ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಅಲ್ಲ, ಯಾವ ಥರ ರಾಜನಾಗಿ ಬಾಳಿದ್ರಿ ಅನ್ನೋದು ಮುಖ್ಯ: ಕಿಚ್ಚ ಸುದೀಪ್
ನಟ ದರ್ಶನ್ ಬಂಧನ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಅವರ ಸಂದರ್ಶನದ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪುಸ್ತಕದಲ್ಲಿ ನಿಮ್ಮ ಹೆಸರು ಎಂಟ್ರಿ ಆಗಬೇಕು ಅಂದ್ರೆ, ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಅಲ್ಲ. ಯಾವ ಥರ ನೀವು ರಾಜನಾಗಿ ಬಾಳಿದ್ರಿ, ಜನರ ಜತೆ ಹೇಗೆ ನಿಂತ್ರಿ ಅನ್ನೋದರ ಮೇಲೆ ಎಲ್ಲವೂ ದಾಖಲಾಗುತ್ತದೆ.

Kichcha Sudeep Old Video Viral: ಸ್ಯಾಂಡಲ್ವುಡ್ನಲ್ಲಿ ಸದ್ಯ ಕಾಂಟ್ರವರ್ಸಿಗಳೇ ಮೇಳೈಸುತ್ತಿವೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಚ್ಛೇದನ ಸುದ್ದಿಯಿಂದ ಶುರುವಾದ ಈ ವಿವಾದದ ಬಿಸಿಗಾಳಿ, ಅದಾದ ಬಳಿಕ ಯುವ ರಾಜ್ಕುಮಾರ್ ಮತ್ತು ಶ್ರೀದೇವಿ ಅವರ ಡಿವೋರ್ಸ್ ವಿಚಾರವೂ ಮುನ್ನೆಲೆಗೆ ಬಂದಿತು. ದೊಡ್ಮನೆಯ ದಂಪತಿ ನಡುವೆಯೂ ಭಿನ್ನಾಭಿಪ್ರಾಯಗಳಿವೆಯೇ? ಎಂಬ ಅನುಮಾನವೂ ಅಭಿಮಾನಿ ವಲಯದಲ್ಲೂ ಬಿಸಿ ಬಿಸಿ ಚರ್ಚೆಯಾಯ್ತು. ಇವೆರಡರ ನಡುವೆ ನಟ ದರ್ಶನ್ ಮತ್ತವರ ಗ್ಯಾಂಗ್ನಿಂದ ನಡೆ ಕೊಲೆ ಇವೆಲ್ಲವನ್ನೂ ಮೀರಿಸಿತು. ಹೀಗಿರುವಾಗಲೇ ಈ ಮೊದಲು ನಟ ಕಿಚ್ಚ ಸುದೀಪ್ ಆಡಿದ ಮಾತೊಂದು ಸೋಷಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದೆ.
ಚಿತ್ರದುರ್ಗದ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ, ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಅಸಭ್ಯವಾಗಿ ಸಂದೇಶಗಳನ್ನು ಕಳುಹಿಸಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕೆ, ಆತನನ್ನು ಬೆಂಗಳೂರಿಗೆ ಕರೆಸಿ ಹತ್ಯೆ ಮಾಡಲಾಗಿತ್ತು. ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿನ ಶೆಡ್ನಲ್ಲಿ ರೇಣುಕಾಸ್ವಾಮಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ, ಮೈ ಕೈ ಮೂಳೆ ಮುರಿದು, ಸಿಗರೇಟ್ನಿಂದ ಸುಟ್ಟು, ಮರ್ಮಾಂಗಕ್ಕೆ ಬಲವಾಗಿ ಒದ್ದು ಕೊಲೆ ಮಾಡಲಾಗಿತ್ತು. ಬಳಿಕ ಶವವನ್ನು ರಾಜಕಾಲುವೆ ಬಳಿ ಎಸೆಯಲಾಗಿತ್ತು. ಹಾಗೆ ಎಸೆದು ಹೋದ ದುರುಳರೀಗ ಸಾಕ್ಷಿ ಸಮೇತ ಪೊಲೀಸರ ವಶದಲ್ಲಿದ್ದಾರೆ. ನಟ ದರ್ಶನ್ ಸೇರಿ 17 ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕಿಚ್ಚ ಸುದೀಪ್ ಮಾತು ವೈರಲ್
ಕಳೆದ ಕೆಲ ತಿಂಗಳ ಹಿಂದೆ ಕಿಚ್ಚ ಸುದೀಪ್ ಮತ್ತು ದರ್ಶನ್ ಅದ್ಯಾವಾಗ ಒಂದಾಗ್ತಾರೆ ಎಂದು ಅಭಿಮಾನಿಗಳು ಕಾದಿದ್ದೇ ಬಂತು. ಸೋಷಿಯಲ್ ಮೀಡಿಯಾದಲ್ಲಿಯೂ ಈ ಬಗ್ಗೆ ಸಾಕಷ್ಟು ಫ್ಯಾನ್ಸ್ ತಮ್ಮ ಇಂಗಿತ ವ್ಯಕ್ತಪಡಿಸಿದ್ದರು. ಸದ್ಯದ ಪರಿಸ್ಥಿತಿ ನೋಡಿದರೆ, ಸುದೀಪ್ ಮತ್ತು ದರ್ಶನ್ ಒಂದಾಗದಿರುವುದೇ ಒಳಿತು ಎಂಬ ಮಾತು ಅಭಿಮಾನಿ ಬಳಗದಿಂದ ಕೇಳಿ ಬರುತ್ತಿದೆ. ಅದಕ್ಕೆ ಕಾರಣ; ನಟ ದರ್ಶನ್ ಮತ್ತವರ ಗ್ಯಾಂಗ್ ನಡೆಸಿದ ಕೃತ್ಯ! ನಿಮ್ಮ ಅಭಿಮಾನಿಗಳಾಗಿದ್ದ ನಾವೇ ಪುಣ್ಯವಂತರು ಎಂದೂ ಕೆಲವರು ನಟ ಸುದೀಪ್ ಅವರ ಪೋಸ್ಟ್ಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಈ ನಡುವೆಯೇ ಕಿಚ್ಚ ಸುದೀಪ್ ಈ ಹಿಂದೆ ಹೇಳಿದ ರಾಜನ ಕಥೆಯೂ ಇದೀಗ ವೈರಲ್ ಆಗುತ್ತಿದೆ.
ರಾಜ ಹೇಗಿರಬೇಕು? ಕಿಚ್ಚನ ಮಾತು
ಈ ಹಿಂದೆ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್, ರಾಜ ಮತ್ತು ರಾಜ್ಯಭಾರದ ಬಗ್ಗೆ ಮಾತನಾಡಿದ್ದರು. ಆ ಮಾತು ಇಂದಿನ ಪ್ರಸ್ತುತತೆಗೂ ಕೈಗನ್ನಡಿಯಂತಿದೆ. ಪರೋಕ್ಷವಾಗಿಯೇ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ಈ ಮಾತುಗಳು ಹೇಳಿ ಮಾಡಿಸಿದಂತಿವೆ ಎಂದೂ ಕೆಲವರು ಕಾಮೆಂಟ್ ಹಾಕುತ್ತಿದ್ದಾರೆ. "ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಅಲ್ಲ. ಅದರ ಆಧಾರದ ಮೇಲೆ ನಿಮ್ಮ ಹೆಸರು ಎಂಟ್ರಿ ಆಗಲ್ಲ. ಯಾವ ಥರ ರಾಜನಾಗಿ ಬಾಳಿದ್ರಿ ಅದು ಮಹತ್ವದ್ದು" ಎಂದು ಸುದೀಪ್ ಹೇಳಿದ್ದರು. ಅವರ ಪೂರ್ಣ ಮಾತು ಇಲ್ಲಿದೆ.
ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಅಲ್ಲ
"ಯಾರಿಗೆ ಪ್ರಾಬ್ಲಂ ಇರಲ್ಲ ಹೇಳಿ.. ಎಲ್ಲರಿಗೂ ಪ್ರಾಬ್ಲಂ ಇದ್ದದ್ದೇ. ಇದನ್ನಿಟ್ಟುಕೊಂಡು ನಾವು ಮೆರೆಯೋಕೆ ಆಗುತ್ತಾ? ನಾಳೆ ಒಂದು ಪುಸ್ತಕದಲ್ಲಿ ನಿಮ್ಮ ಹೆಸರು ಎಂಟ್ರಿ ಆಗಬೇಕು ಅಂದರೆ, ಎಷ್ಟು ದೊಡ್ಡ ರಾಜ್ಯ ಕಟ್ಟಿದ್ರಿ ಅನ್ನೋದು ಮುಖ್ಯ ಅಲ್ಲ. ಅದರ ಆಧಾರದ ಮೇಲೆ ನಿಮ್ಮ ಹೆಸರು ಎಂಟ್ರಿ ಆಗಲ್ಲ. ಆದರೆ, ಯಾವ ಥರ ನೀವು ರಾಜನಾಗಿ ಬಾಳಿದ್ರಿ, ಜನರ ಜತೆ ಹೇಗೆ ನಿಂತ್ರಿ ಅನ್ನೋದರ ಮೇಲೆ ಎಲ್ಲವೂ ದಾಖಲಾಗುತ್ತದೆ. ಅಂಥವು ಇತಿಹಾಸದ ಪುಟ ಸೇರುತ್ವೆ. ಅಂಥ ಕಥೆಗಳನ್ನು ನಾವು ತುಂಬ ಚೆನ್ನಾಗಿಯೇ ಬರೆದಿದ್ದೇವೆ. ಇನ್ನೊಬ್ಬ ರಾಜನಿಗೆ ಗೌರವ ಕೊಡುವವನೇ ನಿಜವಾದ ರಾಜ. ಆ ಗೌರವ ಇಲ್ಲ ಅಂದ್ರೆ ನಾವು ಅಲ್ಯಾಕೆ ಇರಬೇಕು, ನಾವು ಸ್ನೇಹ ಪೂರ್ವಕವಾಗಿ ಕೈ ಚಾಚ್ತಿವಿ. ಅದಕ್ಕೆ ಸ್ಪಂದಿಸದಿದ್ದರೆ, ಹೊರಬರಬೇಕು ಅಷ್ಟೇ" ಎಂದಿದ್ದಾರೆ ಸುದೀಪ್.
