Martin Movie VFX: ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ವಿಎಫ್ಎಕ್ಸ್ ವಿವಾದ; ನಿರ್ದೇಶಕ ಎಪಿ ಅರ್ಜುನ್ಗೂ ಸಂಕಷ್ಟ?
Martin Movie VFX cheating case: ಕೆಲವು ದಿನಗಳ ಹಿಂದೆಯಷ್ಟೇ ಮಾರ್ಟಿನ್ ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಅವರು ಮಾರ್ಟಿನ್ ಸಿನಿಮಾದ ವಿಎಫ್ಎಕ್ಸ್ಗೆ ಸಂಬಂಧಪಟ್ಟಂತೆ ನಡೆದ ಮೋಸದ ವಿರುದ್ಧ ವಂಚನೆ ದೂರು ದಾಖಲಿಸಿದ್ದರು. ಇಬ್ಬರ ಬಂಧನವೂ ಆಗಿತ್ತು.

ಬೆಂಗಳೂರು: ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಎಂಬ ಪ್ಯಾನ್ ಇಂಡಿಯಾ ಸಿನಿಮಾದ ಬಿಡುಗಡೆಗೆ ಎಲ್ಲರೂ ಕಾಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಾರ್ಟಿನ್ ವಿಎಫ್ಎಕ್ಸ್ ವಂಚನೆಯ ವಿವಾದ ಇನ್ನೂ ತಣ್ಣಗಾದಂತೆ ಕಾಣಿಸುತ್ತಿಲ್ಲ. ಇದೀಗ ಬಂದ ಅಪ್ಡೇಟ್ ಪ್ರಕಾರ ಈ ವಂಚನೆಯ ಪ್ರಕರಣ ನಿರ್ದೇಶಕ ಎಪಿ ಅರ್ಜುನ್ ಕೊರಳಿಗೂ ಸುತ್ತಿಕೊಳ್ಳಲಿದೆಯೇ? ಎಂಬ ಸಂದೇಹ ಮೂಡಿಸಿದೆ. ಸಿನಿಮಾದ ನಿರ್ದೇಶಕರೇ ಚಿತ್ರದ ನಿರ್ಮಾಪಕರಿಗೆ ಮೋಸ ಮಾಡಿದ್ದಾರ? ಎಂಬ ಮಾತುಗಳು ಕೇಳಿಬರುತ್ತಿವೆ.
ಧ್ರುವ ಸರ್ಜಾ ಅವರ ಐದನೇ ಸಿನಿಮಾ ಮಾರ್ಟಿನ್ 2022ರ ಸೆಪ್ಟೆಂಬರ್ ತಿಂಗಳಲ್ಲಿಯೇ ಚಿತ್ರಮಂದಿರಗಳಿಗೆ ಆಗಮಿಸಬೇಕಿತ್ತು. ಆದರೆ, ಈ ಚಿತ್ರವು ಹಲವು ಕಾರಣಗಳಿಂದ ವಿಳಂಬವಾಗಿತ್ತು. ವಿಎಫ್ಎಕ್ಸ್ಗೆ ಸಂಬಂಧಪಟ್ಟ ಕೆಲಸಗಳ ವಿಳಂಬದಿಂದ ಸಿನಿಮಾ ಬಿಡುಗಡೆ ಮತ್ತಷ್ಟು ವಿಳಂಬವಾಗಿತ್ತು. ಆದರೆ, ನಿರ್ಮಾಪಕ ಉದಯ್ ಕೆ ಮೆಹ್ತಾ ಅವರು ಈ ಚಿತ್ರವನ್ನು ಇದೇ ಅಕ್ಟೋಬರ್ 11ರಂದು ಚಿತ್ರಮಂದಿರಗಳಿಗೆ ತರಲು ಸಜ್ಜಾಗಿದ್ದಾರೆ. ಇದೇ ಸಮಯದಲ್ಲಿ ಅನಗತ್ಯ ವಿಳಂಬಕ್ಕೆ ಕಾರಣರಾದವರ ವಿರುದ್ಧ ಕಾನೂನು ಹೋರಾಟಗಳಿಗೂ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮಾರ್ಟಿನ್ ಸಿನಿಮಾದ ವಿಎಫ್ಎಕ್ಸ್ ವಂಚನೆ
ಮಾರ್ಟಿನ್ ಸಿನಿಮಾದ ಬಜೆಟ್ ಅನಗತ್ಯವಾಗಿ ಏರಿಕೆ ಕಾಣಲು ಕಾರಣರಾದವರ ವಿರುದ್ಧ ನಿರ್ಮಾಪಕರು ಕಾನೂನು ಹೋರಾಟಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆಯಷ್ಟೇ ಮಾರ್ಟಿನ್ ನಿರ್ಮಾಪಕರಾದ ಉದಯ್ ಕೆ ಮೆಹ್ತಾ ಅವರು ಮಾರ್ಟಿನ್ ಸಿನಿಮಾದ ವಿಎಫ್ಎಕ್ಸ್ಗೆ ಸಂಬಂಧಪಟ್ಟಂತೆ ನಡೆದ ಮೋಸದ ವಿರುದ್ಧ ವಂಚನೆ ದೂರು ದಾಖಲಿಸಿದ್ದರು. ಇಬ್ಬರ ಬಂಧನವೂ ಆಗಿತ್ತು. ಆದರೆ, ಇದೀಗ ಬಂಧನಕ್ಕೆ ಈಡಾದವರೂ ಹೊಸ ಆರೋಪ ಮಾಡಿದ್ದಾರಂತೆ. ಈ ಆರೋಪ ನಿರ್ದೇಶಕರಿಗೆ ಸಂಕಷ್ಟ ತರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ ವಾರ ಉದಯ್ ಕೆ ಮೆಹ್ತಾ ಅವರು ಸತೀಶ್ ರೆಡ್ಡಿ ಮತ್ತು ಸುನೀಲ್ ರೆಡ್ಡಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಇವರಿಬ್ಬರು ಮಾರ್ಟಿನ್ ವಿಎಫ್ಎಕ್ಸ್ ಕೆಲಸವನ್ನು ವಹಿಸಿಕೊಂಡಿದ್ದರು. ಇವರಿಬ್ಬರಿಗೂ 3 ಕೋಟಿ ರೂಪಾಯಿ ನೀಡಲಾಗಿದೆಯಂತೆ. ಆದರೆ, ಹಲವು ಬಾರಿ ಒತ್ತಾಯಿಸಿದರೂ ಸಿನಿಮಾದ ವಿಎಫ್ಎಕ್ಸ್ ಕೆಲಸ ಪೂರ್ಣಗೊಂಡಿರಲಿಲ್ಲ. ಇದೇ ಕಾರಣದಿಂದ ಬೇರೆ ಆಯ್ಕೆಗಳತ್ತ ಉದಯ್ ಕೆ ಮೆಹ್ತಾ ಮುಖ ಮಾಡಬೇಕಾಯಿತು. ಇದರಿಂದ ಸಿನಿಮಾದ ಬಜೆಟ್ ಮತ್ತಷ್ಟು ಹೆಚ್ಚಾಯ್ತಂತೆ.
ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಸ್ಟೇಷನ್ನ ಪೊಲೀಸರು ಇತ್ತೀಚೆಗೆ ಸತೀಶ್ ಮತ್ತು ಸುನಿಲ್ ಅವರನ್ನು ಬಂಧಿಸಿದ್ದರು. ಇದೀಗ ಬಂದ ಅಪ್ಡೇಟ್ಗಳ ಪ್ರಕಾರ ಇವರಿಬ್ಬರು ಇದೀಗ ಮಾರ್ಟಿನ್ ನಿರ್ದೇಶಕ ಎಪಿ ಅರ್ಜುನ್ ವಿರುದ್ಧ ಕೆಲವು ಆರೋಪಗಳನ್ನು ಮಾಡಿದ್ದರಂತೆ. ಟಿವಿ ವರದಿಗಳ ಪ್ರಕಾರ ಸುನಿಲ್ ಅವರಿಂದ ಅರ್ಜುನ್ ಅವರು ಸುಮಾರು 50 ಲಕ್ಷ ರೂಪಾಯಿ ಕಮಿಷನ್ ಪಡೆದಿದ್ದಾರಂತೆ. ಇವರಿಬ್ಬರಿಗೆ ಮಾರ್ಟಿನ್ ಸಿನಿಮಾದ ವಿಎಫ್ಎಕ್ಸ್ ಕೆಲಸ ದೊರಕುವಂತೆ ಮಾಡಲು ಈ ಕಮಿಷನ್ ನೀಡಲಾಗಿದೆಯಂತೆ.
ಒಟ್ಟಾರೆ ಈ ಪ್ರಕರಣದಲ್ಲಿ ಒಟ್ಟು ಮೂವರ ವಿರುದ್ಧ ಉದಯ್ ಮೆಹ್ತಾ ಪೊಲೀಸ್ ದೂರು ನೀಡಿದ್ದಾರೆ. ಆದರೆ, ದೂರಿನಲ್ಲಿ ಅರ್ಜುನ್ ಹೆಸರನ್ನು ಉಲ್ಲೇಖಿಸಿರಲಿಲ್ಲ ಎನ್ನಲಾಗಿದೆ. ಇದೀಗ ಇವರ ಹೆಸರೂ ಕೇಳಿ ಬರುತ್ತಿದೆ. ಇದರಿಂದ ಮಾರ್ಟಿನ್ ನಿರ್ದೇಶಕರಿಗೂ ಬಂಧನ ಭೀತಿ ಎದುರಾಗಿದೆ ಎನ್ನಲಾಗುತ್ತಿದೆ. ಈ ಕುರಿತು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ಈ ಆರೋಪ ಕೇಳಿಬಂದ ಸಮಯದಲ್ಲಿ ನಿರ್ದೇಶಕ ಎಪಿ ಆರ್ಜುನ್ ಅವರು ಇನ್ಸ್ಟಾಗ್ರಾಂನಲ್ಲಿ “ನಿನ್ನಲ್ಲಿ ಸತ್ಯ ನೀತಿ ಧರ್ಮವಿದ್ದರೆ, ಕಾಯುವ ತಾಳ್ಮೆ ನಿನಗಿದ್ದರೆ ಹಾರಾಡಿ ಮೆರೆದವರು, ತೂರಾಡಿ ಹೋಗುವುದನ್ನು ನಿನ್ನ ಕಣ್ಣಾರೆ ನೀನೇ ನೋಡುವೆ” ಎಂಬ ಸ್ಟೇಟಸ್ ಹಾಕಿಕೊಂಡಿದ್ದಾರೆ.
ವಿಭಾಗ