ಅಜಾಗ್ರತ ಬಿಡುಗಡೆಗೂ ಮುನ್ನವೇ, ಸಿನಿಮಾ ಮೆಚ್ಚಿ ನಿರ್ದೇಶಕರಿಗೆ ವಿಶೇಷ ಉಡುಗೊರೆ ನೀಡಿದ ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿರುವ, ಅಜಾಗ್ರತ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿದು ಚಿತ್ರದ ರಫ್ ಕಾಪಿ ಬಂದಿದೆ. ಅಜಾಗ್ರತ ಚಿತ್ರದ ರಫ್ ಕಾಪಿ ನೋಡಿದ ನಿರ್ಮಾಪಕರಿಗೆ ಚಿತ್ರ ತುಂಬಾ ಇಷ್ಟವಾಗಿದ್ದು, ನಿರ್ದೇಶಕ ಶಶಿಧರ್ಗೆ ದುಬಾರಿ ಬೆಲೆಯ ಕಾರು ಉಡುಗೊರೆಯಾಗಿ ಸಿಕ್ಕಿದೆ.
![ಅಜಾಗ್ರತ ಬಿಡುಗಡೆಗೂ ಮುನ್ನವೇ, ಸಿನಿಮಾ ಮೆಚ್ಚಿ ನಿರ್ದೇಶಕರಿಗೆ ವಿಶೇಷ ಉಡುಗೊರೆ ನೀಡಿದ ರಾಧಿಕಾ ಕುಮಾರಸ್ವಾಮಿ ಅಜಾಗ್ರತ ಬಿಡುಗಡೆಗೂ ಮುನ್ನವೇ, ಸಿನಿಮಾ ಮೆಚ್ಚಿ ನಿರ್ದೇಶಕರಿಗೆ ವಿಶೇಷ ಉಡುಗೊರೆ ನೀಡಿದ ರಾಧಿಕಾ ಕುಮಾರಸ್ವಾಮಿ](https://images.hindustantimes.com/kannada/img/2024/06/30/550x309/Ajajaj_1719720132247_1719720139628.jpg)
Ajagrata Kannada Movie: ನಟಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿರುವ ಅಜಾಗ್ರತ ಸಿನಿಮಾ ಹಲವು ವಿಶೇಷತೆಗಳಿಂದಲೇ ಸದ್ದು ಮಾಡುತ್ತಿದೆ. ಇದೀಗ ಈ ಸಿನಿಮಾದ ಶೂಟಿಂಗ್ ಮುಗಿದು, ಚಿತ್ರದ ಮೊದಲ ಕಾಪಿಯೂ ಸಿದ್ಧವಾಗಿದೆ. ಇನ್ನೇನು ಬಿಡುಗಡೆಯ ದಿನಾಂಕ ಘೋಷಣೆ ಮಾಡಿ ಪ್ರಚಾರ ಕಣಕ್ಕಿಳಿಯುವುದಷ್ಟೇ ಬಾಕಿ. ಹೀಗಿರುವಾಗಲೇ ಇದೇ ಸಿನಿಮಾ ಮೂಡಿ ಬಂದ ರೀತಿ, ಚಿತ್ರದ ನಿರ್ಮಾಪಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲ ವಿಶೇಷ ಉಡುಗೊರೆಯೂ ಸಿಕ್ಕಿದೆ.
ಯಾವುದೇ ಚಿತ್ರವಾದರೂ ಸರಿ. ಮೊದಲು ಬಂಡವಾಳ ಹಾಕಿದ ನಿರ್ಮಾಪಕರಿಗೆ ಆ ಸಿನಿಮಾ ಮೆಚ್ಚುಗೆಯಾಗಬೇಕು. ನಿರ್ಮಾಪಕರಿಗೆ ಸಿನಿಮಾ ಇಷ್ಟವಾದರೆ ನಿರ್ದೇಶಕ ಅರ್ಧ ಗೆದ್ದ ಹಾಗೆ. ಇದೀಗ ಅಜಾಗ್ರತ ಸಿನಿಮಾ ಸಹ ನಿರ್ಮಾಪಕರಿಗೆ ಇಷ್ಟವಾಗಿದೆ. ಅದರಂತೆ ಚಿತ್ರದ ನಿರ್ದೇಶಕ ಎಂ. ಶಶಿಧರ್ಗೆ ದುಬಾರಿ ಬೆಲೆಯ ಕಾರ್ಅನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ ರಾಧಿಕಾ ಕುಮಾರಸ್ವಾಮಿ ಸಹೋದರ ಮತ್ತು ಚಿತ್ರದ ನಿರ್ಮಾಪಕ ರವಿರಾಜ್.
ಎಂ ಶಶಿಧರ್ ನಿರ್ದೇಶನದ ಸಿನಿಮಾ
ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ನಟಿಸಿರುವ, ರವಿರಾಜ್ ನಿರ್ಮಾಣದ ಹಾಗೂ ಎಂ.ಶಶಿಧರ್ ನಿರ್ದೇಶನದ ಅಜಾಗ್ರತ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿದು ಚಿತ್ರದ ರಫ್ ಕಾಪಿ ಬಂದಿದೆ. ಅಜಾಗ್ರತ ಚಿತ್ರದ ರಫ್ ಕಾಪಿ ನೋಡಿದ ನಿರ್ಮಾಪಕರಿಗೆ ಚಿತ್ರ ತುಂಬಾ ಇಷ್ಟವಾಗಿದೆಯಂತೆ. ಈ ಸಂದರ್ಭದಲ್ಲಿ ನಿರ್ಮಾಪಕ ರವಿರಾಜ್, ನಿರ್ದೇಶಕ ಶಶಿಧರ್ ಅವರಿಗೆ ಕಾರು ನೀಡುವ ಮೂಲಕ ಚಿತ್ರ ಉತ್ತಮವಾಗಿ ಮೂಡಿಬಂದಿರುವ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಫಾರ್ಚ್ಯೂನರ್ ಕಾರ್ ಉಡುಗೊರೆ
"ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ, ಅದಕ್ಕೂ ಹೆಚ್ಚಾಗಿಯೇ ಚಿತ್ರವನ್ನು ಬಹಳ ಚೆನ್ನಾಗಿ ಮಾಡಿ ಮುಗಿಸಿದ್ದಾರೆ. ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಚಿತ್ರ ನೋಡಿ ನನಗೆ ತುಂಬಾ ಖುಷಿಯಾಗಿದೆ. ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿರುವ ನಿರ್ದೇಶಕರಿಗೆ ಉಡುಗೊರೆ ನೀಡುವ ಮನಸ್ಸಾಯಿತು. ಹಾಗಾಗಿ ಫಾರ್ಚ್ಯೂನರ್ ಕಾರನ್ನು ಉಡುಗೊರೆಯಾಗಿ ನೀಡುತ್ತೀದ್ದೇನೆ ಎಂದು ನಿರ್ಮಾಪಕ ರವಿರಾಜ್ ತಿಳಿಸಿದ್ದಾರೆ.
ಚಿತ್ರ ಬಿಡುಗಡೆಯಾಗಿ ಯಶಸ್ವಿಯಾದ ನಂತರ ನಿರ್ದೇಶಕರಿಗೆ ಉಡುಗೊರೆ ನೀಡುವ ನಿರ್ಮಾಪಕರಿದ್ದಾರೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ನಿರ್ದೇಶಕರ ಕಾರ್ಯವನ್ನು ಮೆಚ್ಚಿ, ಕಾರನ್ನು ಉಡುಗೊರೆ ನೀಡಿರುವ ನಿರ್ಮಾಪಕ ರವಿರಾಜ್ ಅವರ ಗುಣ ನಿಜಕ್ಕೂ ಶ್ಲಾಘನೀಯ.
ಬಹುಭಾಷಾ ಕಲಾವಿದರ ಸಮಾಗಮ
ಬಾಲಿವುಡ್ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಈ ಚಿತ್ರದ ನಾಯಕ. ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದಾರೆ. ತಮಿಳು ನಟ ಬಾಬಿ ಸಿಂಹ ಸಹ ಈಗ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ರಾವ್ ರಮೇಶ್, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
![Whats_app_banner Whats_app_banner](https://kannada.hindustantimes.com/static-content/1y/wBanner.png)