ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ರಶ್ಮಿಕಾ ಮಂದಣ್ಣ; ಭಾರತದ 10 ವರ್ಷದ ಅಭಿವೃದ್ಧಿಗೆ ವಾಹ್ ಅಂದ್ರು ಪುಷ್ಪ ನಟಿ
Rashmika praises PM Modi: ಪುಷ್ಪ 2 ನಟಿ ರಶ್ಮಿಕಾ ಮಂದಣ್ಣ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದ್ದಾರೆ. ಯುವ ಭಾರತ ವೇಗವಾಗಿ ಬೆಳೆಯುತ್ತಿದೆ. ಭಾರತವು ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ಉದ್ಘಾಟಿಸಿದ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವಾ ಶೇವಾ ಅಟಲ್ ಸೇತು ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮುಕ್ತವಾಗಿ ಹೊಗಳಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐಗೆ ನೀಡಿದ ಸಂದರ್ಶನದಲ್ಲಿ "ಇದು ಮುಂಬೈ ಸಾರಿಗೆ ಜಾಲದ ಗೇಮ್ಚೇಂಜರ್. ಭಾರತ ಎಲ್ಲಿಯೂ ನಿಲ್ಲುವುದಿಲ್ಲ" ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿಕಾರ್ಯಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ.
ನಮ್ಮ ಭಾರತ ತುಂಬಾ ಸ್ಮಾರ್ಟ್
ಅಟಲ್ ಸೇತು ಬಗ್ಗೆ ರಶ್ಮಿಕಾ ಮಂದಣ್ಣ ಈ ರೀತಿ ಹೇಳಿದ್ದಾರೆ. "ಈ ರಸ್ತೆಯಲ್ಲೀಗ ಎರಡು ಗಂಟೆಗಳ ಪ್ರಯಾಣವನ್ನು ಕೇವಲ 20 ನಿಮಿಷಗಳಲ್ಲಿ ಮಾಡಬಹುದು. ಈ ರೀತಿಯಾಗಲು ಸಾಧ್ಯವಿಲ್ಲ ಎಂದು ಸಾಕಷ್ಟು ಜನರು ಅಂದುಕೊಂಡಿದ್ದರು. ಆದರೆ, ಅದು ಈಗ ಸಾಧ್ಯವಾಗಿದೆ. ಆಜ್ ನವೀ ಮುಂಬೈ ಸೆ ಮುಂಬೈ ತಕ್, ಗೋವಾ ಸೆ ಮುಂಬೈ ತಕ್ ಮತ್ತು ಬೆಂಗಳೂರು ಸೆ ಮುಂಬೈ ತಕ್ (ನವ ಮುಂಬೈನಿಂದ ಮುಂಬೈ ಮತ್ತು ಗೋವಾದಿಂದ ಮುಂಬೈ ಮತ್ತು ಬೆಂಗಳೂರಿನಿಂದ ಮುಂಬೈ) ಎಲ್ಲಾ ಕಡೆಗೂ ಈಗ ಪ್ರಯಾಣ ಸುಲಭವಾಗಿದೆ. ಇಂತಹ ಮೂಲಸೌಕರ್ಯದ ಕುರಿತು ಹೆಮ್ಮೆಯಾಗುತ್ತಿದೆ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
"ಈಗ ಭಾರತ ನಾನ್ ಸ್ಟಾಪ್. ಎಲ್ಲಿಯೂ ನಿಲ್ಲುವುದಿಲ್ಲ. ಈಗ ದೇಶದ ಪ್ರಗತಿ, ಬೆಳವಣಿಗೆಯನ್ನು ಗಮನಿಸಿ. ಕಳೆದ ಹತ್ತು ವರ್ಷಗಳಲ್ಲಿ ಭಾರತವು ಬೆಳೆದ ರೀತಿ ಅದ್ಭುತವಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ದೇಶದ ವಿವಿಧ ಯೋಜನೆಗಳು, ರಸ್ತೆ ಯೋಜನೆ ಎಲ್ಲವೂ ಅದ್ಭುತವಾಗಿದೆ. ಈಗ ನಮ್ಮ ಸಮಯ. ಈ ಏಳು ವರ್ಷಗಳಲ್ಲಿ ಈ ರಸ್ತೆಯ ಅಭಿವೃದ್ಧಿ ರೋಚಕವಾಗಿದೆ. ಭಾರತ ಅತ್ಯಂತ ಬುದ್ಧಿವಂತ ದೇಶವೆಂದು ಹೇಳಲು ಹೆಮ್ಮೆಯಾಗುತ್ತಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಯುವ ಭಾರತದ ಪ್ರಗತಿ
"ಯುವ ಭಾರತವು ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಯುವ ಜನತೆ ತುಂಬಾ ಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಯುವ ಜನರು ತಮ್ಮದೇ ಆದ ಆಲೋಚನಾ ಕ್ರಮ ಹೊಂದಿದ್ದಾರೆ. ದೇಶವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ" ಎಂದು ಪುಷ್ಪ 2 ನಟಿ ಹೇಳಿದ್ದಾರೆ.
ಆಗಸ್ಟ್ 15ರಂದು ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2: ದಿ ರೂಲ್' ಚಿತ್ರದ ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು ರಶ್ಮಿಕಾ ಮಂದಣ್ಣ ಅವರು ರಣಬೀರ್ ಕಪೂರ್ ಅವರೊಂದಿಗೆ 2023ರ ಬ್ಲಾಕ್ಬಸ್ಟರ್ ಸಿನಿಮಾ ಅನಿಮಲ್ನಲ್ಲಿ ನಟಿಸಿದ್ದರು. ಶೇಖರ್ ಕಮ್ಮುಲಾ ನಿರ್ದೇಶನದ ಕುಬೇರ ಚಿತ್ರದಲ್ಲಿ ಧನುಷ್ ನಾಯಕನಾಗಿ ಮತ್ತು ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.