ಜುಲೈನಲ್ಲಿ ಅದ್ದೂರಿಯಾಗಿ ನಡೆಯಲಿದೆ ಅಪ್ಪು ಕಪ್ ಸೀಸನ್ 2; ಬ್ಯಾಡ್ಮಿಂಟನ್ ತಂಡಗಳಿಗೆ ಶುಭಕೋರಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಅಪ್ಪು ಕಪ್ ಸೀಸನ್ 2 (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಜುಲೈ ಅಂತ್ಯದಲ್ಲಿ ನಡೆಯಲಿದೆ. ಇತ್ತೀಚಿಗೆ ಈ ಟೂರ್ನಿಯ ಟೀಮ್ ಬಿಲ್ಡಿಂಗ್ ಇವೆಂಟ್ ನಡೆಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.
Appu cup Season 2: ಕನ್ನಡ ಚಿತ್ರರಂಗದೊಂದಿಗೆ ಒಂದು ದಶಕದಿಂದ ಒಡನಾಟ ಹೊಂದಿರುವ ಚೇತನ್ ಸೂರ್ಯ ಅವರ ಸ್ಟೆಲ್ಲರ್ ಸ್ಟುಡಿಯೋ ಮತ್ತು ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಮತ್ತು ಪಿಆರ್ಕೆ ಆಡಿಯೋ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿರುವ ಅಪ್ಪು ಕಪ್ ಸೀಸನ್ 2 (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಜುಲೈ ಅಂತ್ಯದಲ್ಲಿ ನಡೆಯಲಿದೆ. ಇತ್ತೀಚಿಗೆ ಈ ಟೂರ್ನಿಯ ಟೀಮ್ ಬಿಲ್ಡಿಂಗ್ ಇವೆಂಟ್ ನಡೆಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ಸಾಯಿ ಗೋಲ್ಡ್ ಪ್ಯಾಲೆಸ್ ಮಾಲೀಕರು ಹಾಗೂ ವಿಧಾನ ಪರಿಷತ್ ಸದಸ್ಯರು ಶರವಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಆಯೋಜಕ ಚೇತನ್ ಸೂರ್ಯ ಟೂರ್ನಿ ಬಗ್ಗೆ ಮಾಹಿತಿ ನೀಡಿದ್ದಾರೆ. "ನಾನು ಕಳೆದ ಹನ್ನೆರಡು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಸಕ್ರಿಯನಾಗಿದ್ದೇನೆ. ನಾಲ್ಕು ಸಿನಿಮಾಗಳಲ್ಲಿ ನಾಯಕನಾಗೂ ನಟಿಸಿರುವ ನನಗೆ, ಸಾಕಷ್ಟು ಇವೆಂಟ್ ಗಳನ್ನು ಆಯೋಜಿಸಿರುವ ಅನುಭವವಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ನಮ್ಮ ಸಂಸ್ಥೆಯ ಮೂಲಕ ಕಳೆದವರ್ಷ ಅಪ್ಪು ಕಪ್ (ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಆಯೋಜಿಸಲಾಗಿತ್ತು. ಟೂರ್ನಿ ಬಹಳ ಯಶಸ್ವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಹ ಅಪ್ಪು ಕಪ್ ಬಗ್ಗೆ ಪ್ರಶಂಸೆಯ ಮಾತುಗಳಾಡಿ, ಈ ಟೂರ್ನಿಗೆ ಪಿಆರ್ಕೆ ಆಡಿಯೋ ಸಹಯೋಗವಿದೆ ಎಂದು ತಿಳಿಸಿದ್ದಾರೆ. ಈ ಬಾರಿಯ ಟೀಮ್ ಬಿಲ್ಡಿಂಗ್ಗೆ ಸಹ ಬಂದು ಶುಭ ಕೋರಿದ್ದಾರೆ. ಈ ಸಮಯದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ" ಎಂದರು.
ಅಪ್ಪು ಕಪ್ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಒಟ್ಟು ಹತ್ತು ತಂಡಗಳಿರುತ್ತವೆ. ಒಂದೊಂದು ತಂಡದಲ್ಲಿ ಹದಿಮೂರು ಆಟಗಾರರಿರುತ್ತಾರೆ. ಹಿರಿತೆರೆ, ಕಿರುತೆರೆ ಹಾಗೂ ವಿವಿಧ ಕ್ಷೇತ್ರಗಳ ತಾರೆಯರು ಈ ತಂಡಗಳಲ್ಲಿರುತ್ತಾರೆ. ಪುನೀತ್ ಅವರಿಗೆ ಸಂಬಂಧಿಸಿದ ಹಾಗೆ ಹತ್ತು ತಂಡಗಳ ಹೆಸರುಗಳಿವೆ. ಹತ್ತು ತಂಡಗಳಿಗೂ ಮಾಲೀಕರಿರುತ್ತಾರೆ. ಈ ಬಾರಿ ಜುಲೈ 13 ರಂದು ಅದ್ದೂರಿ ಸಮಾರಂಭದ ಮೂಲಕ ಟೂರ್ನಿಗೆ ಚಾಲನೆ ನೀಡಲಾಗುವುದು. ಆದರೆ ಟೂರ್ನಿಯ ಪಂದ್ಯಗಳು ಜುಲೈ ಕೊನೆಯಲ್ಲಿ ನಡೆಯುವುದು ಎಂದು ತಿಳಿಸಿದ ಟೂರ್ನಿಯ ಆಯೋಜಕ ಚೇತನ್ ಸೂರ್ಯ, ಹತ್ತು ತಂಡಗಳ, ಅದರ ನಾಯಕರ ಹಾಗೂ ಮಾಲೀಕರ ಹೆಸರುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಟೂರ್ನಿಯಲ್ಲಿನ ಎಲ್ಲ ತಂಡಗಳ ವಿವರ
- ಅರಸು ಹಂಟರ್ಸ್ ಮಾಲೀಕರು ಆನಂದ್. ನಾಯಕ ಹರೀಶ್ ನಾಗರಾಜ್.
- ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ, ನಾಯಕ ರವಿ ಚೇತನ್.
- ಪವರ್ ಪೈತಾನ್ಸ್ ಮಾಲೀಕರು ಐಶ್ವರ್ಯ, ನಾಯಕ ಸದಾಶಿವ ಶೆಣೈ.
- ದೊಡ್ಮನೆ ಡ್ರಾಗನ್ಸ್ ಮಾಲೀಕರು ಮಹೇಶ್ ಗೌಡ, ನಾಯಕ ಪ್ರಮೋದ್ ಶೆಟ್ಟಿ
- ಜಾಕಿ ರೈಡರ್ಸ್ ಮಾಲೀಕರು ಶ್ರೀಹರ್ಷ, ನಾಯಕ ಮನು ರವಿಚಂದ್ರನ್
- ರಾಜಕುಮಾರ ಕಿಂಗ್ಸ್ ಮಾಲೀಕರು ವಿ.ರವಿಕುಮಾರ್ & ಶಂಶುದ್ದೀನ್, ನಾಯಕ ವಿಕ್ರಮ್ ರವಿಚಂದ್ರನ್
- ಗಂಧದ ಗುಡಿ ವಾರಿಯರ್ಸ್ ಮಾಲೀಕರು ಡಾ. ಚೇತನ ಆರ್ ಎಸ್, ನಾಯಕ ಭುವನ್ ಗೌಡ
- ವೀರ ಕನ್ನಡಿಗ ಬುಲ್ಸ್ ಮಾಲೀಕರು ಮೋನೀಶ್ ಸಿ, ನಾಯಕ ದಿಲೀಪ್ ರಾಜ್
- ಯುವರತ್ನ ಚಾಂಪಿಯನ್ಸ್ ಮಾಲೀಕರು ಬಿ.ಎಂ.ಶ್ರೀರಾಮ್ ಕೋಲಾರ್, ನಾಯಕ ಪ್ರವೀಣ್ ತೇಜ್
- ಮೌರ್ಯ ವೈಟ್ ಗೋಲ್ಡ್, ಮಾಲೀಕರು ಬಾಬು ಸಿ.ಜೆ, ನಾಯಕ ನಿರಂಜನ್ ದೇಶಪಾಂಡೆ.
ಸತತವಾಗಿ ಮೂರು ವರ್ಷಗಳ ಕಾಲ ಗೆದ್ದ ತಂಡಕ್ಕೆ ಅಪ್ಪು ಅವರ ಭಾವಚಿತ್ರವುಳ್ಳ ಬೆಳ್ಳಿಯ ಐದು ಕೆಜಿ ತೂಕದ ಟ್ರೋಫಿ ನೀಡಲಾಗುವುದು. ಈ ರೋಲಿಂಗ್ ಟ್ರೋಫಿ ಪ್ರಯೋಜಕರಾಗಿರೂ ಆಗಿರುವ ಶ್ರೀಸಾಯಿ ಗೋಲ್ಡ್ ಪ್ಯಾಲೆಸ್ ನ ಮಾಲೀಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶರವಣ ಅವರು ಈ ಬಾರಿ ಮೊದಲ ವಿಜೇತರಿಗೆ ನೂರು ಗ್ರಾಮ್ ಚಿನ್ನ, ಎರಡನೇ ವಿಜೇತರಿಗೆ ಐವತ್ತು ಗ್ರಾಮ್ ಚಿನ್ನ ಹಾಗೂ ಮೂರನೇ ವಿಜೇತರಿಗೆ ಇಪ್ಪತ್ತೈದು ಗ್ರಾಮ್ ಚಿನ್ನ ನೀಡುವುದಾಗಿ ತಿಳಿಸಿದರು.