ರಂಗ SSLC ಬಳಿಕ ಮತ್ತೆ ಯೋಗರಾಜ್ ಭಟ್ಟರ ಜೊತೆಗೆ ನಟಿ ರಮ್ಯಾ ಸಿನಿಮಾ; ಕಾದು ಕೂತವರಿಗೆ ಸಿಕ್ತು ಸಿಹಿ ಸುದ್ದಿ
ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

Actress Ramya: ಸ್ಯಾಂಡಲ್ವುಡ್ ನಟಿ, ಮೋಹಕ ತಾರೆ ರಮ್ಯಾ ಸಿನಿಮಾದಿಂದ ದೂರವೇ ಉಳಿದಿದ್ದಾರೆ. ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡ ಸಿನಿಮಾದಲ್ಲಿ ನಟಿಸ್ತಾರೆ ಎನ್ನುವಷ್ಟರಲ್ಲಿಯೇ, ಆ ಸುದ್ದಿ ಖಚಿತವಾಗಲಿಲ್ಲ. ಸ್ಪಷ್ಟ ಉತ್ತರವೂ ಸಿಗಲಿಲ್ಲ. ಅಚ್ಚರಿಯ ವಿಚಾರ ಏನೆಂದರೆ, ಇದೇ ಮೋಹಕತಾರೆಯ ಸಿನಿಮಾ ಬಗ್ಗೆ ಇದೀಗ ಬಿಗ್ ಅಪ್ಡೇಟ್ ಸಿಕ್ಕಿದೆ. ಅದೇನೆಂದರೆ, ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎಂಬ ಗುಲ್ಲು ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದೆ. ಇನ್ನೇನು ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ನಟಿ ರಮ್ಯಾ ಅವರ ಕಂಬ್ಯಾಕ್ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಈ ವರೆಗೂ ಸಿಕ್ಕಿರಲಿಲ್ಲ. ಉತ್ತರಕಾಂಡ ಸಿನಿಮಾ ಬಳಿಕ ಸ್ವಾತಿ ಮುತ್ತಿನ ಮಳೆಹನಿಯೇ ಚಿತ್ರದಲ್ಲಿಯೂ ನಟಿಸುವುದಾಗಿ ಹೇಳಿದ್ದರು. ಆ ಚಿತ್ರದಿಂದಲೂ ಹಿಂದೆ ಸರಿದು, ನಿರ್ಮಾಣ ಸಂಸ್ಥೆ ಆರಂಭಿಸಿ, ಅದೇ ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದ ನಿರ್ಮಾಪಕರಾದರು. ಈ ನಡುವೆ ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ, ನಟಿಸುವುದಾಗಿ ಹೇಳಿದ್ದರು. ಈಗ ಅದೆಲ್ಲದಕ್ಕೂ ಕಾಲ ಕೂಡಿ ಬಂದಂತಿದೆ.
ಮನದ ಕಡಲು ಬಿಡುಗಡೆ ಬಳಿಕ ಹೊಸ ಸಿನಿಮಾ
'ಮನದ ಕಡಲು' ಸಿನಿಮಾ ಕೆಲಸಗಳಲ್ಲಿ ನಿರ್ದೇಶಕ ಯೋಗರಾಜ್ ಭಟ್ ಬಿಜಿಯಾಗಿದ್ದಾರೆ. ಇದೇ ತಿಂಗಳ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗ ಈ ಸಿನಿಮಾ ಬಿಡುಗಡೆಗೂ ಮುನ್ನವೇ, ಯೋಗರಾಜ್ ಭಟ್ ಅವರ ಮುಂದಿನ ಸಿನಿಮಾದಲ್ಲಿ ರಮ್ಯಾ ನಟಿಸುವುದು ಪಕ್ಕಾ ಎನ್ನಲಾಗುತ್ತಿದೆ. ಈ ಹಿಂದೆ ರಂಗ SSLC ಸಿನಿಮಾದಲ್ಲಿ ಭಟ್ಟರ ನಿರ್ದೇಶನದಲ್ಲಿ ಕಿಚ್ಚ ಸುದೀಪ್ - ರಮ್ಯಾ ಅದ್ಭುತ ಅಭಿನಯ ಮಾಡಿದ್ರು. ಈಗ ಮತ್ತೊಮ್ಮೆ ರಮ್ಯಾ-ಯೋಗರಾಜ್ ಭಟ್ ಕಾಂಬಿನೇಷನ್ ಒಟ್ಟಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತ ಪಡಿಸಿದ್ದಾರೆ.
ಮುಂಗಾರು ಮಳೆ ಚಿತ್ರದ ನಿರ್ಮಾಪಕರ ಸಿನಿಮಾ
'ಮನದ ಕಡಲು' ನಿರ್ಮಾಪಕರುಗಳಾದ ಇ.ಕೃಷ್ಣಪ್ಪ ಮತ್ತು ಜಿ.ಗಂಗಾಧರ್ ಅವರೇ ರಮ್ಯಾ -ಯೋಗರಾಜ್ ಭಟ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡಲು ಆಸೆ ವ್ಯಕ್ತಪಡಿಸಿದ್ದಾರೆ. ರಮ್ಯಾ ಒಡೆತನದ ಆ್ಯಪಲ್ ಬಾಕ್ಸ್ ಸಹಯೋಗದಲ್ಲಿ ಇ.ಕೆ.ಎಂಟರ್ ಟೈನರ್ ಅಡಿ ಈ ಸಿನಿಮಾ ಸಿದ್ಧವಾಗಲಿದೆ. ಈ ಬಗ್ಗೆ ರಮ್ಯಾ ಅವರೇ ಆಸಕ್ತಿದಾಯಕವಾಗಿ ಮಾತನಾಡಿದ್ದಾರೆ.
'ಮನದ ಕಡಲು' ಸಿನಿಮಾದ ನೀಲಿ ನೀಲಿ ಕಡಲು ಎಂಬವ ಹಾಡನ್ನ ಬಿಡುಗಡೆ ಮಾಡುವ ಸಂದರ್ಭದಲ್ಲಿ ರಮ್ಯಾ ಈ ಮಾತನ್ನ ಆಡಿದ್ದಾರೆ. ಮಾರ್ಚ್ 28 ರಂದು 'ಮನದ ಕಡಲು' ಸಿನಿಮಾ ಬಿಡುಗಡೆಯಾದ ನಂತರ ರಮ್ಯಾ- ಯೋಗರಾಜ್ ಭಟ್ ಕಾಂಬೋ ಸಿನಿಮಾದ ಶುರುವಿನ ಸುದ್ದಿ ಕೇಳಬಹುದು.