Ramyakrishnan Divorce News: ಪತಿಯಿಂದ ದೂರಾದ್ರಾ ಶಿವಗಾಮಿ...ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದ ಕೃಷ್ಣವಂಶಿ...!
ರಮ್ಯಕೃಷ್ಣನ್ ಬಗ್ಗೆ ಕೃಷ್ಣವಂಶಿ ಹೀಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವುದು ಅಭಿಮಾನಿಗಳ ತಲೆಗೆ ಹುಳು ಬಿಟ್ಟಂತಾಗಿದೆ. ದೂರ ಆಗಿಲ್ಲ ಎಂದ ಮೇಲೆ ನೀವು ಹೈದರಾಬಾದ್ನಲ್ಲಿ ಆಕೆ ಚೆನ್ನೈನಲ್ಲಿ ಇರೋದು ಏಕೆ...? ಎಂದು ಪ್ರಶ್ನಿಸುತ್ತಿದ್ದಾರೆ.
ಚಿತ್ರರಂಗದಲ್ಲಿ ಇಂದು ಮದುವೆ ನಾಳೆ ಡೈವೋರ್ಸ್ ಸಾಮಾನ್ಯ ಎಂಬಂತಾಗಿದೆ. ನಾವು ಜೋಡಿ ಹಕ್ಕಿಗಳು, ಒಬ್ಬರಿಗೊಬ್ಬರು ಬಿಟ್ಟು ಇರುವುದಿಲ್ಲ ಎಂದು ಹೇಳಿಕೊಂಡು ಓಡಾಡವವರೇ ಡೈವೋರ್ಸ್ ಘೋಷಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನಿಸಿಬಿಟ್ಟಿದೆ. ಇದೀಗ ಬಾಹುಬಲಿ ಶಿವಗಾಮಿ ಖ್ಯಾತಿಯ ರಮ್ಯಕೃಷ್ಣನ್ ಕೂಡಾ ಪತಿಯಿಂದ ದೂರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ರಮ್ಯಕೃಷ್ಣನ್ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು, ಹಿಂದಿ ಸಿನಿಮಾಗಳಲ್ಲಿ ಕೂಡಾ ಅವರು ನಟಿಸಿದ್ದಾರೆ. ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಅವರು ನಿರ್ದೇಶಕ ಕೃಷ್ಣವಂಶಿಯನ್ನು ಮದುವೆಯಾದರು. ಕೃಷ್ಣವಂಶಿ ಕೂಡಾ, ''ನನಗೆ ಮದುವೆಯಾಗುವ ಯೋಚನೆ ಇರಲಿಲ್ಲ. ಆದರೆ ರಮ್ಯಕೃಷ್ಣನ್ ಗುಣ ನೋಡಿ ಆಕೆಯನ್ನು ಮದುವೆಯಾಗಬೇಕು ಎನಿಸಿತು'' ಎಂದು ಹೇಳಿಕೊಂಡಿದ್ದರು. ಈ ದಂಪತಿಗೆ ಒಬ್ಬ ಮಗ ಇದ್ದಾನೆ. ಆದರೆ ಇದೀಗ ಈ ದಂಪತಿ ದೂರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದೇ ವಿಚಾರವಾಗಿ ಕೃಷ್ಣವಂಶಿ ಪ್ರತಿಕ್ರಿಯಿಸಿದ್ದಾರೆ.
ಸದ್ಯಕ್ಕೆ ಕ್ರಿಯೇಟಿವ್ ಡೈರೆಕ್ಟರ್ ಕೃಷ್ಣವಂಶಿ 'ರಂಗಮಾರ್ತಾಂಡ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸುಮಾರು ನಾಲ್ಕು ವರ್ಷಗಳ ಗ್ಯಾಪ್ ನಂತರ ಕೃಷ್ಣವಂಶಿ ವಿಭಿನ್ನ ಪರಿಕಲ್ಪನೆಯೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಸರಣಿ ಸಂದರ್ಶನದಲ್ಲಿ ಭಾಗವಹಿಸಿದ್ದ ಅವರು ಸಿನಿಮಾಗೆ ಸಂಬಂಧಿಸಿದ ವಿಶೇಷತೆಗಳ ಜೊತೆಗೆ ದಾಂಪತ್ಯ ಜೀವನದ ಕುರಿತಾದ ವದಂತಿಗಳಿಗೂ ಪ್ರತಿಕ್ರಿಯಿಸಿದರು. ಕಳೆದ ಕೆಲವು ವರ್ಷಗಳಿಂದ ಕೃಷ್ಣವಂಶಿ-ನಟಿ ರಮ್ಯಾ ಕೃಷ್ಣನ್ ವಿಚ್ಛೇದನ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
''ಜವಾಬ್ದಾರಿಯ ಭಯದಿಂದ ನಾನು ಮದುವೆಯಾಗದಿರಲು ನಿರ್ಧರಿಸಿದ್ದೆ. ಆದರೆ ಕೊನೆಗೆ ರಮ್ಯಾ ಕೃಷ್ಣನ್ ಅವರನ್ನು ಮದುವೆಯಾದೆ. ಮದುವೆ ನಂತರ, ನನ್ನ ಜೀವನದಲ್ಲಿ ಹೆಚ್ಚು ಬದಲಾಗಲಿಲ್ಲ. ರಮ್ಯಕೃಷ್ಣ ನನ್ನನ್ನು ನನ್ನ ಪಾಡಿಗೆ ಬಿಟ್ಟರು. ಡೈವೋರ್ಸ್ ವಿಚಾರಕ್ಕೆ ಬರುವುದಾದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾವು ಸೆಲಬ್ರಿಟಿಗಳು, ನಮ್ಮ ಬಗ್ಗೆ ಇಂತಹ ಗಾಸಿಪ್ಗಳು ಆಗಿಂದಾಗ್ಗೆ ಬಂದು ಹೋಗುವುದು ಸಾಮಾನ್ಯ, ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ರಮ್ಯಕೃಷ್ಣನ್ ಒಟ್ಟಿಗೆ ಇಲ್ಲ ನಿಜ, ಹಾಗಂತ ನಾವೂ ದೂರಾಗಿದ್ದೇವೆ ಎಂದು ಅರ್ಥವಲ್ಲ. ನಾನು ತಾಯಿಯೊಂದಿಗೆ ಹೈದರಾಬಾದ್ನಲ್ಲಿದ್ದೇನೆ, ರಮ್ಯಕೃಷ್ಣನ್ ಅವರ ಹೆತ್ತವರೊಂದಿಗೆ ಚೆನ್ನೈನಲ್ಲಿದ್ಧಾರೆ. ಮಗ ರಿತ್ವಿಕ್ ಕೂಡಾ ಅಮ್ಮನೊಂದಿಗೆ ಇದ್ಧಾನೆ. ಆಕೆ ಬಿಡುವಾದಾಲೆಲ್ಲಾ ಇಲ್ಲಿಗೆ ಬರುತ್ತಾಳೆ, ನನಗೆ ಸಮಯ ದೊರೆತಾಗಲೆಲ್ಲಾ ಅಲ್ಲಿಗೆ ಹೋಗುತ್ತೇನೆ. ಆಗ್ಗಾಗ್ಗೆ ಫೋನಿನಲ್ಲಿ ಮಾತನಾಡುತ್ತೇವೆ'' ಎಂದು ಕೃಷ್ಣವಂಶಿ ಹೇಳಿದ್ದಾರೆ. ಕೃಷ್ಣವಂಶಿ ಹೀಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವುದು ಅಭಿಮಾನಿಗಳ ತಲೆಗೆ ಹುಳು ಬಿಟ್ಟಂತಾಗಿದೆ. ದೂರ ಆಗಿಲ್ಲ ಎಂದ ಮೇಲೆ ನೀವು ಹೈದರಾಬಾದ್ನಲ್ಲಿ ಆಕೆ ಚೆನ್ನೈನಲ್ಲಿ ಇರೋದು ಏಕೆ...? ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನು ಕೃಷ್ಣವಂಶಿ ನಿರ್ದೇಶಿಸುತ್ತಿರುವ 'ರಂಗಮಾರ್ತಾಂಡ' ಚಿತ್ರದ ಬಗ್ಗೆ ಹೇಳುವುದಾದರೆ ಈ ಚಿತ್ರವನ್ನು ಅಭಿಷೇಕ್ ಹಾಗೂ ಮಧು ಕಲಿಪು ಎಂಬುವರು ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಪ್ರಕಾಶ್ ರಾಜ್ ಹಾಗೂ ರಮ್ಯಕೃಷ್ಣನ್ ಕೂಡಾ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರಕ್ಕೆ ಇಳಯರಾಜ ಸಂಗೀತ ನೀಡುತ್ತಿದ್ದಾರೆ. ಇದು ಮರಾಠಿಯ 'ನಟಸಾಮ್ರಾಟ್' ಚಿತ್ರದ ರೀಮೇಕ್ ಆಗಿದ್ದು ಇದೇ ವರ್ಷ ಡಿಸೆಂಬರ್ನಲ್ಲಿ ಚಿತ್ರ ತೆರೆ ಕಾಣಲಿದೆ.