ಕಂಟೆಂಟ್‌ ಆಧರಿತ ಸಿನಿಮಾಗಳತ್ತ ರಾಗಿಣಿ ಚಿತ್ತ; ಚಿತ್ರೀಕರಣಕ್ಕೆ ಹೊರಟ ʻಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರತಂಡ
ಕನ್ನಡ ಸುದ್ದಿ  /  ಮನರಂಜನೆ  /  ಕಂಟೆಂಟ್‌ ಆಧರಿತ ಸಿನಿಮಾಗಳತ್ತ ರಾಗಿಣಿ ಚಿತ್ತ; ಚಿತ್ರೀಕರಣಕ್ಕೆ ಹೊರಟ ʻಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರತಂಡ

ಕಂಟೆಂಟ್‌ ಆಧರಿತ ಸಿನಿಮಾಗಳತ್ತ ರಾಗಿಣಿ ಚಿತ್ತ; ಚಿತ್ರೀಕರಣಕ್ಕೆ ಹೊರಟ ʻಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರತಂಡ

ʻಸರ್ಕಾರಿ ನ್ಯಾಯ ಬೆಲೆ ಅಂಗಡಿʼ ಸಿನಿಮಾ ಅದ್ಧೂರಿ ಮುಹೂರ್ತ ಮುಗಿಸಿಕೊಂಡಿದೆ. ನಟಿ ರಾಗಿಣಿ ದ್ವಿವೇದಿ ಮತ್ತು ಕುಮಾರ್‌ ಬಂಗಾರಪ್ಪ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಶೂಟಿಂಗ್‌ ಸಹ ಶುರುವಾಗಿದೆ.

ಕಂಟೆಂಟ್‌ ಆಧರಿತ ಸಿನಿಮಾಗಳತ್ತ ರಾಗಿಣಿ ಚಿತ್ತ; ಚಿತ್ರೀಕರಣಕ್ಕೆ ಹೊರಟ ʻಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರತಂಡ
ಕಂಟೆಂಟ್‌ ಆಧರಿತ ಸಿನಿಮಾಗಳತ್ತ ರಾಗಿಣಿ ಚಿತ್ತ; ಚಿತ್ರೀಕರಣಕ್ಕೆ ಹೊರಟ ʻಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರತಂಡ

ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಗ್ಲಾಮರಸ್‌ ಪಾತ್ರಗಳ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ರಾಗಿಣಿ ದ್ವಿವೇದಿ, ಈಗ ನಿಧಾನವಾಗಿ ಕಂಟೆಂಟ್‌ ಆಧರಿತ ಸಿನಿಮಾಗಳತ್ತ ಒಲವು ತೋರುತ್ತಿದ್ದಾರೆ. ಆ ಪೈಕಿ ಇದೀಗ ಸೆಟ್ಟೇರಿದ ಸಿನಿಮಾ ʻಸರ್ಕಾರಿ ನ್ಯಾಯಬೆಲೆ ಅಂಗಡಿʼ ಸಹ ಅಂಥ ಕಂಟೆಂಟ್‌ವುಳ್ಳ ಸಿನಿಮಾ. ಇತ್ತೀಚೆಗಷ್ಟೇ ಈ ಸಿನಿಮಾ ಮುಹೂರ್ತ ಮುಗಿಸಿಕೊಂಡು, ಚಿತ್ರೀಕರಣಕ್ಕೆ ಅಣಿಯಾಗಿದೆ. ಈ ಸಿನಿಮಾ ಬಗ್ಗೆ ಇಡೀ ತಂಡ ಮಾಹಿತಿ ಹಂಚಿಕೊಂಡಿದೆ. ಮೊದಲಿಗೆ ಚಿತ್ರದ ನಾಯಕಿ ರಾಗಿಣಿ ದ್ವಿವೇದಿ ಹೇಳಿದ್ದು ಹೀಗೆ.

'ಜಯಶಂಕರ ಟಾಕೀಸ್‌' ಬ್ಯಾನರಿನಲ್ಲಿ ತೇಜು ಮೂರ್ತಿ ಮತ್ತು ಎಸ್‌. ಪದ್ಮಾವತಿ ಚಂದ್ರಶೇಖರ್‌ ಜಂಟಿಯಾಗಿ ನಿರ್ಮಿಸುತ್ತಿರುವ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಸಿನಿಮಾಕ್ಕೆ ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ 'ತಾಯವ್ವ' ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ಸಾತ್ವಿಕ್‌ ಪವನ್‌ ಕುಮಾರ್‌ ಈ ಸಿನಿಮಾಕ್ಕೆ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ. ಅನಂತ ಆರ್ಯನ್‌ ಈ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

ನಟಿ ರಾಗಿಣಿ ಮಾತನಾಡಿ, "ನನಗೆ ಇದೊಂದು ಹೊಸಥರದ ಪಾತ್ರ ಇಲ್ಲಿಯವರೆಗೆ ನಾನೆಂದೂ, ಈ ಥರದ ಪಾತ್ರಗಳನ್ನು ಮಾಡಿರಲಿಲ್ಲ. ಪಕ್ಕಾ ಹಳ್ಳಿಯ ಹೆಣ್ಣು ಮಗಳೊಬ್ಬಳು ತನ್ನ ಊರಿನ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ವ್ಯವಸ್ಥೆಯಲ್ಲಿ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಹೇಗೆ ಎದುರಿಸಿ, ಬಡ ಮತ್ತು ಜನಸಾಮಾನ್ಯರಿಗೆ ನ್ಯಾಯ ಒದಗಿಸುತ್ತಾಳೆ ಎಂಬುದು ನನ್ನ ಪಾತ್ರ. ನಾನು ಈ ಸಿನಿಮಾದಲ್ಲಿ ಪಾರ್ವತಿ ಎಂಬ ಹಳ್ಳಿಯ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ.

ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವ ಸಿನಿಮಾ

'ಸಿನಿಮಾದ ಹೆಸರೇ ಹೇಳುವಂತೆ ಇದು 'ಸರ್ಕಾರಿ ನ್ಯಾಯಬೆಲೆ ಅಂಗಡಿ'ಯ ಸುತ್ತ ನಡೆಯುವ ಕಥೆಯನ್ನು ಹೊಂದಿದ ಸಿನಿಮಾ. 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಯಾರಿಗಾಗಿ ಇದೆ? ಯಾವ ಉದ್ದೇಶಕ್ಕಾಗಿ 'ಸರ್ಕಾರಿ ನ್ಯಾಯಬೆಲೆ ಅಂಗಡಿ'ಯನ್ನು ತೆರೆಯಲಾಗಿದೆ? ಈ ವ್ಯವಸ್ಥೆ ಹೇಗಿರಬೇಕು? ಅದರಲ್ಲಿರುವ ಲೋಪಗಳೇನು? ಎಂಬುದನ್ನು ತಿಳಿಸುವುದೇ ಈ ಸಿನಿಮಾದ ಉದ್ದೇಶ. ಇದು ಕೇವಲ ಸಿನಿಮಾ ಮಾತ್ರವಲ್ಲ. ಜನರಿಗೆ ಈ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಒಳ-ಹೊರ ವ್ಯವಸ್ಥೆಯನ್ನು ಪರಿಚಯಿಸುವ ಒಂದು ಕಾರ್ಯಕ್ರಮ ಎಂದಿದ್ದಾರೆ ನಟ ಕುಮಾರ್‌ ಬಂಗಾರಪ್ಪ.

ನಿರ್ದೇಶಕರು ಹೇಳುವುದೇನು?

'ಇದೊಂದು ಗ್ರಾಮೀಣ ಹಿನ್ನೆಲೆಯಲ್ಲಿ ಮಹಿಳಾ ಪ್ರಧಾನ ಕಥಾಹಂದರದ ಫ್ಯಾಮಿಲಿ ಡ್ರಾಮಾ. ನಮ್ಮ ನಡುವೆಯೇ ನಡೆಯುವಂಥ ಅನೇಕ ವಿಷಯಗಳನ್ನು ಈ ಸಿನಿಮಾದಲ್ಲಿ ಚರ್ಚಿಸಿದ್ದೇವೆ. ಈ ಸಿನಿಮಾ ಪ್ರತಿಯೊಬ್ಬ ನೋಡುಗರನ್ನೂ ಯೋಚಿಸುವಂತೆ ಮಾಡುತ್ತದೆ. ಅದರಲ್ಲೂ ಗ್ರಾಮೀಣ ಮಹಿಳೆಯರಿಗೆ ಈ ಸಿನಿಮಾ ಬಹುಬೇಗ ಮನಮುಟ್ಟುತ್ತದೆ. ಇನ್ನೊಂದು ವಿಶೇಷವೆಂದರೆ, ಇಬ್ಬರು ಮಹಿಳೆಯರೇ ಸೇರಿ ಇಂಥದ್ದೊಂದು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಮಹಿಳಾ ಕೇಂದ್ರಿತ ಕಥೆ ಮತ್ತು ಪಾತ್ರಗಳೇ ಈ ಸಿನಿಮಾದಲ್ಲಿ ಹೈಲೈಟ್‌ ಆಗಿರಲಿದೆ. ನಟ ಅಂಬರೀಶ್‌ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ದೊಡ್ಡ ಅರಸಿನಕೆರೆ ಸುತ್ತಮುತ್ತ ಸುಮಾರು 35 ದಿನಗಳ ಕಾಲ ಈ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ ಎಂಬುದು ನಿರ್ದೇಶಕ ಸಾತ್ವಿಕ್‌ ಪವನ್‌ ಕುಮಾರ್‌ ಅವರ ಮಾತು.

ನಟಿ ರಾಗಿಣಿ ದ್ವಿವೇದಿ, ಕುಮಾರ್‌ ಬಂಗಾರಪ್ಪ, ಹಿರಿಯ ನಟ ದೊಡ್ಡಣ್ಣ ಮೊದಲಾದ ಕಲಾವಿದರು 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಸಿನಿಮಾದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿರುವ ಶ್ರೀಗಂಗಾಧರೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಹಿರಿಯ ನಟ ಶ್ರೀನಾಥ್‌ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿದರೆ, ಆಹಾರ ಮತ್ತು ನಾಗರೀಕ ಸರಬರಾಜು ಖಾತೆ ಸಚಿವ ಕೆ. ಹೆಚ್‌. ಮುನಿಯಪ್ಪ, ಶಾಸಕ ಎಲ್‌. ಶಿವರಾಮೇ ಗೌಡ, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಒಕ್ಕೂಟದ ಅಧ್ಯಕ್ಷ ಟಿ. ಕೃಷ್ಣಪ್ಪ, ನಿರ್ಮಾಪಕ ಭಾ. ಮ. ಹರೀಶ್‌, ಭಾ. ಮ. ಗಿರೀಶ್‌ ಸೇರಿ ಅನೇಕರು ಆಗಮಿಸಿದ್ದರು.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.