ದಿಕ್ಕು ತೋಚದೆ ಕ್ಯಾನ್ಸರ್ ಟೆಸ್ಟ್ ಮಾಡಿಸಿದ ನಟಿ ಶಾನ್ವಿ ಶ್ರೀವಾಸ್ತವ್; ಅಷ್ಟಕ್ಕೂ ಈ ಸುಂದರಿಗೆ ಆಗಿದ್ದೇನು?
ಫಿಟ್ನೆಸ್ ವಿಚಾರದಲ್ಲಿ ಸದಾ ಮುಂದಿದ್ದರೂ, ಒಮ್ಮಿಂದೊಮ್ಮೆ ಎದುರಾಗುವ ಆರೋಗ್ಯ ಸಮಸ್ಯೆ ಎಂಥವರನ್ನೂ ಹೆದರಿಸದೇ ಇರದು. ಇದೀಗ ಚಂದನವನದ ಚೆಂದದ ನಟಿ ಶಾನ್ವಿ ಶ್ರೀವಾಸ್ತವ್ ಸಹ ತಮಗಿದ್ದ ಕಾಯಿಲೆ ತಿಳಿಯುತ್ತಿದ್ದಂತೆ ಬೆಚ್ಚಿ ಬಿದ್ದು, ಅದರ ಚೇತರಿಕೆಗೆ ಔಷದೋಪಚಾರದ ಮೊರೆ ಹೋಗಿದ್ದಾರೆ.

Shanvi Srivastava: ಸ್ಯಾಂಡಲ್ವುಡ್ ನಟಿ ಶಾನ್ವಿ ಶ್ರೀವಾಸ್ತವ್ ಕನ್ನಡ ಸಿನಿಮಾ ಪ್ರೇಮಿಗಳಿಗೆ ಮಾತ್ರವಲ್ಲ, ಪರಭಾಷಿಕರಿಗೂ ಗೊತ್ತಿರುವ ಮುಖ. ಆದರೆ, ಇತ್ತೀಚಿನ ದಿನಗಳಲ್ಲಿ ಇದೇ ನಟಿಯ ಸಿನಿಮಾಗಳು ಅದ್ಯಾಕೋ ಅಷ್ಟೊಂದು ಸದ್ದು ಮಾಡುತ್ತಿಲ್ಲ. ಜತೆಗೆ ಸಿನಿಮಾಗಳಿಂದಲೂ ಕೊಂಚ ಅಂತರವನ್ನೇ ಕಾಯ್ದುಕೊಂಡಿದ್ದರು ಈ ನಟಿ. ಇದೀಗ ಮೊದಲಿನ ಆ ಗತ್ತು ಕಾಣಿಸದಿದ್ದರೂ, ಬಣ್ಣದ ಲೋಕದಲ್ಲಿಯೇ ಸಕ್ರಿಯರಿದ್ದಾರೆ. ಕನ್ನಡದ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ ಶಾನ್ವಿ.
2012ರಲ್ಲಿ ತೆಲುಗಿನಲ್ಲಿ ತೆರೆಕಂಡ ಲವ್ಲೀ ಸಿನಿಮಾ ಮೂಲಕ ಟಾಲಿವುಡ್ಗೆ ಪದಾರ್ಪಣೆ ಮಾಡಿದ ಶಾನ್ವಿ, ಅದಾದ ಬಳಿಕ ಚಂದ್ರಲೇಖ ಸಿನಿಮಾ ಮೂಲಕ 2014ರಲ್ಲಿ ಸ್ಯಾಂಡಲ್ವುಡ್ಗೆ ಆಗಮಿಸಿದರು. 2015ರಲ್ಲಿ ಯಶ್ ಜತೆಗಿನ ಮಾಸ್ಟರ್ಪೀಸ್ ಸಿನಿಮಾ ಹಿಟ್ ತಂದುಕೊಟ್ಟಿತು. ಅಲ್ಲಿಂದ ಹಿಂದೆ ತಿರುಗಿ ನೋಡದ ಶಾನ್ವಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿಯಾದರು.
ಹೀಗೆ ಏರುಗತಿಯಲ್ಲಿಯೇ ಸಾಗಿದ ಶಾನ್ವಿ ಅವರ ವೃತ್ತಿಜೀವನ ಇದೀಗ ಮೊದಲಿನಂತಿಲ್ಲ. ಸಿನಿಮಾ ಅವಕಾಶಗಳು ಮೊದಲಿನಂತಿಲ್ಲ. ಇದೆಲ್ಲದರ ಜತೆಗೆ ಆರೋಗ್ಯ ಸಮಸ್ಯೆಯೂ ಶಾನ್ವಿಯನ್ನು ಕೊಂಚ ನಲುಗಿಸಿತ್ತು. ಚಿಂತೆಗೊಳಗಾಗುವಂತೆ ಮಾಡಿತ್ತು. ಅಂದರೆ, ಎಲ್ಲವೂ ಚೆನ್ನಾಗಿಯೇ ಸಾಗುತ್ತಿದ್ದ ಸಂದರ್ಭದಲ್ಲಿ ದಿಢೀರನೇ ಎದುರಾದ ಅನಾರೋಗ್ಯ ಭಯಹುಟ್ಟಿಸಿತ್ತು. ಅಷ್ಟಕ್ಕೂ ಫಿಟ್ ಆಗಿದ್ದ ಶಾನ್ವಿಗೆ ಏನಾಗಿತ್ತು? ಈ ವಿಚಾರವನ್ನು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಹುಟ್ಟುಹಬ್ಬದ ಮರುದಿನವೇ ಶಾಕ್
"ಡಿಸೆಂಬರ್ 9ರಂದು ನನ್ನ ಹುಟ್ಟುಹಬ್ಬ. ಆ ಬರ್ತ್ಡೇ ಆಚರಿಸಿಕೊಂಡ ಕೆಲವೇ ದಿನಗಳ ಬಳಿಕ ನನ್ನ ಆರೋಗ್ಯದಲ್ಲಿ ಏರುಪೇರಾಯಿತು. ಆಸ್ಪತ್ರೆಗೆ ಹೋಗಿ ಬಂದೆ. ಎಂಆರ್ಐ ಸ್ಕ್ಯಾನಿಂಗ್ ಮಿಷಿನ್ ಒಳಗೆ ಹೋಗುತ್ತಿದ್ದಂತೆ ನಮ್ಮ ಹೆಲ್ತ್ಗಿಂತ ಮುಖ್ಯವಾದದ್ದು ಬೇರೆನೂ ಮುಖ್ಯ ಇಲ್ಲ ಅನ್ನೋದು ನನ್ನ ಗಮನಕ್ಕೆ ಬಂತು. ಅದರಿಂದ ಹೊರ ಬರುತ್ತಿದ್ದಂತೆ ನನ್ನ ಕಣ್ಣ ಮುಂದೆ ಎಲ್ಲರೂ ಬಂದು ಹೋದರು. ಆರೋಗ್ಯ ಎಷ್ಟು ಮುಖ್ಯ ಎಂಬುದು ತಿಳಿಯಿತು. ಅಲ್ಲಿಂದ ನನ್ನ ಬಗ್ಗೆ ನಾನೇ ಹೆಚ್ಚು ಅರ್ಥ ಮಾಡಿಕೊಳ್ಳಲು ಆರಂಭಿಸಿದೆ" ಎಂದಿದ್ದಾರೆ.
ಕ್ಯಾನ್ಸರ್ ಟೆಸ್ಟ್ ಮಾಡಿಸಿ ಎಂದ ವೈದ್ಯರು..
"ಕಳೆದ ವರ್ಷದ ಡಿಸೆಂಬರ್ 9ರಂದು ನನ್ನ ಬರ್ತ್ಡೇ. ಅದರ ಮರುದಿನವೇ ನನಗೆ ಕಿಬ್ಬೊಟ್ಟೆಯ ಭಾಗದಲ್ಲಿ (ಹೊಕ್ಕುಳದ ಕೆಳಭಾಗ) ದಿಢೀರನೇ ನೋವು ಶುರುವಾಯ್ತು. ನನಗೆ ಚೂರು ಆಚೀಚೆ ಹೊರಳಾಡುವುದಕ್ಕೆ ಆಗುತ್ತಿರಲಿಲ್ಲ. ಅದ್ಯಾವ ಮಟ್ಟಿನ ನೋವೆಂದರೆ ಹೇಳತೀರದು. ಆದಷ್ಟು ಬೇಗ ವೈದರನ್ನು ಭೇಟಿ ಮಾಡಿದೆ, ಅವರು ಸೊನಾಗ್ರಫಿ ಟೆಸ್ಟ್ ಮಾಡಬೇಕು ಎಂದರು. ಅದರ ರಿಪೋರ್ಟ್ ಬರುತ್ತಿದ್ದಂತೆ, ಎಂಆರ್ಐ ಮತ್ತು ಕ್ಯಾನ್ಸರ್ ಟೆಸ್ಟ್ ಮಾಡಿಸಿ, ಆ ರಿಪೋರ್ಟ್ ಸಮೇತ ನನ್ನ ಬಳಿ ಬನ್ನಿ ಎಂದಿದ್ದರು."
ಆ ಕಾಯಿಲೆಯಿಂದ ಹೊರಬರಲು ಆರು ತಿಂಗಳೇ ಬೇಕಾಯ್ತು
"ಅದೇ ರೀತಿ ಎಲ್ಲ ಟೆಸ್ಟ್ ಮಾಡಿಸಿ, ಡಾಕ್ಟರ್ ಬಳಿ ಹೋದೆ. ನಿಮ್ಮ ಅಂಡಾಶಯದಲ್ಲಿ ಹೆಚ್ಚು ಗುಳ್ಳೆಗಳಿವೆ (Cysts) ಎಂದು ಹೇಳಿದ್ದರು. ನನಗೆ ಅದು ಹೊಸದಾಗಿತ್ತು. ಈ ವರೆಗೂ ನಾನು ಈ ಥರದ ಆರೋಗ್ಯ ಸಮಸ್ಯೆ ನೋಡಿದವಳಲ್ಲ. ಇದು ನನಗೆ ತುಂಬ ಹೊಸದು. ಆಗ ವೈದ್ಯರು ಏನೂ ಯೋಚನೆ ಮಾಡಬೇಡಿ. ರಿಪೋರ್ಟ್ ಬರುವವರೆಗೂ ಹೆದರಬೇಡಿ ಅಂದಿದ್ದರು. ಆದರೆ, ರಿಪೋರ್ಟ್ ಬಂದ್ಮೇಲೆ ನಿಮ್ಮ ಓವರಿಯನ್ನು ತೆಗೆದು ಹಾಕಬೇಕಾಗಿ ಬರಬಹುದು. ಆದರೆ, ರಿಪೋರ್ಟ್ ಬರುವವರೆಗೂ ಏನೂ ಹೇಳುವುದಿಲ್ಲ. ಒವರಿಯಲ್ಲಿದ್ದ ಸಿಸ್ಟ್ ಒಡೆದಿದ್ದರಿಂದ ಸಾಕಷ್ಟು ಮಾತ್ರೆ ನೀಡಿದ್ದರು. ಆ ಮೆಡಿಕೇಷನ್ ಸರಿಸುಮಾರು ಆರು ತಿಂಗಳು ಮುಂದುವರಿದಿತ್ತು. ಇದೀಗ ಎಲ್ಲವೂ ಸುಧಾರಿಸಿದೆ. ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿದ್ದೇನೆ" ಎಂದಿದ್ದಾರೆ.

ವಿಭಾಗ