುದೀಪ್‌ , ಚಿತ್ರರಂಗದ ಇತರ ಗಣ್ಯರಿಗೆ ಆಹ್ವಾನ ನೀಡಿದ್ದರು. ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ರಾಜ್ಯ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ, ನಟ ಶಿವರಾಜ್‌ಕುಮಾರ್‌, ಸುದೀಪ್‌, ಜಗ್ಗೇಶ್‌, ಗಣೇಶ್‌, ಧ್ರುವ ಸರ್ಜಾ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಸುಧಾರಾಣಿ, ರಮ್ಯಾ ಹಾಗೂ ಇನ್ನಿತರರು ಆಗಮಿಸಿದ್ದರು. ಈ ವೇಳೆ ಜಗ್ಗೇಶ್‌ ಹಾಗೂ ರಮ್ಯಾ ಪಕ್ಕ ಪಕ್ಕ ಕುಳಿತದ್ದು, ಮಾತನಾಡಿದ್ದು, ನಗಾಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಅಪರೂಪದ ದೃಶ್ಯ ನೋಡಿ ಸಿನಿಪ್ರಿಯರು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಜಗ್ಗೇಶ್‌ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 'ತೋತಾಪುರಿ 2' ತೆರೆ ಕಂಡಿತ್ತು. 'ರಂಗನಾಯಕ' ಹಾಗೂ 'ರಾಘವೇಂದ್ರ ಸ್ಟೋರ್ಸ್‌' ಸಿನಿಮಾಗಳು ಶೂಟಿಂಗ್‌ ಹಂತದಲ್ಲಿವೆ. ಇನ್ನು ರಮ್ಯಾ ಬಹಳ ವರ್ಷಗಳ ನಂತರ ಚಿತ್ರರಂಗಕ್ಕೆ ಕಮ್‌ ಬ್ಯಾಕ್‌ ಮಾಡಿದ್ದಾರೆ. ನಿರ್ಮಾಪಕಿಯಾಗಿ ಪ್ರಮೋಷನ್‌ ಪಡೆದಿದ್ದಾರೆ. ಆಪಲ್‌ ಬಾಕ್ಸ್‌ ಸ್ಟುಡಿಯೋಸ್‌ ಎಂಬ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿರುವ ರಮ್ಯಾ ಆ ಪ್ರೊಡಕ್ಷನ್‌ ಹೌಸ್‌ ಮೂಲಕ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ನಿರ್ಮಾಣ ಮಾಡುತ್ತಿದ್ಧಾರೆ. ಜೊತೆಗೆ ಡಾಲಿ ಧನಂಜಯ್‌ ಜೊತೆಗೆ 'ಉತ್ತರಕಾಂಡ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ