ಸಾಹಸ ಸಿಂಹನ ಪ್ರೇರಣೆಯ ಕಥೆಗಳಿಗೆ ದೃಶ್ಯ ರೂಪ; ‘ಸಿಂಹದ ಹಾದಿʼಯಲ್ಲಿ ಡಾ ವಿಷ್ಣುವರ್ಧನ್ ನೆನಪು
ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತ ಅವರ ಅಭಿಮಾನಿಗಳು ಸಿಂಹದ ಹಾದಿ ಎಂಬ ಟೆಲಿಫಿಲಂ ಮೂಲಕ ಅವರನ್ನು ಮತ್ತೆ ತೆರೆಮೇಲೆ ನೆನಪು ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ. ಜಿಕೆ ಸಿನಿ ಫೈಲ್ಸ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಜಿ. ಕೆ. ಶಶಿರಾಜ್ ದೊರೈ ಸಿಂಹದ ಹಾದಿ ಎಂಬ ಕಿರುಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ.
Vishnuvardhan Death Anniversary: ಡಿಸೆಂಬರ್ 30 ಬಂತೆಂದರೆ, ವಿಷ್ಣುವರ್ಧನ್ ಮತ್ತೆ ಕಣ್ಣಮುಂದೆ ಬರುತ್ತಾರೆ. ಕನ್ನಡ ಚಿತ್ರರಂಗದ ʼಸಾಹಸ ಸಿಂಹʼ ಖ್ಯಾತಿಯ ನಟ ವಿಷ್ಣುವರ್ಧನ್ ಅಂದು ಅಗಲಿದ ದಿನ. 2009ರ ಡಿಸೆಂಬರ್ 30ರ ಮುಂಜಾನೆ ಬಂದ ಸುದ್ದಿ, ಇಡೀ ಚಿತ್ರೋದ್ಯಮಕ್ಕೆ ಅರಗಿಸಿಕೊಳ್ಳಲಾಗದಂತಹ ನೋವನ್ನು ನೀಡಿತು. ಇದೀಗ 2024 ಡಿಸೆಂಬರ್ 30ಕ್ಕೆ ವಿಷ್ಣುವರ್ಧನ್ ಇಲ್ಲದೇ 15 ವರ್ಷ ಸಂದಿದೆ. ಆದರೆ ವಿಷ್ಣುವರ್ಧನ್ ಕಾಲವಾಗಿ ಹದಿನೈದು ವರ್ಷಗಳಾದರೂ ಅವರ ಅಭಿಮಾನಿಗಳು ಅವರನ್ನು ಎಂದಿಗೂ ಮರೆತಿಲ್ಲ. ವಿಷ್ಣುವರ್ಧನ್ ಅಭಿನಯಿಸಿದ ಸಿನಿಮಾಗಳು, ವಿಭಿನ್ನ ಪಾತ್ರಗಳು ಮತ್ತು ಸಮಾಜಮುಖೀ ಕಾರ್ಯಗಳ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ಸಾಹಸ ಸಿಂಹನನ್ನು ಸದಾ ಜೀವಂತವಾಗಿರಿಸುವ ಕೆಲಸ ಮಾಡುತ್ತ ಬಂದಿದ್ದಾರೆ.
ಶಶಿರಾಜ್ ದೊರೆ ನಿರ್ದೇಶನದ ಟೆಲಿಫಿಲಂ
ಇದೀಗ ವಿಷ್ಣುವರ್ಧನ್ ಅವರ 15ನೇ ವರ್ಷದ ಪುಣ್ಯ ಸ್ಮರಣೆ ಸಂದರ್ಭದಲ್ಲಿಯೇ ಅವರ ಅಭಿಮಾನಿಗಳು ʼಸಿಂಹದ ಹಾದಿʼ ಎಂಬ ಟೆಲಿಫಿಲಂ ಮೂಲಕ ಅವರನ್ನು ಮತ್ತೆ ತೆರೆಮೇಲೆ ನೆನಪು ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ. ಜಿಕೆ ಸಿನಿ ಫೈಲ್ಸ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಜಿ. ಕೆ. ಶಶಿರಾಜ್ ದೊರೈ ಸಿಂಹದ ಹಾದಿ ಎಂಬ ಟೆಲಿಚಿತ್ರವನ್ನು ನಿರ್ಮಿಸಿ ತೆರೆಗೆ ತರುತ್ತಿದ್ದಾರೆ. ಬಾಲ್ಯದಿಂದಲೂ ವಿಷ್ಣುವರ್ಧನ್ ಅಭಿಮಾನಿಯಾಗಿರುವ, ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಅಭಿನಯ ಮತ್ತು ನಿರ್ದೇಶನ ವಿಭಾಗದಲ್ಲಿ ತೊಡಗಿಸಿಕೊಂಡಿರುವ ಶಶಿರಾಜ್ ದೊರೆ, ವಿಷ್ಣುವರ್ಧನ್ ಅವರ ಅಭಿಮಾನದಿಂದ ಸಿಂಹದ ಹಾದಿ ಟೆಲಿಚಿತ್ರವನ್ನು ನಿರ್ಮಿಸಿದ್ದಾರೆ.
ಕಿರುಚಿತ್ರದ ಬಗ್ಗೆ ನಿರ್ದೇಶಕರ ಮಾತು
ಇದೇ ವೇಳೆ ಮಾತನಾಡಿದ ಸಿಂಹದ ಹಾದಿ ಟೆಲಿಚಿತ್ರದ ನಿರ್ದೇಶಕ ಶಶಿರಾಜ್ ದೊರೆ, ವಿಷ್ಣುವರ್ಧನ್ ಅವರನ್ನು ಆದರ್ಶವಾಗಿಟ್ಟುಕೊಂಡು ಬದುಕನ್ನು ಕಟ್ಟಿಕೊಂಡ ನಾಲ್ಕು ಜನರ ಜೀವನವನ್ನು ಆಧರಿಸಿ, ಈ ಟೆಲಿಚಿತ್ರವನ್ನು ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಅವರ ಚಿತ್ರಗಳು, ಅವರು ನಿರ್ವಹಿಸಿರುವ ಪಾತ್ರಗಳು, ಅವರ ಸಾಮಾಜಿಕ ಕಾರ್ಯಗಳು ಎಲ್ಲವನ್ನೂ ಆಧರಿಸಿ ಈ ಟೆಲಿಚಿತ್ರವನ್ನು ಮಾಡಿದ್ದೇವೆ. ವಿಷ್ಣುವರ್ಧನ್ ಅಭಿಮಾನಿಗಳು ಈ ಕಾರ್ಯದಲ್ಲಿ ನಮಗೆ ಬೆನ್ನೆಲುಬಾಗಿ ನಿಂತಿದ್ದಾರೆ. ವಿಷ್ಣುವರ್ಧನ್ ಅವರ ಜೀವನ-ಸಾಧನೆಯನ್ನು ಮುಂದಿನ ಜನರಿಗೆ ತೋರಿಸುವ ಸಣ್ಣ ಕೆಲಸ ಈ ಟೆಲಿಫಿಲಂನಲ್ಲಿ ಆಗಿದೆʼ ಎಂದರು.
ಗಣ್ಯರಿಂದ ಬಿಡುಗಡೆ
ವಿಷ್ಣುವರ್ಧನ್ ಪುಣ್ಯಸ್ಮರಣೆಗೂ ಮುನ್ನ ನಡೆದ ಸಮಾರಂಭದಲ್ಲಿ, ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು, ಜೋ ಸೈಮನ್, ಕೃಷ್ಣೇಗೌಡ, ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಹಿರಿಯ ನಟಿ ಲಕ್ಷ್ಮೀದೇವಮ್ಮ, ವಿಧಾನ ಪರಿಷತ್ ಸದಸ್ಯ ವೀರಯ್ಯ ಸೇರಿದಂತೆ ಚಿತ್ರರಂಗ ಮತ್ತು ರಾಜಕೀಯ ರಂಗದ ಅನೇಕ ಗಣ್ಯರು ಸಿಂಹದ ಹಾದಿ ಕಿರುಚಿತ್ರದ ಟ್ರೇಲರ್ ಅನಾವರಣಗೊಳಿಸಿದರು.
ಇನ್ನು 'ಸಿಂಹದ ಹಾದಿʼ ಟೆಲಿಫಿಲಂನಲ್ಲಿ ಶಶಿರಾಜ್ ದೊರೆ, ಸಾಯಿ ಜ್ಯೋತಿ, ಸವಿತಾ, ಪಲ್ಲವಿ ರಾವ್, ಸಂನ್ಸಿಕಾ, ಪ್ರಕೃತಿ, ಹರಿ ಪ್ರಕಾಶ್, ಮಂಜು, ಮಹೇಶ್ ಗುರು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ 'ಸಿಂಹದ ಹಾದಿ' ಟೆಲಿಫಿಲಂ ಸುಮಾರು 75ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ.
----
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope