Alaikya Movie: ಅತಿಥಿಗೃಹದಲ್ಲಿ ಆತ್ಮಗಳ ಸಂಚಾರ; ನಿರೀಕ್ಷೆ ಹೆಚ್ಚಿಸಿದ ಅಲೈಕ್ಯಾ ಎಂಬ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ
Alaikya Kannada Movie: ಶೀಘ್ರದಲ್ಲಿ ಕನ್ನಡದಲ್ಲಿ ಅಲೈಕ್ಯಾ ಎಂಬ ಹಾರರ್ ಸಿನಿಮಾವೊಂದು ರಿಲೀಸ್ ಆಗಲಿದೆ. ಕಳೆದ ವಾರ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾವು ಹಾರರ್ ಕಥಾನಕ ಹೊಂದಿರಲಿದೆ. ಜಾಲಿರೈಡಿಗೆ ಹೋದವರೂ ಅತಿಥಿಗೃಹದಲ್ಲಿ ಆತ್ಮಗಳ ಅತಿಥಿಗಳಾಗುವ ಕಥೆ ಇದರಲಿದೆಯಂತೆ.
ಬೆಂಗಳೂರು: ಶೀಘ್ರದಲ್ಲಿ ಕನ್ನಡದಲ್ಲಿ ಅಲೈಕ್ಯಾ ಎಂಬ ಹಾರರ್ ಸಿನಿಮಾವೊಂದು ರಿಲೀಸ್ ಆಗಲಿದೆ. ಕಳೆದ ವಾರ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾವು ಹಾರರ್ ಕಥಾನಕ ಹೊಂದಿರಲಿದೆ. ಜಾಲಿರೈಡಿಗೆ ಹೋದವರೂ ಅತಿಥಿಗೃಹದಲ್ಲಿ ಆತ್ಮಗಳ ಅತಿಥಿಗಳಾಗುವ ಕಥೆ ಇದರಲಿದೆಯಂತೆ. ಅಂದಹಾಗೆ, ಈ ಸಿನಿಮಾದ ಶೀರ್ಷಿಕೆಗೆ 21-21-21 ಎಂಬ ಅಡಿಬರಹ ಕೂಡ ಇದೆ.
ಅಲೈಕ್ಯಾ ಸಿನಿಮಾದ ಕಥೆಯೇನು?
ಒಂದಷ್ಟು ಸ್ನೇಹಿತರ ತಂಡ ವೀಕೆಂಡ್ ಕಳೆಯಲು ಜಾಲಿ ಟ್ರಿಪ್ ಹೊರಡುತ್ತಾರೆ. ಈ ಸ್ನೇಹಿತರು ಅತಿಥಿ ಗೃಹವೊಂದಕ್ಕೆ ಹೋಗಿ ಅಲ್ಲಿಯೇ ಉಳಿದುಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ನಡೆದ ಕೆಲವು ಘಟನೆಗಳಿಗಳಿಂದ ಆ ಗೆಸ್ಟ್ಹೌಸ್ನಲ್ಲಿ ಆತ್ಮಗಳಿರುವುದು ಗೊತ್ತಾಗಿ ಅಲ್ಲಿಂದ ತಪ್ಪಿಸಿಕೊಂಡು ಬರಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಅ ಮನೆಯಲ್ಲಿ ಬೆಲೆಬಾಳುವ ಅಮೂಲ್ಯ ವಜ್ರ ಇರುವ ಸಂಗತಿ ಅವರಿಗೆ ತಿಳಿಯುತ್ತದೆ. ಈ ಆತ್ಮಗಳೆಲ್ಲ ಆ ವಜ್ರಕ್ಕೆ ಕಾವಲಾಗಿರುತ್ತವೆ ಅಂತ ಅವರಿಗೆ ಗೊತ್ತಾಗುತ್ತದೆ. ಅದರಲ್ಲಿ ಒಂದು ಅತ್ಮ ಮಾತ್ರ ಈ ಸ್ನೇಹಿತರನ್ನು ಅಲ್ಲಿಂದ ಹೊರ ಕಳಿಸಲು ನೋಡಿದರೆ, ಮತ್ತೊಂದು ಆತ್ಮ ಅಲ್ಲೇ ಇರುವಂತೆ ಪ್ರಯತ್ನಿಸುತ್ತದೆ. ಇವರಿಗೆ ನೆರವು ನೀಡುವ ಆ ಆತ್ಮದ ಸಹಾಯದಿಂದ ಅವರು ಹೇಗೆ ವಜ್ರವನ್ನು ವಶಪಡಿಸಿಕೊಂಡು ಹೊರಬರುತ್ತಾರೆ, ಅಷ್ಟಕ್ಕೂ ಅವರಿಗೂ, 21-21-21 ಸಂಖ್ಯೆಗೂ ಇರುವ ಸಂಬಂಧವೇನು ಎಂಬುದೇ ಅಲೈಕ್ಯಾ ಸಿನಿಮಾದ ಕಥೆಯಾಗಿದೆ.
ಅಲೈಕ್ಯಾ ಸಿನಿಮಾದ ಟ್ರೇಲರ್ ರಿಲೀಸ್
ಇತ್ತೀಚೆಗೆ ಅಲೈಕ್ಯಾ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. 21-21-21 ಎಂಬ ಅಡಿಬರಹ ಹೊಂದಿರುವ ಈ ಚಿತ್ರದ ಟ್ರೈಲರ್ ಹಾಡುಗಳು ಬಿಡುಗಡೆ ಸಮಾರಂಭ ರೇಣುಕಾಂಬ ಸ್ಟುಡಿಯೋದಲ್ಲಿ ನಡೆದಿದೆ. ಹಿರಿಯನಟ ಸುಚೇಂದ್ರಪ್ರಸಾದ್ ಹಾಗೂ ನಟಿ ಸಂಜನಾ ನಾಯ್ಡು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದ್ದರುಎಂ.ಭೂಪತಿ ಅವರು . ಹಿತೇಶ್ ಮೂವೀಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಿಸಿದ್ದಾರೆ. ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಅಲೈಕ್ಯಾ ಸಿನಿಮಾದ ಕೆಲಸಗಳು ಈಗಾಗಲೇ ಮುಗಿದಿದೆ. ಅಲೈಕ್ಯಾ ಸಿನಿಮಾ ಬಿಡುಗಡೆಯ ಹಂತ ತಲುಪಿದೆ. ಸದ್ಯದಲ್ಲಿಯೇ ಈ ಸಿನಿಮಾ ರಿಲೀಸ್ ಆಗಲಿದೆ.
ಈ ಹಿಂದೆ ಮಳೆಬಿಲ್ಲು ಚಿತ್ರದ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದ ಸಾತ್ವಿಕ್ ಎಂ.ಭೂಪತಿ ಅವರು ಈ ಸಿನಿಮಾದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಜೊತೆಗೆ ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. "ಇದೊಂದು ಹಾರರ್ , ಥ್ರಿಲ್ಲರ್ ಚಿತ್ರ. ನಾಲ್ಕು ಪಿಲ್ಲರ್ ಗಳ ಸಹಕಾರದಿಂದ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದೆ" ಎಂದು ನಿರ್ದೇಶಕ ಸಾತ್ವಿಕ್ ಹೇಳಿದ್ದಾರೆ.
ಈ ಸಿನಿಮಾದ ಶೂಟಿಂಗ್ ಅನ್ನು ಬೆಂಗಳೂರು, ಚಿಕ್ಕಮಗಳೂರು, ಮೇಲುಕೋಟೆ, ಸುತ್ತಮುತ್ತ ನಡೆಸಲಾಗಿದೆ. ಸಾಯಿ ಸೋಮೇಶ್ ಅವರ ಸಂಗೀತ, ಬುಗುಡೆ ವೀರೇಶ್ ಅವರ ಛಾಯಾಗ್ರಹಣ, ಮುತ್ತುರಾಜ್ ಅವರ ಸಂಕಲನ ಇದೆ. ಹರಿಪ್ರಸಾದ್ ಅವರ ಸಾಹಿತ್ಯ ಹಾಗೂ ತೇಜ್ ಆರಾಧ್ಯ ಅವರ ನೃತ್ಯ ನಿರ್ದೇಶನ ಈ ಸಿನಿಮಾಕ್ಕಿದೆ.
ಪಂಚಮಜೀವ, ಸುಪ್ರೀತ್ ಶರ್ಮ ಹಾಗೂ ಸುರಭಿ ಭಾರದ್ವಾಜ್ ಚಿತ್ರದ ಹಾಡುಗಳಿಗೆ ಧನಿಯಾಗಿದ್ದಾರೆ. ದರ್ಶಿನಿ ಆರ್.ಒಡೆಯರ್, ನಿಸರ್ಗ ಮನ್ವೀರ್ ಚವ್ಹಾನ್, ವಿವೇಕ ಚಕ್ರವರ್ತಿ, ವಜ್ರ, ಕಾವ್ಯಪ್ರಕಾಶ್, ಜಾಹ್ನವಿ, ವಿ, ನಾರಾಯಣ ಸ್ವಾಮಿ ಡಿ.ಎಂ., ಡಿ.ಕೆ. ಮಂಜು, ಶಿವಮ್ಮ, ಸಾತ್ವಿಕ್ ಎಂ.ಭೂಪತಿ, ಶಿವಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಡಿಎಸ್ಕೆ ಸಿನಿಮಾಸ್ ನ ಸುನಿಲ್ ಕುಂಬಾರ್ ಅವರು ಅಲೈಕ್ಯಾ ಸಿನಿಮಾದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.