Actor Darshan Crime: ದರ್ಶನ್ ಅಭಿಮಾನಿಗಳಿಗೆ ಲಾಠಿ ಚಾರ್ಜ್, ಚಿತ್ರದುರ್ಗದ ರೇಣುಕಾ ಸ್ವಾಮಿ ಮರ್ಡರ್ ಕೇಸ್ನಲ್ಲಿ 4 ಆರೋಪಿಗಳು ನಾಪತ್ತೆ
ಕನ್ನಡ ನಟ ದರ್ಶನ್ ಬಂಧನಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ನಟ ದರ್ಶನ್ನನ್ನು ನೋಡಲು ಠಾಣೆ ಸುತ್ತ ನೆರೆದಿದ್ದ ನೂರಾರು ಜನರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಇದೇ ಸಮಯದಲ್ಲಿ ಈ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ 17 ಎನ್ನಲಾಗಿದ್ದು, ನಾಪತ್ತೆಯಾದ 4 ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
![Actor Darshan Crime: ದರ್ಶನ್ ಅಭಿಮಾನಿಗಳಿಗೆ ಲಾಠಿ ಚಾರ್ಜ್ Actor Darshan Crime: ದರ್ಶನ್ ಅಭಿಮಾನಿಗಳಿಗೆ ಲಾಠಿ ಚಾರ್ಜ್](https://images.hindustantimes.com/kannada/img/2024/06/13/550x309/darshan_fans_1718173688417_1718239065488.jpg)
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಹತ್ಯೆ ಪ್ರಕರಣದಲ್ಲಿ ಆರೋಪಿಗಳು 13 ಅಲ್ಲ, 17 ಎಂದು ಪೊಲೀಸರು ತಿಳಿಸಿದ್ದು, ನಾಪತ್ತೆಯಾಗಿರುವ 4 ಆರೋಪಿಗಳ ಶೋಧ ನಡೆಯುತ್ತಿದೆ. ಇದೇ ಸಮಯದಲ್ಲಿ ನಿನ್ನೆ ಆರೋಪಿಗಳನ್ನು ಘಟನೆ ನಡೆದ ಸ್ಥಳವಾದ ಪಟ್ಟಣಗೆರೆ ಶೆಡ್ಗೆ ಕರೆದುಕೊಂಡು ಬಂದು ಮಹಜರು ನಡೆಸಲಾಗಿದೆ. ಇಲ್ಲಿಂದ ದರ್ಶನ್ ಮತ್ತು ಇತರೆ ಆರೋಪಿಗಳನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ವಾಪಸ್ ಕರೆದುಕೊಂಡು ಬರಲಾಗಿದೆ. ಈ ಸಮಯದಲ್ಲಿ ಸಾಕಷ್ಟು ಜನರು ನೆರೆದಿದ್ದಾರೆ. ದರ್ಶನ್ ಅಭಿಮಾನಿಗಳು ಅಣ್ಣನಿಗೆ ಜೈ ಎಂದು ಘೋಷಣೆ ಕೂಗುತ್ತಿದ್ದರು. ಈ ಸಮಯದಲ್ಲಿ ಜಮಾಯಿಸಿದ ನೂರಾರು ಅಭಿಮಾನಿಗಳಿಗೆ, ದಾರಿಗೆ ಅಡ್ಡ ಬಂದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ದರ್ಶನ್ ಕೇಸ್ನಲ್ಲಿ 4 ಆರೋಪಿಗಳು ನಾಪತ್ತೆ
ಸ್ಯಾಂಡಲ್ವುಡ್ ನಟ ದರ್ಶನ್ ಸೇರಿದಂತೆ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ 4 ಆರೋಪಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ಮೂಲಗಳ ಪ್ರಕಾರ ಈ ಪ್ರಕರಣದಲ್ಲಿ ಒಟ್ಟು 17 ಜನರು ಆರೋಪಿಗಳಾಗಿದ್ದಾರೆ. ಜಗದೀಶ್ ಅಲಿಯಾಸ್ ಜಗ್ಗ, ಅನು, ರವಿ, ರಾಜು ಎಂಬ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ವಿನಯ್ ವಿ, ಜಯಣ್ಣ ಫಾರ್ಮ್ ಹೌಸ್, ಎಂ ಲಕ್ಷ್ಮಣ್, ಆರ್ಪಿಸಿ ಬಡಾವಣೆ ಬೆಂಗಳೂರು, ನಾಗರಾಜು ಆರ್, ರಾಮಕೃಷ್ಣ ನಗರ ಮೈಸೂರು, ಪವನ್ ಕೆ, ಆರ್ಆರ್ ನಗರ/ಚನ್ನಪಟ್ಟಣ, ಪ್ರದೋಶ್ ಎಸ್, ಗಿರಿನಗರ, ಬೆಂಗಳೂರು, ದೀಪಕ್ ಕುಮಾರ್ ಎಂ, ಆರ್ಆರ್ ನಗರ, ಬೆಂಗಳೂರು., ನಂದೀಶ್, ಆರ್ಆರ್ ನಗರ/ಮಂಡ್ಯ, ಕಾರ್ತಿಕ್, ಗಿರಿನಗರ, ಬೆಂಗಳೂರು., ನಿಖಿಲ್ ನಾಯಕ್, ಬನ್ನೇರುಘಟ್ಟ, ಬೆಂಗಳೂರು., ಕೇಶವಮೂರ್ತಿ, ಗಿರಿನಗರ, ಬೆಂಗಳೂರು., ರಾಘವೇಂದ್ರ ಆಲಿಯಾಸ್ ರಾಘು, ಕೋಳಿಹಟ್ಟಿ ದೊಡ್ಡಪೇಟೆ, ಚಿತ್ರದುರ್ಗ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಪವಿತ್ರಾ ಗೌಡರನ್ನು ಎ1 ಆರೋಪಿಯನ್ನಾಗಿ ಮಾಡಿದ್ದಾರೆ. ದರ್ಶನ್ ಎ2 ಆರೋಪಿಯಾಗಿದ್ದಾನೆ. ಉಳಿದಂತೆ, ಎಫ್ಐಆರ್ನಲ್ಲಿ ರಾಘವೇಂದ್ರ ಎ4, ನಂದೀಶ್ ಎ5, ಜಗದೀಶ್ ಅಲಿಯಾಸ್ ಜಗ್ಗ ಎ6, ಅನು ಎ7, ರವಿ ಎ8, ರಾಜು ಎ9, ವಿನಯ್ ಎ10, ನಾಗರಾಜ್ ಎ11, ಲಕ್ಷ್ಮಣ್ ಎ12, ದೀಪಕ್ ಎ13, ಪ್ರದೋಶ್ ಎ14, ಕಾರ್ತಿಕ್ ಎ15, ಕೇಶವ ಮೂರ್ತಿ ಎ16, ನಿಖಿಲ್ ನಾಯಕ್ ಎ17 ಆರೋಪಿಗಳನ್ನಾಗಿ ಮಾಡಲಾಗಿದೆ.
ಇನ್ನೊಂದೆಡೆ ಹತ್ಯೆಯಾದ ರೇಣುಕಾ ಸ್ವಾಮಿ ಕುಟುಂಬದವರ ನೋವಿನ ಮಾತುಗಳು ಮುಂದುವರೆದಿವೆ. ರೇಣುಕಾ ಸ್ವಾಮಿ ಪತ್ನಿ ಮೂರು ತಿಂಗಳ ಗರ್ಭಿಣಿಯಾಗಿದ್ದು, ಈಕೆಯ ಪರಿಸ್ಥಿತಿಗೆ ಎಲ್ಲರ ಮಮ್ಮಲ ಮರುಗುತ್ತಿದ್ದಾರೆ. ರೇಣುಕಾ ಸ್ವಾಮಿಯ ತಾಯಿ ಕೊಲೆಗಡುಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ. "ನನ್ನ ಶಾಪ ಅವರಿಗೆ ತಟ್ಟಿಯೇ ತಟ್ಟುತ್ತದೆ. ದರ್ಶನ್ ಹಾಳಾಗಿ ಹೋಗುತ್ತಾನೆ. ಸರ್ವನಾಶ ಆಗುತ್ತಾರೆ" ಎಂದೆಲ್ಲ ಆಕ್ರೋಶದ ನುಡಿಗಳನ್ನಾಡಿದ್ದಾರೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)