Kiccha Sudeep: ರಾಜ್ಯ ಚಲನಚಿತ್ರ ಪ್ರಶಸ್ತಿ ತಿರಸ್ಕರಿಸಿದ ಕಿಚ್ಚ ಸುದೀಪ್; ಅತ್ಯುತ್ತಮ ನಟ ಪ್ರಶಸ್ತಿ ನಿರಾಕರಣೆಗೆ ಇಲ್ಲಿದೆ ಕಾರಣ
Kiccha Sudeep: ನಟ ಕಿಚ್ಚ ಸುದೀಪ್ ಅಭಿನಯಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ ಸಿಕ್ಕಿತ್ತು. ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಲಾಗಿತ್ತು. ಆದರೆ ಸುದೀಪ್ ಅತ್ಯುತ್ತಮ ನಟ ಪ್ರಶಸ್ತಿ ನಿರಾಕರಿಸಿದ್ದಾರೆ ಸಕಾರಣವನ್ನೂ ನೀಡಿದ್ದಾರೆ.

Kiccha Sudeep Rejected Award: ‘ಪೈಲ್ವಾನ್’ ಚಿತ್ರದ ಅಭಿನಯಕ್ಕಾಗಿ ಸುದೀಪ್ ಅವರಿಗೆ ಬುಧವಾರವಷ್ಟೇ (ಜನವರಿ 22) ರಾಜ್ಯ ಸರ್ಕಾರವು ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಿಸಿತ್ತು. ಈ ವಿಷಯವಾಗಿ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿರುವಾಗಲೇ, ಸುದೀಪ್ ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಪ್ರಶಸ್ತಿಗೆ ತಮ್ಮನ್ನು ಪರಿಗಣಿಸಿರುವುದಕ್ಕೆ ಧನ್ಯವಾದಗಳನ್ನು ಸೂಚಿಸುತ್ತಲೇ, ಚಿತ್ರರಂಗದಲ್ಲಿ ಸಾಕಷ್ಟು ಅರ್ಹರು ಇರುವುದರಿಂದ ಅವರಿಗೆ ಕೊಡಬೇಕೆಂದು ಹೇಳಿದ್ದಾರೆ.
ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಸುದೀಪ್, ‘ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿಗೆ ನನ್ನ ಹೆಸರನ್ನು ಪರಿಗಣಿಸಿದ್ದಕ್ಕೆ ಧನ್ಯವಾದಗಳು. ಆದರೆ, ವೈಯಕ್ತಿಕ ಕಾರಣಾಂತರಗಳಿಂದ ನಾನು ಕಳೆದ ಕೆಲವು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ಬಿಟ್ಟಿದ್ದೇನೆ. ಈ ನಿರ್ಧಾರದಿಂದ ಸರಿಯುವುದಕ್ಕೆ ನನಗೆ ಇಷ್ಟವಿಲ್ಲ. ಚಿತ್ರರಂಗದಲ್ಲಿ ಹಲವು ಪ್ರತಿಭಾವಂತ ಮತ್ತು ಅರ್ಹ ಕಲಾವಿದರಿದ್ದಾರೆ. ಅವರಿಗೆ ಪ್ರಶಸ್ತಿ ಬರುವುದನ್ನು ನಾನು ಸಂತೋಷಪುಡತ್ತೇನೆ’ ಎಂದು ಸುದೀಪ್ ಹೇಳಿದ್ದಾರೆ.
"ಯಾವುದೇ ಪ್ರಶಸ್ತಿಯ ಆಸೆ ಇಲ್ಲದೆ, ಪ್ರೇಕ್ಷಕರನ್ನು ಮನರಂಜಿಸುವುದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿಕೊಂಡಿರುವ ಅವರು, ‘ಆಯ್ಕೆ ಸಮಿತಿ ಈ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದು ಇನ್ನಷ್ಟು ಉತ್ತಮ ಕೆಲಸ ಮಾಡುವುದಕ್ಕೆ ಸ್ಫೂರ್ತಿ ತುಂಬಿದೆ" ಎಂದು ಬರೆದುಕೊಂಡಿದ್ದಾರೆ.
ಆಯ್ಕೆ ಮಾಡಿದ್ದೇ ಪ್ರಶಸ್ತಿ ಸಿಕ್ಕಷ್ಟು ಖುಷಿಯ ಸಂಗತಿ
ಆಯ್ಕೆ ಸಮಿತಿಯವರು ತಮ್ಮನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದೇ ತಮಗೆ ಪ್ರಶಸ್ತಿ ಸಿಕ್ಕಷ್ಟು ಸಂತೋಷವಾಗಿದೆ ಎಂದು ಹೇಳಿರುವ ಸುದೀಪ್, “ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿಯವರು ನನ್ನ ಪ್ರತಿಭೆ ಪುರಸ್ಕರಿಸಿ ನೀಡಿದ ಪ್ರಶಸ್ತಿಯನ್ನು ಒಪ್ಪದಿರುವುದಕ್ಕೆ ಕ್ಷಮೆ ಕೇಳುತ್ತೇನೆ. ಈ ವಿಷಯವಾಗಿ ಸರ್ಕಾರ ಮತ್ತು ಆಯ್ಕೆ ಸಮಿತಿಯವರು ನನ್ನ ನಿರ್ಧಾರವನ್ನು ಗೌರವಿಸಿ, ಸಹಕರಿಸುತ್ತಾರೆ ಎಂದು ನಂಬಿದ್ದೇನೆ” ಎಂದು ಪತ್ರ ಮುಗಿಸಿದ್ದಾರೆ.
ಇದಕ್ಕೂ ಮೊದಲು, ಕಳೆದ ವರ್ಷ ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ನಟ ಸುದೀಪ್ ಅವರಿಗೆ ಡಾಕ್ಟರೇಟ್ ನೀಡಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಈ ಗೌರವವನ್ನು ಸುದೀಪ್ ಅವರು ನಯವಾಗಿ ತಿರಸ್ಕಾರ ಮಾಡಿದ್ದು, ತಮಗಿಂಥ ಅರ್ಹರಿಗೆ ನೀಡಲು ಸೂಚಿಸಿದ್ದರು.
ವರದಿ: ಚೇತನ್ ನಾಡಿಗೇರ್

ವಿಭಾಗ