Ramya New movie Title: ವಿಜಯದಶಮಿ ಶುಭ ದಿನದಂದು ತಾವು ನಿರ್ಮಿಸಿ ನಟಿಸುತ್ತಿರುವ ಚಿತ್ರದ ಟೈಟಲ್ ರಿವೀಲ್ ಮಾಡಿದ ರಮ್ಯಾ..!
ರಮ್ಯಾ ವಿಜಯದಶಮಿಯ ಶುಭ ದಿನದಂದು ತಮ್ಮ ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ರಮ್ಯಾ ತಮ್ಮ ಚಿತ್ರಕ್ಕೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಎಂಬ ಟೈಟಲ್ ಇಟ್ಟಿದ್ದು ಈ ಚಿತ್ರವನ್ನು ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ. ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡುತಿದ್ದಾರೆ.
ನಟಿ ರಮ್ಯಾ, ಗಣೇಶ ಹಬ್ಬದಂದು ತಾವು ಮತ್ತೆ ಚಿತ್ರರಂಗಕ್ಕೆ ಬರುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು. ಅಲ್ಲದೆ ಈ ಬಾರಿ ತಾವು ನಿರ್ಮಾಪಕಿಯಾಗಿ ಬರುತ್ತಿದ್ದು, ಆಪಲ್ ಬಾಕ್ಸ್ ಸ್ಟುಡಿಯೋಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದು ಈ ಸಂಸ್ಥೆ ಮೂಲಕ ಈಗಾಗಲೇ ಎರಡು ಸಿನಿಮಾಗಳು ತಯಾರಾಗುತ್ತಿವೆ ಎಂಬ ಖುಷಿಯ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.
ರಮ್ಯಾ ಸಿನಿಮಾ ಮಾಡುತ್ತಿರುವ ವಿಚಾರ ತಿಳಿದ ಅಭಿಮಾನಿಗಳು ಖುಷಿಯಾಗಿದ್ದರು. ಆ ಸಿನಿಮಾ ಯಾವುದು? ನಿರ್ದೇಶಕ ಯಾರು..? ನಟ-ನಟಿಯರು ಯಾರಿರಬಹುದು ಎಂದು ಕುತೂಹಲ ವ್ಯಕ್ತಪಡಿಸಿದ್ದರು. ಇದೀಗ ರಮ್ಯಾ ವಿಜಯದಶಮಿಯ ಶುಭ ದಿನದಂದು ತಮ್ಮ ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ರಮ್ಯಾ ತಮ್ಮ ಚಿತ್ರಕ್ಕೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಎಂಬ ಟೈಟಲ್ ಇಟ್ಟಿದ್ದು ಈ ಚಿತ್ರವನ್ನು ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್ ಬಿ. ಶೆಟ್ಟಿ ಕಥೆ ಬರೆದು ನಿರ್ದೇಶನ ಮಾಡುತಿದ್ದಾರೆ. ಚಿತ್ರದಲ್ಲಿ ರಮ್ಯಾ ಹಾಗೂ ರಾಜ್ ಬಿ. ಶೆಟ್ಟಿ ಜೊತೆಯಾಗಿ ನಟಿಸುತ್ತಿದ್ದಾರೆ.
'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಸದ್ಯಕ್ಕೆ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು ಶೀಘ್ರವೇ ಚಿತ್ರೀಕರಣ ಆರಂಭವಾಗುತ್ತಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದ 'ಗರುಡ ಗಮನ ವೃಷಭ ವಾಹನ' ಚಿತ್ರತಂಡಲ್ಲಿದ್ದ ತಂತ್ರಜ್ಞರೇ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರದಲ್ಲಿರುವುದು ವಿಶೇಷ. ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಹಾಗೂ ಛಾಯಾಗ್ರಾಹಕ ಪ್ರವೀಣ್ ಶ್ರಿಯಾನ್ ಕೂಡಾ ಚಿತ್ರತಂಡದಲ್ಲಿದ್ದಾರೆ.
'ರಾಜ್ ಬಿ ಶೆಟ್ಟಿ ಈ ಕಥೆಯನ್ನು ನನಗೆ ಹೇಳಿದಾಗ ನಿಜಕ್ಕೂ ನಾನು ಬಹಳ ಎಕ್ಸೈಟ್ ಆದೆ. ಆದ್ದರಿಂದ ಈ ಚಿತ್ರವನ್ನು ನಿರ್ಮಿಸಲು ಒಪ್ಪಿಕೊಂಡೆ' ಎಂದು ರಮ್ಯಾ ಹೇಳಿದ್ದಾರೆ. ಶೀಘ್ರದಲ್ಲೇ ಸಿನಿಮಾ ತಂಡ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ. ಆಪಲ್ ಬಾಕ್ಸ್ ಸ್ಟುಡಿಯೋಸ್ ಹಾಗೂ ಲೈಟರ್ ಬುದ್ಧ ಫಿಲ್ಮ್ಸ್ ಜೊತೆ ಸೇರಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರವನ್ನು ನಿರ್ಮಿಸುತ್ತಿವೆ.
'ಕಾಂತಾರ' ಚಿತ್ರ ನೋಡಿ ಮೆಚ್ಚಿದ್ದ ರಮ್ಯಾ
ರಮ್ಯಾ 'ಕಾಂತಾರ' ಸಿನಿಮಾ ನೋಡಿ ತಮ್ಮ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಂನಲ್ಲಿ ಸುದೀರ್ಘ ಬರಹವನ್ನೇ ಬರೆದುಕೊಂಡಿದ್ದರು. ''ಒಮ್ಮೊಮ್ಮೆ ಒಂದೊಂದು ಸಿನಿಮಾ ನೋಡಿದಾಗ ಮಾತುಗಳೇ ಹೊರಡುವುದಿಲ್ಲ. ಏಕೆಂದರೆ, ಆ ಚಿತ್ರ ನಿಮಗೆ ಅಂಥ ವರ್ಣಿಸಲು ಆಗದಂಥ ಅನುಭವ ನೀಡಿರುತ್ತದೆ. ಇದೀಗ ಆ ಸಾಲಿನಲ್ಲಿ ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ ಸೇರಿದೆ. ಇದನ್ನು ಕೇವಲ ಮಾತಿನಲ್ಲಿ ಅಥವಾ ಪದಗಳಿಂದ ಹೊಗಳಲು ಸಾಧ್ಯವಿಲ್ಲ. 'ಕಾಂತಾರ' ಸಿನಿಮಾ ಮೂಲಕ ನಾನು ಭೂತ ಕೋಲದ ಬಗ್ಗೆ ತುಂಬಾ ತಿಳಿದುಕೊಂಡೆ. ಅದರಲ್ಲೂ ಚಿತ್ರದ ಕೊನೆಯ 10 ನಿಮಿಷಗಳಲ್ಲಿ ರಿಷಬ್ ಅವರ ನಟನೆ ನೋಡಿದಾಗ ಅವರ ಮೈ ಮೇಲೆ ದೈವ ಆವಾಹನೆಯಾಗಿದ್ದಿರಬಹುದು ಎಂದುಕೊಂಡೆ''.
'ರಿಷಬ್ ಶೆಟ್ಟಿ ಅವರ ನಟನೆ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಈ ಸಿನಿಮಾ ಮಾಡಿ ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದೀರಿ. ಆ ಕಾರಣಕ್ಕೆ ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಸಪ್ತಮಿ ಗೌಡ ನೀವು ಅದ್ಭುತವಾದ ಸ್ಕ್ರೀನ್ ಪ್ರೆಸೆನ್ಸ್ ಹೊಂದಿದ್ದೀರಿ. ನಿಮ್ಮ ಎರಡನೇ ಚಿತ್ರದಲ್ಲಿಯೇ ಈ ರೀತಿಯಲ್ಲಿ ನಟಿಸಿದ್ದು, ನನಗೇ ಆಶ್ಚರ್ಯ ಉಂಟು ಮಾಡಿದೆ. ಅರವಿಂದ್ ನಿಮ್ಮ ಅದ್ಭುತ ದೃಶ್ಯಗಳು ನಮ್ಮನ್ನು 'ಕಾಂತಾರ' ಲೋಕದಲ್ಲಿ ಮುಳುಗಿಸಿವೆ" ಎಂದು ರಮ್ಯಾ, ಸಿನಿಮಾ ಹಾಗೂ ಪಾತ್ರಧಾರಿಗಳನ್ನು ಹೊಗಳಿದ್ದರು.