Yuddhakaanda Teaser: ಕುತೂಹಲಕ್ಕೆ ಒಗ್ಗರಣೆ ಹಾಕಿದ ʻಯುದ್ಧಕಾಂಡʼ ಚಿತ್ರದ ಟೀಸರ್‌; ಅಜೇಯ್‌ ರಾವ್‌ ನಟನೆಗೆ ಸಿಕ್ತು ಪೂರ್ಣಾಂಕ
ಕನ್ನಡ ಸುದ್ದಿ  /  ಮನರಂಜನೆ  /  Yuddhakaanda Teaser: ಕುತೂಹಲಕ್ಕೆ ಒಗ್ಗರಣೆ ಹಾಕಿದ ʻಯುದ್ಧಕಾಂಡʼ ಚಿತ್ರದ ಟೀಸರ್‌; ಅಜೇಯ್‌ ರಾವ್‌ ನಟನೆಗೆ ಸಿಕ್ತು ಪೂರ್ಣಾಂಕ

Yuddhakaanda Teaser: ಕುತೂಹಲಕ್ಕೆ ಒಗ್ಗರಣೆ ಹಾಕಿದ ʻಯುದ್ಧಕಾಂಡʼ ಚಿತ್ರದ ಟೀಸರ್‌; ಅಜೇಯ್‌ ರಾವ್‌ ನಟನೆಗೆ ಸಿಕ್ತು ಪೂರ್ಣಾಂಕ

Yuddhakaanda Teaser: ಯುದ್ಧಕಾಂಡ ಸಿನಿಮಾದಲ್ಲಿ ನಾಯಕನಾಗಿ ಮಾತ್ರವಲ್ಲದೆ, ಅದೇ ಚಿತ್ರದ ನಿರ್ಮಾಣದ ಹೊಣೆಯನ್ನೂ ಹೊತ್ತು ಒಂದಷ್ಟು ಕನಸುಗಳ ಜತೆಗೆ ಆಗಮಿಸುತ್ತಿದ್ದಾರೆ ನಟ ಅಜೇಯ್‌ ರಾವ್.‌ ಇನ್ನೇನು ಏಪ್ರಿಲ್‌ 18ರಂದು ಯುದ್ಧಕಾಂಡ ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮೊದಲು ಖಡಕ್‌ ಟೀಸರ್‌ ಸದ್ದು ಮಾಡುತ್ತಿದೆ.

ʻಯುದ್ಧಕಾಂಡʼ ಚಿತ್ರದ ಟೀಸರ್‌ ಬಿಡುಗಡೆ
ʻಯುದ್ಧಕಾಂಡʼ ಚಿತ್ರದ ಟೀಸರ್‌ ಬಿಡುಗಡೆ

Yuddhakaanda Teaser: ಕೃಷ್ಣ ಅಜೇಯ್‌ ರಾವ್‌ ಇದೀಗ ಶತಾಯ ಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿದ್ದಾರೆ. ಲೇಟ್‌ ಆದರೂ ಲೇಟೆಸ್ಟ್‌ ಆಗಿ ಯುದ್ಧ ಸಾರಿದ್ದಾರೆ. ಅಂದರೆ, ʻಯುದ್ಧಕಾಂಡʼ ಸಿನಿಮಾ ಮೂಲಕ ಇನ್ನೇನು ಏಪ್ರಿಲ್‌ 18ರಂದು ತೆರೆ ಮೇಲೆ ಅಬ್ಬರಿಸಲಿದ್ದಾರೆ. ಕಂಟೆಂಟೇ ಕಿಂಗ್‌ ಎಂದು, ಗಟ್ಟಿ ಕಥೆಯೊಂದರಲ್ಲಿ ನಾಯಕನಾಗಿ ನಟಿಸುವುದಷ್ಟೇ ಅಲ್ಲ, ನಿರ್ಮಾಪಕರಾಗಿಯೂ ʻಯುದ್ಧಕಾಂಡʼ ಚಿತ್ರಕ್ಕೆ ಕೋಟಿ ಕೋಟಿ ಹಣ ಸುರಿದಿದ್ದಾರೆ ಅಜೇಯ್‌ ರಾವ್‌. ಈಗಾಗಲೇ ಯುದ್ಧಕಾಂಡದ ಸಣ್ಣ ಸಣ್ಣ ಝಲಕ್‌ ಕುತೂಹಲಕ್ಕೆ ಒಗ್ಗರಣೆ ಹಾಕಿವೆ. ಹೀಗಿರುವಾಗಲೇ ಭಾನುವಾರವಷ್ಟೇ ಬಿಡುಗಡೆ ಆದ ಟೀಸರ್‌ ನಿರೀಕ್ಷೆ ದುಪ್ಪಟ್ಟಾಗಿಸಿದೆ.

2022ರಲ್ಲಿ ಶೋಕಿವಾಲಾ ಸಿನಿಮಾ ಆದ ಬಳಿಕ, ಅಜೇಯ್‌ ರಾವ್‌ ಅವರ ಬೇರಾವ ಸಿನಿಮಾ ತೆರೆಗೆ ಬಂದಿಲ್ಲ. ತಡವಾದರೂ ಪರವಾಗಿಲ್ಲ, ಈ ಸಲ ಗೆಲ್ಲಲೇಬೇಕು ಎಂದು ಹಠತೊಟ್ಟು, ಕೋರ್ಟ್‌ ರೂಮ್‌ ಡ್ರಾಮಾದ ಜತೆಗೆ ಆಗಮಿಸಿದ್ದಾರೆ. ಶ್ರೀಕೃಷ್ಣ ಆರ್ಟ್ಸ್‌ ಮತ್ತು ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ಯುದ್ಧಕಾಂಡ ಸಿನಿಮಾ ನಿರ್ಮಾಣ ಮಾಡಿರುವ ಅಜೇಯ್‌ ರಾವ್‌, ಈ ಸಿನಿಮಾದಲ್ಲಿ ನ್ಯಾಯವಾದಿಯಾಗಿ ಎದುರಾಗಿದ್ದಾರೆ. ಕಮರ್ಷಿಯಲ್‌ ಕೋನದಲ್ಲಿಯೇ ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಪವನ್‌ ಭಟ್‌.

ಏನಿದೆ ಟೀಸರ್‌ನಲ್ಲಿ?

ಏಳು ವರ್ಷದ ಪುಟ್ಟ ಮಗುವಿನ ಮೇಲೆ ಅತ್ಯಾಚಾರವಾಗಿದೆ. ಆ ಕೃತ್ಯ ಎಸಗಿದಾತ ಆರಾಮಾಗಿ ಸಮಾಜದಲ್ಲಿ ಓಡಾಡ್ಕೊಂಡಿದ್ದಾನೆ. ಅದನ್ನ ಕಣ್ಣಾರೆ ನೋಡಿಕೊಂಡ ಯಾವ ತಾಯಿ ಸುಮ್ಮನಿರ್ತಾಳೆ... ಹೀಗೆ ಕೇಸ್‌ವೊಂದರ ಬಗ್ಗೆ ತುಂಬ ಇಂಟೆನ್ಸ್‌ ಆಗಿ ಅಜೇಯ್‌ ರಾವ್‌ ತಮ್ಮ ಪಾತ್ರ ಪೋಷಣೆ ಮಾಡಿದ್ದಾರೆ. ಇಂಥ ಕೃತ್ಯ ನಡೆದರೂ, ಸಮಾಜ ಮಾತ್ರ ಅದ್ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಆ ತಾಯಿ ವಿರುದ್ಧವೇ ಇಡೀ ಸಮಾಜ ತಿರುಗಿ ಬಿದ್ದಿದೆ. ಹೀಗಿರುವಾಗ ಈ ಕೇಸ್‌ಅನ್ನು ಕಥಾನಾಯಕ ತನ್ನ ಕೈಗೆತ್ತಿಕೊಳ್ಳುತ್ತಾನೆ. ಈ ಒಂದು ಸಣ್ಣ ಝಲಕ್‌ ಬಿಡುಗಡೆಯಾದ ಟೀಸರ್‌ನಲ್ಲಿದೆ. ಅಜೇಯ್‌ ರಾವ್‌ ಅವರ ಇಂಟೆನ್ಸ್‌ ನಟನೆ ಎಲ್ಲರಿಗೂ ಇಷ್ಟವಾಗಿದೆ. ಬಗೆಬಗೆ ಕಾಮೆಂಟ್‌ ಮೂಲಕವೇ ಅವರ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

ಬಹುತಾರಾಗಣದ ಸಿನಿಮಾ..

ಯುದ್ಧಕಾಂಡ ಚಿತ್ರದಲ್ಲಿ ನಾಯಕನಾಗಿ ಅಜೇಯ್‌ ರಾವ್‌ ನಟಿಸಿದರೆ, ಹಿರಿಯ ನಟರಾದ ನಾಗಾಭರಣ, ಪ್ರಕಾಶ್ ಬೆಳವಾಡಿ ಅವರ ಜತೆಗೆ ಕೆಜಿಎಫ್‌ ಸಿನಿಮಾ ಖ್ಯಾತಿಯ ಅರ್ಚನಾ ಜೋಯಿಸ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಕಾರ್ತಿಕ್ ಶರ್ಮ ಛಾಯಾಗ್ರಹಣ, ಹೇಮಂತ್ ಜೋಯಿಸ್, ಕೆ ಬಿ ಪ್ರವೀಣ್ ಸಂಗೀತ ನಿರ್ದೇಶನ ಹಾಗೂ ಶ್ರೀ ಕ್ರೇಜಿ ಮೈಂಡ್ಸ್ ಅವರ ಸಂಕಲನ ʻಯುದ್ಧಕಾಂಡʼ ಚಿತ್ರಕ್ಕಿದೆ. ಸದ್ಯ ಟೀಸರ್‌ ಮೂಲಕವೇ ಕುತೂಹಲ ಮೂಡಿಸಿರುವ ಈ ಸಿನಿಮಾ ಇದೇ ಏಪ್ರಿಲ್‌ 18ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ರಾಷ್ಟ್ರಪತಿಗಳಿಗೂ ತೋರಿಸುವ ಪ್ಲಾನ್‌ ಇದೆ..

ಸಿನಿಮಾ ಮೂಡಿಬಂದಿರುವ ರೀತಿಗೆ, ಮಾಡಿದ ಗಟ್ಟಿಕಥೆಯನ್ನು ನೋಡಿ, ಇದನ್ನು ರಾಷ್ಟ್ರಪತಿಗಳಿಗೂ ತೋರಿಸುವ ಯೋಚನೆ ಚಿತ್ರತಂಡದ್ದು. ಈ ಬಗ್ಗೆ ಇತ್ತೀಚೆಗಷ್ಟೇ ಮಾತನಾಡಿದ್ದ ಅಜೇಯ್‌ ರಾವ್‌, " ಯುದ್ಧಕಾಂಡ ಒಂದು ಸಾಮಾಜಿಕ ಕಳಕಳಿಯುಳ್ಳ ಸಿನಿಮಾ. ಕಡಿಮೆ ಅಥವಾ ಹೆಚ್ಚು ಬಜೆಟ್‌ನ ಚಿತ್ರವಲ್ಲ. ಬದಲಿಗೆ ಯಾವುದೇ ಕೊರತೆ ಬಾರದ ಹಾಗೆ ಅಚ್ಚುಕಟ್ಟಾಗಿ ನಿರ್ಮಾಣವಾದ ಸಿನಿಮಾ. ಸಮಾಜಕ್ಕೆ ಒಳ್ಳೆಯ ಸಂದೇಶವಿರುವ ಈ ಚಿತ್ರವನ್ನು ರಾಷ್ಟ್ರಪತಿಗಳಿಗೂ ತೋರಿಸುವ ಆಲೋಚನೆ ಇದೆ" ಎಂದಿದ್ದರು ಅಜೇಯ್‌ ರಾವ್.‌

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.