Upendra Health Update: ಕೆಮ್ಮಿದ್ರೂ, ಏನೋ ಆಗಿ ಆಸ್ಪತ್ರೆ ಸೇರಿದ ಅಂತ ಹಬ್ಬಿಸ್ತಾರೆ.. ಸುಳ್ಳು ಸುದ್ದಿ ಬಗ್ಗೆ ಉಪ್ಪಿ ಸ್ಪಷ್ಟನೆ..ವಿಡಿಯೋ
ಉಪೇಂದ್ರ ಆರೋಗ್ಯದ ಬಗ್ಗೆ ವಿಚಾರಿಸಲು ಮಾಧ್ಯಮದವರು ಅವರನ್ನು ಭೇಟಿ ಆದಾಗ, ಉಪ್ಪಿ ಚೆನ್ನಾಗಿಯೇ ಮಾತನಾಡಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಈ ರೀತಿ ಸುಳ್ಳುಸುದ್ದಿ ಹಬ್ಬಿಸುತ್ತಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಫೇಸ್ಬುಕ್ ಲೈವ್ ಬಂದು ಮಾತನಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಸದ್ಯಕ್ಕೆ 'ಕಬ್ಜ' ಸಿನಿಮಾ ಮುಗಿಸಿಕೊಂಡು 'ಯುಐ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ಸಿನಿಮಾ ಶೂಟಿಂಗ್ ಬೆಂಗಳೂರಿನ ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಆದರೆ ಚಿತ್ರೀಕರಣದ ಸಮಯದಲ್ಲಿ ಉಪ್ಪಿಗೆ ಉಸಿರಾಟದ ತೊಂದರೆ ಆಗಿ ಆಸ್ಪತ್ರೆಗೆ ಸೇರಿದ್ದಾರೆ ಎನ್ನಲಾಗಿದೆ.
ಟ್ರೆಂಡಿಂಗ್ ಸುದ್ದಿ
'ಯುಐ' ಶೂಟಿಂಗ್ ವೇಳೆ ರಿಯಲ್ ಸ್ಟಾರ್ಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಶೀಘ್ರವೇ ಅವರನ್ನು ನೆಲಮಂಗಲದ ಹರ್ಷ ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿದೆ. ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಈಗ ಉಪೇಂದ್ರ ಆರಾಮವಾಗಿದ್ದು ಮತ್ತೆ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಉಪೇಂದ್ರಗೆ ಏನಾಗಿದೆ ಎಂದು ಅಭಿಮಾನಿಗಳು ಕೂಡಾ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಉಪೇಂದ್ರ, ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುದ್ದಿಯನ್ನು ನಿರಾಕರಿಸಿದ್ದಾರೆ.
ಉಪೇಂದ್ರ ಆರೋಗ್ಯದ ಬಗ್ಗೆ ವಿಚಾರಿಸಲು ಮಾಧ್ಯಮದವರು ಅವರನ್ನು ಭೇಟಿ ಆದಾಗ, ಉಪ್ಪಿ ಚೆನ್ನಾಗಿಯೇ ಮಾತನಾಡಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಈ ರೀತಿ ಸುಳ್ಳುಸುದ್ದಿ ಹಬ್ಬಿಸುತ್ತಿರುವವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಫೇಸ್ಬುಕ್ ಲೈವ್ ಬಂದು ಮಾತನಾಡಿದ್ದಾರೆ. ''ನೋಡಿ, ನಾವೆಲ್ಲಾ ಮೋಹನ್ ಬಿ .ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ, ಚಿತ್ರತಂಡದ ಎಲ್ಲರೂ ಇಲ್ಲೇ ಇದ್ದಾರೆ. ಇಲ್ಲಿ ಸ್ವಲ್ಪ ಧೂಳು ಇದೆ. ಸ್ವಲ್ಪ ಡಸ್ಟ್ ಅಲರ್ಜಿ ಆಗಿ ಕೆಮ್ಮು ಬಂತು ಅಷ್ಟೇ. ಅದನ್ನೇ ಉಸಿರಾಟದ ತೊಂದರೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ'' ಎಂದು ಉಪೇಂದ್ರ ಹೇಳಿದ್ದಾರೆ. ಪಕ್ಕದಲ್ಲೇ ಇದ್ದ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಕೂಡಾ ಮಾತನಾಡಿ, ಉಪೇಂದ್ರ ಸರ್ಗೆ ಏನೂ ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಸ್ವತ: ಉಪೇಂದ್ರ ಮಾತನಾಡಿ, ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದನ್ನು ಕೇಳಿ ಅಭಿಮಾನಿಗಳು ಸಮಾಧಾನ ವ್ಯಕ್ತಪಡಿಸಿದ್ದಾರೆ.
'ಕಬ್ಜ' ಬಿಡುಗಡೆಗೆ ಕಾಯುತ್ತಿರುವ ಸಿನಿಪ್ರಿಯರು
ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಚಿತ್ರೀಕರಣ ಮುಗಿದು, ಇತ್ತೀಚೆಗೆ ಟೀಸರ್ ಕೂಡಾ ಬಿಡುಗಡೆಯಾಗಿದೆ. ಟೀಸರ್ಗೆ ಎಲ್ಲಡೆಯಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಬರೀ ಪ್ರೇಕ್ಷಕರಷ್ಟೇ ಅಲ್ಲ, ಪರಭಾಷೆ ಚಿತ್ರರಂಗ ಕೂಡಾ ಈ ಚಿತ್ರವನ್ನು ಎದುರು ನೋಡುತ್ತಿವೆ.ಇತ್ತೀಚೆಗೆ ಇದೇ ವಿಚಾರವಾಗಿ ಬಾಲಿವುಡ್ನ ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಳ್ಳುವುದರ ಜತೆಗೆ ಚಿತ್ರದ ಬಿಡುಗಡೆ ದಿನಾಂಕಕ್ಕೆ ಎದುರು ನೋಡುತ್ತಿರುವುದಾಗಿ ಹೇಳಿದ್ದರು. ಇದಕ್ಕೆ ಪೂರಕವಾಗಿ ಚಿತ್ರತಂಡದವರು ಇನ್ನಷ್ಟೇ ಚಿತ್ರದ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.
ಆರ್. ಚಂದ್ರು ನಿರ್ದೇಶನದ 'ಕಬ್ಜ' ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ಮರಾಠಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಉಪೇಂದ್ರ ಜತೆಗೆ ಸುದೀಪ್ ಕೂಡಾ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಯಾ ಶರಣ್, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಹಲವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.