ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಜಾಮೀನು ವಿಚಾರ, ಸುಪ್ರೀಂಕೋರ್ಟ್ನಲ್ಲಿ ಇಂದು ನಡೆದ ವಿಚಾರಣೆಯ ಅಪ್ಡೇಟ್
ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಷರತ್ತುಬದ್ಧ ಜಾಮೀನನ್ನು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯು ಇಂದು ನಡೆದಿದೆ. ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದೀವಾಲ ಮತ್ತು ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠ ಇಂದು ವಕೀಲರಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದೆ.

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಷರತ್ತುಬದ್ಧ ಜಾಮೀನನ್ನು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯು ಇಂದು ನಡೆದಿದೆ. ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದೀವಾಲ ಮತ್ತು ಆರ್. ಮಹದೇವನ್ ಅವರ ದ್ವಿಸದಸ್ಯ ಪೀಠ ಇಂದು ವಕೀಲರಲ್ಲಿ ಹಲವು ಪ್ರಶ್ನೆಗಳನ್ನು ಕೇಳಿದೆ. ಕರ್ನಾಟಕ ಕೋರ್ಟ್ ಜಾಮೀನು ನೀಡಿರುವ ಔಚಿತ್ಯದ ಕುರಿತು ಇನ್ನಷ್ಟು ವಿಚಾರಣೆಯ ಅಗತ್ಯವಿದೆಯೆಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ನಿರಾಳವಾಗುವ ಸುದ್ದಿ ಬಂದಿದೆ. ಸುಪ್ರೀಂಕೋರ್ಟ್ನಲ್ಲಿ ಇಂದು ವಿಚಾರಣೆ ನಡೆಸಿದ ಕೋರ್ಟ್ ಇನ್ನಷ್ಟು ವಿಚಾರಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಈ ಪ್ರಕರಣದ ವಿಚಾರಣೆಯನ್ನು ಮೇ 14ಕ್ಕೆ ಮುಂದೂಡಲಾಗಿದೆ. ಮುಂದಿನ 21 ದಿನಗಳ ಕಾಲ ದರ್ಶನ್ಗೆ ನಿರಾಳವಾಗಿದೆ. ಈ ಹಿಂದೆಯೂ ಇದೇ ರೀತಿ ಕೋರ್ಟ್ ವಿಚಾರಣೆಯನ್ನು ಮುಂದೂಡಿತ್ತು. ಇದೇ ತಿಂಗಳ ಆರಂಭದಲ್ಲಿ ಅಂದರೆ ಏಪ್ರಿಲ್ 2ರಂದು ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಅಂದು ವಿಚಾರಣೆ ನಡೆಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಏಪ್ರಿಲ್ 22ಕ್ಕೆ ಮುಂದೂಡಿತ್ತು. ಇದೀಗ ಮತ್ತೆ 21 ದಿನಗಳ ಕಾಲ ಮುಂದೂಡಲಾಗಿದೆ. ಮೇ 14ರಂದು ಮುಂದಿನ ವಿಚಾರಣೆ ನಡೆಯಲಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದೀವಾಲ ಮತ್ತು ಆರ್. ಮಹದೇವನ್ ಅವರ ಮುಂದೆ ನಟ ದರ್ಶನ್ ಪರ ವಕೀಲರಾದ ಅಭಿಷೇಕ್ ಮನು ಸಂಘ್ವಿ ಇಂದು ವಾದ ಮಂಡಿಸಿದರು. ಇದೇ ಸಮಯದಲ್ಲಿ ಬೆಂಗಳೂರು ಪೊಲೀಸರ ಪರ ಸಿದ್ಧಾರ್ಥ ಲೂಥ್ರಾ ವಕಾಲತ್ತು ನಡೆಸಿದ್ದಾರೆ. ನಟ ದರ್ಶನ್ ವಿರುದ್ಧ ಯಾವುದೇ ಸಾಕ್ಷಿ ಇಲ್ಲ ಎಂದು ಮನು ಸಂಘ್ವಿ ವಾದಿಸಿದ್ದಾರೆ. ಇದೇ ಸಮಯದಲ್ಲಿ ವಕೀಲರಾದ ಸಿದ್ಧಾರ್ಥ ಲೂಥ್ರಾ ಸಾಕ್ಷ್ಯಗಳು ಇವೆ ಎಂದು ವಾದಿಸಿದರು. ಪರ ವಿರೋಧ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.
ದರ್ಶನ್ಗೆ ಮದುವೆಯಾಗಿರುವುದೇ?
ಸುಪ್ರೀಂಕೋರ್ಟ್ನ ಇಂದಿನ ವಿಚಾರಣೆಯಲ್ಲಿ "ಪವಿತ್ರಾ ಗೌಡ ದರ್ಶನ್ ಪತ್ನಿಯೇ?" ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಅಲ್ಲ ಎಂದು ವಕೀಲರು ತಿಳಿಸಿದ್ದಾರೆ. ದರ್ಶನ್ಗೆ ಮದುವೆಯಾಗಿರುವುದೇ ಎಂದು ಪ್ರಶ್ನಿಸಿದ್ದಾರೆ. ಹೌದು ಎಂದು ವಕೀಲರು ಉತ್ತರಿಸಿದ್ದಾರೆ. ಹೀಗೆ, ಒಂದಿಷ್ಟು ಪ್ರಶ್ನೆಗಳ ಬಳಿಕ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ. ಇದರಿಂದ ತಾತ್ಕಾಲಿಕವಾಗಿ ದರ್ಶನ್ಗೆ ರಿಲೀಫ್ ದೊರಕಿದಂತಾಗಿದೆ.
ಚಿತ್ರದುರ್ಗದ ರೇಣುಕಾ ಸ್ವಾಮಿಯ ಅಪಹರಣ ಮತ್ತು ಹತ್ಯೆ ಆರೋಪದಡಿ ನಟ ದರ್ಶನ್ ಮತ್ತು 17 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಆರು ತಿಂಗಳ ಬಳಿಕ ಇವರಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಕರ್ನಾಟಕ ಹೈಕೋರ್ಟ್ನಲ್ಲಿ ಇವರಿಗೆ ಷರತ್ತುಬದ್ಧ ಜಾಮೀನು ದೊರಕಿದೆ. ವಿಚಾರಣೆಯ ಸಮಯದಲ್ಲಿ ಕೋರ್ಟ್ಗೆ ಹಾಜಾರಾಗುವಂತೆಯೂ ಸೂಚಿಸಿದೆ. ಇತ್ತೀಚೆಗೆ ದರ್ಶನ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಸಂದರ್ಭದಲ್ಲಿ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿದ್ದರು. ಹೈಕೋರ್ಟ್ನಲ್ಲಿ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕದ ಪೊಲೀಸರು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.