Sanchii 01: ಚೊಚ್ಚಲ ಸಿನಿಮಾ ಸಲುವಾಗಿ, ಮುಹೂರ್ತದ ದಿನದಂದೇ ಹೆಸರು ಬದಲಿಸಿಕೊಂಡ ಕಿಚ್ಚ ಸುದೀಪ್‌ ಅಕ್ಕನ ಮಗ
ಕನ್ನಡ ಸುದ್ದಿ  /  ಮನರಂಜನೆ  /  Sanchii 01: ಚೊಚ್ಚಲ ಸಿನಿಮಾ ಸಲುವಾಗಿ, ಮುಹೂರ್ತದ ದಿನದಂದೇ ಹೆಸರು ಬದಲಿಸಿಕೊಂಡ ಕಿಚ್ಚ ಸುದೀಪ್‌ ಅಕ್ಕನ ಮಗ

Sanchii 01: ಚೊಚ್ಚಲ ಸಿನಿಮಾ ಸಲುವಾಗಿ, ಮುಹೂರ್ತದ ದಿನದಂದೇ ಹೆಸರು ಬದಲಿಸಿಕೊಂಡ ಕಿಚ್ಚ ಸುದೀಪ್‌ ಅಕ್ಕನ ಮಗ

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಮನೆಯಿಂದ ಇನ್ನೊಬ್ಬ ಹುಡುಗ ಇದೀಗ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಇಂದು (ಜ. 24) ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಅಷ್ಟೇ ಗ್ರ್ಯಾಂಡ್‌ ಆಗಿ ನೆರವೇರಿದೆ. ಹೀಗಿದೆ ಆ ಸಿನಿಮಾ ಕುರಿತ ಮಾಹಿತಿ.

ಹೆಸರು ಬದಲಿಸಿಕೊಂಡ ಕಿಚ್ಚ ಸುದೀಪ್‌ ಅಕ್ಕನ ಮಗ
ಹೆಸರು ಬದಲಿಸಿಕೊಂಡ ಕಿಚ್ಚ ಸುದೀಪ್‌ ಅಕ್ಕನ ಮಗ

Sanchii 01 Movie Launched: ಕಿಚ್ಚ ಸುದೀಪ್‌ ಕುಟುಂಬದಿಂದ ಮತ್ತೋರ್ವ ನಟ ಸ್ಯಾಂಡಲ್‌ವುಡ್‌ಗೆ ಪ್ರವೇಶ ಪಡೆದಿದ್ದಾರೆ. ಕಳೆದ ತಿಂಗಳೇ ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಸುಳಿವು ನೀಡಿದ್ದರು ಸುದೀಪ್‌ ಅವರ ಅಕ್ಕನ ಮಗ ಸಂಚಿತ್ ಸಂಜೀವ್. ಈಗ ಇದೇ ಸಿನಿಮಾ ಅಧಿಕೃತವಾಗಿ ಮುಹೂರ್ತ ಮುಗಿಸಿಕೊಂಡಿದೆ. ಬಸವನಗುಡಿಯ‌ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಅಳಿಯನ ಮೊದಲ ಚಿತ್ರಕ್ಕೆ ಸ್ವತಃ ಕಿಚ್ಚ ಸುದೀಪ್‌ ಆಗಮಿಸಿದ್ದು ವಿಶೇಷವಾಗಿತ್ತು. ಇದೆಲ್ಲದಕ್ಕಿಂತ ವಿಶೇಷ ಏನೆಂದರೆ, ಇದೇ ಸಿನಿಮಾದ ಮುಹೂರ್ತದ ವೇಳೆ ಸಂಚಿತ್‌ ಆಗಿದ್ದ ತಮ್ಮ ಹೆಸರಿನ್ನು ಸಂಚಿ ಎಂದು ಬದಲಿಸಿಕೊಂಡಿದ್ದಾರೆ.

ಒಂದೊಳ್ಳೆ ವಿಭಿನ್ನ ಕಾನ್ಸೆಪ್ಟ್‌ ಸಿನಿಮಾ ಮೂಲಕ ಸಂಚಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಸಂಚಿಗೆ ನಾಯಕಿಯಾಗಿ ಪೆಪೆ ಸಿನಿಮಾ ಖ್ಯಾತಿಯ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಯಾಮರಾ ಆನ್ ಮಾಡುವ ಸಂಚಿ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಇನ್ನೂ ಸುದೀಪ್ ಅವರ ಇಡೀ ಕುಟುಂಬ ಹಾಜರಿದ್ದು ಮನೆ ಮಗನ ಚೊಚ್ಚಲ ಚಿತ್ರದ ಮುಹೂರ್ತ ಸಮಾರಂಭಕ್ಕೆ ಜೊತೆಯಾಗಿದ್ದು ವಿಶೇಷವಾಗಿತ್ತು.

ಅಂದಹಾಗೆ ಸಂಚಿ ಮೊದಲ ಸಿನಿಮಾಗೆ ವಿವೇಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿವೇಕ ಅವರಿಗೂ ಇದು ಮೊದಲ ಸಿನಿಮಾ. ಈ ಮೊದಲು ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಅವರು ಈ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಅಖಾಡಕ್ಕಿಳಿದಿದ್ದಾರೆ. ಸಂಚಿ ಮೊದಲ ಸಿನಿಮಾವನ್ನು ಕೆಆರ್‌ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ.

ಮೈಸೂರಿನ ಕಥೆ

ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ವಿವೇಕ, 'ಇದು ಮೈಸೂರು ಮೂಲದ ಕಥೆ. 2001 ರಿಂದ 2011ರ ವರೆಗೂ ಸಾಗಲಿದೆ. ಈ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ಕಥೆ ಕೇಳಿ ಇಂಪ್ರೆಸ್ ಆದ ಸಂಚಿ, ಮೊದಲ ಮೀಟಿಂಗ್‌ನಲ್ಲೇ ಒಪ್ಪಿಕೊಂಡರು. ಆದರೆ ಸುದೀಪ್ ಅವರಿಗೆ ಕಥೆ ಹೇಳಿದ್ದು ಥ್ರಿಲ್ಲಿಂಗ್ ಅನುಭವ’ ಎಂದರು.

ಇನ್ನು ನಾಯಕಿ ಕಾಜಲ್ ಮಾತನಾಡಿ 'ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ಇಡೀ ಸಿನಿಮಾತಂಡಕ್ಕೆ ಹಾಗೂ ನಿರ್ದೇಶಕ ವಿವೇಕ ಅವರಿಗೆ ಧನ್ಯವಾಗಳು. ಸಂಚಿ ಅವರ ಜೊತೆ ಕೆಲಸ ಮಾಡಲು ಎಕ್ಸಾಯಿಟ್ ಆಗಿದ್ದೀನಿ. ನಮ್ಮ ತಂಡಿದಿಂದ ಉತ್ತಮ ಸಿನಿಮಾ ನಿರೀಕ್ಷೆ ಮಾಡಬಹುದು’ ಎಂದರು. ನಟ ಮಯೂರ್ ಪಟೇಲ್ ಮಾತನಾಡಿ ‘ನನ್ನ ಸಿನಿಮಾ ಜೀವನದಲ್ಲೇ ಮೊದಲ ಬಾರಿಗೆ ಇಂತಹ ಪಾತ್ರ ಮಾಡುತ್ತಿದ್ದೇನೆ’ ಎಂದರು.

ನಿರ್ಮಾಪಕರ ಮಾತು

ಹೊಸ ಪ್ರತಿಭೆಯನ್ನು ಲಾಂಚ್ ಮಾಡುತ್ತಿರುವ ಖುಷಿ ಇದೆ. ಕನ್ನಡ ಇಂಡಸ್ಟ್ರಿಗೆ ಅನೇಕ ನಾಯಕರ ಅವಶ್ಯಕತೆ ಇದೆ ಹಾಗಾಗಿ ಸಂಚಿ ಅವರನ್ನು ಲಾಂಚ್ ಮಾಡುತ್ತಿರುವುದು ಹೆಮ್ಮೆ ಇದೆ. ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜೊತೆ ಸೇರಿ ಸಿನಿಮಾ ಮಾಡುತ್ತಿರುವುದು ಖುಷಿಯಿದೆ' ಎಂದು ನಿರ್ಮಾಪಕ ಯೋಗಿ ಜಿ ರಾಜ್ ಅವರು ಹೇಳಿದರು. ‘ನಿರ್ದೇಶಕ ವಿವೇಕ ಅವರನ್ನು ಕರೆದುಕೊಂಡು ಬಂದಿದ್ದು ನಟ ಧನಂಜಯ. ಬಳಿಕ ಈ ಕಥೆಯನ್ನು ಸಂಚಿ ಮಾಡಬೇಕು ಅಂತ ಅಂದುಕೊಂಡು ಸುದೀಪ್ ಅವರ ಬಳಿ ಕಥೆ ಹೇಳಿದೆವು. ಬಳಿಕ ಸುದೀಪ್ ಸರ್ ಒಪ್ಪಿಕೊಂಡು ಅವರು ಕೂಡ ಈ ಸಿನಿಮಾಗಾಗಿ ಸಿಕ್ಕಾಪಟ್ಟೆ ಕೆಲಸ ಮಾಡಿದ್ದಾರೆ’ ಎಂದರು ನಿರ್ಮಾಪಕ ಕಾರ್ತಿಕ್ ಗೌಡ.

ಹೀರೋ ಸಂಚಿ ಹೇಳುವುದೇನು?

'ಸಿನಿಮಾ ಕಥೆ ಕೇಳಿದ ಪ್ರಾರಂಭದಲ್ಲೇ ಇಂಪ್ರೆಸ್ ಆದೆ. ಈ ಸಿನಿಮಾ ಮೂಲಕ ನಾನು ಅದ್ಭುತವಾದ ಮೈಸೂರು ಸಿಟಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದೇನೆ. ಕಥೆ ತುಂಬಾ ವಿಭಿನ್ನವಾಗಿದೆ. ಧನಂಜಯ ಸರ್ ಅವರಿಗೆ ತುಂಬಾ ಧನ್ಯಾವಾದ ಹೇಳಲೇಬೇಕು. ಈ ಸಿನಿಮಾಗೆ ನನ್ನ ಹೆಸರನ್ನು ಸೂಚಿಸಿದ್ದೇ ಅವರು. ಬಳಿಕ ಕಾರ್ತಿಕ್ ಸರ್ ಮತ್ತು ಯೋಗಿ ಸರ್ ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಸಿನಿಮಾ ಮಾಡುತ್ತಿದ್ದಾರೆ, ಆ ನಂಬಿಕೆ ನಾನು ಉಳಿಸಿಕೊಳ್ಳುತ್ತೇನೆ. ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ನಿಂದ ಇದು ಮೊದಲ ಸಿನಿಮಾ. ಕನ್ನಡದಲ್ಲಿ ನಡೆಯುತ್ತಿರುವ ಈ ಕೊಲಬ್ರೇಷನ್ ತುಂಬಾ ಖುಷಿಯಾಗುತ್ತದೆ’ ಎಂದರು ನಾಯಕ ಸಂಚಿ.

ಫೆಬ್ರವರಿ 5ಕ್ಕೆ ಫಸ್ಟ್‌ ಲುಕ್

ಇದು ಮೈಸೂರು ಮೂಲಕ ಕ್ರೈಂ ಥ್ರಿಲ್ಲರ್. ಸ್ಟೋರಿಯಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಸಂಚಿ ಹುಟ್ಟುಹಬ್ಬಕ್ಕೆ ಅಂದರೆ ಫೆಬ್ರವರಿ 5ಕ್ಕೆ ರಿವೀಲ್ ಮಾಡಲು ಪ್ಲಾನ್ ಮಾಡಿಕೊಂಡಿದೆ ಸಿನಿಮಾತಂಡ. ಇನ್ನೂ ಸಿನಿಮಾದಲ್ಲಿ ನಟ ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೆ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಾಹಣ, ವಿಶ್ವಾಸ್ ಆರ್ಟ್ ವರ್ಕ್ ಚಿತ್ರಕ್ಕಿದೆ.

Whats_app_banner