ʻಎಲ್ಲಾ ಮುಸ್ಲಿಮರನ್ನು ನಾವು ಕೆಟ್ಟವರು ಅಂತ ಹೇಳೋಕೆ ಆಗಲ್ಲʼ ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ
ಜಮು ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. “ಟೆರರಿಸಂಗೆ ಧರ್ಮನೂ ಇರಲ್ಲ, ಮನುಷ್ಯತ್ವನೂ ಇರಲ್ಲ. ನೀವು ಹಾಗೆ ನೋಡೋಕೆ ಹೋದರೆ, ಈ ದಾಳಿ ಬಳಿಕ ಅಲ್ಲಿನ ಎಲ್ಲರಿಗೂ ಸಹಾಯ ಮಾಡಿರುವುದು ಅಲ್ಲಿನ ಮುಸ್ಲಿಮರೇ. ನಾವು ಎಲ್ಲಾ ಮುಸ್ಲಿಮರನ್ನ ಕೆಟ್ಟವರು ಅಂತ ಹೇಳೋಕೆ ಆಗಲ್ಲ” ಎಂದಿದ್ದಾರೆ.

ಭೂಲೋಕದ ಸ್ವರ್ಗ ಜಮ್ಮು ಕಾಶ್ಮೀರದಲ್ಲಿ ಮತ್ತೆ ಅಮಾಯಕರ ನೆತ್ತರು ಹರಿದಿದೆ. ಏಪ್ರಿಲ್ 22ರಂದು ಪಹಲ್ಗಾಮ್ ಧಾಮದಲ್ಲಿ ಏನೂ ಅರಿಯದೆ ತಮ್ಮ ಕುಟುಂಬ, ಆಪ್ತರ ಜತೆಗೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದ ಜೀವಗಳನ್ನು ಇಬ್ಬರು ಬಂದೂಕುಧಾರಿಗಳು ಸರ್ವನಾಶ ಮಾಡಿದ್ದಾರೆ. ಏಕಾಏಕಿ ಗುಂಡಿನ ಮಳೆಗೆರೆದ ಉಗ್ರರು, ಒಟ್ಟು 26 ಜೀವಗಳನ್ನು ಬಲಿ ಪಡೆದಿದ್ದಾರೆ. ಕರ್ನಾಟಕದ ಮೂವರು ಈ ದಾಳಿಯಲ್ಲಿ ಅಸುನೀಗಿದ್ದಾರೆ. ದಾಳಿ ಬಳಿಯ ಇಡೀ ದೇಶ ಈ ಕೃತ್ಯಕ್ಕೆ ಕಂಬನಿ ಮಿಡಿದಿದೆ. ಉಗ್ರರನ್ನು ಸೆದೆಬಡಿಯುವಂತೆ ಕೇಂದ್ರ ಸರ್ಕಾರಕ್ಕೂ ಒತ್ತಾಯಿಸಿದೆ. ಈ ಬೆನ್ನಲ್ಲೇ ಇದೀಗ ಸೇನಾ ಕಾರ್ಯಾಚರಣೆಗಳು ಚುರುಕಿನ ಕೆಲಸ ಆರಂಭಿಸಿವೆ. ಇದೀಗ ಇದೇ ಕೃತ್ಯವನ್ನು ನಟಿ ರಮ್ಯಾ ಖಂಡಿಸಿದ್ದಾರೆ. ಈ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಆಭರಣ ಮಳಿಗೆಯೊಂದರ ಉದ್ಘಾಟನೆಗೆ ಬಂದಿದ್ದ ರಮ್ಯಾ, ಪಹಲ್ಗಾಮ್ ದಾಳಿ ಬಗ್ಗೆ ಮಾಧ್ಯಮಕ್ಕೆ ಮಾತನಾಡಿದ್ದಾರೆ. "ಟೆರರಿಸಂಗೆ ಧರ್ಮನೂ ಇರಲ್ಲ, ಮನುಷ್ಯತ್ವನೂ ಇರಲ್ಲ. ಈ ಉಗ್ರರ ದಾಳಿಯನ್ನ ನಾನು ತೀವ್ರವಾಗಿ ಖಂಡಿಸುತ್ತೇನೆ. ಈ ಸಮಯದಲ್ಲಿ ಭದ್ರತಾ ಲೋಪವನ್ನೂ ನಾವು ಪ್ರಶ್ನೆ ಮಾಡಬೇಕಾಗುತ್ತದೆ. ಈ ನರಮೇಧಕ್ಕೆ ಕಾರಣರಾದವರಿಗೆ ಮೋದಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದಿದ್ದಾರೆ.
ಸಹಾಯ ಮಾಡಿದ್ದೂ ಮುಸ್ಲಿಮರೇ!
ಶೂಟ್ ಮಾಡುವಾಗ ನೀವು ಮುಸ್ಲಿಮರಾ ಎಂದು ಕೇಳಿ, ಕುರಾನ್ ಓದಲು ಬಾರದವರನ್ನು ಶೂಟ್ ಮಾಡಲಾಗಿದೆ. ಈ ಬಗ್ಗೆ ಏನು ಹೇಳ್ತಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ರಮ್ಯಾ, "ನೀವು ಹಾಗೆ ನೋಡೋಕೆ ಹೋದರೆ, ಈ ದಾಳಿ ಬಳಿಕ ಅಲ್ಲಿನ ಎಲ್ಲರಿಗೂ ಸಹಾಯ ಮಾಡಿರುವುದು ಅಲ್ಲಿನ ಮುಸ್ಲಿಮರೇ. ನಾವು ಎಲ್ಲಾ ಮುಸ್ಲಿಮರನ್ನ ಕೆಟ್ಟವರು ಅಂತ ಹೇಳೋಕೆ ಆಗಲ್ಲ. ನಾನು ಅದಕ್ಕೆ ಹೇಳಿದ್ದು ಟೆರರಿಸಂಗೆ ಯಾವ ಧರ್ಮನೂ ಬರಲ್ಲ, ಮನುಷ್ಯತ್ವನೂ ಬರಲ್ಲ ಅಂತ. ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡೋಕೆ ಆಗಲ್ಲ. ಉಗ್ರವಾದ ಮತ್ತು ಟೆರರಿಸಂ ಅನ್ನು ನಾವು ಖಂಡಿಸಲೇಬೇಕು’’ ಎಂದಿದ್ದಾರೆ.
ಗಡಿ ಭಾಗದ ಭದ್ರತೆ ಹೆಚ್ಚಬೇಕು
"ಗಡಿಭಾಗಗಳಲ್ಲಿ ಇನ್ನಷ್ಟು ಭದ್ರತೆ ನೀಡಲೇಬೇಕು. ಅದರಲ್ಲೂ ಜಮ್ಮು ಕಾಶ್ಮೀರ ಮತ್ತು ಅರುಣಾಚಲ ಪ್ರದೇಶ ಬಾರ್ಡರ್ಗಳಲ್ಲಿಯೂ ಭದ್ರತೆ ಹೆಚ್ಚಿಸಬೇಕು. ಅದರ ಬಗ್ಗೆ ನಾವು ತುಂಬ ಎಚ್ಚರವಾಗಿರಬೇಕುʼ ಎಂದಿದ್ದಾರೆ. ಭಯೋತ್ಪಾದನೆ ವಿರುದ್ಧ ನಮ್ಮ ದೇಶ ಕಠಿಣ ಕ್ರಮ ಕೈಗೊಳ್ಳಲೇಬೇಕು, ಮತ್ತೆ ಇಂತಹ ಪೈಶಾಚಿಕ ಕೃತ್ಯಗಳು ಮರುಕಳಿಸಬಾರದು. ಗಡಿಭಾಗಗಳಲ್ಲಿ ಇನ್ನಷ್ಟು ಸೆಕ್ಯೂರಿಟಿ ಹೆಚ್ಚಾಗಬೇಕು. ಇದೊಂದು ಅತಿ ಕೆಟ್ಟ ಕೃತ್ಯ ಆಗಿರೋದ್ರಿಂದ ಅಷ್ಟೇ ಕಠಿಣ ಶಿಕ್ಷೆ ಆಗಬೇಕು ಎಂದು ನಾನು ಬಯಸುತ್ತೇನೆ" ಎಂದಿದ್ದಾರೆ.
ಇದು ಕೇಂದ್ರದ ವೈಫಲ್ಯವೇ?
ಇದು ಕೇಂದ್ರ ಸರ್ಕಾರದ ವೈಫಲ್ಯನಾ?’ ಎಂಬ ಪ್ರಶ್ನೆ ಬಂದಾಗ, " ಈ ಪಹಲ್ಗಾಮ್ ಕೃತ್ಯ ನಡೆಯುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಇದು ಯಾರ ಕೈಯಲ್ಲೂ ಇಲ್ಲ. ಇದು ಗುಪ್ತಚರ ವೈಫಲ್ಯ ಸಹ ಹೌದು. ಭದ್ರತಾ ಲೋಪ ಸಹ ಆಗಬಾರದು. ಇಂಥ ಕೃತ್ಯಗಳನ್ನು ಯಾರೂ 100% ಕಂಟ್ರೋಲ್ ಮಾಡೋಕೆ ಆಗಲ್ಲ. ಎಲ್ಲಾ ದೇಶದಲ್ಲೂ ಆಗುತ್ತದೆ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತವಹಿಸಬೇಕು. ಯಾಕಂದ್ರೆ, ಇಂಥ ಉಗ್ರ ದಾಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ" ಎಂದಿದ್ದಾರೆ ರಮ್ಯಾ.
ವಿಭಾಗ