ಅಶ್ವಿನಿ ಮ್ಯಾಮ್ ಬಗ್ಗೆ ದರ್ಶನ್ ಹುಡುಗ್ರು ಕೆಟ್ಟ ಕಾಮೆಂಟ್ ಮಾಡಿದ್ದು ಸರೀನಾ? ಆವಾಗ ದರ್ಶನ್ ಏಕೆ ಮಾತನಾಡಲಿಲ್ಲ; ಸುಷ್ಮಾ ವೀರ್ ಪ್ರಶ್ನೆ
ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ ದರ್ಶನ್ ಫ್ಯಾನ್ಸ್ ಮಾಡಿದ್ದೆಷ್ಟು ಸರಿ ಎಂದು ಸುಷ್ಮಾ ವೀರ್ ಪ್ರಶ್ನಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Ashwini Puneeth Rajakumar: ಈ ಸಲದ ಐಪಿಎಲ್ನಲ್ಲಿ ಆರ್ಸಿಬಿ ಸೋಲಲು ಅಶ್ವಿನಿ ಪುನೀತ್ರಾಜ್ಕುಮಾರ್ ಅವರೇ ಕಾರಣ, ಆರ್ಸಿಬಿ ಅನ್ಬಾಕ್ಸ್ ಇವೆಂಟ್ಗೆ ಅವರನ್ನು ಕರೆಸಿದ್ದಕ್ಕೇ ತಂಡ ಸೋಲಿನ ಸುಳಿಗೆ ಸಿಲುಕಿತು ಎಂದು ಗಜಪಡೆ ಹೆಸರಿನ ಟ್ವಿಟರ್ ಖಾತೆಯಿಂದ ಕೀಳು ಮಟ್ಟದ ಪೋಸ್ಟ್ ಹೊರಬಿದ್ದಿತ್ತು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ದರ್ಶನ್ ಅಭಿಮಾನಿಯ ಬಗ್ಗೆ ವ್ಯಾಪಕ ಟೀಕೆಗಳೂ ಕೇಳಿಬಂದಿದ್ದವು. ಆಗ ಸ್ವತಃ ದರ್ಶನ್ ವಿರುದ್ಧವೇ ಕೆಲವರು ಧ್ವನಿ ಎತ್ತಿ, ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಬಾರದೇ ಎಂದಿದ್ದರು.
ಇದೀಗ ಇಂದಿನ ದರ್ಶನ್ ಪ್ರಕರಣವನ್ನು ಆವತ್ತಿನ ಕೀಳು ಮಟ್ಟದ ಪೋಸ್ಟ್ಗೆ ಹೋಲಿಕೆ ಮಾಡಿ ಮಾತನಾಡಿದ್ದಾರೆ ಹಿರಿಯ ನಟಿ, ಗಾಯಕಿ ಬಿ ಜಯಶ್ರೀ ಪುತ್ರಿ, ಸುಷ್ಮಾ ವೀರ್. ಜೀ ಕನ್ನಡ ನ್ಯೂಸ್ ಜತೆ ಮಾತನಾಡಿದ ಸುಷ್ಮಾ, ಕಾನೂನು ಮೂಲಕ ಕ್ರಮ ಕೈಗೊಂಡಿದ್ದರೆ, ಎಲ್ಲರಿಗೂ ಇದೊಂದು ನಿದರ್ಶನವಾಗುತ್ತಿತ್ತು. ಕೊಲೆ ಮಾಡುವ ಹಂತ ತಲುಪಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೊಲೆವೊಂದೇ ಪರಿಹಾರವಾ?
"ದರ್ಶನ್ ಅವ್ರ ಕೆಲ ಹುಡುಗ್ರು ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಈ ಹಿಂದೆ ಕೆಟ್ಟದಾಗಿ ಮಾತನಾಡಿದ್ರಲ್ಲ, ಅದು ಸರೀನಾ? ಅವ್ರು ಹೆಣ್ಣುಮಕ್ಕಳಲ್ಲವಾ? ಬೇರೆ ಹೆಣ್ಣುಮಕ್ಕಳು ಹೆಣ್ಮಕ್ಕಳಲ್ಲ, ನಿಮಗಿಷ್ಟವಾದವರಷ್ಟೇ ಹೆಣ್ಣುಮಕ್ಕಳಾ? ದರ್ಶನ್ ಬಗ್ಗೆ ಪ್ರೀತಿ ಕಡಿಮೆ ಆಗಿಲ್ಲ, ಆದರೆ ನಿಮ್ಮ ಬಗ್ಗೆ ಕಾಳಜಿ ಕಡಿಮೆ ಆಗ್ತಿದೆ. ನಿಮ್ಮ ಬಗ್ಗೆ ನೀವೇ ವಿಕೋಪಕ್ಕೆ ಹೋಗ್ತಿದ್ದೀರಾ. ಪ್ರೀತಿ, ಕಾಳಜಿ ಅನ್ನೋದು "ಅಯ್ಯೋ ಇವ್ನು ಸರಿಯಿಲ್ಲ" ಅನ್ನೋ ರೀತಿಯಲ್ಲಿ ತಿರುಗುತ್ತಿದೆ. ಜೀವನ ಅನ್ನೋದೇ ಗ್ರೇ. ಅದನ್ನೇ ಇನ್ನಷ್ಟು ಕಪ್ಪು ಮಾಡ್ಕೋತೀರಾ, ಸುಧಾರಿಸಿಕೊಳ್ತೀರಾ ಅದು ನಿಮ್ಮ ಕೈಯಲ್ಲಿದೆ"
ಮೊಸರು ತಿಂದು ಮೇಕೆ ಮೂತಿಗೆ ಒರೆಸಿದ್ರು..
"ಮೊಸರು ತಿಂದು ಮೇಕೆ ಮೂತಿಗೆ ಒರೆಸಿದ್ರು ಅನ್ನೋ ಹಾಗಾಯ್ತಿದು. ಯಾವನೋ ಕಾಮೆಂಟ್ ಮಾಡಿದಾಗ, ನಿಮಗೆ ಅನಿಸಲಿಲ್ವಾ? ಅವ್ರು ಕಂಡವರ ಹೆಣ್ಣುಮಕ್ಕಳು ಅಂತ. ಗೌಡ್ತಿಯರ ಬಗ್ಗೆಯೂ ದರ್ಶನ್ ಫ್ಯಾನ್ಸ್ ಕೆಟ್ಟದಾಗಿ ಮಾತನಾಡಿದ್ರು, ಅವ್ರು ಬೇರೆ ಮನೆಯ ಹೆಣ್ಣುಮಕ್ಕಳಲ್ಲವಾ? ಅಶ್ವಿನಿ ಪುನೀತ್ ರಾಜ್ಕುಮಾರ್ ಆಗಿರಬಹುದು, ಗೌಡ್ತಿಯರಾಗಿರಬಹುದು, ಪವಿತ್ರಾ ಗೌಡ ಆಗಿರಬಹುದು.. ಹೆಣ್ಣು ಮಕ್ಕಳು ಹೆಣ್ಣು ಮಕ್ಕಳೇ ಅಲ್ಲವಾ. ನಮ್ಮ ಸ್ಥಾನವನ್ನು ನಾವು ಉಳಿಸಿಕೊಳ್ಳಬೇಕು"
"ಅಶ್ವಿನಿ ಪುನೀತ್ ರಾಜ್ಕುಮಾರ್ ಆವತ್ತು ಅದೇ ಇಶ್ಯೂವನ್ನು ಹೇಗೆ ಬೇಕಾದರೂ ತಿರುಗಿಸಬಹುದಿತ್ತು. ಆದರೆ, ಕ್ಲಾಸ್ ಆಗಿಯೇ ಅದರ ಕಡೆ ಗಮನ ಕೊಡಲಿಲ್ಲ. ನೀವೂ ಕೂಡ ಹಾಗೇ ಮಾಡಬಹುದಿತ್ತಲ್ಲ. ಊಟ ಹೇಗೆ ಮಾಡುತ್ತೇವೆ ಎಂಬುದು ನಮ್ಮ ನಮ್ಮ ಕಲ್ಚರ್. ಅವ್ರು ಬೆಳೆದು ಬಂದಿದ್ದು ಹಾಗಿರುತ್ತೆ. ಒಂದು ಸಮಸ್ಯೆಯನ್ನು ನೀನು ಹೇಗೆ ನಿಭಾಯಿಸುತ್ತೀಯಾ ಎಂಬುದನ್ನು, ನೀನು ಎಲ್ಲಿಂದ ಬಂದೆ ಎಂಬುದನ್ನು ತೋರಿಸುತ್ತೆ. ಇಷ್ಟೆಲ್ಲ ಆಗಿದೆ. ಹೀಗಿರುವಾಗ ರೇಣುಕಾಸ್ವಾಮಿ ಕೆಟ್ಟ ಫೋಟೋ ಕಳಿಸಿದ್ದಾನೆ ಅನ್ನೋದಾ?"
"ರೇಣುಕಾಸ್ವಾಮಿಯಿಂದಾನೇ ಶುರುವಾಗಿದೆ ನಿಜ. ಹಾಗಂತ ಅವನನ್ನು ಕೊಲೆ ಮಾಡಿ, ಚಿತ್ರಹಿಂಸೆ ನೀಡುವುದು ಅವನಿಗೆ ಶಿಕ್ಷೆನಾ? ಇದು ನನ್ನ ಪ್ರಶ್ನೆ ಎಂದಿದ್ದಾರೆ ಸುಷ್ಮಾ ವೀರ್. ಈ ಮೂಲಕ ನಟ ದರ್ಶನ್ ಮತ್ತರ ಗ್ಯಾಂಗ್ ನಡೆಸಿದ ಈ ಕೃತ್ಯದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾನೂನಿಗೆ ಒಪ್ಪಿಸಿದ್ದರೆ, ಅದೇ ದರ್ಶನ್ ಎಲ್ಲರಿಗಿಂತ ದೊಡ್ಡವರಾಗುತ್ತಿದ್ರಲ್ಲವೇ?" ಎಂದಿದ್ದಾರೆ.
ಅಶ್ವಿನಿ ವಿರುದ್ಧ ಗಜಪಡೆಯ ಕೆಟ್ಟ ಪೋಸ್ಟ್ ಹೀಗಿದೆ..
@GAJAPADE6 ಹೆಸರಿನ ಟ್ವಿಟರ್ ಖಾತೆಯಿಂದ, "ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಗಂಡ ಸತ್ತ ಮುಂ.. ಯರನ್ನು ಕರೀಬಾರದು. ಆರ್ಸಿಬಿ ಅನ್ಬಾಕ್ಸ್ ಇವೆಂಟ್ಗೆ ಈ ಮುಂ...ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್ ಸೋಲ್ತಾ ಇದ್ದಾರೆ" ಎಂದು #Yuvarajkumar #PuneethRajkumar #Yuva #Dboss #DevilTheHero ಎಂಬ ಹ್ಯಾಷ್ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದರು.
ವಿಭಾಗ