ಊಹಾಪೋಹಕ್ಕೆ ತೆರೆ ಎಳೆದ ನಟ ಉಪೇಂದ್ರ, ಆರೋಗ್ಯ ಸಮಸ್ಯೆ ಬಗ್ಗೆ ಪೋಸ್ಟ್ ಹಂಚಿಕೊಂಡ ರಿಯಲ್ ಸ್ಟಾರ್
ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ನಟ ಉಪೇಂದ್ರ, ಈ ಬಗ್ಗೆ ಅವರ ಅಭಿಮಾನಿ ಬಳಗಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಹರಿದಾಡಿದ ಒಂದಷ್ಟು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸ್ಯಾಂಡಲ್ವುಡ್ ರಿಯಲ್ ಸ್ಟಾರ್ ಉಪೇಂದ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ, ಅಭಿಮಾನಿ ವಲಯದಲ್ಲಿ ಆತಂಕ ಶುರುವಾಗಿತ್ತು. ಅಜೀರ್ಣ, ಗ್ರ್ಯಾಸ್ಟ್ರಿಕ್, ಲೋ ಬಿಪಿಯಿಂದಾಗಿ ಉಪೇಂದ್ರ ಆಸ್ಪತ್ರೆ ಸೇರಿದ್ದರು. ನೆಚ್ಚಿನ ನಟರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ ಎಂದರೆ ಅವರ ಫ್ಯಾನ್ಸ್ ವಲಯದಲ್ಲಿ ಸಹಜವಾಗಿ ಆತಂಕ ಸೃಷ್ಟಿಯಾಗುತ್ತದೆ. ಅದೇ ರೀತಿ ಸೋಮವಾರ ಆಸ್ಪತ್ರೆಗೆ ಆಗಮಿಸಿದ್ದ ಉಪೇಂದ್ರ, ಎಂದಿನಂತೆ ರೆಗ್ಯುಲರ್ ಚಕ್ಅಪ್ ಮಾಡಿಸಿಕೊಂಡು, ಆಸ್ಪತ್ರೆಯಿಂದ ಮರಳಿದ್ದಾರೆ.
ಅಷ್ಟಕ್ಕೂ ಉಪೇಂದ್ರಗೆ ಏನಾಗಿತ್ತು?
ಸೋಮವಾರ ನಟ ಉಪೇಂದ್ರ ಅವರಿಗೆ ಆಸಿಡಿಟಿ ಸಮಸ್ಯೆ ಎದುರಾಗಿತ್ತು. ಆ ಹಿನ್ನೆಲೆಯಲ್ಲಿ ತಕ್ಷಣ ಪತ್ನಿಯೊಂದಿಗೆ ಬೆಂಗಳೂರಿನ ಸದಾಶಿವನಗರದ ಬಳಿಯ ಖಾಸಗಿ ಆಸ್ಪತ್ರೆಗೆ ದೌಡಾಯಿಸಿದ್ದರು. ಇದೀಗ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಉಪೇಂದ್ರ ಡಿಸ್ಚಾರ್ಜ್ ಆಗಿದ್ದಾರೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ನಟ ಉಪೇಂದ್ರ, ಈ ಬಗ್ಗೆ ಅವರ ಅಭಿಮಾನಿ ಬಳಗಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಹರಿದಾಡಿದ ಒಂದಷ್ಟು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಸೋಷಿಯಲ್ ಮೀಡಿಯಾ ಪೋಸ್ಟ್..
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಉಪೇಂದ್ರ, "ಎಲ್ಲರಿಗೂ ನಮಸ್ಕಾರ.. ನಾನು ಆರೋಗ್ಯವಾಗಿದ್ದೇನೆ.. ರೆಗ್ಯುಲರ್ ಚೆಕ್ ಅಪ್ ಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದೆ ಅಷ್ಟೇ.. ಯಾವುದೇ ಊಹಾ ಪೋಹ ಗಳಿಗೆ ಕಿವಿಕೊಟ್ಟು ಗೊಂದಲಕ್ಕಿಡಾಗಬೇಡಿ.. ನಿಮ್ಮ ಪ್ರೀತಿ ಕಾಳಜಿಗೆ ಅನಂತ ಧನ್ಯವಾದಗಳು" ಎಂದಿದ್ದಾರೆ.
ಯುಐ ಬಳಿಕ ʻಭಾರ್ಗವʼನಾದ ಉಪ್ಪಿ
ಸೂರಪ್ಪ ಬಾಬು ನಿರ್ಮಾಣದ, ನಾಗಣ್ಣ ನಿರ್ದೇಶನದ ಸಿನಿಮಾದಲ್ಲಿ ಉಪೇಂದ್ರ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಅಕ್ಷಯ ತೃತೀಯದಂದು ಶೀರ್ಷಿಕೆ ಅನಾವರಣ ಮಾಡಲಾಗಿದೆ. ಚಿತ್ರಕ್ಕೆ ಭಾರ್ಗವ ಎಂಬ ಟೈಟಲ್ ಇಡಲಾಗಿದೆ. ಈ ಹಿಂದೆ ಇದೇ ನಟ, ನಿರ್ದೇಶಕ ಜೋಡಿ ಕುಟುಂಬ, ಗೋಕರ್ಣ, ಗೌರಮ್ಮ, ದುಬೈ ಬಾಬು ಸೇರಿ ಹಲವು ಸಿನಿಮಾ ಮಾಡಿದೆ. ಇದೀಗ ತುಂಬ ಗ್ಯಾಪ್ನ ಬಳಿಕ ಭಾರ್ಗವ ಸಿನಿಮಾ ಮೂಲಕ ಒಂದಾಗುತ್ತಿದ್ದಾರೆ.
ಭಾರ್ಗವ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದು, ರಾಜರತ್ನಂ ಅವರ ಛಾಯಾಗ್ರಹಣ ಇರಲಿದೆ. ಅ ವೈಲೆಂಟ್ ಫ್ಯಾಮಿಲಿ ಮ್ಯಾನ್ ಎಂಬ ಅಡಿ ಬರಹ ಈ ಸಿನಿಮಾಕ್ಕಿದ್ದು, ಸದ್ಯ ಚಿತ್ರೀಕರಣ ಪೂರ್ವ ಕೆಲಸಗಳು ನಡೆಯುತ್ತಿದ್ದು, ಶೀಘ್ರದಲ್ಲಿ ಶೂಟಿಂಗ್ ಶುರುವಾಗಲಿದೆ.
ಇದರ ಜತೆಗೆ ಅರ್ಜುನ್ ಜನ್ಯ ನಿರ್ದೇಶನದ ಮಲ್ಟಿ ಸ್ಟಾರರ್ '45' ಚಿತ್ರದಲ್ಲಿಯೂ ಉಪೇಂದ್ರ ನಟಿಸುತ್ತಿದ್ದಾರೆ. ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಚಿತ್ರತಂಡವು ಅದರ ಪ್ರಚಾರ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ. ಇದಲ್ಲದೆ, ರಜನಿಕಾಂತ್ ಅವರ ತಮಿಳು ಚಿತ್ರ 'ಕೂಲಿ'ಯಲ್ಲಿಯೂ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.