ಕಣ್ಮುಚ್ಚಿದ ಬೆಂಗಳೂರಿನ ಕಾವೇರಿ ಚಿತ್ರಮಂದಿರ!; 50 ವರ್ಷದ ಹಳೇ ಥಿಯೇಟರ್ ಯುಗಾಂತ್ಯ, ಗತವೈಭವ ಇನ್ನು ನೆನಪು ಮಾತ್ರ
1974ರ ಜನವರಿ 11 ರಂದು ಡಾ. ರಾಜ್ಕುಮಾರ್ ಅವರ ಬಂಗಾರದ ಪಂಜರ ಸಿನಿಮಾದ ಪ್ರದರ್ಶನದೊಂದಿಗೆ ಉದ್ಘಾಟನೆಗೊಂಡ ಕಾವೇರಿ ಥಿಯೇಟರ್, ಇದೇ ವರ್ಷದ ಜನವರಿಯಲ್ಲಿ ತನ್ನ 50 ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತ್ತು. ಈಗ ಕೊನೇ ಪರದೆ ಎಳೆದಿದೆ.

Cauvery Theatre: ಬೆಂಗಳೂರಿನ ಸದಾಶಿವನಗರದ ಸ್ಯಾಂಕಿ ಕೆರೆ ಬಳಿಯ ನೆಲೆನಿಂತಿದ್ದ ಮತ್ತೊಂದು ಐಕಾನಿಕ್ ಥಿಯೇಟರ್ ಕಾವೇರಿ ಕಣ್ಮುಚ್ಚಿದೆ! ಕಳೆದ 5 ದಶಕಗಳ ಸಿನಿಮಾ ಪ್ರದರ್ಶನದ ಓಟವನ್ನು ಕಾವೇರಿ ಚಿತ್ರಮಂದಿರ ಮುಗಿಸಿದೆ. ಈ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಸಾವಿರಾರು ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಆತಿಥ್ಯ ವಹಿಸಿದ ಥಿಯೇಟರ್ ಏಪ್ರಿಲ್ 19 ರಂದು ಕೊನೇ ಪ್ರದರ್ಶನ ಕಾಣುವ ಮೂಲಕ ಯುಗಾಂತ್ಯವಾಗಿದೆ. ಚಂದನವನದಲ್ಲಿ ಎಲ್ಲ ಭಾಷೆಗಳ ಸಿನಿಮಾಗಳನ್ನು ತನ್ನ ಒಡಲಿಗೆ ಹಾಕಿ, ಮನರಂಜಿಸಿದ್ದ ಕಾವೇರಿಯ ಗತವೈಭವ ಇನ್ನು ನೆನಪು ಮಾತ್ರ!
1980 ಬಂದ ತೆಲುಗಿನ ಶಂಕರಾಭರಣಂ 30 ವಾರಗಳ ಭರ್ಜರಿ ಪ್ರದರ್ಶನ, 1995ರಲ್ಲಿನ ಬಾಲಿವುಡ್ ಕ್ಲಾಸಿಕ್ ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾದ ಐತಿಹಾಸಿಕ ಓಟ, 1976ರಲ್ಲಿ ತೆರೆಗೆ ಬಂದ ರಾಜ್ಕುಮಾರ್ ನಟಿಸಿದ ಪ್ರೇಮದ ಕಾಣಿಕೆ ಸಿನಿಮಾ, 22 ವಾರಗಳ ಭರ್ಜರಿ ಪ್ರದರ್ಶನವನ್ನು ಇದೇ ಚಿತ್ರಮಂದಿರದಲ್ಲಿಯೇ ಕಂಡಿತ್ತು. ಕಮಲ್ ಹಾಸನ್ ನಟನೆಯ ಇಂಡಿಯನ್ ಚಿತ್ರ ಸಹ ಇದೇ ಥಿಯೇಟರ್ನಲ್ಲಿ ಶತದಿನೋತ್ಸವ ಆಚರಿಸಿತ್ತು. ಹೀಗೆ ಸಾವಿರಾರು ಸಿನಿಮಾಗಳ ಸಂಭ್ರಮಾಚರಣೆಗೆ ವೇದಿಕೆಯಾಗಿದ್ದ ಕಾವೇರಿ ಚಿತರಮಂದಿರ ಈಗ ಬಂದ್ ಆಗಿದೆ.
ಬಂಗಾರದ ಪಂಜರದಿಂದ ಶುರು
1974ರ ಜನವರಿ 11 ರಂದು ರಾಜ್ಕುಮಾರ್ ಅವರ ಬಂಗಾರದ ಪಂಜರ ಸಿನಿಮಾದ ಪ್ರದರ್ಶನದೊಂದಿಗೆ ಉದ್ಘಾಟನೆಗೊಂಡ ಕಾವೇರಿ ಥಿಯೇಟರ್, ಇದೇ ವರ್ಷದ ಜನವರಿಯಲ್ಲಿ ತನ್ನ 50 ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿತ್ತು. ಆದರೆ, ಕೋವಿಡ್ ಬಳಿಕ ಚಿತ್ರಮಂದಿರಗಳ ವಾಸ್ತವ ಸ್ಥಿತಿ ಮೊದಲಿನಂತಿಲ್ಲ. ಅದನ್ನು ಅರಿತ ಚಿತ್ರಮಂದಿರದ ಮಾಲೀಕ ಪ್ರಕಾಶ್ ನರಸಿಂಹಯ್ಯ ಚಿತ್ರಮಂದಿರ ಮುಚ್ಚುವ ನಿರ್ಧಾರ ಮಾಡಿದ್ದಾರೆ. ಅದರಂತೆ, 5 ದಶಕಗಳ ಕಾಲ ಕನ್ನಡಿಗರನ್ನು ರಂಜಿಸಿದ್ದ ಮತ್ತೊಂದು ಥಿಯೇಟರ್ ನೆಲಕ್ಕುರುಳಿದೆ.
ಕೋವಿಡ್ ಬಳಿಕ ಆದಾಯವೇ ಇಲ್ಲ
ಪ್ರೇಕ್ಷಕರ ಕೊರತೆ, ಕಡಿಮೆ ಆದಾಯ, ಅತಿಯಾದ ನಿರ್ವಹಣಾ ವೆಚ್ಚ, ಒಟಿಟಿಗಳ ಅಬ್ಬರದ ಹಿನ್ನೆಲೆಯಲ್ಲಿ ಚಿತ್ರಮಂದಿರವನ್ನು ಮುಚ್ಚಲು ಚಿತ್ರಮಂದಿರದ ಮಾಲೀಕ ಪ್ರಕಾಶ್ ನರಸಿಂಹಯ್ಯ ನಿರ್ಧರಿಸಿದ್ದಾರೆ. ಕೋವಿಡ್ ಬಳಿಕ ಸಿನಿಮಾ ಮಂದಿರಕ್ಕೆ ಬರುವವರ ಸಂಖ್ಯೆಯೇ ಕಡಿಮೆಯಾಯ್ತು. 1100 ಸೀಟುಗಳಿದ್ದರೂ, 100 ಜನರನ್ನೂ ತುಂಬಿಸುವುದು ಕಷ್ಟಕರವಾಗಿತ್ತು. ಬಾಲಿವುಡ್ನ ಬಡೇ ಮಿಯಾ ಚೋಟೆ ಮಿಯಾ ಚಿತ್ರವೇ ಇಲ್ಲಿ ಕೊನೆಯದಾಗಿ ತೆರೆಕಂಡಿದ್ದು ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ಪ್ರಕಾಶ್ ಮಾಹಿತಿ ನೀಡಿದ್ದಾರೆ.
ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ
ಬೆಂಗಳೂರಿನಲ್ಲಿ ಈಗಾಗಲೇ ಚಂದನವದ ಗತವೈಭವ ಕಂಡ ಎಷ್ಟೋ ಚಿತ್ರಮಂದಿರಗಳು ಕಣ್ಮುಚ್ಚಿವೆ. ಈಗ ಆ ಸಾಲಿಗೆ ಕಾವೇರಿ ಸಹ ಸೇರಿಕೊಂಡಿದೆ. ಸಹಜವಾಗಿ ಚಿತ್ರಮಂದಿರ ನೆಲಸಮವಾದರೆ, ಅದೇ ಸ್ಥಳದಲ್ಲಿ ಬೃಹತ್ ಕಮರ್ಷಿಯಲ್ ಕಾಂಪ್ಲೆಕ್ಸ್ ತಲೆಯತ್ತುವುದು ಸಾಮಾನ್ಯ. ಕಾವೇರಿ ಚಿತ್ರಮಂದಿರದ ಸ್ಥಳದಲ್ಲಿಯೇ ಬೃಹತ್ ಮಾಲ್ ನಿರ್ಮಾಣವಾಗಲಿದೆ ಎಂದೇ ಹೇಳಲಾಗುತ್ತಿದೆ. ಭರ್ತಿ ಒಂದು ಎಕರೆ ವಿಸ್ತೀರ್ಣದಲ್ಲಿರುವ ಈ ಪ್ರದೇಶ ಮುಂದಿನ ದಿನಗಳಲ್ಲಿ ಹೊಸ ರೂಪದೊಂದಿಗೆ ಕಂಡರೂ ಅಚ್ಚರಿಯಿಲ್ಲ.
