ಮ್ಯಾಕ್ಸ್ ಚಿತ್ರದಿಂದ ಸರ್ಪ್ರೈಸ್ ಗಿಫ್ಟ್ ಕೊಟ್ಟ ಸುದೀಪ್; ಸದ್ದಿಲ್ಲದೆ ಆಕ್ಷನ್ ಅವತಾರ ತೋರಿಸಿ ನಿಬ್ಬೆರಗಾಗಿಸಿದ ಕಿಚ್ಚ
Max the Movie: ಮ್ಯಾಕ್ಸ್ ಚಿತ್ರದ ಟ್ರೇಲರ್ನಲ್ಲಿ ಏನೆಲ್ಲ ಇರಬಹುದು ಎಂಬ ಸಣ್ಣ ಝಲಕ್ ಅನ್ನು ಸ್ನೀಕ್ ಪಿಕ್ ಮೂಲಕ ತೋರಿಸಿದ್ದಾರೆ ಕಿಚ್ಚ ಸುದೀಪ್. ಈ ಕಿರು ವಿಡಿಯೋ ತುಣುಕಿನಲ್ಲಿ ಚಿತ್ರದ ಆಕ್ಷನ್ ಝಲಕ್ ಹೇಗಿರಲಿದೆ ಎಂಬುದು ಸುಳಿವನ್ನೂ ನೀಡಿದ್ದಾರೆ.
Max The Movie: ತಮಿಳಿನ ನಿರ್ದೇಶಕ ವಿಜಯ್ ಕಾರ್ತಿಕೇಯ ಜತೆಗೆ ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾ ಮಾಡಿದ್ದಾರೆ. ಈಗಾಗಲೇ ಒಂದಷ್ಟು ಗ್ಲಿಂಫ್ಸ್ ಮೂಲಕ ಈ ಸಿನಿಮಾ ಸದ್ದು ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ, ಹೈಪ್ ಸಹ ತುಸು ಜೋರಾಗಿಯೇ ಇದೆ. ಇನ್ನೇನು ಡಿಸೆಂಬರ್ 25ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಇತ್ತೀಚೆಗಷ್ಟೇ ಮೊದಲ ಸಲ ಮಾಧ್ಯಮದ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ಬಗ್ಗೆ ಮಾಹಿತಿ ನೀಡಿತ್ತು. ಇದೀಗ ಯಾವ ಸುಳಿವೂ ನೀಡದೇ, ಮತ್ತೊಂದು ಸರ್ಪ್ರೈಸ್ ಜತೆಗೆ ಬಂದಿದ್ದಾರೆ ಕಿಚ್ಚ.
ಈ ವರೆಗೂ ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿಲ್ಲ. ಈ ನಡುವೆ, ಟ್ರೇಲರ್ನಲ್ಲಿ ಏನೆಲ್ಲ ಇರಬಹುದು ಎಂಬ ಸಣ್ಣ ಝಲಕ್ ಅನ್ನು ಸ್ನೀಕ್ ಪಿಕ್ ಮೂಲಕ ತೋರಿಸಿದ್ದಾರೆ. ಈ ಕಿರು ವಿಡಿಯೋ ತುಣುಕಿನಲ್ಲಿ ಚಿತ್ರದ ಆಕ್ಷನ್ ಝಲಕ್ ಹೇಗಿರಲಿದೆ ಎಂಬುದು ಸುಳಿವು ನೀಡಿದ್ದಾರೆ ಸುದೀಪ್. ಇನ್ನೇನು ಶೀಘ್ರದಲ್ಲಿಯೇ ಟ್ರೇಲರ್ ಸಹ ಆಗಮಿಸುವ ಸಾಧ್ಯತೆ ಇದೆ.
ಕಿರು ವಿಡಿಯೋದಲ್ಲಿ ಏನಿದೆ?
"ಸಾಹೆಬ್ರು ನಾಳೆ ತಾನೇ ಡ್ಯೂಟಿಗೆ ಜಾಯಿನ್ ಆಗೋದು? ಇವತ್ತ್ಯಾಕೆ ಇಷ್ಟೊಂದು ಬಿಲ್ಡಪ್ ಕೊಡ್ತಿದಿಯಾ" ಎಂದು ಪೊಲೀಸ್ ಪಾತ್ರಧಾರಿ ಉಗ್ರಂ ಮಂಜು ಡೈಲಾಗ್ ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ "ಒಂದೊಂದು ಸಸ್ಪೆನ್ಷನಲ್ಲೂ ಒಂದೊಂದು ಕಥೆ ಇದೆ. ಒಂದೊಂದು ಕಥೆಯಲ್ಲೂ ಒಂದೊಂದು ಸಂಹಾರ ಇದೆ. ಒಂದೊಂದು ಸಂಹಾರದಲ್ಲೂ ಒಬ್ಬೊಬ್ಬ ರಾಕ್ಷಸ ಎಗರೋಗೌನೆ.." ಎಂದು ಕಥಾನಾಯಕನನ್ನು ವರ್ಣನೆ ಮಾಡುತ್ತಾನೆ ಇನ್ನೊಬ್ಬ ಕಾನ್ಸ್ಟೇಬಲ್.
ಕಿಚ್ಚನ ಬಾಯಲ್ಲಿ ಗತ್ತಿನ ಡೈಲಾಗ್
"ಪ್ರಾಬ್ಲಂ ಬೇಡ, ಪ್ರಾಬ್ಲಂ ಬೇಡ ಅಂತಾನೇ ಬಿಟ್ಟು ಕಳಿಸಿರೋದು. ಬಿಟ್ ಕಳಿಸಿರೋದೇ ಪ್ರಾಬ್ಲಂ ಆದ್ರೆ, ಒಬ್ಬೊಬ್ಬರನ್ನು ಹುಡುಕಿ ಹುಡುಕಿ ಹೊಡೀತಿನಿ" ಎಂದೂ ಸುದೀಪ್ ಡೈಲಾಗ್ ಮೂಲಕ ಅಬ್ಬರಿಸಿದ್ದಾರೆ. ಸಂಭಾಷಣೆ ನಡುವೆಯೇ, ಆಕ್ಷನ್ನಿಂದಲೇ ಗಮನಸೆಳೆಯುತ್ತಾರೆ ಕಿಚ್ಚ. ಒಟ್ಟಾರೆಯಾಗಿ ಸದ್ಯ ಬಿಡುಗಡೆ ಆಗಿರುವ ಸ್ನೀಕ್ ಪಿಕ್ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಹೇಗಿರಲಿದೆ ಎಂಬುದನ್ನ ತೋರಿಸಿದೆ. ಖಾಕಿ ಗತ್ತಿನಲ್ಲಿ ಕಿಚ್ಚ ಸುದೀಪ್ ಮತ್ತೆ ಎದುರಾಗಿದ್ದಾರೆ.
ನಿರ್ಮಾಣದಲ್ಲಿ ಕಿಚ್ಚನ ಪಾಲು
ಇದೇ ಡಿಸೆಂಬರ್ 25ರಿಂದ ಕನ್ನಡದ ಜತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಮ್ಯಾಕ್ಸ್ ಸಿನಿಮಾ ರಿಲೀಸ್ ಆಗಲಿದೆ. ವಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಕಲೈಪುಲಿ ಎಸ್ ಧಾನು ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಸುದೀಪ್ ಈ ಸಿನಿಮಾ ನಿರ್ಮಿಸಿದ್ದಾರೆ. ವಿಜಯ್ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದ ತಾರಾಗಣದ ವಿಚಾರದಲ್ಲಿ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ, ಉಗ್ರಂ ಮಂಜು, ಸುಕೃತಾ ವಾಗ್ಲೇ ಸೇರಿ ಮುಂತಾದವರು ನಟಿಸಿದ್ದಾರೆ. ವಿ ಕ್ರಿಯೇಷನ್ಸ್ ಬ್ಯಾನರ್ನಡಿ ಕಲೈಪುಲಿ ಎಸ್ ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್ ನಿರ್ಮಿಸಿರುವ ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.