ಕನ್ನಡ ಸುದ್ದಿ  /  Entertainment  /  Rishab Shetty Post Goes Viral Regarding His Movie Initial Days

Rishab Shetty Old memories: ಒಂದು ಶೋಗಾಗಿ ಅವರಿವರ ಕೈ ಕಾಲು ಹಿಡಿದಿದ್ದೆ....ರಿಷಬ್‌ ಶೆಟ್ಟಿ ಹಳೆಯ ಪೋಸ್ಟ್‌ ವೈರಲ್‌

''ಅಂತೂ ಇಂತೂ ಅವರಿವರ ಕೈ ಕಾಲು ಹಿಡಿದು ಮಂಗಳೂರಿನ ಬಿಗ್‌ ಸಿನಿಮಾಸ್‌ನಲ್ಲಿ ಸಂಜೆ 7 ಗಂಟೆ ಶೋ ಸಿಕ್ತು. ನೋಡಲು ಇಚ್ಛಿಸುವವರು ನಾಳೆಗೆ ಟಿಕೆಟ್‌ ಬುಕ್‌ ಮಾಡಿ'' ಎಂದು ರಿಷಬ್‌ ಶೆಟ್ಟಿ 'ರಿಕ್ಕಿ' ಚಿತ್ರದ ಕುರಿತು ಕೆಲವು ವರ್ಷಗಳ ಹಿಂದೆ ಮಾಡಿದ್ದ ಪೋಸ್ಟನ್ನು ಟ್ವಿಟ್ಟರ್‌ ಯೂಸರ್‌ವೊಬ್ಬರು ಹಂಚಿಕೊಂಡಿದ್ದಾರೆ. ಹಳೆಯ ನೆನಪಿಗಾಗಿ ರಿಷಬ್‌ ಶೆಟ್ಟಿ ತಮ್ಮ ಅಭಿಮಾನಿಗೆ ಧನ್ಯವಾದ ಅರ್ಪಿಸಿದ್ದಾರೆ.

ನಟ, ನಿರ್ದೇಶಕ, ನಿರ್ಮಾಪಕ ರಿಷಬ್‌ ಶೆಟ್ಟಿ
ನಟ, ನಿರ್ದೇಶಕ, ನಿರ್ಮಾಪಕ ರಿಷಬ್‌ ಶೆಟ್ಟಿ (PC: Rishab Shetty)

ಬೆಂಗಳೂರಿನಲ್ಲಿ ಸೂರು ಇಲ್ಲದೆ, ಸರಿಯಾದ ಊಟ ಇಲ್ಲದೆ ಕಷ್ಟ ಪಟ್ಟಿರುವ ಬಹಳಷ್ಟು ನಟರು ಇಂದು ಸ್ಟಾರ್‌ ನಟರಾಗಿ ಹೆಸರು ಮಾಡಿದ್ದಾರೆ. ಒಂದು ಕಾಲದಲ್ಲಿ ಕೆಲವು ನಟರ ಸಿನಿಮಾ ಪ್ರದರ್ಶನಕ್ಕೆ ಅವಕಾಶವೇ ಇಲ್ಲದೆ, ಈಗ ಅದೇ ನಟರ ಸಿನಿಮಾ ಹೌಸ್‌ಫುಲ್‌ ಪ್ರದರ್ಶನವಾಗುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಅಂತಹ ನಟರಲ್ಲಿ ರಿಷಭ್‌ ಶೆಟ್ಟಿ ಕೂಡಾ ಒಬ್ಬರು.

ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಸಿನಿಮಾ ಕಳೆದ ಶುಕ್ರವಾರ ತೆರೆ ಕಂಡಿದೆ. ಚಿತ್ರಕ್ಕೆ ಎಲ್ಲಿ ಹುಡುಕಿದರೂ ಒಂದೇ ಒಂದು ನೆಗೆಟಿವ್‌ ಕಮೆಂಟ್‌ ಕೂಡಾ ಸಿಗುತ್ತಿಲ್ಲ. ಏಕೆಂದರೆ ಸಿನಿಮಾ ಎಲ್ಲರಿಗೂ ಬಹಳ ಮೆಚ್ಚುಗೆಯಾಗಿದೆ. ಜನಸಾಮಾನ್ಯರಿಂದ ಹಿಡಿದು, ಸೆಲಬ್ರಿಟಿಗಳವರೆಗೂ 'ಕಾಂತಾರ' ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಾಲಿವುಡ್‌ ಸ್ಟಾರ್‌ ನಟ ಪ್ರಭಾಸ್‌ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಬರೆದುಕೊಂಡಿರುವ ಅವರು ಕ್ಲೈಮಾಕ್ಸ್‌ ಬಹಳ ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದರು.

ರಿಷಬ್‌ ಶೆಟ್ಟಿ 2013 ರಲ್ಲಿ 'ಅಟ್ಟಹಾಸ' ಚಿತ್ರದಲ್ಲಿ ನಟನಾಗಿ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ಬಂದರು. 2016 ರಲ್ಲಿ 'ರಿಕ್ಕಿ' ಚಿತ್ರದ ಮೂಲಕ ನಿರ್ದೇಶಕನಾಗಿ, 2018 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ-ಕಾಸರಗೋಡು ಚಿತ್ರದ ಮೂಲಕ ನಿರ್ಮಾಪಕನಾಗಿ ಗುರುತಿಸಿಕೊಂಡರು. ಆದರೆ ಆರಂಭದ ದಿನಗಳಲ್ಲಿ ತಮ್ಮ ಸಿನಿಮಾಗೆ ಒಂದೇ ಒಂದು ಶೋ ನೀಡಿ ಎಂದು ರಿಷಬ್‌ ಶೆಟ್ಟಿ ಅವರಿವರನ್ನು ಮನವಿ ಮಾಡಿಕೊಂಡಿದ್ದರಂತೆ. ಆದರೆ ಈಗ ಅದೇ ಮಲ್ಟಿಪ್ಲೆಕ್ಸ್‌ನಲ್ಲಿ ಅವರು ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಸಿನಿಮಾ ಎಲ್ಲಾ ಶೋಗಳಲ್ಲೂ ಹೌಸ್‌ಫುಲ್‌ ಪ್ರದರ್ಶನವಾಗುತ್ತಿದೆ. ರಿಷಬ್‌ ಶೆಟ್ಟಿಯವರ ಹಳೆಯ ಪೋಸ್ಟ್‌ವೊಂದು ಸದ್ಯಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಅಂತೂ ಇಂತೂ ಅವರಿವರ ಕೈ ಕಾಲು ಹಿಡಿದು ಮಂಗಳೂರಿನ ಬಿಗ್‌ ಸಿನಿಮಾಸ್‌ನಲ್ಲಿ ಸಂಜೆ 7 ಗಂಟೆ ಶೋ ಸಿಕ್ತು. ನೋಡಲು ಇಚ್ಛಿಸುವವರು ನಾಳೆಗೆ ಟಿಕೆಟ್‌ ಬುಕ್‌ ಮಾಡಿ ಎಂದು ರಿಷಬ್‌ ಶೆಟ್ಟಿ 'ರಿಕ್ಕಿ' ಚಿತ್ರದ ಕುರಿತು ಕೆಲವು ವರ್ಷಗಳ ಹಿಂದೆ ಮಾಡಿದ್ದ ಪೋಸ್ಟನ್ನು ಪ್ರಶಾಂತ್‌ ಎಮ್‌. ಉಬರ್‌ ಎಂಬ ಟ್ವಿಟ್ಟರ್‌ ಯೂಸರ್‌ ಹಂಚಿಕೊಂಡು, ''7 ವರ್ಷಗಳ ಹಿಂದೆ ಮಲ್ಟಿಫ್ಲೆಕ್ಸ್ ನಲ್ಲಿ ಆತನ ಸಿನಿಮಾ ಪ್ರದರ್ಶನಕ್ಕೆ ಅವಕಾಶನೇ ಸಿಗ್ತಾ ಇರಲಿಲ್ಲ. ಇಂದು ಅದೇ ಮಲ್ಟಿಫ್ಲೆಕ್ಸ್‌ನಲ್ಲಿ ಶೋ ಗಳ ಸಂಖ್ಯೆ ಹೆಚ್ಚು ಮಾಡಿದ್ರೂ ಜನರಿಗೆ ಟಿಕೆಟ್‌ ಸಿಗ್ತಾ ಇಲ್ಲ! ಕಾಲಾಯ ತಸ್ಮೈ ನಮಃ'' ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್‌ಗೆ ರೀಟ್ವೀಟ್‌ ಮಾಡಿರುವ ರಿಷಬ್‌ ಶೆಟ್ಟಿ ಅದೊಂದು ಸುಂದರ ನೆನಪು, ಅದನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು ಎಂದು ಆ ಅಭಿಮಾನಿಗೆ ಧನ್ಯವಾದ ಅರ್ಪಿಸಿದ್ದಾರೆ.

ದಕ್ಷಿಣ ಕನ್ನಡದ ಸಂಸ್ಕೃತಿ ಮತ್ತು ಅಲ್ಲಿನ ಸೊಗಡನ್ನು ಸುಂದರವಾಗಿ ಕಟ್ಟಿಕೊಟ್ಟಿರುವ 'ಕಾಂತಾರ' ಸಿನಿಮಾ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳು ಮತ್ತು ವಿದೇಶಗಳಲ್ಲಿಯೂ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರ ದಂಡಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಚಿತ್ರವನ್ನು ರಾಜ್ಯದಲ್ಲಿ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ವಿತರಿಸಿದೆ.

IPL_Entry_Point