ಏಪ್ರಿಲ್‍ ತಿಂಗಳಲ್ಲೂ ಕನ್ನಡ ಚಿತ್ರರಂಗಕ್ಕೊಂದು ಹಿಟ್‍ ಸಿಗಲಿಲ್ಲ! ವಿದ್ಯಾಪತಿಯಿಂದ ಗ್ಯಾಂಗ್‍ಸ್ಟರ್ ತನಕ
ಕನ್ನಡ ಸುದ್ದಿ  /  ಮನರಂಜನೆ  /  ಏಪ್ರಿಲ್‍ ತಿಂಗಳಲ್ಲೂ ಕನ್ನಡ ಚಿತ್ರರಂಗಕ್ಕೊಂದು ಹಿಟ್‍ ಸಿಗಲಿಲ್ಲ! ವಿದ್ಯಾಪತಿಯಿಂದ ಗ್ಯಾಂಗ್‍ಸ್ಟರ್ ತನಕ

ಏಪ್ರಿಲ್‍ ತಿಂಗಳಲ್ಲೂ ಕನ್ನಡ ಚಿತ್ರರಂಗಕ್ಕೊಂದು ಹಿಟ್‍ ಸಿಗಲಿಲ್ಲ! ವಿದ್ಯಾಪತಿಯಿಂದ ಗ್ಯಾಂಗ್‍ಸ್ಟರ್ ತನಕ

ಏಪ್ರಿಲ್‌ 2025ರಲ್ಲಿ 16 ಚಿತ್ರಗಳು ಬಿಡುಗಡೆಯಾಗಿದ್ದು, ಯಾವೊಂದು ಚಿತ್ರ ಸಹ ಹಾಕಿದ ಬಂಡವಾಳವನ್ನು ಪಡೆಯಲಿಲ್ಲ ಎಂಬುದು ಬೇಸರದ ಸಂಗತಿ. ಈ ತಿಂಗಳು ಮೂರು ವಿಭಿನ್ನ ಚಿತ್ರಗಳು ರಿಲೀಸ್‌ ಆಗಿವೆ. ವಿದ್ಯಾಪತಿ, ಫೈರ್‌ಫ್ಲೈ, ಅಜ್ಞಾತವಾಸಿ ಸೇರಿದಂತೆ ಯಾವುದೇ ಚಿತ್ರವನ್ನು ಪ್ರೇಕ್ಷಕ ಕೈಹಿಡಿದಿಲ್ಲ. (ವರದಿ: ಚೇತನ್‌ ನಾಡಿಗೇರ್‌)

ಏಪ್ರಿಲ್‍ ತಿಂಗಳಲ್ಲೂ ಕನ್ನಡ ಚಿತ್ರರಂಗಕ್ಕೊಂದು ಹಿಟ್‍ ಸಿಗಲಿಲ್ಲ!
ಏಪ್ರಿಲ್‍ ತಿಂಗಳಲ್ಲೂ ಕನ್ನಡ ಚಿತ್ರರಂಗಕ್ಕೊಂದು ಹಿಟ್‍ ಸಿಗಲಿಲ್ಲ!

ವರ್ಷ ಪ್ರಾರಂಭವಾಗಿ ನಾಲ್ಕು ತಿಂಗಳಾಗಿವೆ. 90 ಪ್ಲಸ್‍ ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಇದುವರೆಗೂ ಕನ್ನಡದಲ್ಲಿ ಒಂದೇ ಒಂದು ಚಿತ್ರ ಸಹ ದೊಡ್ಡ ಯಶಸ್ಸು ಪಡೆದಿಲ್ಲ. ಮೊದಲ ಮೂರು ತಿಂಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ, ಒಂದೆರಡು ಗಮನಸೆಳೆದರೂ ಯಾವೊಂದು ಚಿತ್ರವೂ ದೊಡ್ಡ ದುಡ್ಡು ಮಾಡಲಿಲ್ಲ, ದೊಡ್ಡ ಯಶಸ್ಸು ಪಡೆಯಲಿಲ್ಲ. ಏಪ್ರಿಲ್‍ ತಿಂಗಳಲ್ಲಾದರೂ ಕನ್ನಡ ಚಿತ್ರರಂಗ ಒಂದು ಯಶಸ್ಸು ಕಾಣಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಏಪ್ರಿಲ್‍ನಲ್ಲಿ 16 ಚಿತ್ರಗಳು ಬಿಡುಗಡೆಯಾಗಿದ್ದು, ಯಾವೊಂದು ಚಿತ್ರ ಸಹ ಹಾಕಿದ ಬಂಡವಾಳವನ್ನು ಪಡೆಯಲಿಲ್ಲ ಎಂಬುದು ಬೇಸರದ ಸಂಗತಿ.

ಹೊಸಬರ ಚಿತ್ರಗಳನ್ನು ಜನ ಕ್ಯಾರೆ ಎನ್ನಲಿಲ್ಲ

ಏಪ್ರಿಲ್‍ ತಿಂಗಳ ಮೊದಲ ಶುಕ್ರವಾರ (ಏಪ್ರಿಲ್‍ 04) ಮೂರು ಚಿತ್ರಗಳು ಬಿಡುಗಡೆಯಾದವು. ಈ ಪೈಕಿ ‘ಬೆಂಕಿಯ ಬಲೆ’, ‘ನಿಂಬಿಯ ಬನಾದ ಮ್ಯಾಗ’ ಮತ್ತು ‘ನಿಮ್ದೆ ಕಥೆ’ ಚಿತ್ರಗಳು ಸೇರಿವೆ. ಮೂರೂ ಹೊಸಬರ ಚಿತ್ರಗಳೇ. ಈ ಪೈಕಿ ‘ನಿಂಬಿಯ ಬನಾದ ಮ್ಯಾಗ’ ಚಿತ್ರದ ಮೂಲಕ ಡಾ. ರಾಜಕುಮಾರ್‍ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್, ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದರು. ‘ಮೇಘಮಾಲೆ’ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದ ಸುನಾದ್ ರಾಜ್‍ 25 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. ಆದರೆ, ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ. ಇನ್ನು, ‘ಬೆಂಕಿಯ ಬಲೆ’ ಮತ್ತು ‘ನಿಮ್ದೆ ಕಥೇ’ ಚಿತ್ರಗಳು ಬಂದಿದ್ದು, ಹೋಗಿದ್ದು ಗೊತ್ತಾಗಲಿಲ್ಲ.

ಮೂರು ವಿಭಿನ್ನ ಚಿತ್ರಗಳು; ಒಂದೂ ಗೆಲ್ಲಲಿಲ್ಲ

ಏಪ್ರಿಲ್‍ ಎರಡನೇ ವಾರ ಬಿಡುಗಡೆಯಾದ ‘ವಾಮನ’, ‘ವಿದ್ಯಾಪತಿ’ ಮತ್ತು ‘ಅಜ್ಞಾತವಾಸಿ’ ಚಿತ್ರಗಳ ಬಗ್ಗೆ ಒಂದಿಷ್ಟು ನಿರೀಕ್ಷೆಗಳಿದ್ದವು. ಮೂರು ವಿಭಿನ್ನ ಜಾನರ್‍ನ ಚಿತ್ರಗಳಾಗಿದ್ದವು. ‘ವಾಮನ’ ಆ್ಯಕ್ಷನ್‍ ಚಿತ್ರವಾದರೆ, ‘ವಿದ್ಯಾಪತಿ’ ಫ್ಯಾಮಿಲಿ ಚಿತ್ರವಾಗಿತ್ತು. ‘ಅಜ್ಞಾತವಾಸಿ’ ಒಂದು ಮರ್ಡರ್‍ ಮಿಸ್ಟ್ರಿ ಚಿತ್ರವಾಗಿತ್ತು. ಮೂರು ಚಿತ್ರಗಳಲ್ಲಿ ಸ್ವಲ್ಪ ಗಮನಸೆಳೆದ ಚಿತ್ರವೆಂದರೆ ಅದು ‘ವಿದ್ಯಾಪತಿ’. ಮತ್ತೆರಡು ಚಿತ್ರಗಳು ನಿರೂಪಣೆಯ ವಿಷಯದಲ್ಲಿ ಸೋತವು. ಇನ್ನು, ಗಳಿಕೆ ವಿಷಯದಲ್ಲಿ ಮೂರೂ ಚಿತ್ರಗಳು ಸೋತಿವೆ. ‘ವಾಮನ’ ಚಿತ್ರಕ್ಕೆ ದರ್ಶನ್‍ ಅಭಿಮಾನಿಗಳ ಬೆಂಬಲವಿದ್ದರೂ, ಚಿತ್ರ ಸದ್ದು ಮಾಡಲಿಲ್ಲ. ಮೂರು ಚಿತ್ರಗಳ ಪೈಕಿ ‘ವಿದ್ಯಾಪತಿ’ ಈಗಾಗಲೇ ಅಮೇಜಾನ್‍ ಪ್ರೈಮ್‍ನಲ್ಲಿ ಲಭ್ಯವಿದೆ.

ಸಾಲದಿಂದಲೇ ಹೆಚ್ಚು ಸುದ್ದಿಯಾದ ‘ಯುದ್ಧಕಾಂಡ’

ಏಪ್ರಿಲ್‍ 18ರಂದು ಬಿಡುಗಡೆಯಾದ ಆರು ಚಿತ್ರಗಳ ಪೈಕಿ ‘ವೀರ ಚಂದ್ರಹಾಸ’ ಮತ್ತು ‘ಯುದ್ಧಕಾಂಡ’ ಚಿತ್ರಗಳು ಒಂದಿಷ್ಟು ನಿರೀಕ್ಷೆ ಹುಟ್ಟುಹಾಕಿದ್ದವು. ‘ವೀರ ಚಂದ್ರಹಾಸ’ ಚಿತ್ರದ ಮೂಲಕ ಮೊದಲ ಬಾರಿಗೆ ಯಕ್ಷಗಾನವನ್ನು ಪೂರ್ಣಪ್ರಮಾಣದಲ್ಲಿ ತೆರೆಯ ಮೇಲೆ ತಂದರೆ, ‘ಯುದ್ಧಕಾಂಡ’ ಸಾಮಾಜಿಕ ಕಳಕಳಿಯ ಚಿತ್ರವಾಗಿತ್ತು. ‘ವೀರ ಚಂದ್ರಹಾಸ’ ಒಂದು ಪ್ರಯೋಗವಾಗಿ ಗಮನಸೆಳೆಯಿತು. ‘ಯುದ್ಧಕಾಂಡ’ ಚಿತ್ರದ ಕುರಿತು ಅಜೇಯ್‍ ರಾವ್‍ ಸಾಕಷ್ಟು ಮಾತಾಡಿದ್ದರು. ಈ ಚಿತ್ರದಲ್ಲಿ ಅವರು ಮಾಡಿದ ಸಾಲದ ಕುರಿತು ಹೆಚ್ಚು ಚರ್ಚೆಯಾಯಿತೇ ಹೊರತು, ಮಿಕ್ಕಂತೆ ಚಿತ್ರ ದೊಡ್ಡ ಸದ್ದು ಮಾಡಲಿಲ್ಲ. ‘ಸಿನಿಮಾ ಎಷ್ಟು ಗಳಿಕೆ ಮಾಡಿತು ಎನ್ನುವುದಕ್ಕಿಂತ, ಮನಸ್ಸಿನಿಂದ ಬರುವ ಪ್ರಶಂಸೆ’ ಎಂದು ಅಜೇಯ್‍ ಸಮಾಧಾನ ಪಟ್ಟುಕೊಂಡರು. ಮಿಕ್ಕಂತೆ ‘ಖದೀಮ’, ‘ಕೋರ’, ‘ರಿಕ್ಷಾ ಚಾಲಕ’, ‘ಪ್ರೀತಿಯ ಹುಚ್ಚ’ ಚಿತ್ರಗಳು ಒಳ್ಳೆಯ ಓಪನಿಂಗ್‍ ಸಹ ಪಡೆಯಲಿಲ್ಲ.

ನಿವೇದಿತಾ ನಿರ್ಮಾಣದ ‘ಫೈರ್‌ ಫ್ಲೈ’ ಮಿಂಚಲಿಲ್ಲ

ಏಪ್ರಿಲ್‍ 24ರಂದು ಡಾ. ರಾಜಕುಮಾರ್‍ ಹುಟ್ಟುಹಬ್ಬದ ಅಂಗವಾಗಿ ‘ಫೈರ್ ಫ್ಲೈ’ ಬಿಡುಗಡೆಯಾಯಿತು. ಅವರ ಮೊಮ್ಮಗಳು ನಿವೇದಿತಾ ಶಿವರಾಜಕುಮಾರ್‌ ನಿರ್ಮಾಣದ ಮೊದಲ ಚಿತ್ರವಾಗಿತ್ತು. ಚಿತ್ರ ತಾಂತ್ರಿಕವಾಗಿ ಶ್ರೀಮಂತವಾಗಿದ್ದರೂ, ವಿಭಿನ್ನ ಪರಿಕಲ್ಪನೆ ಇತ್ತಾದರೂ ಕಲೆಕ್ಷನ್‍ ವಿಚಾರದಲ್ಲಿ ನಿರಾಸೆ ಮೂಡಿಸಿತು. ಚಿತ್ರಕ್ಕೆ ಹಾಕಿದ ಬಂಡವಾಳದ ಅರ್ಧದಷ್ಟೂ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಮರುದಿನ ಬಿಡುಗಡೆಯಾದ ‘ಅಮರ ಪ್ರೇಮಿ ಅರುಣ್‍’, ‘ದಾಸರಹಳ್ಳಿ’, ‘ಗ್ಯಾಂಗ್‍ಸ್ಟರ್ ಅಲ್ಲ ಪ್ರ್ಯಾಂಕ್‍ಸ್ಟರ್‌’ ಬಿಡುಗಡೆಯಾಗಿದ್ದೇ ಬಹಳಷ್ಟು ಜನರಿಗೆ ಗೊತ್ತಾಗಲಿಲ್ಲ.

ಹೀಗೆ ಏಪ್ರಿಲ್‍ ತಿಂಗಳಲ್ಲಿ 16 ಚಿತ್ರಗಳು ಬಿಡುಗಡೆಯಾದರೂ ಯಾವೊಂದು ಚಿತ್ರ ಏಳಿಗೆ ಕಾಣಲಿಲ್ಲ. ಮೇ ತಿಂಗಳಲ್ಲಾದರೂ ಕನ್ನಡ ಚಿತ್ರರಂಗ ಒಂದು ಯಶಸ್ಸು ನೋಡುತ್ತದಾ ಎಂಬುದನ್ನು ಕಾದು ನೋಡಬೇಕು. (ವರದಿ: ಚೇತನ್‌ ನಾಡಿಗೇರ್‌)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in