ಸಿನಿಮಾ ಬಿಡುಗಡೆ ನಡುವೆಯೇ ಆಧ್ಯಾತ್ಮಿಕ ಅನುಭೂತಿ ಪಡೆದ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರತಂಡ
Ellige Daari Yavudo Payana: ಎಲ್ಲಿಗೆ ದಾರಿ ಯಾವುದೋ ಪಯಣ ಸಿನಿಮಾ ಕಳೆದ ವಾರವಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಇದೀಗ ಚಿತ್ರದ ನಾಯಕ ಅಭಿಮನ್ಯು ಕಾಶೀನಾಥ್ ಸಿನಿಮಾತಂಡದ ಜತೆಗೆ ಮೈಸೂರಿನ ಅವಧೂತ ಅರ್ಜುನ್ ಗುರೂಜಿಯನ್ನು ಭೇಟಿ ಮಾಡಿದ್ದಾರೆ.

Abhimanyu Kashinath: ಸ್ಯಾಂಡಲ್ವುಡ್ ನಟ ಅಭಿಮನ್ಯು ಕಾಶೀನಾಥ್ ಅಭಿನಯದ ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಚಿತ್ರಮಂದಿರದಲ್ಲಿಯೂ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇದೇ ಹೊತ್ತಿನಲ್ಲಿ ಅಭಿಮನ್ಯು ಕಾಶೀನಾಥ್ ಚಿತ್ರತಂಡದೊಂದಿಗೆ ಮೈಸೂರಿನ ಅವಧೂತ ಅರ್ಜುನ್ ಗುರೂಜಿಯನ್ನು ಭೇಟಿಯಾಗಿದ್ದಾರೆ. ಅವರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಅರ್ಜುನ್ ಗುರೂಜಿ ಅಭಿಮನ್ಯು ಸೇರಿದಂತೆ ಒಂದಿಡೀ ಚಿತ್ರತಂಡಕ್ಕೆ ಒಳಿತಾಗಲಿ, ಈ ಸಿನಿಮಾ ಇನ್ನಷ್ಟು ಯಶ ಕಾಣಲೆಂದು ಆಶೀರ್ವಾದ ಮಾಡಿದ್ದಾರೆ.
ಮೈಸೂರಿನ ಅವಧೂತ ಅರ್ಜುನ್ ಗುರೂಜಿ ಅವರ ನಿವಾಸಕ್ಕೆ ಚಿತ್ರತಂಡದೊಂದಿಗೆ ತೆರಳಿದ್ದ ಅಭಿಮನ್ಯು ಕಾಶೀನಾಥ್, ತಮ್ಮ ತಂದೆ ಕಾಶೀನಾಥ್ ಅವರ ಹೆಸರು ಅಜರಾಮರವಾಗಲೆಂದು ಬೇಡಿಕೊಂಡಿದ್ದಾರೆ. ನಂತರ ಆಶೀರ್ವಚನ ನೀಡಿದ ಅವಧೂತ ಅರ್ಜುನ್ ಗುರೂಜಿ ಈ ಸಿನಿಮಾ ಸಂಪೂರ್ಣವಾಗಿ ಯಶಸ್ಸು ಗಳಿಸಲೆಂದು ಹಾರೈಸುತ್ತಲೇ, ಯುವ ನಟ ಅಭಿಮನ್ಯು ಕಾಶೀನಾಥ್ ತಮ್ಮ ಸಿನಿಮಾಗಳ ಮೂಲಕ ಯುವ ಜನತೆಗೆ ಉತ್ತಮ ಸಂದೇಶಗಳನ್ನು ದಾಟಿಸವಂತಾಗಲೆಂದೂ ಹರಸಿದ್ದಾರೆ. ಈ ಸಂದರ್ಭದಲ್ಲಿ ನಾಯಕ ನಟ ಅಭಿಮನ್ಯು ಕಾಶೀನಾಥ್ ಅವರೊಂದಿಗೆ ನಾಯಕಿ ಸ್ಫೂರ್ತಿ ಉಡಿಮನೆ, ನಿರ್ದೇಶಕ ಕಿರಣ್ ಎಸ್ ಸೂರ್ಯ ಮತ್ತು ಚಿತ್ರತಂಡ ಭಾಗಿಯಾಗಿತ್ತು.
ಸೂಕ್ಷ್ಮ ಕಥಾನಕವನ್ನೊಳಗೊಂಡಿರುವ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರ ದಿನದಿಂದ ದಿನಕ್ಕೆ ಉತ್ತಮ ಪ್ರದರ್ಶನ ನೀಡುತ್ತಿದೆ. ನಾಯಕ ಅಭಿಮನ್ಯು ಕಾಶೀನಾಥ್ ಈ ಸಿನಿಮಾವನ್ನು ಮತ್ತಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಚಿತ್ರತಂಡದೊಂದಿಗೆ ಸಕ್ರಿಯರಾಗಿದ್ದಾರೆ. ಇದರ ನಡುವಲ್ಲಿಯೇ ಅವಧೂತ ಅರ್ಜುನ್ ಗುರೂಜಿಯನ್ನು ಭೇಟಿಯಾಗುವ ಮೂಲಕ ಆಧ್ಯಾತ್ಮಿಕ ಅನುಭೂತಿಯೊಂದಿಗೆ ಮತ್ತಷ್ಟು ಹುರುಪು ತುಂಬಿಕೊಂಡಿದ್ದಾರೆ.
ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರ್ಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ.