ಕನ್ನಡ ಸುದ್ದಿ  /  Entertainment  /  Sandalwood Director Pavan Wadeyar Enter To Bollywood

Pavan wadeyar Bollywood Entry: ಲಕ್‌ ಮೇಲೆ ಲಕ್..ಬಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ಪವನ್‌ ಒಡೆಯರ್‌...ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಿನ್ನೆ ವಿಜಯದಶಮಿಯ ಶುಭ ದಿನದಂದು ಸಿನಿಮಾ ಸೆಟ್ಟೇರಿದ್ದು, ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ ಎಂದು ನಿರ್ದೇಶಕ ಪವನ್ ಒಡೆಯರ್ ಮಾಹಿತಿ ನೀಡಿದ್ದಾರೆ.

ಬಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ಪವನ್‌ ಒಡೆಯರ್‌
ಬಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ಪವನ್‌ ಒಡೆಯರ್‌

ಸ್ಯಾಂಡಲ್‌ವುಡ್‌ ನಿರ್ದೇಶಕ ಪವನ್‌ ಒಡೆಯರ್‌ ಇತ್ತೀಚೆಗೆ 'ಡೊಳ್ಳು' ಚಿತ್ರದ ನಿರ್ಮಾಣಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಅದರ ನಂತರ ಅವರು ಆಸ್ಕರ್‌ ಜ್ಯೂರಿಯಾಗಿ ಆಯ್ಕೆಯಾಗಿದ್ದರು. ಇದೀಗ ಪವನ್‌ ಒಡೆಯರ್‌ ಸದ್ದಿಲ್ಲದೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಅವರ ಸಿನಿಮಾ ಕೂಡಾ ಸೆಟ್ಟೇರಿದೆ.

ಕನ್ನಡ ಚಿತ್ರರಂಗದಲ್ಲಿ ದಶಕದಿಂದ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಪವನ್ ಒಡೆಯರ್ ಹಿಂದಿ ಸಿನಿಮಾ ಬುಧವಾರ ಸೆಟ್ಟೇರಿದ್ದು ಚಿತ್ರಕ್ಕೆ 'ನೋಟರಿ' ಎಂಟು ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಕಾಶ್ ಎಂಟರ್‌ಟೈನ್ಮೆಂಟ್‌ ಪ್ರೊಡಕ್ಷನ್ , ಒಡೆಯರ್ ಮೂವೀಸ್ ಮತ್ತು ಬೌಂಡ್‌ಲೆಸ್ ಮೀಡಿಯಾ ಸಹಯೋಗದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ.

'ನೋಟರಿ' ಚಿತ್ರದಲ್ಲಿ ಬೆಂಗಾಲಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಪರಂಬ್ರತಾ ಚಟ್ಟೋಪಾಧ್ಯಾಯ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ ಅವರು 'ಕಹಾನಿ', 'ಪರಿ' ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇದೀಗ ಕನ್ನಡದ ಪ್ರತಿಭಾವಂತ ನಿರ್ದೇಶಕ ಪವನ್ ಒಡೆಯರ್ ಜೊತೆ ಕೈ ಜೋಡಿಸಿದ್ದಾರೆ. ನಾಯಕಿಯಾಗಿ ಕ್ರಿಕೆಟರ್ ಹರ್ ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಟಿಸುತ್ತಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಿನ್ನೆ ವಿಜಯದಶಮಿಯ ಶುಭ ದಿನದಂದು ಸಿನಿಮಾ ಸೆಟ್ಟೇರಿದ್ದು, ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ ಎಂದು ನಿರ್ದೇಶಕ ಪವನ್ ಒಡೆಯರ್ ಮಾಹಿತಿ ನೀಡಿದ್ದಾರೆ. ಭೋಪಾಲ್‌ನಲ್ಲಿ 20 ದಿನಗಳ ಚಿತ್ರೀಕರಣ ನಂತರ ಮುಂಬೈನಲ್ಲಿ 'ನೋಟರಿ' ಸಿನಿಮಾ ಚಿತ್ರೀಕರಣ ನಡೆಯಲಿದೆ. ''ಹೊಸ ಪ್ರಾರಂಭ, ನನ್ನ ಮೊದಲ ಹಿಂದಿ ಸಿನಿಮಾ ಆರಂಭವಾಗಿದೆ'' ಎಂದು ಪವನ್‌ ಒಡೆಯರ್‌ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಪವನ್‌ಗೆ ಪತ್ನಿ ಅಪೇಕ್ಷಾ ಪುರೋಹಿತ್‌, ಶಾನ್ವಿ ಶ್ರೀವಾತ್ಸವ, ಸ್ಟೆಫಿ ಪಟೇಲ್‌ ಹಾಗೂ ಇನ್ನಿತರರು ಶುಭ ಕೋರಿದ್ದಾರೆ.

ಎಂದಿಗೂ ಸುಳ್ಳು ಹೇಳಬಾರದು ಎಂಬುದು ನಾಯಕನ ಜೀವನದ ಸಿದ್ದಾಂತವಾಗಿರುತ್ತದೆ. ಆದ್ರೆ ತಾನು ಕೆಲಸ ಮಾಡುವ ಕ್ಷೇತ್ರ ಪ್ರತಿದಿನ ಒಂದಲ್ಲಾ ಒಂದು ಸುಳ್ಳು ಹೇಳುವಂತ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಅಂತಹ ಸಮಯ ಎದುರಾದಾಗ ನಾಯಕ ಸುಳ್ಳು ಹೇಳದೇ ಅದನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದರ ಸುತ್ತ ಕಥೆ ಸುತ್ತಲಿದೆ. ಇಡೀ ಸಿನಿಮಾ ಹಾಸ್ಯಮಯವಾಗಿರಲಿದೆ ಎಂದು ಪವನ್‌ ಒಡೆಯರ್‌ ತಮ್ಮ 'ನೋಟರಿ' ಸಿನಿಮಾ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

''ಪರಂಬ್ರತಾ ಚಟ್ಟೋಪಾಧ್ಯಾಯ ಈಗಾಗಲೇ ಅಭಿನಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ನನ್ನ ಕಥೆಗೆ ಅವರು ಬಹಳ ಸೂಕ್ತ ವ್ಯಕ್ತಿ ಎನಿಸಿದರು. ಆದ್ದರಿಂದಲೇ ಅವರೇ ಈ ಕಥೆಗೆ ಸೂಕ್ತ ಎನಿಸಿ ಕಥೆ ಹೇಳಿದೆ. ಅವರು ಕೂಡಾ ಕಥೆ ಕೇಳಿ ಇಷ್ಟ ಪಟ್ಟು ನಟಿಸಲು ಒಪ್ಪಿಕೊಂಡರು'' ಎಂದು ಚಿತ್ರದ ನಾಯಕನ ಆಯ್ಕೆ ಬಗ್ಗೆ ಪವನ್ ಒಡೆಯರ್ ಹೇಳಿಕೊಂಡಿದ್ದಾರೆ. 'ನೋಟರಿ' ಚಿತ್ರಕ್ಕೆ ಪವನ್ ಒಡೆಯರ್ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ

ಮುಂಬೈ ಮೂಲದ ತಶಾ ಭಂಬ್ರಾ, ಸ್ಪರ್ಶ್ ಖೆಟರ್ ಪಾಲ್ ಜೊತೆ ಸೇರಿ ಚಿತ್ರಕಥೆ ಕೂಡಾ ಬರೆದಿದ್ದಾರೆ. ವೈದಿ.ಎಸ್ ಕ್ಯಾಮೆರಾ ನಿರ್ದೇಶನ, ರೋಹಿತ್ ಕುಲಕರ್ಣಿ, ಮೌಸಿನ್ ಜಾವೇದ್ ಸಂಗೀತ ನಿರ್ದೇಶನ ಚಿತ್ರಕ್ಕೆ ಇದೆ. ಶೀಘ್ರದ್ಲಲೇ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ನೀಡುವುದಾಗಿ ಪವನ್‌ ಒಡೆಯರ್‌ ಹೇಳಿದ್ದಾರೆ.

IPL_Entry_Point